ವಿದ್ಯಾವಂತ ಯುವಕರಿಗೆ ಅವರು ಪಡೆದ ಶಿಕ್ಷಣಕ್ಕೆ ಅನುಸಾರ ಅವರ ಕುಶಲತೆ ಜಾಣ್ಮೆಗಳನ್ನು ಪರೀಕ್ಷೆಗೆ ಒಳಪಡಿಸಿ ಯೋಗ್ಯ ಮಾರ್ಗದರ್ಶನ ತರಬೇತಿ ನೀಡಿ, ಅವಶ್ಯಕತೆ ಇರುವ ಕಂಪನಿಗಳಿಗೆ ಸಂದರ್ಶನಕ್ಕೆ ಕಳುಹಿಸಿ ಆಯ್ಕೆ ಪ್ರಕ್ರಿಯೆ ನಡೆಸಿ ನೇಮಕಾತಿಗಳಿಗೆ ಸಹಕರಿಸುವ ವಿಶೇಷ ವ್ಯಕ್ತಿತ್ವ ಶ್ರೀ ಲಕ್ಷ್ಮೀ ನಾರಾಯಣ ಶೆಟ್ಟಿ ಅವರು ಈ ಕ್ಷೇತ್ರದಲ್ಲಿ ದೀರ್ಘ ಕಾಲದ ಅನುಭವ ಹೊಂದಿದ ಶೆಟ್ಟರು ಒಂದರ್ಥದಲ್ಲಿ ನಿರುದ್ಯೋಗ ವಿದ್ಯಾವಂತರಿಗೆ ಅವರು ಯೋಗ್ಯತೆಗನುಸಾರ ಉದ್ಯೋಗ ದೊರೆಯುವಂತೆ ಸಹಕರಿಸಿ ಮಹಾದುಪಕಾರ ಮಾಡುತ್ತಾರೆ.

ಹಣಕಾಸು ಕ್ಷೇತ್ರ, ವಿಮೆ ಆಡಿಟಿಂಗ್ ಬುಕ್ ಕೀಪಿಂಗ್ ಹೀಗೆ ಒಂದು ಉತ್ತಮ ಗುಣಮಟ್ಟದ ಕಾರ್ಯ ನಿರ್ವಹಣೆ ಕುರಿತ ಜ್ಞಾನ ಹೊಂದಿದ ಶೆಟ್ಟರು ಸಮರ್ಥ ಹಾಗೂ ಉದ್ಯೋಗಾಕಾಂಕ್ಷಿಗಳ ನಿರೀಕ್ಷೆಯಲ್ಲಿದ್ದು ಅಭ್ಯರ್ಥಿಗಳ ಅರ್ಜಿ ಕರೆದು ಉದ್ಯೋಗಾವಕಾಶ ಒದಗಿಸಿ ಕೊಡುವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಅವರಿಗೆ ಪೂರ್ವಭಾವಿ ತರಬೇತಿಯನ್ನೂ ನೀಡಲಾಗುತ್ತದೆ. ಸೇಲ್ಸ್ ಟ್ರೇಡಿಂಗ್ ಫೈನಾನ್ಸ್ ಕಂಪನಿಗಳ ಸಲಹೆಗಾರರಾಗಿ ಕಾರ್ಯ ನಿರ್ವಹಿಸುವ ಇವರು ಅನೇಕ ವಿಷಯಗಳ ಡಿಪ್ಲೋಮಾ ಜೊತೆಗೆ ಮುಂಬಯಿ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು. ಒಬ್ಬ ಹವ್ಯಾಸಿ ಮಾಧ್ಯಮ ಪ್ರತಿನಿಧಿಯೂ ಆಗಿರುವ ಇವರು ವಾಣಿಜ್ಯ ವಿಷಯ ಸಂಬಂಧಿ ಪದವಿ ಪಡೆದಿರುವ ಜೊತೆಗೆ ಅದೆಷ್ಟೋ ಪ್ರತಿಷ್ಠಿತ ಟ್ರೇಡಿಂಗ್ ಎಂಡ್ ಫೈನಾನ್ಸ್ ಹಾಗೂ ಖಾಸಗಿ ವಿಮಾ ಸಂಸ್ಥೆಗಳ ಪ್ರತಿನಿಧಿಯಾಗಿ ದುಡಿದು ಅಪಾರ ಅನುಭವವನ್ನು ಸಂಪಾದಿಸಿರುತ್ತಾರೆ.
ಇಂಗ್ಲಿಷ್ ಹಿಂದಿ ಮರಾಠಿ ಕನ್ನಡ ಭಾಷೆಗಳ ಮೇಲೆ ಪ್ರಭುತ್ವ ಇರುವ ಇವರಿಗೆ ಸಂಗೀತ ಕೇಳುವುದು ಉತ್ತಮ ಕೃತಿಗಳನ್ನು ಓದುವುದು ಹಾಗೂ ಹೊಸ ಹೊಸ ಸ್ಥಳಗಳಿಗೆ ಪ್ರವಾಸ ಮಾಡುವುದು ಮೊದಲಾದ ಹವ್ಯಾಸಗಳ ಜೊತೆಗೆ ಇವರೊಬ್ಬ ಸಮರ್ಥ ಸಂಘಟಕರು ಸಮಾಜ ಸೇವಕರೂ ಆಗಿದ್ದಾರೆ. ಅನೇಕ ಸರಕಾರೇತರ ಸಂಸ್ಥೆಗಳ ನಾಯಕತ್ವ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಉತ್ತಮ ನಾಯಕನಾಗಿ ರೂಪುಗೊಂಡ ಇವರಿಗೆ ಇಂದಿನ ಸ್ಪರ್ಧಾತ್ಮಕ ಉದ್ಯಮ ವ್ಯವಹಾರ ಯುಗದಲ್ಲಿ ತಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸನ್ನು ಸಾಧಿಸಿ ಕೊಡುವ ಕುಶಲತೆ ಇರುವುದರಿಂದ ವಾಣಿಜ್ಯ ವಿಮೆ ಕಂಪನಿ ಮೆನೇಜ್ ಮೆಂಟ್ ಸಾರ್ವಜನಿಕ ಸಂಪರ್ಕ ಕ್ಷೇತ್ರಗಳಲ್ಲಿ ಅಪಾರ ಬೇಡಿಕೆ ಇದೆ.
ಇವರ ಸಲಹೆ ಸಹಕಾರ ಬಯಸುವವರಿಗೆ ಮುಕ್ತ ಅವಕಾಶಗಳನ್ನು ಒದಗಿಸಲಾಗಿದ್ದು ನೇರವಾಗಿ ಸಂಪರ್ಕಿಸ ಬಹುದಾಗಿದೆ. ಮರೋಳ್ ಅಂಧೇರಿಯಲ್ಲಿ ವಾಸ್ತವ್ಯ ಹೊಂದಿದ ಇವರು ಒಬ್ಬ ಉತ್ತಮ ಕುಟುಂಬ ವತ್ಸಲನಾಗಿರುವ ಜೊತೆಗೆ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿದ್ದು ಬಹುಮುಖಿ ವ್ಯಕ್ತಿತ್ವದ ಕರ್ತವ್ಯ ಪ್ರಜ್ಞೆ ಯ ಸೇವಾ ಭಾವದ ವ್ಯಕ್ತಿ ಯಾಗಿದ್ದು ಜನ ಮನ್ನಣೆ ಗಳಿಸಿದ್ದಾರೆ. ಇಂಥ ಅಪರೂಪದ ವ್ಯಕ್ತಿ ನಮ್ಮ ಬಂಟ ಸಮಾಜದ ಸದಸ್ಯ ಎನ್ನುವುದು ನಮಗೆ ಅಭಿಮಾನದ ವಿಷಯ. ಇವರ ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತಾರ ಹೊಂದಲಿ ಹೆಚ್ಚಿನ ಸಂಖ್ಯೆಯ ಜನರು ಇವರ ಅಪಾರ ಅನುಭವದ ಲಾಭ ಪಡೆದು ತಮ್ಮ ವ್ಯಾಪಾರ ವಹಿವಾಟುಗಳಲ್ಲಿ ಯಶಸ್ಸು ಸಂಪಾದಿಸಲೆಂದು ಹಾರೈಸೋಣ. ಜೊತೆಗೆ ದೇವರು ಶ್ರೀಯುತರಿಗೆ ಆರೋಗ್ಯ ನೆಮ್ಮದಿ ಸಮೃದ್ಧಿ ದೀರ್ಘಾಯುಷ್ಯ ಕರುಣಿಸಲೆಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾರೈಸುತ್ತದೆ.
ಲೇಖನ : ಅರುಣ್ ಶೆಟ್ಟಿ ಎರ್ಮಾಳ್