ಮೂರು ಬೆಳೆ ಬೆಳೆಯುತ್ತಿದ್ದ ಸಮೃದ್ಧ ಗದ್ದೆ ಸಾಲು ಕಟ್ಟಪುಣಿಯಲ್ಲಿ ರಾರಾಜಿಸುತ್ತಿದ್ದ ತೆಂಗು ಕಂಗು ಪಚ್ಚೆಪೈರು ಪಲ್ಗುಣಿಯ ಅಮೃತ ಧಾರೆಯನ್ನು ಎಲ್ಲೆಮೂಲೆಗಳಿಗೆ ಹೊತ್ತು ಹರಿಸುವ ನೀರ ತೊರೆಗಳು ಬಗೆ ಬಗೆಯ ಜೀವ ವೈವಿಧ್ಯ. ಆ ಸ್ವರ್ಗ ಸದೃಶ ಪ್ರಕೃತಿಯ ನಡುವೆ ಸಿಂಹ ಗಾಂಭಿರ್ಯದಿಂದ ಕಂಗೊಳಿಸುತ್ತಿದ್ದ ನೆಲ್ಲಿದಡಿ ಗುತ್ತು. ಆ ಭೂಮಿಯ ಬುಲೆಸೆಲೆ, ಐಸಿರಿ, ಭೂಮಿ ಬಾರಗರ ಸತ್ಯ ಧರ್ಮ ನ್ಯಾಯ ಪರಿಪಾಲನೆ ಕಂಡು ಪಾರಲೆ ಗುತ್ತಿನ ದೈವ ಕಾಂತೇರಿ ಜುಮಾದಿ ಒಂದು ಕೋಣ ಕಟ್ಟುವ ಹಗ್ಗದ ನೆಪ ಹೇಳಿಕೊಂಡು ನೆಲ್ಲಿದಡಿ ಗುತ್ತಿನ ಚಾವಡಿಗೆ ಕಾಲಿಟ್ಟ. ಮುಂದೆ ನೆಲ್ಲಿದಡಿ ಗುತ್ತು ವೈಭವದ ಶಿಖರ ಚುಂಭಿಸಿತು. ಆ ಕಾಲಕ್ಕೆ ಸರ್ಪದ ವಿಷಕ್ಕೆ ಮದ್ದು ಕೊಟ್ಟು ವಿಷ ವೈದ್ಯರಾಗಿ ಪ್ರಖ್ಯಾತಿ ಪಡೆದಿದ್ದ ಸೂರಿಂಜೆ ಗುತ್ತಿನ ತ್ಯಾಂಪ ಶೆಟ್ಯಾಲ್ ತನ್ನ ಅಂತ್ಯಕಾಲದಲ್ಲಿ ಸಮಷ್ಟಿಯ ಹಿತಕ್ಕಾಗಿ ಒಂದು ಮಹತ್ ಕಾರ್ಯ ನಡೆಸಿದರು. ಅವರ ಬಳಿ ಸಾವಿರಾರು ಜನರ ಜೀವ ಉಳಿಸಿದ ವಿಷ ಹೀರುವ ಕಲ್ಲುಗಳಿದ್ದವು. ಅದರಲ್ಲಿ ಒಂದನ್ನು ಶಿಬರೂರು ಕೊಡಮಣಿತ್ತಾಯ ದೈವದ ಬಾವಿಗೆ ಹಾಕಿದರು. ಇನ್ನೊಂದನ್ನು ಮಂತ್ರಿಸಿ ನೆಲ್ಲಿದಡಿ ಗುತ್ತಿನ ಮುಂಭಾಗದಲ್ಲಿರುವ ಸ್ಪಟಿಕ ಶುದ್ಧ ಬಾವಿಗೆ ಹಾಕಿದರು.

ಅಂದಿನಿಂದ ಆ ಬಾವಿಯ ನೀರು ಪವಾಡ ಸೃಷ್ಟಿಸುತ್ತಲೇ ಇದೆ. ಹಾವು ಕಡಿತಕ್ಕೆ ಒಳಗಾಗಿ ಜೀವನ್ಮರಣ ಹೋರಾಟ ಮಾಡುತ್ತಿದ್ದವರನ್ನೆಲ್ಲ ಹೊತ್ತು ತಂದರೆ, ಈ ಬಾವಿಯ ತೀರ್ಥ ಮತ್ತು ನೆಲ್ಲಿದಡಿ ಗುತ್ತಿನ ಒಂದು ಚಿಟಿಕೆ ಮಣ್ಣನ್ನು ದೈವ ಜುಮಾದಿಯ ಹೆಸರು ಹೇಳಿ ಕೊಟ್ಟರೆ ಸಾಕು ವಿಜ್ಞಾನ ಲೋಕಕ್ಕೆ ಸವಾಲೋ ಎಂಬಂತೆ ಜೀವವನ್ನು ಉಳಿಸಿಕೊಡುತ್ತಿದ್ದ ಜುಮಾದಿ! ಈ ಕೌತುಕಕ್ಕೆ ಸಾಕ್ಷಿಯಾದ ಅನೇಕರು ಇಂದಿಗೂ ಜೀವಂತವಿದ್ದಾರೆ. ನೆಲ್ಲಿದಡಿ ಗುತ್ತಿನ ದೈವ ಕಾಂತೇರಿ ಬಜ್ಪೆ ಗ್ರಾಮಕ್ಕೆ ಅಧಿದೈವ. ಇಲ್ಲಿ ಕಾಂತೇರಿ ಜುಮಾದಿಯ ಗಡಿ ಹಿಡಿದವರಿಗೆ ಗ್ರಾಮದಲ್ಲಿ ವಿಶೇಷ ಗೌರವವಿದೆ. ಎಲ್ಲವೂ ಚೆನ್ನಾಗಿದೆ ಎನ್ನುವಾಗಲೇ ಅದೊಂದು ದಿನ ಸರಕಾರ ಜಾರಿ ಮಾಡಿದ ನೋಟಿಸು, ಬಜ್ಪೆ, ಬಾಳ ಕುತ್ತೆತ್ತೂರು ಪೆರ್ಮುದೆ ಕಳವಾರು ಮುಂತಾದ ಅನೇಕ ಊರಿನ ಜನರಿಗೆ ಸಾವಿರ ಸಿಡಿಲು ಏಕಕಾಲಕ್ಕೆ ತಲೆಗೆ ಬಡಿದ ಆಘಾತ ನೀಡಿತು. ಆ ನೋಟಿಸು ಜಾರಿಯಾಗಿದ್ದು 2006ರಲ್ಲಿ. ಅದನ್ನು ಕಂಡ ಜನರಿಗೆ ಕಾಲಡಿಯ ನೆಲವೇ ಸರಿದು ಹೋದ ಅನುಭವವಾಯಿತು. ಸರಕಾರ ಆ ರೈತಾಪಿ ಜನರ ಭೂಮಿ ಗದ್ದೆ ತೋಟ ಎಲ್ಲವನ್ನೂ ಕೂಡ ಸಮತಟ್ಟು ಮಾಡಿ ಅಲ್ಲಿ ಕೈಗಾರಿಕೆಗಳಿಗೆ ಜಾಗ ಕೊಡಲು ಹೊರಟಿತ್ತು.!
ಮೂರು ಬೆಳೆ ಬೆಳೆಯುವ ಸಮೃದ್ಧ ಗದ್ದೆಗಳು, ಸಾವಿರಾರು ನಾಗಬನಗಳು, ಬ್ರಹ್ಮಸ್ಥಾನಗಳು, ದೈವದ ಗುಡಿಗಳು ಕೆರೆ ತೊರೆ ಶಾಲೆ ಚರ್ಚು ಮಸೀದಿ ಸಾವಿರಾರು ಮನೆಗಳು ಯಂತ್ರಗಳ ಪ್ರಹಾರಕ್ಕೆ ಸಿಲುಕಿ ನುಚ್ಚುನೂರಾಗಲು ಕ್ಷಣಗಣನೆ ಆರಂಭವಾಗಿತ್ತು. ಜನರ ಭಾವನೆಗಳಿಗೆ ಬೆಲೆ ನೀಡಬೇಕಾಗಿದ್ದ ಅಧಿಕಾರಿಗಳು, ಆಳುವ ವರ್ಗದವರು ಜೆಸಿಬಿ ಯಂತ್ರಗಳಂತೆ ಸಂವೇದನಾ ಶೂನ್ಯರಾಗಿದ್ದರು. ಬೇರೆ ಉಪಾಯವಿಲ್ಲದೆ ಹೆಚ್ಚಿನ ಜನರೆಲ್ಲಾ ಕೈಗೆ ಸಿಕ್ಕಷ್ಟು ದುಡ್ಡು ಪಡೆದು ಊರು ಬಿಟ್ಟು ಗುಳೇ ಹೊರಟರು. ಊರುಗಳು ಅನಾಥವಾದವು. ಆ ಸತ್ತು ಹೋದ ಊರುಗಳಲ್ಲಿ ಸಾವಿರಾರು ಕಥೆಗಳಿವೆ. ಮತ್ತೆ ಕಟ್ಟಿ ಕೊಡಲಾಗದ ಮಣ್ಣಿನ ಜೊತೆಗೆ ಬೆಸೆದಿದ್ದ ಆಳವಾದ ಸಂಬಂಧಗಳು ಒಂದೇ ಏಟಿಗೆ ಕಡಿದು ಹೋದವು. ಅವರು ಹುಟ್ಟಿ ಬೆಳೆದ ಆಡಿ ನಲಿದ ಮನೆ ಗದ್ದೆ ಗುಡ್ಡ ಬೈಲುಗಳಲ್ಲಿ ವಿಷ ಉಗುಳುವ ಕಾರ್ಖಾನೆಗಳು ತಲೆ ಎತ್ತಿದವು. ಯಾರೋ ಭಾಷೆ ಬಾರದ ಪರದೇಶಿಗಳು ಅಲ್ಲಿ ಬಂದು ಕೂತರು. ಬಯಲು ಜೀವಿಗಳಾಗಿ ಸ್ವಚ್ಛಂಧವಾಗಿ ಬದುಕಿಕೊಂಡಿದ್ದ ಸಾವಿರಾರು ತುಳುವರು ಕಾಲನಿಗಳಲ್ಲಿ ನಿರಾಶ್ರಿತರಾಗಿ ಕಾಲ ಕಳೆಯುವಂತಾಯಿತು.
ಆದರೆ ಈ ಎಲ್ಲಾ ಹತಾಶೆಯ ಕಾರ್ಮೋಡದ ನಡುವೆ ಬೆಳ್ಳಿ ಕಿರಣದಂತೆ ಗೋಚರಿಸಿದ್ದು ನೆಲ್ಲಿದಡಿ ಗುತ್ತು. ಆವತ್ತು ವಿನಾಶದ ಕರಿಛಾಯೆ 800 ವರ್ಷಗಳ ಇತಿಹಾಸವಿದ್ದ ನೆಲ್ಲಿದಡಿ ಗುತ್ತಿನ ಅಂಗಳಕ್ಕೂ ಆವರಿಸಿತ್ತು. ಆಗ ದೈವ ಕಾಂತೇರಿ ಕೊಟ್ಟ ನುಡಿಯೇನು? ಸೂರ್ಯ ಚಂದ್ರಕಾಲವರೆಗೆ ನೆಲ್ಲಿದಡಿಯ ಮಣ್ಣು ನನ್ನ ಅಧೀನ. ಯಾವ ಕಾರಣಕ್ಕೂ ನಾನು ಈ ಮಣ್ಣನ್ನು ಬಿಡುವುದಿಲ್ಲ. ನನ್ನ ಸಾನಿಧ್ಯವನ್ನು ಸ್ಥಳಾಂತರಿಸುವುದಾದರೆ ನನ್ನ ತೀರ್ಥದ ಬಾವಿಯನ್ನು ಕೂಡ ಸ್ಥಳಾಂತರಿಸಿ ಎಂದಿತ್ತು ದೈವ…!
ದೈವವೇ ಮಣ್ಣು ಬಿಟ್ಟು ಕದಲುವುದಿಲ್ಲ ಎಂದ ಮೇಲೆ ಕುಟುಂಬವಾದರೂ ದೈವವನ್ನು ಬಿಟ್ಟು ಹೋಗುವುದೆಲ್ಲಿಗೆ? ನೆಲ್ಲಿದಡಿ ಗುತ್ತಿನ ಪ್ರತಿಯೊಬ್ಬ ಸದಸ್ಯರು ಅದೇ ಮಣ್ಣಿನಲ್ಲಿ ಗಟ್ಟಿಯಾಗಿ ನಿಲ್ಲುವ ಛಲವನ್ನು ತೊಟ್ಟರು. ನಾನಾ ರೀತಿಯ ಅಮಿಷ ಬೆದರಿಕೆಗಳು ಬಂದರೂ ಈ ಕುಟುಂಬ ಬಗ್ಗಲಿಲ್ಲ. ಬ್ಯಾಂಕು ಖಾತೆಗೆ ಬಂದು ಬಿದ್ದ ಕೋಟಿ ಕೋಟಿ ಹಣದ ಕಡೆಗೆ ತಲೆಯೆತ್ತಿಯೂ ನೋಡಲಿಲ್ಲ. ನ್ಯಾಯಾಲಯದಲ್ಲೂ ನ್ಯಾಯ ಮರೀಚಿಕೆಯಾಯಿತು. ಅವರಿಗಿದ್ದ ಆಧಾರ ಜುಮಾದಿ ಮಾತ್ರ.
ನೆಲ್ಲಿದಡಿ ಗುತ್ತಿನ ಪೂರ್ತಿ ಜಾಗವನ್ನು ಕಂಪನಿ ಬಲಾತ್ಕಾರದಿಂದ ತನ್ನ ಹೆಸರಿಗೆ ಬರೆಸಿಕೊಂಡಿತು. ಹತ್ತಾರು ರಕ್ಕಸ ಗಾತ್ರದ ಜೆಸಿಬಿಗಳನ್ನು ತಂದು ನೆಲ್ಲಿದಡಿ ಗುತ್ತನ್ನು ನೆಲಸಮ ಮಾಡಲು ಯತ್ನ ನಡೆಯಿತು. ಗುತ್ತಿನ ಯಜಮಾನರಾದ ಲಕ್ಷ್ಮಣ ಚೌಟರಿಗೆ ಕಿವಿಯಲ್ಲಿ ಜುಮಾದಿ ನೀಡಿದ ಅದೇ ವಾಕ್ಯ ಪ್ರತಿದ್ವನಿಸುತ್ತಿತ್ತು. “ಲಕ್ಷ್ಮಣ ಚೌಟರೇ ಎಂಕ್ ತಗ್ಗಯಿ ತರೆನ್ ನನೋರಿಯಾಗ್ ತಗ್ಗಾವರೇ ಬುಡಯೇ…” ನೆಟ್ಟಗೆ ಬೆತ್ತದಂತೆ ಬಿರುಸಾಗಿ ನಿಂತರು ಲಕ್ಷ್ಮಣ ಚೌಟರು. ಜುಮಾದಿಯ ಚಾವಡಿಯನ್ನು, ಗುತ್ತಿನ ಮನೆಯನ್ನು ನೆಲಸಮ ಮಾಡಲು ಜೆಸಿಬಿಗಳು ನುಗ್ಗುವುದೇ ಹೌದಾದರೆ ಅವುಗಳು ನಮ್ಮ ಕುಟುಂಬದವರ ಹೆಣದ ಮೇಲಿಂದ ಹಾದು ಹೋಗಲಿ ಎಂದು ತೊಡೆ ತಟ್ಟಿದರು. ಆ ಕೃಶಕಾಯದ ಮನುಷ್ಯನೊಳಗೆ ಅಂತಹ ಧೈರ್ಯ ಎಲ್ಲಿಂದ ಬಂತೊ ಗೊತ್ತಿಲ್ಲ. ನೆಲ್ಲಿದಡಿ ಗುತ್ತಿನ ಸಮೃದ್ಧ ತೆಂಗಿನ ಮರಗಳನ್ನೆಲ್ಲ ತಟ ಪಟನೇ ಮುರಿದು ಬುಡ ಮೇಲು ಮಾಡುತ್ತಾ ಅಬ್ಬರಿಸಿ ಬೊಬ್ಬಿರಿದು ನುಗ್ಗಿದ ಜೆಸಿಬಿಗಳು ನೆಲ್ಲಿದಡಿ ಗುತ್ತಿನ ಅಂಗಳಕ್ಕೆ ಬಂದು ಗಕ್ಕನೆ ನಿಂತವು.
ಊರಿಗೆ ಊರೇ ಗುಳೇ ಎದ್ದು ಹೋದರೂ, ಎದೆ ಮೇಲೆ ಹತ್ತಾರು ಜೆಸಿಬಿಗಳು ನುಗ್ಗಿ ಬಂದರೂ, ಲಕ್ಷ್ಮಣ ಚೌಟರು ಒಂದಿಂಚೂ ಕದಲಲಿಲ್ಲ. ಅವರ ಈ ಪ್ರಳಯಾಂತಕ ನಿಲುವಿಗೆ ಮನೆ ಮಂದಿ ಹೆಂಗಸರು ಮಕ್ಕಳು ಕೂಡ ಜೊತೆಯಾದರು. ಮೂರು ಸಾವಿರ ಎಕರೆ ಭೂಮಿಯನ್ನು ಮಟ್ಟಸ ಮಾಡಿ ಸಾವಿರಾರು ಮನೆಗಳನ್ನು ಮಣ್ಣುಪಾಲು ಮಾಡಿದ ಎಂಎಸ್ ಈಝೆಡ್ ನ ರಕ್ಕಸ ಗಾತ್ರದ ಉಕ್ಕಿನ ಯಂತ್ರಗಳು ನೆಲ್ಲಿದಡಿ ಗುತ್ತಿನ ಮೊಗಂಟೆಯ ಮುಂದೆ ಬಂದು ಮುಂದೇನು ಎಂದು ತೋಚದೆ ದಿಕೆಟ್ಟು ನಿಂತವು. ಗುತ್ತಿನ ಮನೆಯ ಸೂರು ಕೀಳಲು ಸೊಂಡಿಲೆತ್ತಿದ ಜೇಸಿಬಿಗಳ ಮುಂದೆ ಚೌಟರ ಜೊತೆಗೆ ಸಣ್ಣಪುಟ್ಟ ಮಕ್ಕಳು ಮಹಿಳೆಯರು ಅಡ್ಡಡ್ಡ ಮಲಗಿದರು. ಆ ಮಕ್ಕಳನ್ನೆಲ್ಲ ಗೂಂಡಾಗಳು ಕಿವಿಯಲ್ಲಿ ಹಿಡಿದೆತ್ತಿ ಪಕ್ಕಕ್ಕೆಸೆದರು. ತಾಯಂದಿರ ಮೇಲೂ ಕೈ ಹಾಕಿದರು. ಆದರೆ ಚೌಟರು ಹಿಂದೆ ಸರಿಯಲಿಲ್ಲ. ಗೂಂಡಾಗಳು ಚೌಟರ ಮೇಲೂ ಕೈ ಮಾಡಿದರು. ಚೌಟರ ಕೈ ಗುತ್ತಿನ ಚಾವಡಿಯ ಹೊಸ್ತಿಲಿಗೆ ಬಡಿಯಿತು. ಬಾಯಿಯಿಂದ ಶಾಪ ವಾಕ್ಯ ಹೊರಡಿತು. ಅವತ್ತು ಕಂಪನಿಯ ಬೂಟು ನೆಕ್ಕುತ್ತಾ ಚೌಟರ ಮೇಲೆ ಕೈ ಮಾಡಿದವರಲ್ಲಿ ಹೆಚ್ಚಿನವರು ಈಗ ನೆಗೆದು ಬಿದ್ದು ಹೋಗಿದ್ದಾರೆ. ಆದರೆ ನೆಲ್ಲಿದಡಿ ಗುತ್ತು ಮಾತ್ರ ಇಂದಿಗೂ ಭದ್ರವಾಗಿದೆ. ಗುತ್ತಿನ ಬಲಭಾಗದ ಗುಡ್ಡೆಯ ಮೇಲೆ ಕಾಂತೇರಿ ಜುಮಾದಿ ದೈವದ ಸಾನಿಧ್ಯವಿದೆ. ಊರಲ್ಲಿ ಯಾರೂ ಅದಕ್ಕಿಂತ ಮೇಲೆ ಕಟ್ಟಡ ಕಟ್ಟಬಾರದು ಎಂಬ ನಿಯಮವಿದೆ. ಆದರೆ ಯಾರೋ ಒಬ್ಬ ಉದ್ಯಮಿ ಅದರ ಪಕ್ಕದಲ್ಲಿ ದೈವಸ್ಥಾನದ ಮುಗುಳಿಗಿಂತ ಮೇಲೆ ಕಂಪನಿಯೊಂದರ ಕಟ್ಟಡ ಏರಿಸಿಬಿಟ್ಟ. ಬಿತ್ತು ನೋಡಿ ಬೆಂಕಿ. ಸುಟ್ಟು ಲಯವಾದ ಆ ಕಂಪನಿ ಇವತ್ತಿನವರೆಗೆ ಮತ್ತೆ ಬಾಗಿಲು ತೆರೆಯಲಿಲ್ಲ. ಅಕ್ಕಪಕ್ಕದ ಕಂಪನಿಯ ಕಾರ್ಮಿಕರಿಗೆ ದಿನ ಬಿಡದೆ ಗಗ್ಗರದ ದನಿ ಕೇಳಿಸುತ್ತದೆ. ಕಂಡ ಕಂಡಲ್ಲಿ ನಾಗ ಸಂಚಾರವಿದೆ. ದೈವದ ಇರುವಿಗೆ ನೂರಾರು ಪುರಾವೆಗಳು ಗೋಚರಿಸುತ್ತಲೇ ಇವೆ.
2016ರಲ್ಲಿ ಕಂಪನಿ ಮತ್ತೊಮ್ಮೆ ನೆಲ್ಲಿದಡಿ ಗುತ್ತನ್ನು ನೆಲಸಮ ಮಾಡಲು ಹವಣಿಸಿತು. ಆದರೆ ಕುಟುಂಬಿಕರು ಮತ್ತು ದೈವ ಪಟ್ಟು ಬಿಡಲಿಲ್ಲ. ಕೊನೆಗೆ ಅಂದಿನ ಜಿಲ್ಲಾಧಿಕಾರಿ ಈ 800 ವರ್ಷ ಇತಿಹಾಸವಿರುವ ದೈವಸ್ಥಾನವನ್ನು ಒಂದು ಸ್ಮಾರಕದ ಹಾಗೆ ಉಳಿಸಿಕೊಳ್ಳುತ್ತೇವೆ. ದೈವದ ನಿತ್ಯ ಪೂಜೆಗೆ ಒಂದಿಬ್ಬರಿಗೆ ಹೋಗಿ ಬರಲು ಅವಕಾಶ ನೀಡುತ್ತೇವೆ ಎಂದು ಮೌಖಿಕ ಅನುಮತಿ ನೀಡಿದ್ದರು. ಮುಗಿದೇ ಹೋಯಿತು ಎನ್ನುವ ನೆಲ್ಲಿದಡಿಗುತ್ತಿನ ಇತಿಹಾಸ ಕೂದಲೆಳೆಯಲ್ಲಿ ಉಳಿದುಕೊಂಡಿತು. ಸಾವಿರಾರು ಎಕರೆ ಕಂಪನಿಯ ಮಧ್ಯದಲ್ಲಿ ಇಂದಿಗೂ ದೈವ ಜುಮಾದಿಗೆ ನಿತ್ಯ ನಂದಾದೀಪ ಉರಿಯುತ್ತಿದೆ ವರ್ಷಕ್ಕೊಮ್ಮೆ ಗಗ್ಗರದ ಮಾರ್ದನಿ ಮೊಳಗುತ್ತದೆ. ಶಿಥಿಲವಾಗಿದ್ದ ನೆಲ್ಲಿದಡಿ ಗುತ್ತನ್ನು ಈ ಕುಟುಂಬಕರು ಪುನರ್ ನಿರ್ಮಾಣ ಮಾಡಿದ್ದೆ ಒಂದು ರೋಚಕ ಸಾಹಸ. ಕಂಪನಿ ತನ್ನ ಗೇಟನ್ನು ದಾಟಿ ಒಂದು ಮೊಳೆ ಕೂಡ ಒಳಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಆದರೂ ಈ ಇಡೀ ಮನೆ ಪುನರ್ ನಿರ್ಮಾಣವಾಗಿದೆ. ಅದು ಹೇಗಾಯಿತು ಆ ಜುಮಾದಿಗೆ ಮಾತ್ರ ಗೊತ್ತು. ಈಗ ನೆಲ್ಲಿದಡಿ ಗುತ್ತಿನ ಮುಂದೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ ಸಂಕ್ರಾಂತಿ ಆಚರಣೆಯ ವೇಳೆ ಕಂಪನಿ ದೈವದ ಸೇವೆ ನಡೆಸಲು ಒಳಹೊಗದಂತೆ ನಿಷೇಧ ಹೇರಿದೆ.! ಕಂಪನಿಯ ಅಧಿಕಾರಿಯೊಬ್ಬನಿಗೆ ಅಂತಹ ಕೆಟ್ಟ ಬುದ್ಧಿ ಯಾಕೆ ಬಂತು ಗೊತ್ತಿಲ್ಲ.
ತುಳುನಾಡಿನ ಅತ್ಯಂತ ಪ್ರಸಿದ್ಧ ದೈವಸ್ಥಾನದಲ್ಲಿ ದೈವಕ್ಕೆ ಹೂವು ನೀರು ಇಡಲು ಮೂರನೇಯವನ ಅನುಮತಿಗೆ ಅಂಗಲಾಚುವ ಸ್ಥಿತಿ ನಿರ್ಮಾಣವಾಗಿದೆ.! ಜುಮಾದಿ ಮನಸ್ಸು ಮಾಡಿದರೆ ಈ ಸಮಸ್ಯೆ ರಾತ್ರಿ ಹಗಲಾಗುವುದರೊಳಗೆ ಇತ್ಯರ್ಥವಾಗಿ ಬಿಡಬಹುದು. ಆದರೆ ಸಾಕ್ಷಾತ್ ಕೃಷ್ಣ ಕೂಡ ಕುರುಕ್ಷೇತ್ರದಲ್ಲಿ ತನ್ನ ಸುದರ್ಶನ ಚಕ್ರವನ್ನು ಕೊನೆಯವರೆಗೂ ಕೈಗೆತ್ತಿಕೊಳ್ಳಲಿಲ್ಲ. ಏಕೆಂದರೆ ಮಾನವ ಪ್ರಯತ್ನ ಪೂರ್ಣಗೊಳ್ಳದೆ ದೇವರ ಅನುಗ್ರಹ ಸಿದ್ಧಿಸುವುದಿಲ್ಲ. ಈಗ ಈ ನೆಲ್ಲಿದಡಿಗುತ್ತಿನ ಅಸ್ಮಿತೆ ಅಸ್ತಿತ್ವದ ಹೋರಾಟವನ್ನು ತುಳುವರಾದ ನಾವೆಲ್ಲರೂ ಕೈಗೆತ್ತಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕ್ಷೇತ್ರದಲ್ಲಿ ಇಟ್ಟ ಪ್ರಶ್ನೆಯಲ್ಲಿ ರಾಶಿಫಲಗಳನ್ನು ವಿಮರ್ಶೆ ಮಾಡಿ ದೈವಜ್ಞರು, ಅವಳು ಸಂಹಾರ ದೇವತೆಯಾಗಿ ಹೊರಟಿದ್ದಾಳೆ. ಎದುರು ನಿಂತವರು ಯಾರೂ ಉಳಿಯುವುದಿಲ್ಲ. ಅವಳ ಸಾನಿಧ್ಯ ಮತ್ತು ಚರಿತ್ರೆಯನ್ನು ಅಳಿಸುವ ಪ್ರಯತ್ನ ಮಾಡಿದವರಿಗೂ ಕೂಡ ಭಾರಿ ಗಂಡಾಂತರ ಕಾದಿದೆ ಎಂದಿದ್ದಾರೆ. ತುಳುವರು ಒಂದು ವೇಳೆ ನೆಲ್ಲಿದಡಿ ಗುತ್ತಿನ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡದ್ದೇ ಆದರೆ ನಾಳೆ ಇತಿಹಾಸ ಪ್ರಸಿದ್ಧ ಅದೆಷ್ಟೋ ದೈವದ ಮೂಲ ಸ್ಥಾನಗಳು ಅಧಿಕಾರ ಮತ್ತು ದುಡ್ಡಿನ ದರ್ಪದ ಮುಂದೆ ಧೂಳಿಪಟ ಆಗುವುದು ಶತಸಿದ್ಧ. ತುಳುವರ ನಂಬಿಕೆ ಮತ್ತು ಭಾವನೆಗಳಿಗೆ ಬೆಲೆ ನೀಡದ ಭಂಡರನ್ನು ಪಕ್ಷಾತೀತವಾಗಿ ಎದುರಿಸೋಣ. ಒಂದು ಬೃಹತ್ ಜನಂದೋಲನವನ್ನು ರೂಪಿಸೋಣ. ದೈವ ಕಾಂತೇರಿಯ ಮಾಯದ ಸತ್ತಿಗೆಯ ನೆರಳು ನಮ್ಮೆಲ್ಲರ ತಲೆ ಕಾಯಲಿದೆ.
ನಮ್ಮ ಬೇಡಿಕೆ ಎರಡೇ..
1) 800 ವರ್ಷಗಳ ಇತಿಹಾಸವಿರುವ ನೆಲ್ಲಿದಡಿ ಗುತ್ತು ಮತ್ತು ಕಾಂತೇರಿ ಜಮಾದಿ ದೈವಸ್ಥಾನದ ಜಾಗವನ್ನು ದೈವದ ಹೆಸರಿಗೆ ನೋಂದಣಿ ಮಾಡಬೇಕು.
2) ಈ ದೈವಸ್ಥಾನಕ್ಕೆ ಒಂದು ಪ್ರತ್ಯೇಕವಾದ ರಸ್ತೆಯ ಸಂಪರ್ಕವನ್ನು ವಿಶೇಷ ಆರ್ಥಿಕ ವಲಯದ ಅಧಿಕಾರಿಗಳು ಮಾಡಿಕೊಡಬೇಕು. ಈ ನ್ಯಾಯ ಸಮ್ಮತ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಹೋರಾಟಕ್ಕೆ ನಾವೆಲ್ಲರೂ ಸೇರಿ ಒಂದು ರೂಪುರೇಷೆ ಸಿದ್ದಪಡಿಸೋಣ.
ಜೈ ಮಹಾಕಾಲ್
ಬರಹ: ಶ್ರೀಕಾಂತ್ ಶೆಟ್ಟಿ ಕಾರ್ಕಳ