ಮೂಡುಬಿದಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಇದರ ದಶಮ ಸಂಭ್ರಮದ ಪ್ರಯುಕ್ತ ಮಂಗಳೂರಿನ ಅಡ್ಯಾರ್ ಗಾರ್ಡ್ನಲ್ಲಿ 15 ವರ್ಷದಿಂದ 25 ವರ್ಷದೊಳಗಿನ ಯುವ ಪ್ರತಿಭೆಗಳಿಗಾಗಿ ಏರ್ಪಡಿಸಿದ ಯಕ್ಷಗಾನ ಸ್ಪರ್ಧೆಯಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ತಂಡವು ಪ್ರಥಮ ಬಹುಮಾನವನ್ನು ಪಡೆಯಿತು. ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ವಿರಚಿಸಿದ, ಶೇಖರ ಶೆಟ್ಟಿಗಾರ್ ಮತ್ತು ಆದಿತ್ಯ ಅಂಬಲಪಾಡಿ ನಿರ್ದೇಶನದಲ್ಲಿ ‘ಸತಿ ಉಲೂಪಿ’ ಪ್ರಸಂಗ ಪ್ರದರ್ಶನವನ್ನು ನೀಡಿ, ಒಂದು ಲಕ್ಷ ರೂಪಾಯಿ ಹಾಗೂ ಸ್ಮರಣಿಕೆಯನ್ನು ಒಳಗೊಂಡ ಪ್ರಥಮ ಬಹುಮಾನವನ್ನು ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರವು ಪಡೆಯಿತು.ಸಮಗ್ರ ವೈಯಕ್ತಿಕ ವಿಭಾಗದಲ್ಲಿ ಶಬರೀಶ್ ಆಚಾರ್ಯ, ಆಹಾರ್ಯ ವಿಭಾಗದಲ್ಲಿ ಮುಖೇಶ್ ದೇವಧರ್, ಲಿಖಿತ ವಿಭಾಗಲ್ಲಿ ಪ್ರಜ್ವಲ್ ಬಿ ಶೆಟ್ಟಿ ಬಹುಮಾನಗಳನ್ನು ಪಡೆದರು. ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರವು ಕಳೆದ ಎರಡು ದಶಕಗಳಿಂದ ಯಕ್ಷಗಾನದ ವಿವಿಧ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ನಮ್ಮ ನಾಡಿನ ವಿವಿಧ ಯಕ್ಷಗಾನ ಮೇಳಗಳಲ್ಲಿ ವೃತ್ತಿಪರವಾಗಿ ದುಡಿಯುತ್ತಿದ್ದು ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರವು ಈ ಮೊದಲು ಹಲವಾರು ಸ್ಪರ್ಧೆಗಳನ್ನು ಗೆದ್ದು ಬಹುಮಾನಗಳನ್ನು ಪಡೆದುಕೊಂಡಿರುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು. ವಿಜೇತ ತಂಡವನ್ನು ಅವರು ಅಭಿನಂದಿಸಿದ್ದಾರೆ.
