

ಹುಟ್ಟಿದ ಪ್ರತಿಯೊಂದು ಜೀವಿಗೂ ದೈಹಿಕ ಸ್ವಾಸ್ಥ್ಯ ಎಂಬುದು ಅತ್ಯಗತ್ಯ. ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮತೋಲನ ಒಬ್ಬ ಮನುಷ್ಯನ ಅವಿಭಾಜ್ಯ ಅಂಗ. ಅಂತಹ ಮಾನಸಿಕ ರೋಗಕ್ಕೆ ಸಂಬಂಧಪಟ್ಟ ಒಂದು ಅಪರೂಪದ ರೋಗದ ಬಗ್ಗೆ ಮತ್ತು ಅದನ್ನು ಹೇಗೆ ಗುಣಪಡಿಸಲು ಸಾಧ್ಯ ಎಂಬುದರ ಬಗ್ಗೆ ನಾನು ಇಲ್ಲಿ ಬರೆಯುತ್ತಿದ್ದೇನೆ. ಪಿಡ್ಸ್ / ಮೂರ್ಛೆ ರೋಗ ಅಥವಾ ಅಪಸ್ಮಾರ ಕಾಯಿಲೆಯ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ. ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ (WHO) ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ಒಂದು ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಸುಮಾರು 50 ಮಿಲಿಯನ್ (5 ಕೋಟಿ) ಜನರು ಈ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದೇ ನಮ್ಮ ಭಾರತ ದೇಶದಲ್ಲಿ ನೋಡುವುದಾದರೆ, ಪ್ರತೀ 1000 ಜನರಲ್ಲಿ 5 ರಿಂದ 10 ಜನ ಎಂದರೆ, ಸರಿ ಸುಮಾರು ಒಂದು ಕೋಟಿಗೂ ಅಧಿಕ ಮಂದಿ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಪಸ್ಮಾರ ಎಂಬ ಕಾಯಿಲೆಯು ಮೆದುಳಿನ ನರಕೋಶಗಳು ಅಸಹಜವಾಗಿ ಮತ್ತು ಅತಿಯಾಗಿ ವಿದ್ಯುತ್ ಸಂಕೇತಗಳನ್ನು ಉತ್ಪಾದಿಸಿದಾಗ ಉಂಟಾಗುತ್ತದೆ. ತಲೆಗೆ ತೀವ್ರ ಗಾಯವಾದ್ದರಿಂದ, ಮೆದುಳಿನ ಸೋಂಕುಗಳು (ಉದಾಹರಣೆಗೆ ಮೆನಿಂಜೈಟಿಸ್), ಜನ್ಮಜಾತ ಮೆದುಳಿನ ಬೆಳವಣಿಗೆಯ ಸಮಸ್ಯೆಗಳು, ಪಾರ್ಶ್ವವಾಯು, ಮೆದುಳಿನ ಗಡ್ಡೆ, ಆನುವಂಶಿಕ ಕಾರಣಗಳಿಂದ, ಜನನದ ಸಮಯದಲ್ಲಿ ಮೆದುಳಿಗೆ ಆಮ್ಲಜನಕದ ಕೊರತೆ, ಭಯ, ನೋವು, ಮಾನಸಿಕ ಒತ್ತಡಗಳ ಕಾರಣ ದೇಹದ ಪ್ರತಿಕ್ರಿಯೆಯಲ್ಲಿ ರಕ್ತದೊತ್ತಡ ಹಠಾತ್ ಕುಸಿಯಬಹುದು. ಇದರಿಂದ ಮೆದುಳಿಗೆ ಸಾಕಷ್ಟು ರಕ್ತ ತಲುಪದ ಕಾರಣ ಕೆಲವೊಮ್ಮೆ ಮೂರ್ಛೆ ಉಂಟಾಗುತ್ತದೆ. ಇದನ್ನೇ ಅಪಸ್ಮಾರ / ಪಿಡ್ಸ್ / ಎಪಿಲೆಪ್ಸಿ ಎಂದು ಕರೆಯಲಾಗುತ್ತದೆ. ವೈದ್ಯಕೀಯ ಸಹಾಯದಿಂದ ಸುಮಾರು 60 ರಿಂದ 70% ಜನರಲ್ಲಿ ಈ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು. ಆದರೆ ಸಂಪೂರ್ಣ ಗುಣಮುಖವಾಗುವ ಸಾಧ್ಯತೆ ಅದರ ಮೂಲ ಕಾರಣದ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಸಂಪೂರ್ಣ ಗುಣಮುಖವಾಗದಿದ್ದರೂ ನಿಯಂತ್ರಣದಲ್ಲಿಡಬಹುದಾದ ಕಾಯಿಲೆಗೆ ಪರಿಪೂರ್ಣವಾಗಿ ಗುಣಮುಖಗೊಳಿಸಬಲ್ಲ ಸರಳ ಮದ್ದಿನ ಕ್ರಮ ನಮ್ಮ ದೈವಾರಾಧನೆಯಲ್ಲಿ ಇದೆ. ಹೌದು. ಇದು ಆಶ್ಚರ್ಯವಾದರೂ ನಿಜ. ತುಳುನಾಡು ಎಂಬ ನಂಬಿಕೆಯ ಪುಟ್ಟ ಜಗತ್ತಿನೊಳಗೆ ಇರುವ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಂಬಳ ಮಾಗಣೆಗೆ ಸೇರಿದ ಕುರ್ನಾಡು ಗ್ರಾಮದಲ್ಲಿ ಆರಾಧಿಸಲ್ಪಡುವ ಒಂದು ಅಪರೂಪದ ದೈವದ ಅಂಗನದಲ್ಲಿ ಈ ರೋಗಕ್ಕೆ ಇದೆ ಶಾಶ್ವತ ಪರಿಹಾರ. ಈ ದೈವದ ಹೆಸರು ‘ಗಿರಾವು’. ಕುರ್ನಾಡು ಗುತ್ತಿನ ಪ್ರಧಾನ ದೈವವಾಗಿ, ನಾಲ್ಕು ಗ್ರಾಮ ಒಂದು ಮಾಗಣೆಯ ಅಧಿಪತಿ ಸೋಮನಾಥ ದೇವರ ಬಂಟನಾಗಿ ಆರಾಧನೆ ಪಡೆಯುವ ಈ ದೈವ ಕುರ್ನಾಡು ಮತ್ತು ಚೇಳೂರು ಪರಿಸರದಲ್ಲಿ ಆರಾಧನೆ ಪಡೆದುಕೊಂಡು ಬಂದಿದೆ. ಕುರ್ನಾಡು ಗುತ್ತು ಈ ದೈವದ ಮೂಲಸ್ಥಾನವಾಗಿದ್ದು, ಪಿಡ್ಸ್ ರೋಗಕ್ಕೆ ಸಂಬಂಧಿಸಿ ಅನೇಕ ಮಂದಿ ಬಂದು ದೈವದ ಪ್ರಸಾದವನ್ನು ಸ್ವೀಕರಿಸಿ ಗುಣಮುಖರಾಗಿರುತ್ತಾರೆ. ಈ ದೈವಕ್ಕೆ ಬಹಳ ವಿಶೇಷವಾಗಿ ಮನೆಯಲ್ಲೇ ಸಾಕಿದ ಪರಿಪೂರ್ಣ ಬಿಳಿ ಹುಂಜವನ್ನು (ಶಾಸ್ತ್ರ ಬೊಲ್ಲೆ ಕೋರಿ) ಒಪ್ಪಿಸುವ ಕ್ರಮ. ಈ ಕೋಳಿಯಲ್ಲಿ ಯಾವುದೇ ಇತರ ಬಣ್ಣದ ಮಿಶ್ರಣವಿರಬಾರದು. ಹೆಚ್ಚಿನ ದೈವಗಳ ಸಂಧಿ ಪಾಡ್ದನಗಳಲ್ಲಿ ದೈವಗಳು ಶಾಸ್ತ್ರ ಬೊಲ್ಲೆ ಕೋಳಿಯಾಗಿ ಕೂಗಿದ ಕಥಾನಕಗಳಿವೆ. ಆದ್ದರಿಂದ ಬಿಳಿ ಹುಂಜವನ್ನು ತುಳುನಾಡಿನಲ್ಲಿ ಇತರ ಯಾವುದೇ ದೈವಗಳಿಗೆ ಒಪ್ಪಿಸುವ ಕ್ರಮವಿಲ್ಲ. ಆದರೇ ಗಿರಾವು ದೈವದ ಆರಾಧನೆಯಲ್ಲಿ ಬಿಳಿ ಹುಂಜವೇ ಪ್ರಧಾನ. ದೈವದ ಮೂಲಸ್ಥಳ ಕುರ್ನಾಡು ಮತ್ತು ಚೇಳೂರು ಎರಡೂ ಕಡೆಯಲ್ಲೂ ಈ ಅಪಸ್ಮಾರ ಕಾಯಿಲೆಯನ್ನು ಪರಿಹರಿಸಿಕೊಳ್ಳಬಹುದು. ಈ ಕಾಯಿಲೆಯನ್ನು ಪರಿಹರಿಸಿಕೊಳ್ಳಲು ಬೇಕಾದ ಸಾಹಿತ್ಯಗಳು ಮತ್ತು ಮದ್ದಿನ ಕ್ರಮವನ್ನು ಕೆಳಗೆ ವಿವರಿಸಿದ್ದೇನೆ.


ಕುರ್ನಾಡಿನಲ್ಲಿ ಮದ್ದಿನ ಕ್ರಮ : ಕೆಲವರು ಗಿರಾವು ದೈವದ ನೇಮದ ಸಂದರ್ಭದಲ್ಲೇ ಬಂದು ದೈವದ ಬಳಿ ಈ ರೋಗದ ಬಗ್ಗೆ ಮೊದಲು ಅರಿಕೆ ಮಾಡುತ್ತಾರೆ. ನೇಮದ ಸಂದರ್ಭವನ್ನು ಹೊರತುಪಡಿಸಿ ಬರುವುದಾದರೇ ಕುರ್ನಾಡು ಶ್ರೀ ಸೋಮನಾಥ ದೇವಾಲಯದಲ್ಲಿ ತಂತ್ರಿಯವರು ಕುರ್ನಾಡು ಗುತ್ತಿನವರ ಸಮ್ಮುಖದಲ್ಲಿ ಮೊದಲು ಪ್ರಾರ್ಥನೆ ಮಾಡಬೇಕು. ತದನಂತರ, ಒಂದು ಪರಿಪೂರ್ಣ ಊರಿನ ಬಿಳಿ ಹುಂಜವನ್ನು ತಯಾರು ಮಾಡಬೇಕು (ಫಾರ್ಮ್ ನಲ್ಲಿ ಸಿಗುವ ಕೋಳಿ ಅಥವಾ ಬಿಳಿ ಬ್ರಾಯಿಲರ್ ಕೋಳಿ ಆಗುವುದಿಲ್ಲ). ರೋಗಿಯು ಬೆಳಿಗ್ಗೆ ಎದ್ದು, ತಲೆಗೆ ಸ್ನಾನ ಮಾಡಿ ಈ ಬಿಳಿ ಹುಂಜಕ್ಕೆ ಅಕ್ಕಿಯನ್ನು ತನ್ನ ಕೈಯಲ್ಲಿ ಮುಷ್ಟಿ ಹಿಡಿದು ತಲೆಯ ಸುತ್ತ ಮೂರು ಬಾರಿ ಪ್ರದಕ್ಷಿಣೆ ಮಾಡಿ, 48 ದಿವಸ (ಒಂದು ಮಂಡಲ) ಆಹಾರ ಹಾಕಬೇಕು. ನಂತರ ಈ ಕೋಳಿಯನ್ನು ಕುರ್ನಾಡು ಗುತ್ತಿಗೆ ತಂದು ಒಪ್ಪಿಸಬೇಕು. ಅಲ್ಲಿ ಕುರ್ನಾಡು ಗುತ್ತಿನ ಪ್ರತಿನಿಧಿ ಗಿರಾವು ದೈವವನ್ನು ನೆನೆದು ಕೊಡುವ ಭಸ್ಮವನ್ನು ಸ್ವೀಕರಿಸಬೇಕು. ಅಂದು ರೋಗದ ಪರಿಮಿತಿಯನ್ನು ಗಮನಿಸಲಾಗುತ್ತದೆ. ಒಂದು ವೇಳೆ ರೋಗ ಕಡಿಮೆಯಾಗದಿದ್ದಲ್ಲಿ ಪುನಃ ದೈವದ ಬಳಿ ಪ್ರಾರ್ಥಿಸಿ ಎಣ್ಣೆ ಮತ್ತು ತುಪ್ಪವನ್ನು ಸಂದೈತ ಮಾಡಬೇಕು. ಒಪ್ಪಿಸಿದ ಎಣ್ಣೆ ತುಪ್ಪವನ್ನು ಮರಳಿ ಪಡೆದು, ಮುಂದಿನ 48 ದಿವಸಗಳ ಕಾಲ ರೋಗಿಯು ಈ ಎಣ್ಣೆ ಮತ್ತು ತುಪ್ಪವನ್ನು ಸ್ವೀಕರಿಸಬೇಕು. ಎಣ್ಣೆಯನ್ನು ನಿತ್ಯ ತಲೆಗೆ ಹಾಕಬೇಕು. ತುಪ್ಪವನ್ನು ಬಾಯಿಯಲ್ಲಿ ನೆಕ್ಕಿ ಸೇವಿಸಬೇಕು. ಒಂದು ವೇಳೆ ಮೊದಲ 48 ದಿವಸದ ನಂತರ ಕುರ್ನಾಡು ಗುತ್ತಿಗೆ ಈ ಕೋಳಿಯನ್ನು ಒಪ್ಪಿಸಲು ಸಾಧ್ಯವಾಗದಿದ್ದಲ್ಲಿ ಬರುವ ನೇಮದ ಸಂದರ್ಭದಲ್ಲಿಯೂ ದೈವಕ್ಕೆ ಒಪ್ಪಿಸಬಹುದು. ಕುರ್ನಾಡಿನಲ್ಲಿ ಗಿರಾವು ದೈವಕ್ಕೆ ಮೂರು ನೇಮ ನಡೆಯುತ್ತದೆ. ಮೊದಲು ದೊಂಪದಬಲಿ, ಎರಡನೆಯದಾಗಿ ಸೋಮನಾಥ ದೇವರ ಜಾತ್ರೆಯ ಧ್ವಜ ಅವರೋಹಣವಾದ ಬಳಿಕ ಗೋಪುರದ ಬಾಗಿಲಿನಲ್ಲಿ ನಡೆಯುವ ನೇಮ ಹಾಗೂ ಏಪ್ರಿಲ್ ತಿಂಗಳಿನ 28 ಅಥವಾ 29 ತಾರೀಕಿನಂದು ನಡೆಯುವ ಕೊನೆಯ ಸಾನದಾಯನ. ಈ ಮೂರು ನೇಮದಲ್ಲಿ ಯಾವುದಾದರೂ ಒಂದು ನೇಮದ ಸಂದರ್ಭದಲ್ಲಿ ಬಂದು ಈ ಕೋಳಿಯನ್ನು ಒಪ್ಪಿಸಬಹುದು. ಅದರೆ, ಈ ಕೋಳಿಯನ್ನು ಬಹಳ ಸೂಕ್ಷ್ಮವಾಗಿ ನೋಡಿಕೊಳ್ಳಬೇಕು. ಈ ಕೋಳಿಯನ್ನು ನೇಮದ ದಿನದವರೆಗೆ ಬೇರೆ ಯಾವುದೇ ಪ್ರಾಣಿಗಳು (ನಾಯಿ, ಕಾಡು ಬೆಕ್ಕು ಇತ್ಯಾದಿ) ಮುಟ್ಟದಂತೆ ಬಹಳ ಜೋಪಾನವಾಗಿ ಕಾಪಾಡಿಕೊಂಡು ಬರಬೇಕು. ಹಾಗಾಗಿ ನೇಮದ ಸಂದರ್ಭದಲ್ಲಿ ಕೋಳಿಯನ್ನು ಒಪ್ಪಿಸುವವರು ನೇಮಕ್ಕೆ ನಿಗದಿಯಾದ ದಿನದಿಂದ 48 ದಿವಸದ ಮೊದಲು ಈ ಕ್ರಮವನ್ನು ಶುರು ಮಾಡಿದರೆ ಉತ್ತಮ. ರೋಗ ಪರಿಪೂರ್ಣವಾಗಿ ಗುಣವಾದ ಬಳಿಕ ಸೋಮನಾಥ ದೇವರಿಗೆ ಒಂದು ಸೇವೆ (ರುದ್ರಾಭಿಷೇಕ, ಕಾಣಿಕೆ ಅಥವಾ ಇತರ ಯಾವುದಾದರು ಸಣ್ಣ ಸೇವೆ) ಮತ್ತು ಗಿರಾವು ದೈವದ ಕೈಯಿಂದ ನೇಮದ ಸಂದರ್ಭದಲ್ಲಿ ‘ನಿಮೂರ್ತಿದ ಬೂಳ್ಯ’ ಹಿಡಿಯುವ ಸಂಪ್ರದಾಯ.
ಚೇಳೂರಿನಲ್ಲಿ ಮದ್ದಿನ ಕ್ರಮ : ಮೊದಲು ಈ ಪಿಡ್ಸ್ ಕಾಯಿಲೆಗೆ ಒಳಪಟ್ಟಂತಹ ವ್ಯಕ್ತಿ ಮತ್ತು ಕುಟುಂಬಿಕರು ಚೇಳೂರು ಗಿರಾವು ದೈವದ ಭಂಡಾರದ ಮನೆಯಲ್ಲಿ ಅರಿಕೆ ಮಾಡಬೇಕು. ನಂತರ ಅವರ ಮಾರ್ಗದರ್ಶನದ ಮೇರೆಗೆ ಒಂದು ಪರಿಪೂರ್ಣ ಊರಿನ ಬಿಳಿ ಹುಂಜವನ್ನು ತಯಾರು ಮಾಡಬೇಕು. ನಂತರ 48 ದಿವಸ ಪಿಡ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಬೆಳಿಗ್ಗೆ ಎದ್ದು, ಸ್ನಾನ ಮಾಡಿ ಗಿರಾವು ದೈವವನ್ನು ನೆನೆದು, ಒಂದು ಮುಷ್ಟಿ ಅಕ್ಕಿಯನ್ನು ತನ್ನ ತಲೆಗೆ ಮೂರು ಬಾರಿ ಸುತ್ತಿಸಿ, ಈ ಬಿಳಿ ಹುಂಜಕ್ಕೆ ಆಹಾರವಾಗಿ ಹಾಕಬೇಕು. 48 ದಿವಸದ ನಂತರ ಬರುವ ಮೊದಲ ಮಂಗಳವಾರದ ದಿನ ಮತ್ತೊಮ್ಮೆ ಭಂಡಾರದ ಮನೆಗೆ ಹೋಗಬೇಕು. ಅಲ್ಲಿ ಹಿರಿಯರು ರೋಗದ ಪರಿಮಿತಿಯನ್ನು ಗಮನಿಸಿ, ರೋಗಿಗೆ 48 ದಿವಸಕ್ಕೆ ಬೇಕಾಗುವಷ್ಟು ಎಣ್ಣೆ ಮತ್ತು ತುಪ್ಪವನ್ನು (ಎಣ್ಣೆ-ನೈ) ಕೊಡುತ್ತಾರೆ. ಅಕ್ಕಿ ಹಾಕಿ ಸಾಕಿದ ಕೋಳಿಯನ್ನು ಅಂದೇ ಭಂಡಾರದ ಮನೆಯಲ್ಲಿ ಒಪ್ಪಿಸಬಹುದು ಅಥವಾ ಚೇಳೂರು ಗ್ರಾಮದಲ್ಲಿ ಗಿರಾವು ದೈವಕ್ಕೆ ನಡೆಯುವ ನೇಮದ ಸಂದರ್ಭದಲ್ಲಿಯೂ ತಂದು ಒಪ್ಪಿಸಬಹುದು. ರೋಗಿಗೆ ಕೊಟ್ಟಂತಹ ಎಣ್ಣೆಯನ್ನು ಸ್ವಲ್ಪ ತಲೆಗೆ ಹಾಕಬೇಕು. ತುಪ್ಪವನ್ನು ಬಾಯಿಯಲ್ಲಿ ಸೇವಿಸಬೇಕು. ಈ ಕ್ರಮವನ್ನು 48 ದಿವಸ ನಿರಂತರ ಮಾಡಬೇಕು. ಒಂದು ವೇಳೆ ರೋಗಿಯು ಆಯುರ್ವೇದ / ಅಲೋಪತಿಗೆ ಸಂಬಂಧಿಸಿ ವೈದ್ಯರಿಂದ ಈ ಮೊದಲೇ ಔಷಧಿಯನ್ನು ಪಡೆಯುತ್ತಿದ್ದರೆ ಅದನ್ನು ಸಂಪೂರ್ಣವಾಗಿ ನಿಲ್ಲಿಸಬಾರದು. ಈ ಕ್ರಮದ ಜೊತೆಗೆ ಅದನ್ನೂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ (ಡೋಸೇಜ್) ತೆಗೆದುಕೊಳ್ಳುತ್ತಾ ಬರಬೇಕು. ಉದಾಹರಣೆಗೆ ಬಹಳ ತೀವ್ರ ಸ್ಥಿತಿಯಲ್ಲಿ ಪಿಡ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ವೈದ್ಯರ ಸಲಹೆಯಂತೆ ದಿವಸಕ್ಕೆ 5 ಮಾತ್ರೆಗಳನ್ನು ಸೇವಿಸುತ್ತಿದ್ದರೆ ಈ ಕ್ರಮವನ್ನು ಪಾಲಿಸಲು ಪ್ರಾರಂಭಿಸಿದ ಬಳಿಕ ಮೊದಲ 10 ದಿವಸ 4 ಮಾತ್ರೆಗಳು, ನಂತರದ 10 ದಿವಸ ಮೂರು, ನಂತರ ಎರಡು ಹೀಗೆ ನಿಧಾನ ಗತಿಯಲ್ಲಿ ಕಡಿಮೆ ಮಾಡಿಕೊಂಡು ಬರಬೇಕು. ಒಂದು ವೇಳೆ ಮೇಲೆ ತಿಳಿಸಿದ ಎರಡೂ ಕ್ರಮಗಳಲ್ಲಿ ಅಂದರೆ 48 ದಿವಸ ಕೋಳಿಗೆ ಆಹಾರ ಮತ್ತು 48 ದಿವಸ ಎಣ್ಣೆ ತುಪ್ಪ ಸೇವಿಸಿದ ನಂತರವೂ ರೋಗ ಕಡಿಮೆಯಾಗದಿದ್ದಲ್ಲಿ, ಮಂಗಳವಾರದ ದಿನ ಭಂಡಾರದ ಮನೆಗೆ ಭೇಟಿ ನೀಡಿದರೆ ಅಲ್ಲಿ ಗಿರಾವು ದೈವವನ್ನು ನೆನೆದು ನೂಲು (ಉರ್ಕು) ಕೊಡುತ್ತಾರೆ. ಇದನ್ನು ರೋಗಿಯು ಕಟ್ಟಿಕೊಂಡರೆ ರೋಗ ನಿಧಾನವಾಗಿ ಗುಣವಾಗುತ್ತದೆ. ಈ ರೋಗ ಕಡಿಮೆಯಾದ ಬಳಿಕ ವ್ಯಕ್ತಿ ಹಾಗೂ ಕುಟುಂಬಿಕರು ಸೇರಿ ಗಿರಾವು ದೈವದ ನೇಮದಲ್ಲಿ ದೈವದ ಕೈಯಿಂದ ‘ನಿಮೂರ್ತಿದ ಬೂಳ್ಯ’ ಹಿಡಿಯಬೇಕು. ಚೇಳೂರಿನಲ್ಲಿ ‘ಕೆದ್ರಕಟ್ಟೆ’ ಎಂಬ ಜಾಗದಲ್ಲಿ ಏಪ್ರಿಲ್ 7 ತಾರೀಕಿಗೆ ದೈವಕ್ಕೆ ದೊಂಪದಬಲಿ ನಡೆಯುತ್ತದೆ. ನಂತರ ಮೇ 11 ತಾರೀಕಿಗೆ ಸಾನದಾಯನ ನೆರವೇರುತ್ತದೆ.
ಗಿರಾವು ದೈವದ ನೇಮ ಬಹಳ ವಿಶೇಷ ಮತ್ತು ವಿಶಿಷ್ಟ. ಹಾಳೆಯ ಮೊಗವನ್ನು ಕಟ್ಟಿ ನೇಮ ನಡೆಯುವ ಸಂಪ್ರದಾಯ. ದೈವದ ಎರಡೂ ಕೈಗೆ ತೆಂಗಿನ ಗರಿಯ ಸೂಟೆಯನ್ನು ಕೊಟ್ಟು ದೈವ ಅಡ್ಡ ಬಿದ್ದು ವಸಯ ಆಗುವ ಕ್ರಮ. ನೇಮದ ನಡುವೆ ದೈವ ಒಮ್ಮೆ ಶಾಂತ ಸ್ವಭಾವದಲ್ಲಿ ವರ್ತಿಸುತ್ತದೆ. ಗುತ್ತಿನ ಪ್ರತಿನಿಧಿ ಹೂ ಹಾಕಿ, ದೈವವನ್ನು ಶೃಂಗಾರಗೊಳಿಸಿದ ಬಳಿಕ ಪುನಃ ಸ್ವಲ್ಪ ಉಗ್ರದಲ್ಲಿ ಕತ್ತೇರಿ ಕಾಲಿನ ನಲಿಕೆಯಲ್ಲಿ ತಲೆಗೆ ಗಡಿ ಹಾಕಿ ದೈವದ ನೇಮ ಮುಂದುವರಿಯುತ್ತದೆ. ಕುರ್ನಾಡು ಮಾಗಣೆಯಲ್ಲಿ ಪ್ರಧಾನ ದೈವವಾಗಿ ಗಿರಾವು ದೈವ ಸ್ಥಾನಮಾನ ಪಡೆದಿದೆ. ಚೇಳೂರು ಗ್ರಾಮದಲ್ಲಿ ಅಂಗರಕೃಷ್ಣ ಎಂಬ ದೈವ ಪ್ರಧಾನವಾಗಿ ಆರಾಧನೆ ಪಡೆದುಕೊಂಡು ಬಂದಿದ್ದು, ಜನಪದ ಐತಿಹ್ಯದ ಪ್ರಕಾರ ಅಂಗಾರಕೃಷ್ಣ ದೈವವು ಕುರ್ನಾಡಿನ ಗಿರಾವು ದೈವವನ್ನು ಚೇಳೂರಿಗೆ ಕರೆ ತಂದು ನಿನಗೆ ನಾನು ಚೇಳೂರಿನಲ್ಲಿ ನೋಂಬ್ರತದ ಸೇವೆಯನ್ನು ಕೊಡುತ್ತೇನೆ ಎಂಬ ಮಾತು ಕೊಟ್ಟಿತು ಎಂಬ ಮಾಹಿತಿ ನಮಗೆ ಸಿಗುತ್ತದೆ. ತುಳುನಾಡಿನ ದೈವಾರಾಧನೆ ಎಂಬ ನಂಬಿಕೆಯ ಜಗತ್ತಿನೊಳಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಒಂದು ಪುಟ್ಟ ಊರಿನಲ್ಲಿ ಪಿಡ್ಸ್ ಕಾಯಿಲೆಗೆ ಮದ್ದಿದೆ ಎಂಬ ಮಾಹಿತಿಯನ್ನು ನಾನು ಓದುಗರ ಮುಂದಿಟ್ಟಿದೇನೆ. ಹಲವು ವರುಷಗಳ ಕಾಲ ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ದಿನ ನಿತ್ಯ ಆಸ್ಪತ್ರೆಗೆ ಅಲೆದಾಡುತ್ತಿರುವ ಜನರಿಗೆ ದೈವಾರಾಧನೆಯಲ್ಲಿರುವ ಒಂದು ಸರಳ ಮದ್ದಿನ ಕ್ರಮದ ಬಗ್ಗೆ ಮಾಹಿತಿಯನ್ನು ಕೊಟ್ಟರೆ ಅವರಿಗೆ ಉಪಯೋಗವಾಗಬಹುದು ಎಂಬ ಉದ್ದೇಶದಿಂದ ಈ ಬರಹವನ್ನು ನಾನು ಬರೆದಿದ್ದೇನೆ. ಈ ಮದ್ದಿನ ಕ್ರಮ ಮತ್ತು ಗಿರಾವು ದೈವದ ಆರಾಧನೆಯ ಬಗ್ಗೆ ನನಗೆ ಮಾಹಿತಿಯನ್ನು ಒದಗಿಸಿದ ಚೇಳೂರಿನಲ್ಲಿ ಗಿರಾವು ದೈವದ ಸೇವೆಯನ್ನು ಮಾಡುವ ದೈವನರ್ತಕರಾದ ಸಜಿಪ ಶೇಖರ ಪಂಬದರಿಗೂ ಹಾಗೂ ಕುರ್ನಾಡಿನಲ್ಲಿ ಗಿರಾವು ದೈವದ ಸೇವೆಯನ್ನು ಮಾಡುವ ಸೂರಜ್ ಬಂಗೇರ ಇವರಿಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಧನ್ಯವಾದಗಳು.
ಬರಹ : ಶರಣ್ ಶೆಟ್ಟಿ ಕೂರಿಯಾಳ ಪಡು




























































































































