ಮಹಿಳೆ ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾಳೆ. ಈ ಮೂಲಕ ಹೆಣ್ಣು ಅಂದರೆ ಅಬಲೆ ಅಲ್ಲ ಸಬಲೆ ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ. ಸಮಾಜಕ್ಕೆ ಏನಾದರೂ ಕೊಡುಗೆ ಕೊಡಲೇಬೇಕೆಂಬುದು ಎಲ್ಲರ ಆಶಯವಾಗಬೇಕೆಂದು ಗ್ರೂಪ್ ಆಫ್ ಪ್ರಕಲ್ಪ ನಿರ್ದೇಶಕಿ ಕಲ್ಪನಾ ಪ್ರಕಾಶ ನಾಯಕ ಅಭಿಪ್ರಾಯಪಟ್ಟರು. ರೋಟರಿ ಕ್ಲಬ್ ಆಫ್ ಮಿಡ್ ಟೌನ್ ಹುಬ್ಬಳ್ಳಿ ವತಿಯಿಂದ ಆಯೋಜಿಸಿದ್ದ ‘ರೋಟರಿ ಸಂಭ್ರಮ’ ನಾಗರೀಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಪ್ರತೀ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎನ್ನಲಾಗುತ್ತದೆ. ಆದರೆ, ನನ್ನ ಬೆಳವಣಿಗೆ, ಸಾಧನೆಗೆ ಪತಿಯೇ ಕಾರಣ. ಏನಾದರೂ ಮಾಡು ಎಂದು ಸದಾ ಪ್ರೇರಣೆ ನೀಡುತ್ತಿದ್ದು, ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಆಶಯದೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಉದ್ಯಮಿ ನಂದಕುಮಾರ್ ಎಚ್.ಎನ್ ಮಾತನಾಡಿ, ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದರೆ ನಮಗೆ ಜವಾಬ್ದಾರಿ ಹೆಚ್ಚಿಸುತ್ತದೆ. ಸಮಾಜದಿಂದ ಪಡೆದದನ್ನು ಸಮಾಜಕ್ಕೆ ವಾಪಸ್ ಕೊಡಬೇಕು. ಸಮಾಜದಿಂದಲೇ ವ್ಯಕ್ತಿ ರೂಪುಗೊಳ್ಳುತ್ತಾನೆ. ಸಮಾಜ ನಮಗೆ ಸಾಕಷ್ಟು ಕೊಡುತ್ತದೆ. ಸಮಾಜಕ್ಕಾಗಿ ನಾವು ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದರು. ಸಮಾಜಮುಖಿ ಕೆಲಸ ಮಾಡಲು ಅನೇಕರ ಸಹಕಾರ ಇದ್ದೇ ಇರುತ್ತದೆ. ರೋಟರಿ ಸಂಸ್ಥೆ ಒಳ್ಳೆಯ ಕೆಲಸ ಮಾಡುತ್ತಿದೆ. ರೋಟರಿ ಸಮಾಜಮುಖಿ ಚಟುವಟಿಕೆಗಳಿಗೆ ಸದಾ ಕೈ ಜೋಡಿಸುತ್ತೇನೆ ಎಂದು ಭರವಸೆ ನೀಡಿದರು. ಉದ್ಯಮಿ ಆನಂದ ಸಂಕೇಶ್ವರ ಮಾತನಾಡಿ, ರೋಟರಿ ಜತೆಗೆ ಸುಮಾರು ಏಳೆಂಟು ಪ್ರಾಜೆಕ್ಟ್ ಗಳನ್ನು ಮಾಡಿದ್ದೇನೆ. ರೋಟರಿ ಹಲವಾರು ಸಮಾಜಮುಖಿ ಕಾರ್ಯ ಮಾಡುತ್ತಿದೆ. ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುವ ಸಂಸ್ಥೆಗಳಿಗೆ ಸದಾ ಬೆಂಬಲ ಇರುತ್ತದೆ. ಯಾವುದೇ ಸಂಸ್ಥೆ ಬೆಳೆಯಲು ಸಿಬ್ಬಂದಿ ಕಾರಣ ಎಂದು ತಿಳಿಸಿದರು. ಡಾ. ಗಿರೀಶ ಮಾಸುರಕರ ಮಾತನಾಡಿ, ಹುಟ್ಟು ಸಾವು ಮಧ್ಯದ ಆಯ್ಕೆ ನಮ್ಮ ಜೀವನ ನಿರ್ಧರಿಸುತ್ತದೆ. ಸದಾ ಸಂತೋಷ, ನೆಮ್ಮದಿಗಾಗಿ ಒಳ್ಳೆಯ ಕೆಲಸ ಮಾಡಬೇಕು. ಜೀವನದಲ್ಲಿ ಛಲ, ಶ್ರದ್ಧೆ ಇಟ್ಟುಕೊಂಡು ಸಾಧಿಸಲು ಶ್ರಮಿಸಬೇಕು. ಜೀವನದಲ್ಲಿ ರಿಸ್ಕ್ ತೆಗೆದುಕೊಂಡಾಗ ಮಾತ್ರ ಸಾಧನೆ ಮಾಡಬಹುದು. ಸಾಧನೆ ಸುಲಭವಾಗಿ ದೊರೆಯುವುದಿಲ್ಲ ಸತತ ಶ್ರಮ, ಶ್ರದ್ಧೆ ಮುಖ್ಯ ಎಂದರು.
ಪ್ರಶಸ್ತಿ ಪ್ರಧಾನ : ಉದ್ಯಮ ಕ್ಷೇತ್ರದಲ್ಲಿನ ಸಾಧನೆಗೆ ನಂದಕುಮಾರ ಎಚ್.ಎನ್, ಮಹಿಳಾ ವಿಭಾಗದಲ್ಲಿ ಕಲ್ಪನಾ ಪ್ರಕಾಶ ನಾಯಕ, ಯುವ ಸಾಧಕ ಎಸ್.ಡಿ.ಎಂ ನಿರ್ದೇಶಕ ಸಾಕೇತ್ ಶೆಟ್ಟಿ, ಸತೀಶ್ ಶೆಟ್ಟಿ, ಮಾಧ್ಯಮ ಜಾಹೀರಾತು ಕ್ಷೇತ್ರದಲ್ಲಿ ಶಿವಾಜಿ ಭಿಸೆ, ದಿವಾಕರ ಭಟ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ದಿನೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಕಾರ್ಯದರ್ಶಿ ಪ್ರವೀಣ ಬನ್ಸಾಲಿ, ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಸಂಜನಾ ಮಹೇಶ್ವರಿ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ವಾಸುಕಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು.