ರಾಮಾಯಣ ಮಹಾಭಾರತಗಳಲ್ಲಿ ಬರುವ ಎರಡು ರಾಕ್ಷಸಿ ಪಾತ್ರಗಳಿವು. ಇವೆರಡರ ನಡುವಿನ ಸಾಮ್ಯತೆ ಇಬ್ಬರೂ ಪುರುಷಾಕರ್ಷಣೆಗೆ ಒಳಗಾದವರು. ಆದರೆ ಇಬ್ಬರಿಗೆ ಸಿಕ್ಕ ಫಲ ಬೇರೆ ಬೇರೆ. ಅದಕ್ಕೆ ಕಾರಣವೂ ಇಲ್ಲದ್ದಿಲ್ಲ. ಒಬ್ಬಾಕೆಯದು ಕಾಮವಾದರೆ ಇನ್ನೊಬ್ಬಳದು ನಿಜವಾದ ಪ್ರೇಮ. ಶೂರ್ಪನಖಿ ಮೊದಲು ರಾಮನನ್ನ ಬಯಸಿ ಆತ ತನ್ನ ಪತಿಯಾಗಬೇಕು ಅಂತ ಬಯಸುತ್ತಾಳೆ. ಬರಿಯ ಬಯಕೆ ಪ್ರೇಮವಾದೀತೇ? ಆದರೆ ಆಕೆ ರಾಮನ ಪತ್ನಿಯಾಗುವಲ್ಲಿ ಸೀತೆ ತನ್ನ ಪಾಲಿನ ಮುಳ್ಳಾದಾಗ ಅವಳನ್ನ ತನ್ನ ಮಾರ್ಗದಿಂದ ಸರಿಸಲು ಯೋಚಿಸುತ್ತಾಳೆ. ಅಲ್ಲಿಗೆ ಆಕೆಯ ಪ್ರೇಮ ಇನ್ನೊಂದು ಆಯಾಮ ಪಡೆದುಕೊಂಡಂತಾಗುತ್ತದೆ. ಪ್ರೇಮವೆಂದರೆ ಯಾಚಿಸಬೇಕು. ಯಾಚನೆಯೇ ಪ್ರಮುಖವಾಗಬೇಕಿತ್ತು. ಆದರೆ ತನ್ನ ಪಾಲಿನ ಮುಳ್ಳು ಅಂತೆಲ್ಲಾ ಯೋಚಿಸುವಲ್ಲಿ ಆಕೆಗೆ ರಾಮನನ್ನು ಪಡೆಯಲೇಬೇಕು ಎನ್ನುವ ಹಠವೇ ಪ್ರಾಮುಖ್ಯವಾಗಿ ಬಿಟ್ಟಿತು. ರಾಮನೋ ಇದನ್ನರಿತು ನನ್ನಂತೆ ಇರುವ ಲಕ್ಷ್ಮಣನನ್ನ ಕೇಳು ಅಂದಾಗ ಆಕೆ ಮರು ಮಾತಿಲ್ಲದೆ ಲಕ್ಷ್ಮಣನ ಬಳಿ ಸಾಗುತ್ತಾಳೆ. ಅಂದರೆ ರಾಮನೇ ಬೇಕಿಲ್ಲ. ಅವನಂತಿರುವ ಗಂಡು ಯಾರಾದರೂ ಆದೀತು. ಇದರ ಅರ್ಥ ಆಕೆಯದು ಪ್ರೇಮವಲ್ಲ ಕಾಮ. ಅದೂ ಅಲ್ಲದೆ ತನ್ನ ಅಣ್ಣನಾದ ರಾವಣನ ಕುರಿತಾಗಿ ಹೇಳಿ ರಾಮಲಕ್ಷ್ಮಣರನ್ನು ಹೆದರಿಸುವ ತಂತ್ರವನ್ನೂ ಮಾಡುತ್ತಾಳೆ. ಅರ್ಥಾತ್ ರಾಕ್ಷಸೀ ಸ್ವಭಾವದಲ್ಲಿ ಬದಲಾವಣೆ ಇಲ್ಲ. ಆ ಕಾರಣಕ್ಕಾಗಿ ಆಕೆಗೆ ಶಿಕ್ಷೆಯಾಯಿತು.

ಅದೇ ಹಿಡಿಂಬೆಯ ಪ್ರಕರಣದಲ್ಲಿ ಆಕೆಯ ನಡವಳಿಕೆ ನೋಡಿ. ಭೀಮನನ್ನು ಕಂಡ ಕೂಡಲೇ ಆಕೆ ತಾನು ರಾಕ್ಷಸಿ ಎನ್ನುವುದನ್ನೇ ಮರೆಯುತ್ತಾಳೆ. ಅದುವರೆಗಿನ ರಾಕ್ಷಸೀ ಸ್ವಭಾವ ತೊರೆದು ಆತನನ್ನು ಮನಸಾರೆ ಪ್ರೀತಿಸಿ ತನ್ನ ಪತಿಯಾಗಬೇಕು ಅಂತ ಯೋಚಿಸಿ ತನ್ನ ಅಣ್ಣನ ವಿರುದ್ಧವೇ ನಿಲ್ಲುತ್ತಾಳೆ. ತನ್ನ ಅಣ್ಣ ಕೆಟ್ಟವನು. ಆತನಿಂದ ನಿಮ್ಮನ್ನು ಕಾಪಾಡುತ್ತೇನೆ ಎಂದೆಲ್ಲ ಹೇಳುತ್ತಾಳೆ. ಅಣ್ಣನನ್ನು ಭೀಮ ಕೊಂದು ಹಾಕಿದಾಗಲೂ ಆಕೆ ಬೇಸರ ಪಡುವುದಿಲ್ಲ. ಅದಾಗಿಯೂ ಭೀಮ ಒಪ್ಪಲು ಹಿಂಜರಿದಾಗ ಕುಂತಿಯ ಮೊರೆ ಹೋಗುತ್ತಾಳೆ. ಆಕೆಯ ಬಳಿ “ಒಬ್ಬ ಕಾಮಪೀಡಿತ ಹೆಣ್ಣಿನ ನೋವು ಸಂಕಟಗಳನ್ನು ನೀನು ಅರಿತಿರುವೆ ಎಂದು ಭಾವಿಸುತ್ತೇನೆ ಹಾಗಾಗಿ ನಮ್ಮನ್ನು ಒಂದುಗೂಡಿಸು” ಎಂದು ಅಂಗಲಾಚುತ್ತಾಳೆ. ರಾಕ್ಷಸೀ ಪ್ರವೃತ್ತಿ ತೊರೆದ ಆಕೆಯೊಳಗಿನ ಹೆಣ್ತನ ಕುಂತಿಯ ಮನ ಕರಗಿಸುತ್ತದೆ. (ಗಂಡನಾದ ಪಾಂಡುವಿನ ಜತೆ ದೈಹಿಕ ಸುಖ ವಂಚಿತಳಾದ ಆಕೆಯ ದುಃಖ ಅವಳನ್ನ ಒಪ್ಪಿಸಿದ್ದಿರಲೂಬಹುದು) ಪ್ರೇಮಕ್ಕಾಗಿ ಈ ರೀತಿಯ ಯಾಚನೆ ಮಾಡಿದ ಕಾರಣ ಆಕೆಗೆ ಭೀಮ ದಕ್ಕಿದ. ಮುಂದೆ ಘಟೋತ್ಕಚನೆಂಬ ಮಗನೂ ಹುಟ್ಟುತ್ತಾನೆ.
ಬರಹ : ದಾಮೋದರ ಶೆಟ್ಟಿ ಇರುವೈಲು











































































































