ಮಂಗಳೂರಿನ ಖ್ಯಾತ ಹೋಟೆಲ್ ಉದ್ಯಮಿ, ಶ್ರೀದೇವಿ ವಿದ್ಯಾ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಧ್ಯಕ್ಷ, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ ಶ್ರೀ ಎ. ಸದಾನಂದ ಶೆಟ್ಟಿ ಅವರ ಧರ್ಮಪತ್ನಿ ಮೂಲ್ಕಿ ಕುಬೆವೂರು ದೊಡ್ಡಮನೆ ಮೈನಾ ಎಸ್ ಶೆಟ್ಟಿ (75 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ರಾತ್ರಿ 8 ಕ್ಕೆ ನಿಧನರಾದರು.
ಮೃತರು ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಯಾಗಿದ್ದು ಶ್ರೀದೇವಿ ಸಮೂಹ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಮಂಗಳೂರಿನ ಕ್ವಾಲಿಟಿ-ಕುಡ್ಲ ಹೋಟೆಲ್ ಸಮೂಹಗಳನ್ನು ತನ್ನ ಕ್ರಿಯಾಶೀಲತೆಯಿಂದ ಬೆಳೆಸಿ, ರಾಜ್ಯದ ಪ್ರತಿಷ್ಠಿತ ಕೇಟರಿಂಗ್ ಸಂಸ್ಥೆಯಾಗಿ ರೂಪುಗೊಳ್ಳುವಲ್ಲಿ ಶ್ರಮಿಸಿದವರು. ಜಿಲ್ಲೆಯ ಹಲವಾರು ಪ್ರತಿಷ್ಠಿತ ಕೇಟರಿಂಗ್, ಹೋಟೆಲ್ ಉದ್ಯಮಿಗಳಿಗೆ ಮಾರ್ಗದರ್ಶಿಯಾಗಿದ್ದರು. ಬೆಂಗಳೂರು, ಮಂಗಳೂರಿನಲ್ಲಿ ನಡೆದಿದ್ದ ಚಾರಿತ್ರಿಕ ವಿಶ್ವ ಬಂಟರ ಸಮ್ಮೇಳನದ ಊಟೋಪಚಾರದ ಸಂಪೂರ್ಣ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು. ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದರು.
ಮೂಲ್ಕಿ ಕುಬೆವೂರು ದೊಡ್ಡಮನೆಯ ಕುಟುಂಬ ಸ್ನೇಹ ಮಿಲನ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದ್ದರು.
ಮೃತರು ಪತಿ, ಇಬ್ಬರು ಪುತ್ರರನ್ನು ಹಾಗೂ ಅಪಾರ ಅಭಿಮಾನಿ ಬಂಧುಗಳನ್ನು ಅಗಲಿದ್ದಾರೆ.