ಹಸಿರು ಉಳಿಸಿದಾಗ ಉಸಿರಿಗೆ ಬಲ ಬರುತ್ತದೆ. ಅರಿವಿನ ಮೂಲಕ ಪರಿಸರ ಸಂರಕ್ಷಣೆ ಕೆಲಸವಾಗಬೇಕು. ಪರಿಸರ ದಿನದ ಆಚರಣೆ ಪ್ರತಿನಿತ್ಯ ನಡೆಯುವ ಜೊತೆಗೆ ಗಿಡವನ್ನು ನೆಟ್ಟ ಬಳಿಕ ಪೋಷಿಸುವ ಅನಿವಾರ್ಯತೆ ಇದೆ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು. ಕನ್ಯಾನದಲ್ಲಿರುವ ಒಡಿಯೂರು ಶ್ರೀ ಗುರುದೇವ ಐಟಿಐ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದಿಂದ ಮಂಗಳೂರು ವಿಭಾಗ ಮಟ್ಟದ ಗಿಡ ನೆಡುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿಯ ಜತೆಗೆ ಬದುಕನ್ನು ರೂಪಿಸುವ ಶಿಕ್ಷಣದ ಅಗತ್ಯವಿದೆ. ಸಂಸ್ಕಾರವನ್ನು ಮೈಗೂಡಿಸಿಕೊಂಡಾಗ ಪ್ರಕೃತಿ ಚೆನ್ನಾಗಿರುತ್ತದೆ. ವಿಜಯ ಎಂಬುದು ಅಂತರಂಗದಲ್ಲಿ ಮೊದಲು ಆಗಬೇಕಾಗಿದ್ದು, ಅಂತರಂಗದ ಉಗ್ರಗಾಮಿಗಳನ್ನು ಧಮನಿಸುವ ಕಾರ್ಯವಾಗಬೇಕು. ಶಿಕ್ಷಣ ಪ್ರಜ್ಞಾವಂತ ಪ್ರಜೆಗಳನ್ನು ನಿರ್ಮಾಣ ಮಾಡುತ್ತದೆಯಾದರೂ, ವಿದ್ಯಾವಂತರಿಂದಲೇ ಸಮಾಜಕ್ಕೆ ಸಮಸ್ಯೆಯಾಗುತ್ತಿರುವುದು ಆಘಾತಕಾರಿಯಾಗಿದೆ. ಆಧ್ಯಾತ್ಮಿಕ ಬದುಕಿನಲ್ಲಿ ದ್ವೇಷಕ್ಕೆ ಅವಕಾಶವಿಲ್ಲ. ಧರ್ಮವನ್ನು ಸೀಮಿತಗೊಳಿಸುವುದು ಸರಿಯಲ್ಲ. ದೇಶ ಉಳಿದರೆ ಧರ್ಮಾನುಷ್ಟಾನ ಸಾಧ್ಯ ಎಂದರು.ಕೆ.ಆರ್.ಎಂ.ಎಸ್.ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಆಶಯ ಭಾಷಣ ನಡೆಸಿದರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೊ. ಕೆ.ಆರ್. ಕವಿತಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಡಾ. ಕೆ.ಸಿ. ಮಹದೇಶ, ಡಾ. ಎಸ್.ಬಿ.ಎಂ. ಪ್ರಸನ್ನ, ಮಂಗಳೂರು ವಿವಿ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ. ಶೇಷಪ್ಪ ಅಮೀನ್ ಕೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ಅಧ್ಯಕ್ಷ ಪಿ.ಬಿ ಹರೀಶ್ ರೈ, ಪರಿಸರ ಪ್ರೇಮಿ ಮಾಧವ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.
ಸ್ಪರ್ಧೆಯ ಸಂಚಾಲಕಿ ಪ್ರೊ ಶೋಭಾ ಸ್ವಾಗತಿಸಿದರು. ಡಾ. ಗಾಯತ್ರಿ ಎನ್ ವಂದಿಸಿದರು. ಮಮತ ಎಂ ಕಾರ್ಯಕ್ರಮ ನಿರೂಪಿಸಿದರು.