ಶ್ರೀಮಂತರೆಲ್ಲ ದಾನಿಗಳಾಗಿರುವುದಿಲ್ಲ. ಹಾಗಾಗಿರುತ್ತಿದ್ದರೆ ಬಂಗಾರದ ಹೂವಿಗೆ ಪರಿಮಳ ಸೇರಿದಂತಾಗುತ್ತಿತ್ತು. ಇದಕ್ಕೆ ಹೃದಯ ಶ್ರೀಮಂತಿಕೆ ಬೇಕಾಗುತ್ತದೆ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಸತ್ಯದ ಅರಿವು ಇದ್ದ ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಅವರು ಹೃದಯ ಶ್ರೀಮಂತಿಕೆ ಇರುವಲ್ಲಿ ಉಳಿದ ಸಿರಿವಂತಿಕೆ ತಾನೇ ತಾನಾಗಿ ಬಂದು ಸೇರಿಕೊಳ್ಳುತ್ತದೆ ಎಂಬ ಸಿದ್ಧಾಂತದಲ್ಲಿ ಆಚಲ ನಂಬಿಕೆ ಇಟ್ಟವರು. ಆರ್ಥಿಕ ಶ್ರೀಮಂತರಾದರೂ, ದಾನ ಗುಣವೂ ರಕ್ತದಲ್ಲಿ ಸೇರಿಕೊಂಡಿರುವ ಅಪರೂಪದ ವ್ಯಕ್ತಿತ್ವ ಶೆಟ್ಟರದ್ದು. ದನಿ ಉಡುಗಿ ಹೋದ ಬಡವರ ದನಿಯಾಗಿ, ಧಣಿಯಾಗಿ, ದಾನಿಯಾಗಿ ಬಡವರ ದಮನಿಸದೆ ದನಿ ಅಡಗಿಸದೆ ದಾನದಿತಾರನಾಗಿ ಖ್ಯಾತಿವೆತ್ತ ಮಾನವತಾವಾದಿ ಕೂಳೂರು ಕನ್ಯಾನ ಸದಾಶಿವ ಶೆಟ್ಟರು.
ಉದಾರ ದಾನಿ ಸದಾಶಿವ ಕೆ ಶೆಟ್ಟರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬಳಿಯ ಕನ್ಯಾನದ ಕೂಳೂರಿನವರು. ಫಕೀರ ಶೆಟ್ಟಿ ಲೀಲಾವತಿ ದಂಪತಿಯರಿಗೆ ಸುಪುತ್ರನಾಗಿ ಜನಿಸಿದ ಶೆಟ್ಟರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ ಪದವಿ ವ್ಯಾಸಂಗವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿದರು. ಬಳಿಕ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದರು. ತದನಂತರ ಉದ್ಯೋಗ ನಿಮಿತ್ತ ಮುಂಬಯಿ ಸೇರಿದ ಇವರು ನಿರ್ಲೋನ್ ಲಿಮಿಟೆಡ್, ಫಾರ್ಡ್ ಕೆಮಿಕಲ್ಸ್ ಇಂಡಸ್ಟ್ರೀಸ್, ಹೋಟೆಸ್ಟ್ ಫಾರ್ಮಾಸಿಟಿಕಲ್ಸ್ ಲಿಮಿಟೆಡ್ ಕಂ. ಸೇರಿದಂತೆ ಹಲವಾರು ಪ್ರತಿಷ್ಠಿತ ಕಂಪನಿಗಳಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದರು. ಅವರ ಈ ಸುದೀರ್ಘ ವೃತ್ತಿ ಜೀವನದ ಅತುಲ ಅನುಭವವೇ ಮುಂದೆ ಆಧುನಿಕ ಕೃಷಿ ಉತ್ಪನ್ನ ಮಾರುಕಟ್ಟೆ ಬೇಡಿಕೆಯ ರಾಸಾಯನಿಕ ಗೊಬ್ಬರ ಹಾಗೂ ಔಷಧಗಳನ್ನು ಉತ್ಪಾದಿಸಿ, ಪೂರೈಕೆ ಮಾಡುವ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ತನ್ನದೇ ಆದ ಕಂಪನಿಯನ್ನು ಹುಟ್ಟುಹಾಕಿ ಗ್ರಾಹಕರನ್ನು ಪ್ರಾರಂಭದ ಹಂತದಲ್ಲೇ ತೃಪ್ತಿಗೊಳಿಸಿದ ಗುಣಮಟ್ಟದ ಉತ್ಪಾದನೆ ನೀಡುವ ಪೂರೈಸುವ ಕಂಪನಿಯೆಂಬ ಖ್ಯಾತಿ ಪಡೆದು, ಮುಂದೆ ಕೆಲವೇ ವರ್ಷಗಳಲ್ಲಿ ಓರ್ವ ಯಶಸ್ವಿ ಧೀಮಂತ ಕೈಗಾರಿಕೋದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕರ್ನಾಟಕ ಸರಕಾರ ನವೆಂಬರ್ 01, 2024 ರಂದು ಕರ್ನಾಟಕ ರಾಜ್ಯೋತ್ಸವದ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಈಗ ಮಂಗಳೂರು ವಿಶ್ವವಿದ್ಯಾಲಯವು ಸದಾಶಿವ ಶೆಟ್ಟಿಯವರು ಸಮಾಜಕ್ಕೆ ನೀಡಿದ ಗಣನೀಯ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆ. ಯಕ್ಷಗಾನ ಕಲಾ ಪ್ರೇಮಿಯಾದ ಇವರು ಪಟ್ಲ ಫೌಂಡೇಶನ್ ಇದರ ಗೌರವಾಧ್ಯಕ್ಷರಾಗಿ ಫೌಂಡೇಷನ್ ನ ಆಧಾರ ಸ್ತಂಭವಾಗಿದ್ದಾರೆ. ಮೂಲ್ಕಿಯಲ್ಲಿ ತಲೆ ಎತ್ತಿದ ವಿಶ್ವ ಬಂಟ ಒಕ್ಕೂಟಗಳ ಸ್ವಜಾತಿ ಬಾಂಧವರ ಸಂಪರ್ಕ ಹಾಗೂ ಸಂಸ್ಥೆಯ ಆಡಳಿತ ಕಛೇರಿಯ ಬಹುಭಾಗದ ದೇಣಿಗೆ ಇವರದ್ದಾಗಿದ್ದು ಶ್ರೀಯುತರ ಹೆಸರನ್ನು ಸಂಸ್ಥೆಯ ಕಟ್ಟಡಕ್ಕೆ ಇಡಲಾಗಿದೆ. ಉಡುಪಿ ಅಜ್ಜರಕಾಡಿನಲ್ಲಿ ನಡೆದ ಬಂಟರ ವಿಶ್ವ ಸಮ್ಮೇಳನದ ಯಶಸ್ಸಿನಲ್ಲಿ ಸನ್ಮಾನ್ಯ ಶೆಟ್ಟರಿಗೆ ಸಿಂಹ ಪಾಲು ಇದೆ. ಹುಟ್ಟೂರಿನ ಹಾಗೂ ಆಸುಪಾಸಿನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಶ್ರೀಯುತರ ಸಂಪತ್ತಿನ ಕೆಲವಂಶ ವಿನಿಯೋಗಿಸಲ್ಪಡುತ್ತದೆ. ಇವರಿಂದ ಅನೇಕ ಸಂಘ ಸಂಸ್ಥೆಗಳು ಉಪಕೃತವಾಗಿವೆ. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾ ಪೋಷಕರೂ ಆಗಿರುವ ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರ ಸಂಪತ್ತು ನಿರಂತರ ವೃದ್ಧಿಶೀಲವಿರಲಿ. ಅವರ ಜೀವನ ಸುದೀರ್ಘವಾಗಿರಲಿ. ಜೀವನದಲ್ಲಿ ನೆಮ್ಮದಿ ಆರೋಗ್ಯ ಸ್ಥಿರವಾಗಿರಲಿ ಎಂಬ ಹಾರೈಕೆಗಳು.

ಬರಹ : ಅರುಣ್ ಶೆಟ್ಟಿ ಎರ್ಮಾಳ್