ಒಮ್ಮೊಮ್ಮೆ ಹೀಗೂ ಆಗುವುದು. 2025ರ ಐಪಿಎಲ್ನ ಕ್ವಾಲಿಫೈಯರ್ ಪಂದ್ಯದಲ್ಲಿ ಆಗಿದ್ದು ಅದೇ. ಕೆಂಪು ಗುಲಾಬಿಯನ್ನು ಕೀಳಲು ಹೋದ ಪ್ರೀತಿಯ ಹುಡುಗರಿಗೆ ಮುಳ್ಳು ಚುಚ್ಚಿದ್ದು ಗೊತ್ತೇ ಆಗಲಿಲ್ಲ. ಗೊತ್ತಾದಾಗ ಡಿಂಪಲ್ ರಾಣಿಯ ಹುಡುಗರ ಮನಸ್ಸು ಕೈ ಜಾರಿ ಹೋಗಿದೆ. ಐಪಿಎಲ್ನಲ್ಲಿ ಭಗ್ನ ಪ್ರೇಮದ ವೇದನೆಯಲ್ಲಿರುವ ಬೆಂಗಳೂರು ಹುಡುಗರ ಭಾಗ್ಯದ ಬಾಗಿಲು ತೆರೆದಂತಿದೆ. ಹೌದು, ಆರ್ ಸಿಬಿ ಅಂದ್ರೆ ಸೂಜಿಗಲ್ಲಿನಂತೆ ಸೆಳೆಯುವ ಅಯಸ್ಕಾಂತ. ಸೋತರೆ ಕಣ್ಣೀರು. ಗೆದ್ದರೆ ಪರಮಾನಂದ. ಕಪ್ ಗೆಲ್ಲದಿದ್ರೂ ಚಿಂತೆ ಇಲ್ಲ. ಯಾಕಂದ್ರೆ ಅದು ಎಂದೆಂದಿಗೂ ಮುಗಿಯದ ಅಮರ ಪ್ರೇಮ. ಒಂದು ರೀತಿಯಲ್ಲಿ ಮೋಹದ ಬಲೆಯೊಳಗೆ ಬಿದ್ದ ಪ್ರೀತಿಯ ಹಾಗೇ.

ಆರ್ ಸಿಬಿ ಅಭಿಮಾನಿಗಳ ಪ್ರೀತಿಯ ಅಭಿಮಾನ, ತಾಳ್ಮೆ, ಸಂಯಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಪ್ರತಿಷ್ಠೆ, ಆತ್ಮಾಭಿಮಾನಕ್ಕೆ ದಕ್ಕೆಯಾದ್ರೂ ಡೋಂಟ್ಕೇರ್. ಎಷ್ಟೇ ಟೀಕೆ, ಹೀಯಾಳಿಸಿದ್ರೂ ಪರವಾಗಿಲ್ಲ. ಒಂದಲ್ಲ ಒಂದು ದಿನ ಗೆದ್ದೇ ಗೆಲ್ತೀವಿ ಅನ್ನೋ ಬಲವಾದ ನಂಬಿಕೆ ರೆಡ್ ಆರ್ಮಿಯಲ್ಲಿದೆ. ಪ್ರತಿ ಸಲ ಈ ಬಾರಿ ಕಪ್ ನಮ್ದೆ ಅಂತ ಹೆಮ್ಮೆಯಿಂದ ಹೇಳಿಕೊಂಡು ಬರುತ್ತಿರುವ ಆರ್ ಸಿಬಿ ಅಭಿಮಾನಿಗಳು ಶ್ರೀರಾಮನನ್ನು ಕಾದ ಶಬರಿಯಂತೆ ಆ ಒಂದು ದಿನವನ್ನು ಕಾಯುತ್ತಿದ್ದಾರೆ. ಆರ್ ಸಿಬಿ ಒಂದೇ ಒಂದು ಬಾರಿ ಕಪ್ ಗೆಲ್ಲಬೇಕು. ಆ ಕ್ಷಣವನ್ನು ಕಣ್ತುಂಬಿಕೊಳ್ಳಬೇಕು ಎಂದು ಕೋಟಿ ಕೋಟಿ ಕಣ್ಣುಗಳು ಕಾಯುತ್ತಿವೆ. ಈ ಹಿಂದೆ ಮೂರು ಬಾರಿ ಕಣ್ಣ ಮುಂದೆ ರಪ್ಪನೆ ಹಾದು ಹೋದ್ರೂ ಅದನ್ನು ಕೈವಶ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದೀಗ ನಾಲ್ಕನೇ ಬಾರಿ ಕಣ್ಣ ಮುಂದೆಯೇ ಐಪಿಎಲ್ ಟ್ರೋಫಿ ಬಿಡಿ ವಜ್ರದಂತೆ ಹೊಳೆಯುತ್ತಿದೆ. ಕಳೆದ 17 ವರ್ಷಗಳಿಂದ ಆರ್ ಸಿಬಿ ಅಭಿಮಾನಿಗಳು ಆರ್ ಸಿಬಿ ಆಟಗಾರರನ್ನು ರೇಗಾಡಿಕೊಂಡು, ಕೊಂಡಾಡಿಕೊಂಡು, ಆರಾಧಿಸಿಕೊಂಡು, ಹೃದಯದಲ್ಲಿ ಪ್ರೀತಿಯನ್ನು ಬಚ್ಚಿಟ್ಟುಕೊಂಡು ಬಂದಿದ್ದಾರೆ. ಇದೀಗ ಆ ಪ್ರೀತಿಗೆ ಕಾಣಿಕೆಯನ್ನು ಸಮರ್ಪಿಸಲು ಆರ್ ಸಿಬಿ ಹುಡುಗರು ಒಂದೇ ಒಂದು ಹೆಜ್ಜೆ ದೂರದಲ್ಲಿದ್ದಾರೆ. ಒಂದು ವೇಳೆ, ಆರ್ ಸಿಬಿ ಹುಡುಗರು ಕಟ್ಟಕಡೆಯ ಹೆಜ್ಜೆಯಲ್ಲಿ ಗೆಜ್ಜೆಯಂತೆ ಸದ್ದು ಮಾಡಿದ್ರೆ ಇಡೀ ಕ್ರಿಕೆಟ್ ಜಗತ್ತು ಮತ್ತೊಂದು ಮಹಾ ಸಂಭ್ರಮಕ್ಕೆ ಸಾಕ್ಷಿಯಾಗುವುದರಲ್ಲಿ ಅಚ್ಚರಿ ಏನಿಲ್ಲ.
ಆರ್ ಸಿಬಿ ಯಾಕೆ ಕಪ್ ಗೆಲ್ಲಬೇಕು..? ಆರ್ ಸಿಬಿಯ ಮೊದಲ ಮಾಲೀಕ ವಿಜಯ್ ಮಲ್ಯ ಒಡೆತನದಲ್ಲಿ ತಂಡ ಇರುತ್ತಿದ್ರೆ ಅದರ ಖದರೇ ಬೇರೆ ರೀತಿಯಲ್ಲಿರುತ್ತಿತ್ತು. ಯಾಕಂದ್ರೆ ಆರ್ ಸಿಬಿ ಅಂದ್ರೆ ಅದು ಕನ್ನಡದ ಆಸ್ಮಿತೆ. ಆರ್ ಸಿಬಿ ಅಂದ್ರೆ ಬೆಂಗಳೂರಿನ ಘನತೆ. ಆರ್ಸಿಬಿ ಅಂದ್ರೆ ಅದು ಕನ್ನಡಿಗರ ತಂಡ. ಅದರಲ್ಲೂ ಮಲ್ಯ ಒಡೆತನದಲ್ಲಿದ್ದಾಗ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಇರುತ್ತಿತ್ತು. ಆದಾದ ನಂತರ ಕನ್ನಡಿಗ ಆಟಗಾರರನ್ನು ಕಡಗಣನೆ ಮಾಡಿದ್ರೂ, ಏನೋ ಒಂದು ಸೆಳೆತವಿರುತ್ತಿತ್ತು. ಆರ್ ಸಿಬಿ ಮೇಲಿನ ಅಭಿಮಾನ ಜಾಸ್ತಿಯಾಗಿದ್ದೇ ಹೊರತು, ಯಾವತ್ತೂ ಕಮ್ಮಿಯಾಗಿಲ್ಲ. ಅದಕ್ಕೆ ಕಾರಣ ವಿರಾಟ್ ಕೊಹ್ಲಿ ಎಂಬ ಫೈಯರ್ ಬ್ರ್ಯಾಂಡ್. ಹೌದು, ಯಾರು ಏನು ಅನ್ನಲಿ, ಇವತ್ತು ವಿರಾಟ್ ಕೊಹ್ಲಿ ಅಂದ್ರೆ ಆರ್ ಸಿಬಿ. ಆರ್ ಸಿಬಿ ಅಂದ್ರೆ ವಿರಾಟ್ ಕೊಹ್ಲಿ. ಅದಕ್ಕೂ ಮುಖ್ಯ ಕಾರಣ ವಿಜಯ್ ಮಲ್ಯ. ಆಗಷ್ಟೇ 19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ತನ್ನ ತಂಡದಲ್ಲಿರಲೇಬೇಕು ಎಂದು ಹಠಕ್ಕೆ ಬಿದ್ದು ಖರೀದಿ ಮಾಡಿದ್ದು ವಿಜಯ್ ಮಲ್ಯ. ಬಳಿಕ ಐಪಿಎಲ್ ಎಂಬ ಮೋಹದ ಬಲೆಯೊಳಗೆ ಸಿಲುಕಿದ್ದ ವಿರಾಟ್ ಕೊಹ್ಲಿಯನ್ನು ಬಚಾವ್ ಮಾಡಿದ್ದು ಕೂಡ ಆರ್ ಸಿಬಿ ಮ್ಯಾನೇಜ್ಮೆಂಟ್ ಎಂಬುದನ್ನು ಮರೆಯುವ ಹಾಗಿಲ್ಲ. ಅಡ್ಡದಾರಿ ಹಿಡಿದಿದ್ದ ವಿರಾಟ್ ಕೊಹ್ಲಿಯನ್ನು ವಿಶ್ವದ ಅದ್ಭುತ ಕ್ರಿಕೆಟಿನಾಗಿ ರೂಪಿಸಿದ್ದು ಕೂಡ ಆರ್ ಸಿಬಿಯ ಅಂದಿನ ಟೀಮ್ ಮ್ಯನೇಜ್ಮೆಂಟ್. ಹಾಗಂತ ಆರ್ ಸಿಬಿ ಕೇವಲ ವಿರಾಟ್ಗೆ ಮಾತ್ರ ಬದುಕು ಕಟ್ಟಿಕೊಟ್ಟಿಲ್ಲ. ಹತ್ತಾರು ಕ್ರಿಕೆಟಿಗರ ಪ್ರತಿಭೆಯನ್ನು ಪರಿಚಯಿಸಿದ್ದ ಹೆಗ್ಗಳಿಕೆ ಆರ್ ಸಿಬಿಗೆ ಸಲ್ಲುತ್ತದೆ. ಐಪಿಎಲ್ ಹರಾಜಿನಲ್ಲಿ ಬೇಡವಾಗಿದ್ದ ಕ್ರಿಸ್ ಗೇಲ್ಗೆ ಯುನಿವರ್ಸಲ್ ಬಾಸ್ ಎಂಬ ಪಟ್ಟವನ್ನು ಕೊಟ್ಟಿದ್ದು ಕೂಡ ಆರ್ ಸಿಬಿ. ಎಲ್ಲೋ ದೂರದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಬೆಂಗಳೂರಿನಲ್ಲಿ ಮನೆ ಮಾಡುವಂತೆ ಮಾಡಿದ್ದು ಕೂಡ ಆರ್ ಸಿಬಿ. ಕಳೆದ 18 ವರ್ಷಗಳಿಂದ ಕೊಹ್ಲಿಯನ್ನು ಮನೆ ಮಗನಂತೆ ನೋಡಿಕೊಂಡಿದ್ದು ಕೂಡ ಆರ್ ಸಿಬಿ. ದುಡ್ಡಿಗಿಂತ ಅಭಿಮಾನಿಗಳ ಪ್ರೀತಿಯೇ ಮುಖ್ಯ ಎಂದು ನಂಬಿದವನು, ಒಂದು ಬಾರಿಯಾದ್ರೂ ಐಪಿಎಲ್ ಟ್ರೋಫಿಗೆ ಮುತ್ತಿಡಬೇಕು. ನಿಜ, ಆರಂಭದಲ್ಲಿ ಆರ್ ಸಿಬಿಗೆ ಟೆಸ್ಟ್ ತಂಡ ಎಂಬ ಹಣೆಪಟ್ಟಿಯನ್ನು ಕಟ್ಟಲಾಯ್ತು. ಟೀಮ್ ಬಗ್ಗೆ ಹಾಗೇ ಹೀಗೆ ಎಂದು ಹೀಯಾಳಿಸಿದವರ ಎದುರು ಅದ್ಭುತ ಪ್ರದರ್ಶನವನ್ನೇ ನೀಡಿತ್ತು. ಸಾಲು ಸಾಲು ಸೋಲುಗಳ ನಡುವೆಯೂ ಮತ್ತೆ ಮತ್ತೆ ಮೇಲೆದ್ದು ಬರುತ್ತಿದ್ದ ಆರ್ ಸಿಬಿಗೆ ಅದೃಷ್ಟ ಕೈಕೊಡುತ್ತಿತ್ತು. 2009, 2011 ಮತ್ತು 2016ರಲ್ಲಿ ಫೈನಲ್ ಪ್ರವೇಶಿಸಿದ್ರೂ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಆದ್ರೆ ಒಂದು ನೆನಪಿಟ್ಟುಕೊಟ್ಟುಕೊಳ್ಳಿ. ಐಪಿಎಲ್ ನಲ್ಲಿ ಹಲವು ಐತಿಹಾಸಿಕ ದಾಖಲೆಗಳು, ಹಲವು ಬೇಡವಾದ ದಾಖಲೆಗಳು ಕೂಡ ಆರ್ ಸಿಬಿ ಹೆಸರಿಗೆ ಅಂಟಿಕೊಂಡಿವೆ. ಆದ್ರೂ ಅಭಿಮಾನಿಗಳ ಅಭಿಮಾನ ಮಾತ್ರ ಒಂಚೂರು ಕಮ್ಮಿಯಾಗಿಲ್ಲ. ವರ್ಷದಿಂದ ವರ್ಷಕ್ಕೆ ಅಭಿಮಾನಿಗಳ ಸಂಖ್ಯೆ ಜಾಸ್ತಿನೇ ಆಗುತ್ತಿದೆ ಎಂಬುದು ಅಷ್ಟೇ ಸತ್ಯ.
ಆರ್ ಸಿಬಿಗೆ ಬೂಸ್ಟ್ ನೀಡಿದ ಡಿಕೆ ಸಾಹೇಬ..! ಅಂದ ಹಾಗೇ ಈ ಬಾರಿಯ ಐಪಿಎಲ್ ನಲ್ಲಿ ಯಾರೂ ಊಹಿಸದ ರೀತಿಯಲ್ಲಿ ಆರ್ ಸಿಬಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈ ಹಿಂದೆ ಆರ್ ಸಿಬಿ ತಂಡ ಬ್ಯಾಲೆನ್ಸ್ ಆಗಿರಲಿಲ್ಲ. ಬ್ಯಾಲೆನ್ಸ್ ಆಗಿದ್ರೂ ಸ್ಥಿರ ಪ್ರದರ್ಶನ ನೀಡುತ್ತಿರಲಿಲ್ಲ. ಆದ್ರೆ ಈ ಬಾರಿ ಆರ್ ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಮಾಸ್ಟರ್ ಪ್ಲ್ಯಾನ್ ವರ್ಕೌಟ್ ಆಗೋದು ಗ್ಯಾರಂಟಿ ಅಂತ ಅನ್ಸುತ್ತೆ. ಟಿ-20 ಅಂದ್ರೆ ಕೇವಲ ಬ್ಯಾಟರ್ ಗಳ ಆಟವಲ್ಲ. ಬೌಲಿಂಗ್ ಕೂಡ ಅಷ್ಟೇ ಮುಖ್ಯ. ಹೀಗಾಗಿ ಬಲಿಷ್ಠ ಬೌಲಿಂಗ್ ಪಡೆಯನ್ನು ಕಟ್ಟಲು ದಿನೇಶ್ ಕಾರ್ತಿಕ್ ಐಪಿಎಲ್ ಪ್ಲೇಯರ್ಸ್ ಹರಾಜಿಗಿಂತ ಮುನ್ನವೇ ಪ್ಲ್ಯಾನ್ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ಆರ್ ಸಿಬಿಗೆ ಬಲಿಷ್ಠ ಹಾಗೂ ಅನುಭವಿ ಬೌಲರ್ ಗಳು ಸಿಕ್ಕಿದ್ದಾರೆ. ಹಾಗೇ, ಆಲ್ರೌಂಡ್ ಪ್ರದರ್ಶನವನ್ನೂ ನೀಡುತ್ತಿದೆ. ಇನ್ನೊಂದೆಡೆ, ಮ್ಯಾಚ್ ವಿನ್ ಮಾಡೋ ಆಟಗಾರರನ್ನು ಸೃಷ್ಟಿ ಮಾಡಿದೆ. ಹೀಗಾಗಿ ಈ ಬಾರಿ ಆರ್ ಸಿಬಿ ನಿರಾಸೆ ಮಾಡಲ್ಲ ಎಂಬ ಬಲವಾದ ನಂಬಿಕೆ ಅಭಿಮಾನಿಗಳಲ್ಲಿದೆ. ಅದಕ್ಕಾಗಿಯೇ ನಮ್ಮ ನಿಮ್ಮ ಮನಸ್ಸಲ್ಲಿ ಏನಿದೆ ಅಂತ ನಿಮಗೂ ಗೊತ್ತು. ನಮಗೂ ಗೊತ್ತು. ಈ ಬಾರಿ ಕಪ್ ನಮ್ದೆ ಎಂದು ಧೈರ್ಯದಿಂದಲೇ ಹೇಳುತ್ತಿದ್ದಾರೆ.
ನೆನಪಿದೆಯಾ.. ಐದು ಬಾರಿ ಏಕದಿನ ವಿಶ್ವಕಪ್ನಲ್ಲಿ ಆಡಿದ್ರೂ ಸಚಿನ್ ತೆಂಡುಲ್ಕರ್ ಗೆ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದ್ರೆ ಆರನೇ ಬಾರಿ ಅಂದ್ರೆ 2011 ರಲ್ಲಿ ಧೋನಿ ಹುಡುಗರು ಹಠಕ್ಕೆ ಬಿದ್ದು ಆಡಿ ಕ್ರಿಕೆಟ್ ದೇವರ ಮುಕುಟಕ್ಕೆ ವಿಶ್ವಕಪ್ ಗರಿ ತೊಡಿಸಿದ್ದರು. ಅದೇ ರೀತಿ ಇಲ್ಲೊಬ್ಬ ಚೇಸಿಂಗ್ ಗಾಡ್ ಇದ್ದಾನೆ. ಕಳೆದ 18 ವರ್ಷಗಳಿಂದ 18 ನಂಬರಿನ ಜೆರ್ಸಿ ತೊಟ್ಟುಕೊಂಡು ಐಪಿಎಲ್ ಟ್ರೋಫಿಗಾಗಿ ತಪಸ್ಸು ಮಾಡುತ್ತಿದ್ದಾನೆ. ವಿರಾಟ್ ಕೊಹ್ಲಿಯ ಹೆಸರಿನಲ್ಲಿ ಇಲ್ಲದ ಏಕೈಕ ಐಪಿಎಲ್ ಟ್ರೋಫಿ 18ನೇ ಆವೃತ್ತಿಯಲ್ಲಾದ್ರೂ ಒಲಿದು ಬರುತ್ತಾ…? ಕಾದು ನೋಡೋಣ.. ಆಲ್ ದಿ ಬೆಸ್ಟ್ ಆರ್ ಸಿಬಿ.. 18 ನಮ್ದೆ..!
ಬರಹ : ಸನತ್ ರೈ