ತುಳು ಒಂದು ಸಮೃದ್ಧ ಭಾಷೆ. ಅದರ ಸಮೃದ್ಧತೆ, ಹಿರಿಮೆ, ಗರಿಮೆಯನ್ನು ಸುಂದರವಾಗಿ ತನ್ನ ಕೃತಿಗಳಲ್ಲಿ ಮೂಡಿಸುವ ಕಲೆ ಶ್ರೀಶಾವಾಸವಿಯವರಿಗೆ ಕರಗತವಾಗಿದೆ. ಅವರ ಕೃತಿಗಳಲ್ಲಿ ಜೀವಂತಿಕೆಯಿದೆ ಎಂದು ಪುತ್ತೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ ಹೇಳಿದರು. ಅವರು ಶುಕ್ರವಾರ ಪುತ್ತೂರು ಪತ್ರಿಕಾ ಭವನದಲ್ಲಿ ಸಿರಿಗಂಗೆ ಪ್ರಕಾಶನ ತುಳುನಾಡ್ ಪ್ರಕಟಿತ ಶ್ರೀಶಾವಾಸವಿ ತುಳುನಾಡ್ರವರ ‘ಗೇನೊದ ಬುಲೆ’ ಲೇಖನ ಮಾಲೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕೈಲಾಸ ನಮ್ಮ ಕೈಯಲ್ಲೇ ಇದೆ. ನಿರ್ಮಲ ಮತ್ತು ನಿಷ್ಕಲ್ಮಶ ಭಕ್ತಿಗೆ ಶಿವ ಒಲಿದು ಬರುತ್ತಾನೆ. ಅಲ್ಲದೆ ಮುಕ್ತಿ ನೀಡುವುದರೊಂದಿಗೆ ಬದುಕನ್ನು ಪಾವನಗೊಳಿಸಲು ಶಿವಧ್ಯಾನವೇ ಸುಲಭ ಮಾರ್ಗ. ದೈವ ಭಕ್ತಿ, ದೇವೆರಲ್ಲಿ ಅಚಲ ನಂಬಿಕೆ ಬೇಕು. ಶಿವ ತತ್ವವೇ ಸತ್ಯ ಎಂದು ಪಟ್ಟೆ ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಶಂಕರಿ ಪಟ್ಟೆ ಹೇಳಿದರು. ಅವರು ಸಿರಿಗಂಗೆ ಅರ್ಪಿಸುವ ಧೃತೀಜ್ ತುಳುನಾಡ್ ನಿರ್ಮಾಣದಲ್ಲಿ ಮೂಡಿಬಂದ ಶ್ರೀಶಾವಾಸವಿ ತುಳುನಾಡ್ ಸಾಹಿತ್ಯದ, ಶರತ್ ಬಿಳಿನೆಲೆ ರಾಗಸಂಯೋಜನೆ ಮತ್ತು ಸಂಗೀತ ನಿರ್ದೇಶನದ, ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕ ವಿಶಾಖ್ ನಾಗಲಾಪುರ ಗಾಯನದ ‘ಹರನೂರ ದಾರಿ’ ಶಿವನ ಕನ್ನಡ ಲಿರಿಕಲ್ ವಿಡಿಯೋ ಲೋಕಾರ್ಪಣೆ ಮಾಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಸಿದ್ದಿಕ್ ನಿರಾಜೆ ಶ್ರೀಶಾವಾಸವಿಯಂತಹ ಪ್ರತಿಭಾನ್ವಿತರು ನಮ್ಮ ಪತ್ರಕರ್ತರ ಸಂಘದ ಸದಸ್ಯರಾಗಿರುವುದು ನಮಗೂ ಹೆಮ್ಮೆ. ಅಲ್ಲದೆ ಅವರು ಏಕೈಕ ಮಹಿಳಾ ಸದಸ್ಯೆ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪೂವರಿ ತುಳು ಮಾಸಿಕದ ಪ್ರಧಾನ ಸಂಪಾದಕರಾದ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲ್ ಕೃತಿಯನ್ನೂ, ಪುತ್ತೂರು ತುಳು ಅಪ್ಪೆಕೂಟದ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಕೃತಿಕಾರರನ್ನು ಪರಿಚಯಿಸಿದರು. ಹಿರಿಯ ಪತ್ರಕರ್ತ, ಪಂಚಾಯತ್ ರಾಜ್ ತರಬೇತುದಾರರಾದ ವಿಲ್ಫ್ರೆಡ್ ಡಿಸೋಜ ಶುಭ ಹಾರೈಸಿದರು. ಶ್ರೀಶಾವಾಸವಿ ತುಳುನಾಡ್ ತನ್ನ ಮನದ ಮಾತುಗಳನ್ನು ಹಂಚಿಕೊಂಡು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ಕಾರ್ಯಕ್ರಮದಲ್ಲಿ ಧನ್ಯವಾದ ಸಮರ್ಪಿಸಿದರು. ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಸುಧಾಕರ್ ಸುವರ್ಣ ತಿಂಗಳಾಡಿ ಕಾರ್ಯಕ್ರಮ ನಿರೂಪಿಸಿದರು.