ತುಳುವ ಸಂಸ್ಕೃತಿ, ಇತಿಹಾಸ, ಮತ್ತು ಜನಪದ ಸಾಂಸ್ಕೃತಿಕ ನಾಯಕರ ಅಧ್ಯಯನದ ಕುರಿತು ಯುವ ಜನಾಂಗ ಆಸಕ್ತಿ ತಾಳಬೇಕಾಗಿದೆ. ಅಗೋಳಿ ಮಂಜಣ್ಣ ತುಳುನಾಡಿನ ವೀರ ನಾಯಕನಾಗಿದ್ದು, ಅವರ ಕುರಿತು ಇನ್ನಷ್ಟು ಅಧ್ಯಯನ ನಡೆಯಬೇಕು ಎಂದು ಎಸ್.ಆರ್. ಹೆಗ್ಡೆ ಚಾರಿಟೇಬಲ್ ನ ಅಧ್ಯಕ್ಷೆ ಮತ್ತು ಸಂಶೋಧಕಿ ಡಾ| ಇಂದಿರಾ ಹೆಗ್ಗಡೆ ನುಡಿದರು. ಎಸ್.ಆರ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ) ಆಶ್ರಯದಲ್ಲಿ ಚೇಳಾರು ಗುತ್ತು ಮನೆಯಲ್ಲಿ ಆಯೋಜಿಸಿದ್ದ ಸೋಣದ ಸಂಕ್ರಾಂತಿ ಮತ್ತು ಅಗೋಳಿ ಮಂಜಣ್ಣ ನೆಂಪು ಹಾಗೂ ಚೇಳಾರು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತುಳುನಾಡ ಆಚರಣೆಯಲ್ಲಿ ಸೋಣ ಸಂಕ್ರಾಂತಿಗೆ ವಿಶೇಷ ಮಹತ್ವವಿದ್ದು, ವಾರ್ಷಿಕ ಆವರ್ತನದ ಕ್ರಮಗಳು ಕೃಷಿ ಬದುಕಿನೊಂದಿಗೆ ನಂಟನ್ನು ಹೊಂದಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ
ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ, ಪ್ರತಿಯೊಂದು ಗ್ರಾಮಕ್ಕೂ ತನ್ನದೇ ಆದ ಇತಿಹಾಸವಿದ್ದು ಅವೆಲ್ಲಗಳ ಸೇರಿಗೆಯೇ ರಾಷ್ಟ್ರ ಇತಿಹಾಸವಾಗಿದೆ. ಅಗೋಳಿ ಮಂಜಣ್ಣ ನಮ್ಮ ನಾಡಿನ ಆತ್ಮ ಧೈರ್ಯ. ಸಾಹಸ, ಶೌರ್ಯಗಳ ಪ್ರತೀಕವಾಗಿದ್ದು ಮಂಜಣ್ಣ ಸಂಕಲನದ ಮರು ನಿರೂಪಣೆ ಆಗಬೇಕಾಗಿದೆ ಎಂದರು. ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವೆಂಕಟೇಶ್ ಶೆಟ್ಟಿ ಮಾತನಾಡಿ, ಮಂಜಣ್ಣ ಕತೆ ಕಲಾ ಮಾಧ್ಯಮಗಳಲ್ಲೂ ಬಂದಿದ್ದು ಜನಪ್ರಿಯತೆ ಪಡೆದಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಪುಷ್ಪರಾಜ ಶೆಟ್ಟಿ ಮಧ್ಯ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಬೆಂಬಲಿಸಿ ಪ್ರೋತ್ಸಾಹ ನೀಡುವ ಕಾರ್ಯ ಶ್ಲಾಘನೀಯ ಎಂದರು. ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ತೆರಸಾ ವೇಗಸ್ ಶುಭ ಹಾರೈಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ಜ್ಯೋತಿ ಚೇಳಾರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಚೇಳಾರು ಗುತ್ತಿನ ಕಸ್ತೂರಿ ಶೆಟ್ಟಿ ವಂದಿಸಿದರು. ಅತ್ಯುನ್ನತ ಅಂಕ ಗಳಿಸಿದ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಅಭಿನಂದಿಸಲಾಯಿತು.
ಚೇಳಾರು ಗುತ್ತಿನ ಚಂದ್ರಿಕಾ, ಉದಯ, ವತ್ಸಲಾ, ರಾಮಕೃಷ್ಣ ಪೂಂಜಾ, ಗಣೇಶ್ ಶೆಟ್ಟಿ, ದಿನೇಶ್ ಭಂಡಾರಿ, ಹಿರಿಯ ಕಲಾವಿದೆ ಗೀತಾ ಸುರತ್ಕಲ್, ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ನ ಬೆನಟ್ ಅಮ್ಮನ್ನ, ಸುಜಾತ, ಉಪನ್ಯಾಸಕರಾದ ರವಿಚಂದ್ರ, ಜಯಶ್ರೀ ಮತ್ತು ಅಪರ್ಣ ಅವರು ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕಿ ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆ ಪ್ರಸ್ತುತ ಪಡಿಸಿದರು.