
ಪುತ್ತೂರು ತಾಲೂಕು ಬೆಟ್ಟಂಪಾಡಿ ಗುತ್ತು ಧರ್ಮಚಾವಡಿ ಪ್ರವೇಶೋತ್ಸವ ಮತ್ತು ಶ್ರೀ ಜಠಾಧಾರಿ ದೈವ, ಧರ್ಮದೈವ ಶ್ರೀ ವ್ಯಾಘ್ರ ಚಾಮುಂಡಿ, ಸಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಶ್ರೀ ದೈವಗಳ ನೇಮೋತ್ಸವ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವತಿಯಿಂದ ‘ಶಿವಭಕ್ತ ವೀರಮಣಿ’ ವಿಶೇಷ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಯಕ್ಷಗಾನದ ಪ್ರಸಿದ್ಧ ಅರ್ಥಧಾರಿಗಳಾದ ಭಾಸ್ಕರ ರೈ ಕುಕ್ಕುವಳ್ಳಿ, ರಾಧಾಕೃಷ್ಣ ಕಲ್ಚಾರ್ ಮತ್ತು ಭಾಸ್ಕರ ಶೆಟ್ಟಿ ಸಾಲ್ಮರ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಐ. ಗೋಪಾಲಕೃಷ್ಣರಾವ್ ಕಲಾವಿದರನ್ನು ಪರಿಚಯಿಸಿದರು. ಬೆಟ್ಟಂಪಾಡಿ ಗುತ್ತು ಕುಟುಂಬಿಕರು ಶಾಲು ಸ್ಮರಣಿಕೆ ನೀಡಿ ಗೌರವಿಸಿದರು.


ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಮೋಹನ್ ದಾಸ್ ರೈ ಎ. ಸ್ವಾಗತಿಸಿದರು. ಸಂಚಾಲಕ ದಯಾನಂದ ರೈ ಕೋರ್ಮಂಡ ವಂದಿಸಿದರು. ಬಳಿಕ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಬಯಲಾಟ ಜರಗಿತು.

























































































































