ಯಕ್ಷಗಾನದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಪಟ್ಲ ದಶಮ ಸಂಭ್ರಮ – 2025 ರಾಷ್ಟ್ರೀಯ ಕಲಾ ಸಮ್ಮೇಳನವು ಜೂನ್ 1ರಂದು ಮಂಗಳೂರು ಅಡ್ಯಾರ್ ಗಾರ್ಡನ್ ನಲ್ಲಿ ಯಶಸ್ವಿಯಾಗಿ ನಡೆಯಿತು. ದಶಮ ಸಂಭ್ರಮದ ವೈಭವ ಮೂರು ವೇದಿಕೆಗಳಲ್ಲಿ ಪ್ರಸ್ತುತಗೊಂಡಿದ್ದು ಭರತನಾಟ್ಯ, ಓಡಿಸ್ಸಿ, ಕಥಕ್, ಮೋಹಿನಿಯಾಟ್ಟಂ ಸಹಿತ ದೇಶದ ಎಂಟು ವಿಧದ ಶಾಸ್ತ್ರೀಯ ನೃತ್ಯ ಪ್ರಕಾರಗಳ ಪ್ರದರ್ಶನ, ಭಾರತೀಯ ಕಲೆಗಳ ಛಾಯಾಚಿತ್ರಗಳ ಪ್ರದರ್ಶನ ನಡೆಯಿತು. ಯಕ್ಷಗಾನ ಸ್ಪರ್ಧೆಯಲ್ಲಿ ತೆಂಕು ಮತ್ತು ಬಡಗು ತಿಟ್ಟಿನ ಯುವ ಕಲಾವಿದರ 8 ತಂಡಗಳು ಭಾಗವಹಿಸಿದ್ದವು. ವಿವಿಧ ತಂಡಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಕುಣಿತ ಭಜನೆ ಸ್ಪರ್ಧೆ ಆಯೋಜನೆಗೊಂಡಿತು. ವಿವಿಧ ಕ್ಷೇತ್ರದ ಸುಮಾರು 3,500 ಕಲಾವಿದರಿಗೆ ಅಪಘಾತ ವಿಮಾಯೋಜನೆಗೆ ನೋಂದಣಿ ನಡೆಯಿತು. ವೈದ್ಯಕೀಯ ಆರ್ಥಿಕ ನೆರವು ನೀಡಲಾಯಿತು. ಯಕ್ಷಾಶ್ರಯ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಿಸಿ ವಿವಿಧ ಸಾಧಕರಿಗೆ ಯಕ್ಷದ್ರುವ ಕಲಾ ಗೌರವ ಪ್ರಧಾನಿಸಲಾಯಿತು. ಯಕ್ಷಧ್ರುವ ಪಟ್ಲ ದಶಮ ಸಂಭ್ರಮದ ರಾಷ್ಟ್ರೀಯ ಕಲಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಟ್ರಸ್ಟ್ ನ ಪ್ರಧಾನ ಸಂಚಾಲಕ ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಹಾಗೂ ಇನ್ನಿತರರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಭಾಗವತರಾಗಿ ವೃತ್ತಿ ಜೀವನದ 25ನೇ ವರ್ಷದ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ದಂಪತಿಗಳಿಗೆ ಕೇಂದ್ರ ಸಮಿತಿಯ ವತಿಯಿಂದ ಅದ್ದೂರಿಯಿಂದ ಸನ್ಮಾನಿಸಲಾಯಿತು.

ಗಮನ ಸೆಳೆದ ಗಣ್ಯರ ಯಕ್ಷಗಾನ ವೇಷಗಳು: ದಶಮ ಸಂಭ್ರಮದ ಸಮಾರೋಪ ಸಮಾರಂಭ ನಡೆದ ಬಳಿಕ ‘ಮಹಿಷ ಮರ್ದಿನಿ’ ಯಕ್ಷಗಾನದ ಪ್ರಸಂಗದಲ್ಲಿ ಪದಾಧಿಕಾರಿಗಳು ಪಾತ್ರಗಳನ್ನು ನಿರ್ವಹಿಸಿದ್ದು, ಬ್ರಹ್ಮನ ಪಾತ್ರದಲ್ಲಿ ಶಶಿಧರ್ ಶೆಟ್ಟಿ ಬರೋಡ, ವಿಷ್ಣುವಿನ ಪಾತ್ರದಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ, ಅಷ್ಟಭುಜೆಯಾಗಿ ಭಾಗವತ ಸತೀಶ್ ಶೆಟ್ಟಿಯವರ ಧರ್ಮಪತ್ನಿ ಪಾತ್ರವನ್ನು ನಿರ್ವಹಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಮಠದ ಶ್ರೀ ಮಾತಾನಂದಾಮಯಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಚಿತ್ರ ನಟ ರಾಜ್ ಬಿ. ಶೆಟ್ಟಿ, ಶಾಸಕ ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಫೌಂಡೇಶನ್ ಮಹಾದಾನಿ ಎಂ. ಎಲ್. ಸಾಮಗ ಉಡುಪಿ, ಸರಪಾಡಿ ಅಶೋಕ್ ಶೆಟ್ಟಿ ಇನ್ನಿತರ ಗಣ್ಯರು ಹಾಗೂ ಹಾಗೂ ಪಟ್ಲ ಫೌಂಡೇಶನ್ ನ ವಿವಿಧ ಘಟಕದ ಪದಾಧಿಕಾರಿಗಳು ಭಾಗವಹಿಸಿದರು.