ಶ್ರೀ ಧವಲಾ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ, ಲಯನ್ಸ್ ಕ್ಲಬ್ ಮೂಡುಬಿದಿರೆ ಮತ್ತು ರೋಟರಿ ಕ್ಲಬ್ ಮೂಡುಬಿದರೆ ಟೆಂಪಲ್ ಟೌನ್ ಸಹಯೋಗದಲ್ಲಿ ರಕ್ತದಾನ ಶಿಬಿರವು ಕಾಲೇಜಿನ ಎವಿ ಹಾಲ್ ನಲ್ಲಿ ಸೆಪ್ಟೆಂಬರ್ 17ರಂದು ಜರಗಿತು. ಶಿಬಿರವನ್ನು ಉದ್ಘಾಟಿಸಿದ ಡಿಜೆವಿವಿ ಸಂಘದ ಕಾರ್ಯದರ್ಶಿ ಅಭಿಜಿತ್ ಎಂ ಶುಭ ಹಾರೈಸಿದರು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್ ಅವರು ಮಾತನಾಡಿ, ಎಷ್ಟೇ ಹಣವಿದ್ದರೂ ರಕ್ತದ ಉತ್ಪಾದನೆ ಸಾಧ್ಯವಿಲ್ಲ. ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ರಕ್ತದ ಅವಶ್ಯಕತೆಯನ್ನು ಅರಿತು ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದೆ ಬರಬೇಕಾಗಿರುವುದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.

ಲಯನ್ಸ್ ಕ್ಲಬ್ ಮೂಡುಬಿದಿರೆಯ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆಯವರು ಮಾತನಾಡಿ, ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಇಂದು ಎಲ್ಲಾ ಕಡೆ ಕಾಣಿಸುತ್ತಿದ್ದು, ಆಸ್ಪತ್ರೆ ಸೇರಿರುವ ವ್ಯಕ್ತಿ ಬದುಕಿ ಉಳಿದು ಬರಬೇಕಾದರೆ ರಕ್ತದ ಅಗತ್ಯವಿದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ಪಾರ್ಶ್ವನಾಥ ಆಜ್ರಿಯವರು ಮಾತನಾಡಿ, ರಕ್ತದಾನಿ ಒಬ್ಬ ಸೈಲೆಂಟ್ ಹೀರೋ. ಯಾಕೆಂದರೆ ತಾನು ನೀಡಿರುವ ರಕ್ತ ಯಾರಿಗೆ ಸೇರುತ್ತದೆ ಎಂಬುದು ಆತನಿಗೆ ತಿಳಿದಿರುವುದಿಲ್ಲ. ಅಂತೆಯೇ ವೈಯುಕ್ತಿಕ ಲಾಭ ಅಭಿಲಾಷೆಗಳು ರಕ್ತದಾನದ ಸಂದರ್ಭದಲ್ಲಿ ಆತನಲ್ಲಿ ಇರುವುದಿಲ್ಲ ಎಂದರು. ಟೆಂಪಲ್ ಟೌನ್ ರೋಟರಿ ಅಧ್ಯಕ್ಷ ಎಂಕೆ ಮೂಡುಬಿದರೆ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಅಕ್ಷತಾ ನಾಯಕ್, ವೆಲ್ನಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನ ವಿದ್ಯಾ, ಆಂಟನಿ, ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕ ಖಾದರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮೂರೂ ಕ್ಲಬ್ ಗಳ ಕಾರ್ಯದರ್ಶಿ ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್ಎಸ್ಎಸ್ ಅಧಿಕಾರಿ ಮಲ್ಲಿಕಾ ರಾವ್ ಸ್ವಾಗತಿಸಿದರು. ಶ್ರೇಯಾ ನಿರೂಪಿಸಿದ ಕಾರ್ಯಕ್ರಮದಲ್ಲಿ ರಶ್ಮಿ ವಂದಿಸಿದರು.