ಭಾರತದ ನಿಜವಾದ ಶಕ್ತಿ ಅದರ ವೈವಿಧ್ಯತೆಯಲ್ಲಿ ಅಡಗಿದೆ. ದೇಶದ ಪ್ರತಿಯೊಂದು ಭಾಗದ ಸಂಸ್ಕೃತಿ ಮತ್ತು ಪರಂಪರೆಗಳು ಭಾರತದ ಅಸ್ತಿತ್ವವನ್ನು ಶ್ರೀಮಂತಗೊಳಿಸಿವೆ. ಪರಸ್ಪರ ಗೌರವ, ಸಹಬಾಳ್ವೆ ಮತ್ತು ಒಗ್ಗಟ್ಟಿನ ಮನೋಭಾವವೇ ನಿಜವಾದ ಏಕತೆಯ ಮೂಲ ಎಂದು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡು ರಾವ್ ಹೇಳಿದರು. ಅವರು ಮಿಜಾರಿನ ಆಳ್ವಾಸ್ ತಾಂತಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಾರ್ತ್ ಈಸ್ಟರ್ನ್ ಪೀಪಲ್ಸ್ ಅಸೋಸಿಯೇಷನ್ (ನೇಪಮ್) ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ ನೇಪಮ್ ಫ್ರೆಶರ್ಸ್ ಮೀಟ್ ೨೦೨೫ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದ ಸೌಂದರ್ಯ ಅದರ ವೈವಿಧ್ಯತೆಯಲ್ಲಿ ಅಡಗಿದೆ. ಪರಸ್ಪರದ ಭಿನ್ನತೆಯನ್ನು ಗೌರವಿಸಿ, ಸಾಮಾನ್ಯ ಮೌಲ್ಯಗಳಲ್ಲಿ ಒಂದಾಗುವ ಮನೋಭಾವವೇ ನಮ್ಮ ದೇಶದ ಶಕ್ತಿ. ಈಶಾನ್ಯ ಭಾರತದ ಜನರು ಕರ್ನಾಟಕದ ಜೀವನದ ಅಂಗವಾಗಿ ಬೆರೆತು, ರಾಷ್ಟ್ರದ ಏಕತೆಯನ್ನು ಬಲಪಡಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ, ಈಶಾನ್ಯ ಭಾರತದ ಏಳು ರಾಜ್ಯಗಳು ನಮ್ಮ ದೇಶದ ಗೌರವ ಮತ್ತು ಹೆಮ್ಮೆ. ದೇಶದ ಗಡಿಗಳನ್ನು ಕಾಯುವ ಧೈರ್ಯಶಾಲಿ ಸೈನಿಕರು ಹಾಗೂ ಗುರ್ಖಾ ಪಡೆಗಳಲ್ಲಿ ಸೇವೆ ಸಲ್ಲಿಸುವವರು ಈ ಭಾಗದವರೇ. ಕರ್ನಾಟಕದಲ್ಲಿ ನೆಲೆಸಿರುವ ಈಶಾನ್ಯ ರಾಜ್ಯದವರು ತಮ್ಮದೇ ಮನೆಯಂತೆ ಇಲ್ಲಿ ಬದುಕಲಿ. ನಾವು ಸದಾ ನಿಮ್ಮೊಂದಿಗಿದ್ದೇವೆ ಎಂದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಆರಂಭದಲ್ಲಿ ದಿನೇಶ್ ಗುಂಡುರಾವ್ ಮತ್ತು ಮಿಥುನ್ ರೈ, ತಾಯಿ ಭುವನೇಶ್ವರಿ ಪಟಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಆಳ್ವಾಸ್ನ ಈಶಾನ್ಯ ಭಾರತದ ವಿದ್ಯಾರ್ಥಿಗಳು ಕರ್ನಾಟಕದ ನಾಡಗೀತೆ ಹಾಡಿ ಎಲ್ಲರ ಮೆಚ್ಚುಗೆ ಪಡೆದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಆಳ್ವಾಸ್ನ ಈಶಾನ್ಯ ಭಾರತದ ವಿದ್ಯಾರ್ಥಿಗಳಿಂದ ನಡೆದ ಡೊಳ್ಳು ಕುಣಿತ, ಕರ್ನಾಟಕದ ಸಾಂಪ್ರದಾಯಿಕ ನೃತ್ಯಕಲೆಗಳ ಬಗ್ಗೆ ಅವರ ಗೌರವ ಮತ್ತು ಪ್ರೀತಿ ಪ್ರದರ್ಶಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಕರ್ನಾಟಕವು ಶಾಂತಿ ಮತ್ತು ಸಹಬಾಳ್ವೆಯ ನೆಲವಾಗಿದೆ. ಮಂಗಳೂರಿನಲ್ಲಿಯೂ ಎಲ್ಲಾ ಸಮುದಾಯದವರು ಒಗ್ಗಟ್ಟಿನಿಂದ ಬದುಕುತ್ತಿದ್ದಾರೆ ಎಂದರು. ನಮ್ಮ ಇತಿಹಾಸದ ಪಠ್ಯ ಪುಸ್ತಕಗಳಲ್ಲಿ ಶಿವಾಜಿ ಮಹಾರಾಜರು, ಟಿಪ್ಪು ಸುಲ್ತಾನ್ ಮೊದಲಾದವರ ಬಗ್ಗೆ ಓದುತ್ತೇವೆ. ಆದರೆ ಮಣಿಪುರ ಹಾಗೂ ಇತರ ಈಶಾನ್ಯ ರಾಜ್ಯಗಳ ಶ್ರೀಮಂತ ಇತಿಹಾಸವನ್ನು ತಿಳಿಯುವ ಅವಕಾಶ ಇಲ್ಲ. ಪರಸ್ಪರ ಸಂಸ್ಕೃತಿಗಳನ್ನು ಅರಿತುಕೊಳ್ಳಲು ಆಳ್ವಾಸ್ ಸದಾ ಪ್ರೋತ್ಸಾಹಿಸುತ್ತದೆ. ಅದಕ್ಕಾಗಿ ನಾವು ಪ್ರತೀ ವರ್ಷ ನಿಂಗೋಲ್ ಚಾಕೋಬಾ ಮತ್ತು ಸಜಿಬು ಚೆರೋಬಾ ಸೇರಿದಂತೆ ಈಶಾನ್ಯ ಭಾರತದ ಉತ್ಸವಗಳನ್ನು ನಮ್ಮ ಆವರಣದಲ್ಲಿ ಆಯೋಜಿಸುತ್ತೇವೆ ಎಂದರು. ಈ ಕಾರ್ಯಕ್ರಮದಲ್ಲಿ ನೇಪಮ್ ವ್ಯಾಪ್ತಿಗೆ ಒಳಪಟ್ಟ ೮೫೦ ವಿದ್ಯಾರ್ಥಿಗಳು ಆಗಮಿಸಿದ್ದರು. ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ಡಾ. ರೋಷನ್ ಇದ್ದರು. ನೇಪಮ್ ಅಧ್ಯಕ್ಷ ಯಾನೋಲುಂಗರ್ ಥೋಚ್ಚುಯಿಯೋ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನೇಪಮ್ನ ಆತಿಥ್ಯ ಹಾಗೂ ಶ್ರೀನಿವಾಸ ನಿರೂಪಿಸಿ, ನೇಪಮ್ ಸಲಹೆಗಾರ್ತಿ ಡಾ. ಕೈನಿ ಸೆಸಿಲಿಯಾ ವಂದಿಸಿದರು.





































































































