ಒಂದು ಕಾಲದಲ್ಲಿ ಅಯ್ಯೋ ಚಳಿಚಳಿ ಎಂಬ ಕಾಲಕ್ಕೆ ಬರುತ್ತಿತ್ತು ಈ ಧನುರ್ಮಾಸ. ಆದರೆ ಕಾಲ ಪ್ರಭಾವವೋ, ಪ್ರಕೃತಿಯ ಮೇಲಿನ ಮನುಷ್ಯನ ನಿರಂತರವಾದ ಆಕ್ರಮಣದ ಕಾರಣವೋ? ಎಂಬಂತೆ ಕೆಲ ವರ್ಷಗಳಿಂದ ಚಳಿಯೇ ಇಲ್ಲ. ಆದರೆ ಈ ಸಲ ಸ್ವಲ್ಪ ಚಳಿಯ ವಾತಾವರಣ ಇದೆ. ಈಗೀಗ ವರ್ಷದ ಮೂರು ಕಾಲಗಳೂ ಋತುಮಾನಕ್ಕನುಗುಣವಾಗಿ ಇಲ್ಲವೇ ಇಲ್ಲ. ಆದರೆ ಕ್ಯಾಲೆಂಡರ್ ಮತ್ತು ಪಂಚಾಂಗದ ಪ್ರಕಾರ ನಮ್ಮೆಲ್ಲಾ ಹಬ್ಬ ಹರಿದಿನ, ರೀತಿ ರಿವಾಜುಗಳು ಹಿಂದೆಂದಿಗಿಂತಲೂ ವಿಜೃಂಭಣೆಯಿಂದ ನಡೆಯುತ್ತಿದೆ. ಇದು ಸಂತೋಷವೂ ಆಗಿದೆ. ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವ ಉದ್ದೇಶವೂ ಆಗಿದೆ. ಈ ಸಲ ಈವತ್ತಿನಿಂದ ಪ್ರಾರಂಭವಾಗಿದೆ ಧನುರ್ಮಾಸ. ಹೆಚ್ಚಿನ ಎಲ್ಲಾ ಊರಿನ ಬಹುತೇಕ ದೇವಾಲಯಗಳಲ್ಲೂ ಪ್ರಾತಃ ಕಾಲದ “ಧನುಪೂಜೆ” ವಿಶೇಷವಾಗಿ ನಡೆಯುತ್ತದೆ. ಈ ಕುರಿತು ಸಂಗ್ರಹಿತ ಮಾಹಿತಿಯಂತೆ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಮಾಸಗಳನ್ನು ಕುರಿತು ಹೇಳುವಾಗ ಧನುರ್ಮಾಸದ ಮಹಾತ್ಮೆಗೆ ವಿಶೇಷ ಒತ್ತು ನೀಡಿ “ಮಾಸಾನಾಂ ಮಾರ್ಗಶೀರ್ಷೋಸ್ಮಿ” ಎಂದು ಅಪ್ಪಣೆ ಕೊಡಿಸಿದ್ದಾರೆ. ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಬೇಕಾದರೆ ಒಂದು ತಿಂಗಳು ಬೇಕಾಗುತ್ತದೆ. ಅದರಂತೆಯೇ ಸೂರ್ಯ ಧನು ರಾಶಿಯ ಪ್ರವೇಶ ಮಾಡಿ ಮಕರ ರಾಶಿಗೆ ಪ್ರವೇಶ ಮಾಡಲು ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಈ ಒಂದು ತಿಂಗಳನ್ನು (ಧನು ರಾಶಿಯ) “ಧನುರ್ಮಾಸ” ಎಂದು ಕರೆಯುತ್ತಾರೆ. ಈ ಮಾಸದಲ್ಲಿ ವಿಶೇಷವಾಗಿ ಚಳಿ ಇರುತ್ತದೆ. ಚಳಿಯೆಂದು ಬಹಳ ಹೊತ್ತು ಹಾಸಿಗೆ ಮೇಲೆ ಹೊದ್ದು ಮಲಗುವುದು ಅನಾರೋಗ್ಯ. ಏನು ತಿಂದರೂ ಭಸ್ಮ ಮಾಡಿ ಬಿಡುವಂತಹ ಉತ್ತಮವಾದ ಹವೆ. ಡಿಸೆಂಬರ್ ತಿಂಗಳೆಂದರೆ ಹೇಳಿಕೇಳಿ ಮೈಕೊರೆವ ಚಳಿಗಾಲ. ಚಳಿಯ ತೀವ್ರತೆಯೆಷ್ಟು ಇರುತ್ತದೆ ಎಂದರೆ ಚಳಿಯನ್ನು ತಾಳಲಾರದೆ, ರಾತ್ರಿ ವೇಳೆ ಮನುಷ್ಯ ತನ್ನ ದೇಹವನ್ನು ಬಿಲ್ಲಿನಂತೆ ಬಾಗಿಸಿ ಮಲಗುತ್ತಾ ಮುದುರಿಕೊಳ್ಳುತ್ತಾನೆ. ಆದ್ದರಿಂದಲೇ ಈ ಮಾಸಕ್ಕೆ ಧನುರ್ಮಾಸ ಎಂದು ಹೇಳಲ್ಪಡುತ್ತಿದೆ ಎಂಬ ಮಾತಿದೆ. ಇಂತಹ ಧನುರ್ಮಾಸದಲ್ಲಿ ಅರುಣೋದಯ ಕಾಲದಲ್ಲಿ ಒಂದು ತಿಂಗಳು ಹುಗ್ಗಿಯನ್ನು ತಯಾರು ಮಾಡಿ ಧನುರ್ ನಾರಾಯಣನಿಗೆ ಸಮರ್ಪಿಸುವುದು ಹಿಂದೂ ಸಂಪ್ರದಾಯ. ಇದನ್ನು ಮುದ್ಗಾನ್ನವೆನ್ನುತ್ತಾರೆ. ಮುದ್ಗಾನ್ನವೆಂದರೆ ಹುಗ್ಗಿ ಅಕ್ಕಿಯ ಎರಡರಷ್ಟು ಪ್ರಮಾಣ ಹೆಸರು ಬೇಳೆ, ಒಣ ಶುಂಠಿ, ಮೆಣಸು, ಜೀರಿಗೆ, ಪತ್ರೆ, ದಾಲ್ಚಿನ್ನಿ, ಜಾಜಿಕಾಯಿ, ಕೊಬ್ಬರಿ, ಲವಂಗ, ಉಪ್ಪು, ತುಪ್ಪ ಎಲ್ಲವನ್ನು ಕೂಡಿಸಿ ಬೇಯಿಸಿದ ಪದಾರ್ಥವೇ ಮುದ್ಗಾನ್ನ. ಧನುರ್ಮಾಸದಲ್ಲಿ ದೇವರ ಪೂಜೆಗೆ, ನೈವೇದ್ಯ ಪ್ರಸಾದಕ್ಕೆ ಮುದ್ಗಾನ್ನವೇ ಏಕೆ? ಇದಕ್ಕೆ ನಾನಾ ಕಾರಣಗಳುಂಟು. ಮನುಷ್ಯ ಶುದ್ಧ ಸೋಮಾರಿ. ಶಾಸ್ತ್ರದ ಕಟ್ಟುಪಾಡುಗಳಿಲ್ಲವಾದರೆ ಮನುಷ್ಯ ಬಿಸಿಲು ಮೈಸೋಂಕುವರೆಗೂ ಹೊದ್ದ ಕಂಬಳಿಯ ಮುಸುಕನ್ನು ಸರಿಸುತ್ತಲೇ ಇರಲಿಲ್ಲ. ಆದರೆ ವಸ್ತುತಃ ಸೂರ್ಯೋದಯವಾದೊಡನೆ ಚಳಿ ಹೆಚ್ಚಾಗುತ್ತದೆ. ಆದ್ದರಿಂದಲೇ ಮೈ ಬೆಚ್ಚಗಾಗಿಸುವ ಹಾಗೂ ಚಳಿಯನ್ನು ಎದುರಿಸುವ ಸಾಮರ್ಥ್ಯವನ್ನು ಕೊಡುವ ಪವಿತ್ರ ಸಾತ್ವಿಕ ಆಹಾರ ಎಂದರೆ ಹುಗ್ಗಿ. ಚಳಿಗಾಲದಲ್ಲಿ ಚರ್ಮ ಒಡೆದು ವಿರೂಪಗೊಳ್ಳುವುದರಿಂದ ಚರ್ಮವನ್ನು ಸ್ನಿಗ್ಧಗೊಳಿಸುವ ಆಹಾರದ ಸೇವನೆ ತೀರಾ ಅವಶ್ಯ. ಈ ಸಮಯದಲ್ಲಿ ಶರೀರದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುವುದರಿಂದಲೂ, ಧನುರ್ಮಾಸದಲ್ಲಿ ಹುಗ್ಗಿಯನ್ನು ಸೇವಿಸುವುದರಿಂದ ಕೊಬ್ಬಿನ ಅಂಶವನ್ನು ಹೆಚ್ಚಿಸಿ ಶಾರೀರಿಕ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಹೀಗೆ ಧನುರ್ಮಾಸದಲ್ಲಿ ಹುಗ್ಗಿ ಸೇವನೆಯು ವೈಜ್ಞಾನಿಕವಾಗಿಯೂ ಸಮಂಜಸ ಎಂದು ಈ ಸಮಯದಲ್ಲಿ ಇಂತಹ ನೈವೇದ್ಯವನ್ನು ಭಗವಂತನಿಗೆ ಸಮರ್ಪಿಸಿ ನಂತರ ಭಕ್ತರಿಗೆ ಹಂಚಲಾಗುತ್ತದೆ.

ಧನುರ್ಮಾಸದಲ್ಲಿ ಶ್ರೀ ವಿಷ್ಣುವಿನ ಪೂಜೆಯೊಡನೆ ಶ್ರೀ ಲಕ್ಷ್ಮಿಯನ್ನು ದ್ವಾದಶ ನಾಮದೊಂದಿಗೆ ಪ್ರಾರ್ಥಿಸಿದರೆ ಅತಿಶಯ ಸಂಪತ್ತು ಒಲಿಯುತ್ತದೆ. ಒಮ್ಮೆ ಇಂದ್ರ ದೇವರು ರಾಜ್ಯ ಭ್ರಷ್ಟರಾದಾಗ ಇಂದ್ರನ ಅರಸಿ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ಮಹಾಲಕ್ಷ್ಮಿಯನ್ನು ದ್ವಾದಶ ನಾಮಗಳಿಂದ ಸ್ತುತಿಸಿದಳಂತೆ. ಅದರ ಫಲವಾಗಿ ಇಂದ್ರ ದೇವರಿಗೆ ಪುನಃ ರಾಜ್ಯವು ದೊರೆಯಿತು ಎಂಬುದು ಪುರಾಣದ ಐತಿಹ್ಯ. ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ. ಅದರಂತೆ ಉತ್ತರಾಯಣವು ಹಗಲಿನ ಸಮಯ. ಆದರೆ ಈ ಧನುರ್ಮಾಸವು ಹಗಲು ರಾತ್ರಿ ಎರಡು ಸೇರಿದ ಸಮಯವೆಂದು ಹೇಳಲಾಗಿ ಬ್ರಾಹ್ಮಿ ಮುಹೂರ್ತದಲ್ಲಿ, ಅಂದರೆ ಮುಂಜಾವಿನ ಸುಮಾರು ಮೂರೂವರೆ ನಾಲ್ಕರ ಸಮಯ. ಈ ಕಾಲದಲ್ಲಿ ಯಾರು ಎದ್ದು ಸ್ನಾನ ಮಾಡಿ ಭಗವಂತನನ್ನು ಪೂಜಿಸಿ ಹುಗ್ಗಿಯನ್ನು ಸಮರ್ಪಿಸುತ್ತಾರೋ ಅವರ ಮನೋಭೀಷ್ಟಗಳು ಅಕ್ಷಯವಾಗಿ ನೆರವೇರುತ್ತದೆ. ನಕ್ಷತ್ರಗಳು ಕಾಣುವ ಸಮಯ ಉತ್ತಮ ಪೂಜಾಫಲ ಫ್ರಾಪ್ತಿಯಂತೆ. ಅವು ಮರೆಯಾದರೆ ಮಧ್ಯಮ, ಮುಂಜಾನೆಯ ಹೊಂಬೆಳಕು ಮೂಡಿದರೆ ಅಧಮಕಾಲ. ಮಧ್ಯಾಹ್ನವಂತು ವ್ಯರ್ಥ. ಹಾಗಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಭಗವಂತನ ಸೇವೆ ಮಾಡುವುದು ಆರೋಗ್ಯ ಪ್ರಾಪ್ತಿಗಾಗಿ ಹಾಗೂ ಭಗವಂತನನ್ನು ಸಂತೃಪ್ತಿಗೊಳಿಸಲು ಸುಲಭ ವಿಧಾನ. ಭಾಗವತದಲ್ಲಿ ಗೋಪಿಯರ ಕಾತ್ಯಾಯನಿ ವೃತವನ್ನು ಕುರಿತು ಹೇಳಲಾಗಿದೆ. ಧನುರ್ಮಾಸದ ಮುಂಜಾವಿನಲ್ಲಿ ಮಾಡುವ ವೃತದ ಫಲವು ಭಕ್ತರಿಗೆ ಸರ್ವವಿಧವಾದ ಇಷ್ಟಾರ್ಥವನ್ನು ಕೊಡುತ್ತದೆ ಎಂಬುದನ್ನು ಸೂಚಿಸುವುದಕ್ಕಾಗಿಯೇ ಈ ವೃತದ ವಿಧಿಯನ್ನು ಗೋಪಿಯರು ಕೂಡಾ ನಂದಗೋಪನ ಮಗನಾದ ಶ್ರೀ ಕೃಷ್ಣ ಪರಮಾತ್ಮನನ್ನು ಪತಿಯಾಗಿ ವರಿಸಲು ಈ ವೃತವನ್ನು ಮಾಡುತ್ತಾರೆ. ಅಂತಹ ಪರಮಾತ್ಮನನ್ನೇ ದೊರಕಿಸಿಕೊಡುವುದು ಈ ಮಾಸವಾಗಿರುವುದರಿಂದ ಶೈವ, ವೈಷ್ಣವ, ಶಾಕ್ತ ಎಂಬ ಭೇದವಿಲ್ಲದೆ, ದೇವತೆಗಳು ಹಲವಲ್ಲದೆ ದೇವರು ಒಬ್ಬನೇ. ಆತ ಸರ್ವಾಂತರ್ಯಾಮಿ ಶ್ರೀ ಮನ್ನಾರಾಯಣ. ಹಾಗಾಗಿ ಎಲ್ಲರೂ ಎಲ್ಲಾ ದೇಗುಲಗಳಲ್ಲಿಯೂ ಧನುರ್ಮಾಸದ ಆಚರಣೆಗಳನ್ನು ನಡೆಸುತ್ತಾರೆ. ಧನುರ್ಮಾಸದ ಪೂಜಾ ನೈವೇದ್ಯ ನಿಯಮವನ್ನು ತಿಂಗಳುದ್ದಕ್ಕೂ ಪ್ರತಿದಿನ ನಡೆಸಬೇಕೆಂದು ವಿಧಿಸಲಾಗಿರುವುದಾದರೂ, ಆಪದ್ಧರ್ಮಿಗಳು ಒಂದೇ ಒಂದು ದಿನವಾದರೂ ಧನುರ್ಮಾಸ ವೃತವನ್ನು ನಡೆಸಿ ತೃಪ್ತಿ ಪಡೆಯುವುದುಂಟು. ಇದನ್ನೂ ಮಾಡಲಾರದವರು ಪೌಷ್ಯ ಮಾಸದಲ್ಲಿ ಬರುವ “ಮುಕ್ಕೋಟಿ ದ್ವಾದಶೀ”ಯಂದು ಧನುರ್ಮಾಸದ ಆಚರಣೆಯ ಕೃತಾರ್ಥತೆಯ ಸಮಾಧಾನವನ್ನು ತಾಳುವರು. ತಿರುಪತಿಯ ತಿಮ್ಮಪ್ಪನಿಗೆ ಸಲ್ಲುವ ವೈಕುಂಠ ಏಕಾದಶಿ, ಮುಕ್ಕೋಟಿ ದ್ವಾದಶಿ ಪೂಜಾ ಕೈಂಕರ್ಯಗಳು ವೈಶಿಷ್ಟ್ಯಪೂರ್ಣವಾದುದು. ಧನುರ್ಮಾಸ ಪುಣ್ಯ ಪೂರ್ಣ ಮಾಸ. ಪರ್ವಪ್ರವರ ಪ್ರತಿಷ್ಠಿತ ಮಾಸ.
ಈಗಿನ ಜೀವನಕ್ರಮವೇ ಬದಲಾಗಿದೆ. ಎಲ್ಲರೂ ಬಿಜಿ..ಬಿಜಿ.. ಆಫೀಸ್ ಬಿಟ್ಟ ಅಪ್ಪ ಅಮ್ಮನೂ ಬಿಜಿ. ಶಾಲೆ ಕಾಲೇಜುಗಳಿಂದ ಬಂದ ಮಕ್ಕಳೂ ಬಿಜಿ. ಯಾರಿಗೂ ಪುರುಸೋತ್ತೇ ಇಲ್ಲ. ಕೆಲವರು ಮಲಗುವಾಗ ರಾತ್ರಿ ಹತ್ತು..! ಹನ್ನೊಂದು..!! ಹನ್ನೆರಡು!!! ಬೆಳಿಗ್ಗೆ ಗಡಿಬಿಡಿಯ ಬದುಕು. ರವಿವಾರವಂತೂ ಏಳುವುದೇ ಹನ್ನೊಂದು ಗಂಟೆಗೆ. ಹಾಗಾಗಿ ಯೌವನದ ದಿನಗಳಲ್ಲೇ ಬೊಜ್ಜು ಬೆಳೆಸಿಕೊಂಡು ಆರೋಗ್ಯ ಕಳಕೊಂಡ ಅಯೋಗ್ಯರಾಗುತ್ತಿದ್ದೇವೆ. ಏನು ಮಾಡೋಣ ಬದುಕೇ ಕರ್ಮ… ಕರ್ಮ..! ದುಡ್ಡು ಗಳಿಸುವುದೇ ಧರ್ಮ.. ಧರ್ಮ..! ಅನಿಸಿಬಿಟ್ಟಿದೆ. ಆದರೂ ಮೇಲೆ ಹೇಳಿದ ಎಲ್ಲಾ ಸಕಾರಣಗಳಿಂದ ಸಾಧ್ಯವಾದರೆ, ಸ್ವ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಭಗವತ್ ಪ್ರೀತ್ಯರ್ಥವಾಗಿ ಈ ಪವಿತ್ರ ಮಾಸದಲ್ಲಿ ತಮ್ಮ ತಮ್ಮ ಊರಿನ ದೇವಾಲಯಗಳಲ್ಲಿ ನಡೆಯುವ ಧನುಪೂಜೆಯಲ್ಲಿ ಭಾಗಿಗಳಾಗಿ ಭಗವಂತನಿತ್ತ ಈ ಜೀವಮಾನದ ಅವಕಾಶವನ್ನು ಸದ್ವಿನಿಯೋಗಿಸಿ ಎಂಬುದಾಗಿ ಪ್ರಾರ್ಥನೆ.
ಬರಹ : ಶರತ್ ಶೆಟ್ಟಿ ಪಡುಪಳ್ಳಿ
















































































































