ಸಮಾನತೆ ಸರ್ವರ ಹಕ್ಕು. ಮೇಲು ಕೀಳು ಎಂಬ ಜಾತಿ ಭೇದವಿಲ್ಲದೆ ಆತ್ಮಗೌರವದಿಂದ ಒಂದು ಸಮಾಜದಲ್ಲಿ ಬಾಳುವ ಅಧಿಕಾರ ಎಲ್ಲರಿಗೂ ಇದೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರಾದಿಯಾಗಿ ಎಲ್ಲರೂ ಇದನ್ನು ಪ್ರತಿಪಾದಿಸುತ್ತಲೇ ಬಂದರು. ಸಮತೆಯಿಲ್ಲದೆ ನ್ಯಾಯ ಸಾಧ್ಯವಿಲ್ಲ. ಜಾತಿ, ಧರ್ಮ, ಲಿಂಗ, ವರ್ಗದ ಆಧಾರದಲ್ಲಿ ಯಾವುದೇ ವಿಭಜನೆಯಿಲ್ಲದೆ ಎಲ್ಲರಿಗೂ ಸಮಾನ ಅವಕಾಶಗಳು ದೊರಕಬೇಕು ಎಂಬುದೇ ಸಮಾನತೆಯ ತತ್ತ್ವ. ಆದರೆ ಜಾತಿ, ವರ್ಗದ ಆಧಾರದಲ್ಲಿ ಮೇಲು ಕೀಳೆಂಬ ವರ್ಗೀಕರಣವು ನಡೆದು ಕೆಳವರ್ಗದ ಜನರು ಅಸಮಾನತೆಯ, ಅಪಮಾನದ ನೋವನ್ನು ಅನುಭವಿಸುವಂತಾಯಿತು. ಶೋಷಿತ ವರ್ಗ ಇದರ ವಿರುದ್ಧ ಅನಿವಾರ್ಯವಾಗಿ ಸಿಡಿದೇಳುವಂತಾಯಿತು. ಕನ್ನಡದಲ್ಲಿ ‘ದಲಿತ ಬಂಡಾಯ ಸಾಹಿತ್ಯ’ ಎಂಬ ರೂಪದಲ್ಲಿ ಒಂದು ಸಾಹಿತ್ಯ ಚಳುವಳಿಯೇ ಆರಂಭವಾಯಿತು.

ದಲಿತ ಸಾಹಿತ್ಯವೆನ್ನುವುದು ಅನುಭವಸಿದ್ಧ ಸಾಹಿತ್ಯ. ಭಾರತೀಯ ದಲಿತ ಸಾಹಿತ್ಯಕ್ಕೆ ಅಂಬೇಡ್ಕರ್ ಸಾಹಿತ್ಯವು ಬುನಾದಿಯಾಗಿದೆ ಎನ್ನಬಹುದು. ಕನ್ನಡ ಸಾಹಿತ್ಯದಲ್ಲಿ ಕ್ರಾಂತಿ ಮಾಡಿದ ವಚನ ಸಾಹಿತ್ಯವೂ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಪಂಪನ ಮಾತನ್ನೇ ಮಂತ್ರವಾಗಿಸಿತ್ತು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ‘ದಲಿತ ಬಂಡಾಯ ಸಾಹಿತ್ಯ’ ಎಂಬ ಶಾಖೆಯು ಬೆಳೆದು ಬಂತು. ಅಕ್ಷರ ವಂಚಿತ ಲೋಕದವರಾದ ದಲಿತರಲ್ಲಿ ಅಕ್ಷರಜ್ಞಾನ ಸಂಚಯ ಮಾಡಿದ ಅನೇಕರು ತಮ್ಮ ಲೇಖನಿಯ ಮೂಲಕ ಶೋಷಿತರ ಧ್ವನಿಗೆ ಕಹಳೆಯಾದರು. ಕೆಳವರ್ಗದವರ ಮೇಲೆ ನಡೆಯುವ ಅನೇಕ ರೀತಿಯ ಶೋಷಣೆ, ಅವರು ಅನುಭವಿಸುವ ಅವಮಾನ, ತಲ್ಲಣಗಳನ್ನು ಪ್ರಚುರಪಡಿಸಿದರು. ಬುದ್ಧ ಧರ್ಮದ ಮಾನವೀಯತೆಯ ತತ್ತ್ವಗಳು, ಬಾಬಾ ಸಾಹೇಬ ಅಂಬೇಡ್ಕರ್ ಅವರ ಚಿಂತನೆಗಳಿ೦ದ ಪ್ರೇರಿತರಾದ ಅನೇಕರು ತಮ್ಮವರ ಹಕ್ಕುಗಳಿಗೆ ಧ್ವನಿಯೆತ್ತಿದರು. ಸಾಹಿತ್ಯದ ಮೂಲಕ ತಮ್ಮ ಕಥೆಗಳನ್ನು ತಾವೇ ಹೇಳಲು ಆರಂಭಿಸಿದರು. ಜಾತಿ ಪದ್ಧತಿಯ ವಿರುದ್ಧ, ಶೋಷಣೆಯ ವಿರುದ್ಧ, ಸಮಾನತೆಯ ಪರವಾಗಿ ಹೋರಾಡಿ ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡುವುದು ಹಾಗೂ ಸಮಾಜದಲ್ಲಿ ದಲಿತರಿಗೆ ನ್ಯಾಯ, ಸಮಾನತೆ, ಆತ್ಮಗೌರವ ಹಾಗೂ ಹಕ್ಕುಗಳ ಸ್ಥಾಪನೆಗಾಗಿ ಸಾಂಸ್ಕೃತಿಕ ಆಂದೋಲನ ನಡೆಸುವುದು ದಲಿತ ಸಾಹಿತ್ಯದ ಮುಖ್ಯ ಆಶಯವಾಗಿತ್ತು. ಇತ್ತೀಚಿನ ದಲಿತ ಕನ್ನಡ ಸಾಹಿತಿಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಪ್ರೊ. ಎಚ್. ಟಿ. ಪೋತೆ ಅವರು ದಲಿತ ಸಾಹಿತ್ಯದಲ್ಲಷ್ಟೇ ಅಲ್ಲದೆ, ಜಾನಪದ ಕ್ಷೇತ್ರದಲ್ಲಿಯೂ ವಿಪುಲ ಕೃಷಿ ಮಾಡಿದ್ದಾರೆ. ಸಂವೇದನಾಶೀಲ, ಕತೆಗಾರರಾಗಿ, ಕಾದಂಬರಿಕಾರರಾಗಿ, ವಿಮರ್ಶಕ, ಚಿಂತಕ, ಜಾನಪದ ವಿದ್ವಾಂಸರಾಗಿ ಗುರುತಿಸಿಕೊಂಡಿರುವ ಪ್ರೊ. ಪೋತೆ ಅವರು ಸಂಶೋಧಕರೂ ಹೌದು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ, ಪ್ರಸಾರಾಂಗದ ನಿರ್ದೇಶಕರಾಗಿಯೂ ಅವರು ದುಡಿದಿದ್ದಾರೆ.
‘ಕಪ್ಪು ನೆಲದ ಹಾಡು’- ಇದು ಪ್ರೊ. ಎಚ್. ಟಿ. ಪೋತೆ ಅವರ ಸಮಗ್ರ ಕತೆಗಳ ಸಂಕಲನವಾಗಿದೆ. ಇದರಲ್ಲಿ ಅವರ ಕಥಾಸಂಕಲನಗಳಾದ ‘ಚಮ್ಮಾವುಗೆ’, ‘ಬೆತ್ತಲಾದ ಚಂದ್ರ’, ‘ಕರುಳರಿಯುವ ಹೊತ್ತು’, ‘ಮಾದನ ಕರೆಂಟ್ ಕತಂತ್ರ’, ‘ಅನೇಕಲವ್ಯ’ ಮತ್ತು ‘ದೇವರ ಧರ್ಮ’ ಎಂಬ ಆರು ಸಂಕಲನಗಳಲ್ಲಿ ಪ್ರಕಟಗೊಂಡ ಒಟ್ಟು ಐವತ್ತು ಕತೆಗಳಿವೆ. ಪ್ರಸ್ತುತ ಕೃತಿಯಲ್ಲಿರುವ ಕತೆಗಳು ಲೇಖಕರ ಬದುಕಿನ ಅನುಭವಗಳನ್ನೇ ಅಕ್ಷರರೂಪಕ್ಕೆ ಇಳಿಸಿದಂತಿವೆ. ತಮ್ಮ ಸಮುದಾಯದ ಜನರ ಬದುಕಿನ ನೋವು, ಹೋರಾಟ, ಅವಮಾನ, ತಲ್ಲಣಗಳನ್ನೇ ಅವು ನಿರೂಪಿಸಿವೆ. ಲೇಖಕರೇ ಹೇಳುವಂತೆ, “ನನ್ನ ಕತೆಗಳು ಏಕಾಂತದ ಧ್ಯಾನದಲ್ಲಿ, ಪ್ರಶಾಂತವಾದ ವಾತಾವರಣದಲ್ಲಿ ತಟ್ಟನೆ ಹುಟ್ಟಿಕೊಂಡವುಗಳಲ್ಲ. ನಾನು ಕಂಡು ಅನುಭವಿಸಿದ ಬದುಕಿನ ಘಟನೆಗಳ ಭಾಗಗಳಿವು; ಗಿಜಿಬಿಜಿ ಬದುಕಿನಲ್ಲಿ ತೂರಿಕೊಂಡು ಬಂದ ಸಂಘರ್ಷಗಳವು; ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿದ ಅನುಭಗಳವು; ಅಸಹಾಯಕರ ಬದುಕನ್ನು ಮುನ್ನಡೆಸಲು ಅಡ್ಡವಾಗಿದ್ದ ಕಾಲ್ತೊಡರುಗಳವು; ವ್ಯವಸ್ಥೆ ರೂಪಿಸಿದ ಸಂಚುಗಳ ತುಣುಕುಗಳವು; ಶಕ್ತಿ ಹೀನವಾದ ಆರ್ತನಾದಗಳವು; ಸಾರವಿಲ್ಲದ ಬದುಕಿನ ರೂಪಗಳವು: ದಣಿದ ಬದುಕಿನ ಬೆವರ ಹನಿಗಳವು; ಹರಿದ ಬಟ್ಟೆಗಳ ನಡುವೆ ಇಣುಕಿ ಹಾಕುವ ಸುಕ್ಕುಗಟ್ಟಿದ ಚರ್ಮಗಳವು; ನಿರ್ಭಾವುಕ ಲೋಕದಲ್ಲಿನ ಭಾವುಕಗಳು; ಕಕ್ಕುಲಾತಿಯಿಲ್ಲದ ಕಾಲದ ಕುರಹುಗಳು”. ಬಾಲ್ಯದ ಹೆಪ್ಪುಗಟ್ಟಿದ ನೋವಿನ ಅನುಭವ ಆರಂಭದ ಕತೆಗಳಲ್ಲಿ ಕಥಿತಗೊಂಡಿವೆ. ಸಮಾಜದ ನಿಮ್ನ ವರ್ಗವೊಂದರಲ್ಲಿ ಜನಿಸಿ ಅಸ್ಪೃಶ್ಯತೆಯ ಅವಮಾನವನ್ನು ಸಹಿಸಿ ಅಕ್ಷರ ಜ್ಞಾನದಿಂದ ಮಾತ್ರವೇ ತನ್ನ ಸಮುದಾಯ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮೇಲೇರಬಹುದು ಎಂಬ ಆಶಯವನ್ನು ಹೊತ್ತ ಕತೆಗಳಿವು. ವಿದ್ಯೆಯು ಎಲ್ಲಾ ಸಂಕಷ್ಟಗಳಿಂದ ಬಿಡುಗಡೆ ದೊರಕಿಸಬಹುದೆಂಬ ಭಾವದೊಂದಿಗೆ ರಚಿಸಲ್ಪಟ್ಟ ದಲಿತ ಸಂವೇದನೆಯ ಕೃತಿಯಾಗಿಯೇ ಈ ಕಥಾಸಂಕಲನವನ್ನು ಕಾಣಬಹುದು. ಜಾತಿ ವ್ಯವಸ್ಥೆಯಿಂದ ರೋಸಿ ಹೋದ ಮನಸ್ಸಿನ ಆಕ್ರೋಶ ಇಲ್ಲಿನ ಕತೆಗಳಲ್ಲಿ ಕೆನೆಗಟ್ಟಿದೆ. ಶೋಷಿತ ವರ್ಗದ ಅಭಿವ್ಯಕ್ತಿಯಾಗಿ ಇಲ್ಲಿನ ಕತೆಗಳು ರೂಪುಗೊಂಡಿವೆ. ಹಿಂದುಳಿದ ವರ್ಗದ ಅಕ್ಷರ ಕಲಿತ ಪ್ರತಿನಿಧಿಯಾಗಿ ತಮ್ಮ ಸಮುದಾಯವನ್ನು ಕಾಣಿಸುವ ಸಮರ್ಥ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ದಲಿತರ ಬದುಕು ಏನು? ಎಂತು? ಎಂಬುದು ಈ ಕತೆಗಳ ಹೂರಣ. ಇಲ್ಲಿರುವ ಹೆಚ್ಚಿನೆಲ್ಲ ಕತೆಗಳಲ್ಲಿ ದಲಿತರ ಬದುಕಿನ ವಿವಿಧ ಮಗ್ಗುಲುಗಳು ಅನಾವರಣಗೊಂಡಿವೆ. ಅಷ್ಟೇ ಅಲ್ಲ, ವಿದ್ಯೆ ದಲಿತರ ಬದುಕನ್ನು ಹೇಗೆ ಬದಲಾಯಿಸಬಲ್ಲುದು; ಬಾಳನ್ನು ಬೆಳಕಾಗಿಸಬಲ್ಲುದು ಎಂಬ ದೃಷ್ಟಾಂತವೂ ಇಲ್ಲಿನ ಕತೆಗಳಲ್ಲಿ ಸಿಗುತ್ತವೆ. ಸಾಮಾಜಿಕ ತಾರತಮ್ಯದಿಂದ ಮುರುಟಿದ ಮನಸ್ಸಿಗೆ ಓದು ಆತ್ಮವಿಶ್ವಾಸವನ್ನು ತುಂಬಿ ಬದುಕನ್ನು ಪಲ್ಲಟಗೊಳಿಸಿರುವುದು ಕೃತಿಯ ಕೊನೆಯ ಕೆಲವು ಕತೆಗಳ ವಸ್ತುಗಳಾಗಿವೆ ಎನ್ನಬಹುದು. ಉನ್ನತ ವಿದ್ಯೆಯಿಂದ ಸಮಾಜದಲ್ಲಿ ಗೌರವದ ಸ್ಥಾನಮಾನ ಲಭಿಸಿರುವುದು ಅಲ್ಲಿಯ ಅನೇಕ ಕಥಾನಕಗಳಿಂದ ವಿದಿತವಾಗುತ್ತದೆ. ಅಂಬೇಡ್ಕರ್ ಅವರ ಪ್ರಗಾಢ ಪ್ರಭಾವ ಲೇಖಕರ ಜೀವನದಲ್ಲೂ, ಬರೆವಣಿಗೆಯಲ್ಲೂ ಆಗಿರುವುದು ದಟ್ಟವಾಗಿ ಗೋಚರಿಸುತ್ತದೆ.
ಇಲ್ಲಿ ಅಭಿವ್ಯಕ್ತಿಗೊಂಡಿರುವ ಬದುಕು ಅಲ್ಲಿಯ ಪ್ರಾದೇಶಿಕವಾದ ಭಾಷಾ ನಿರೂಪಣೆಯಿಂದ ಮತ್ತಷ್ಟು ಹೊಳಪು ಪಡೆದುಕೊಳ್ಳುತ್ತದೆ. ಇಲ್ಲಿಯ ಕತೆಗಳಿಗೆ ಗಟ್ಟಿತನವನ್ನೂ, ವಿಸ್ತೃತತೆಯನ್ನೂ ಕೊಟ್ಟಿರುವುದು ಲೇಖಕರು ಬೆಳೆದ ಪ್ರಾದೇಶಿಕ ಪರಿಸರದ ಚಿತ್ರಣ ಎನ್ನಬಹುದು. ದಶಕಗಳ ಹಿಂದೆ ಹೊಲೆಯರೆಂದರೆ ಊರ ಹೊರಗೆ ಇದ್ದು ಮೇಲ್ಜಾತಿಯವರ ಚಾಕರಿ ಮಾಡುತ್ತಾ ಅವರು ಕೊಡುವ ಕೂಳನ್ನು ಪಡೆದು ದೈನ್ಯಜೀವನ ನಡೆಸಬೇಕಾದವರು ಎಂಬ ಭಾವನೆ ಮೇಲ್ಜಾತಿಗೆ. ಹೊಲೆಯರೆಂದರೆ ಗುಲಾಮರು; ಇವರಿಗೇಕೆ ಓದು? ಎಂಬ ಭಾವನೆ. ಜೀತ ಮಾಡಿಯೇ ಜೀವನ ಸಾಗಿಸಲಿ ಎಂಬ ಧೋರಣೆ. “ಗೌಡ ಮಾಡ್ದಾ ಕಟ್ಟೀಗಿ, ಬ್ರಾಹ್ಮಣ ಮಾಡ್ದಾ ಜುಟ್ಟೀಗಿ, ಮುಸಲ ಮಾಡ್ದಾ ಗೋರಿಗಿ, ಹೊಲ್ಯಾ ಮಾಡ್ದಾ ಹೊಟ್ಟೀಗೀ” ಅನ್ನುವಂಥ ದೀನ ಪರಿಸ್ಥಿತಿ ಹೊಲೆಯರದು. ಹೊಲೆಯರನ್ನು ಊರಹೊರಗಿನ ಕೇರಿಗೆ ಸೀಮಿತಗೊಳಿಸುವುದಷ್ಟೇ ಅಲ್ಲದೆ ಬಾವಿ ಮುಟ್ಟಲು, ಗುಡಿ ಪ್ರವೇಶಿಸಲು ಆಸ್ಪದ ನೀಡದೆ ಸಾಮಾಜಿಕವಾಗಿ ಮೇಲೇರಲು ಬಿಡದೆ ತುಳಿಯುತ್ತ ಬಂದವರು ಉಚ್ಚ ವರ್ಗದ ಜನರೆನಿಸಿಕೊಂಡವರು. ದಲಿತರ ಮನೆಗಳಲ್ಲಿ ಹಾಲು ಹಿಂಡುವ ದನಗಳಿದ್ದರೆ, ಮಕ್ಕಳು ಚೆಲುವರಾಗಿದ್ದರೆ, ಹೊಲದಲ್ಲಿ ಒಳ್ಳೆಯ ಬೆಳೆ ಬೆಳೆದಿದ್ದರೆ ಸಹಿಸದಂತಹ ಮನಸ್ಥಿತಿಯವರು ಅವರು ಎಂಬುದು ಇಲ್ಲಿಯ ಕತೆಗಳಲ್ಲಿ ಬಿಂಬಿತವಾಗಿದೆ. ಮೇಲ್ಜಾತಿಯವರ ಅಸಹನಾಪ್ರವೃತ್ತಿಯ ಬಗ್ಗೆ ಕ್ರೋಧ ವ್ಯಕ್ತವಾಗಿದೆ.‘ಅಪ್ಪ’ ಎಂಬ ಕತೆಯಲ್ಲಿ ಅಕ್ಷರದ ಬಗ್ಗೆ ಅಕ್ಕರೆಯುಳ್ಳ ಅಪ್ಪ, ಮಕ್ಕಳು ಕಲಿಯಬೇಕೆನ್ನುವ ಅದಮ್ಯ ತುಡಿತದಲ್ಲಿ ಶಿಕ್ಷಿಸಿಯಾದರೂ ಸಾಕ್ಷರರನ್ನಾಗಿ ಮಾಡಿ ಸ್ವಾವಲಂಬಿಗಳಾಗಿ ಆತ್ಮಾಭಿಮಾನದಿಂದ ಬದುಕಲು ಪ್ರೇರೇಪಿಸುತ್ತಾನೆ. ಕಲಿತದ್ದು ಸ್ವಲ್ಪವೇ ಆದರೂ ವಿದ್ಯೆಯ ಮಹತ್ವವನ್ನು ಬಲ್ಲವನು ಆತ. ಅಪ್ಪನೆಂಬ ಪಾತ್ರ ಸಂಕಲನದ ಎಲ್ಲ ಕತೆಗಳಲ್ಲೂ ಈ ರೂಪದಲ್ಲಿಯೇ ಓದುಗರಿಗೆ ಕಾಣಸಿಗುತ್ತದೆ. ಅವನ ಕನಸೂ ದೊಡ್ಡದು. ‘ಹೆಚ್ಚು ಓದಿ ತಾಲೂಕಾ ಮಾಮ್ಲೇದಾರ, ಜಿಲ್ಲಾ ಕಲೆಕ್ಟರ್, ವಕೀಲ ಹೀಗೆ ಉನ್ನತ ಶಿಕ್ಷಣದ ಮೂಲಕ ಶ್ರೇಷ್ಠ ಅಧಿಕಾರ ಪಡೆಯುವ ತನಕ ಮಕ್ಕಳನ್ನು ಬೆಳೆಸಬೇಕು ಎನ್ನುವ ಉತ್ಕಟ ಆಕಾಂಕ್ಷೆ ಅಪ್ಪನದು’. ಅಪ್ಪನ ವ್ಯಕ್ತಿತ್ವದ ದಟ್ಟ ಛಾಯೆ ಕತೆಗಾರರ ಬದುಕಿನ ಮೇಲಾಗಿರುವದನ್ನು, ನಿರೂಪಕರ ಮನಸಿನಲ್ಲಿ ಅಪ್ಪನ ಸ್ಥಾನ ಔನ್ನತ್ಯಕ್ಕೇರಿರುವುದನ್ನು ಗಮನಿಸಬಹುದು. ತನ್ನನ್ನು ಓದಿಸಿದ, ತನ್ನ ಬದುಕು ನೇರ್ಪುಗೊಳ್ಳಲು ಕಾರಣೀಭೂತರಾದ ಅಪ್ಪನ ಬಗೆಗಿನ ಕೃತಜ್ಞತಾಭಾವವನ್ನು ವ್ಯಕ್ತಪಡಿಸುವ ಕತೆ- ‘ಕರುಳರಿಯುವ ಹೊತ್ತು’. ಅಪ್ಪ ಇರುವಾಗ ನೇರವಾಗಿ ಹೇಳಲಾಗದ, ಮನಸ್ಸಿನಲ್ಲಿಯೇ ಮಡುಗಟ್ಟಿದ ಭಾವ ವ್ಯಕ್ತವಾಗುವುದು ಅಪ್ಪನಿಗೆ ಬರೆಯುವ ಪತ್ರದಲ್ಲಿ. “ಆ ನಿನ್ನ ಹಂಬಲ ಕಾಳಜಿ, ಹೋರಾಟ, ಶ್ರಮದ ಕಾರಣಕ್ಕನ ಜಗತ್ತನ್ನು ಅರ್ಥೈಸುವ, ಪ್ರಶ್ನಿಸುವ ಹಕ್ಕನ್ನು ಪಡೆದಿದ್ದೇನೆ. ದೀನ ದರಿದ್ರ ಬದುಕಿನಿಂದ ಹೊರತೆಗೆದು ಅಕ್ಷರದ ಅರಿವಿನಿಂದ ಸುಖದ ನೆಲೆಗೆ ನಿಲ್ಲಿಸಿ ಮನುಷ್ಯ ಬದುಕನ್ನು ಬಾಳುವಂತೆ ನೀನೇ ಅಲ್ಲೆನಪ್ಪಾ!..’ ಎನ್ನುತ್ತಾನೆ ಮಗ. ಅವ್ವನಿಗೆ ಸಕಲವನ್ನು ಮಾರಿಯಾದರೂ ತನ್ನ ಮಕ್ಕಳು ಓದಬೇಕೆನ್ನುವ ಹಂಬಲ, ಅಕ್ಕರೆ. ತಮ್ಮನ ಓದಿಗಾಗಿ ಅಣ್ಣನ ತ್ಯಾಗ, ಸ್ನೇಹಿತನ ಸಂಕಷ್ಟಕ್ಕೆ ಒದಗಿಬರುವ ಗೆಳೆಯ, ತನ್ನನ್ನು ಬೆಳೆಸಿ ಕಲಿಸಿದ ಅಣ್ಣನನ್ನು ಮರೆತ ತಮ್ಮ, ಸುಖದಲ್ಲಿ ದೂರಮಾಡಿದರೂ ಕಷ್ಟಕ್ಕೆ ಆಸರೆಯಾದ ಹೃದಯವಂತ ಅಣ್ಣ- ಹೀಗೆ ಒಂದು ಸಮಾಜದಲ್ಲಿ ನಡೆಯುವ, ನಡೆಯಬಹುದಾದ ಅನೇಕ ಘಟನೆಗಳು ಇಲ್ಲಿ ಕಥನರೂಪವನ್ನು ಪಡೆದಿವೆ. ನಿಧಾನವಾಗಿ ಶಿಕ್ಷಣದ ಮಹತ್ವದ ಅರಿವು ಸಮುದಾಯದ ಜನರಿಗೆ ಉಂಟಾಗುವುದನ್ನು, ಕಾಲದೊಂದಿಗೆ ದಲಿತರ ಬದುಕು ಬದಲಾಗುವುದನ್ನು ಇಲ್ಲಿನ ಕತೆಗಳು ಹಿಡಿದಿಡುತ್ತವೆ.
“ಚಮ್ಮಾವುಗೆ’ ಕತೆಯ ಚೆಲುವಜ್ಜ, ಮಾದಜ್ಜ ಬಾಲ್ಯದ ಗೆಳೆಯರಾಗಿದ್ದೂ ಜಾತಿ ರಾಜಕಾರಣದಿಂದ ಮನಸ್ತಾಪ ಮಾಡಿಕೊಳ್ಳುವುದರಿಂದ ಒಗ್ಗಟ್ಟು ಹರಿಯುವಂತಾಗುತ್ತದೆ. “ಅನಾದಿ ಕಾಲದಿಂದಲೂ ಬೇರೆಯವರ ಮಾತು ಕೇಳಿ ಹಾಳಾಗಿದ್ದಲ್ದೇ, ಅವರ ಆಳಾಗಿ ದುಡದು, ದುಡದು ಸಾಕಾಗ್ಯಾದ, ನಮಗೂ ಸ್ವತಂತ್ರ ಬದುಕದ, ನಾವು ಇತರರಂತೆ ಬಾಳಬೇಕಾಗ್ಯದ. ಅದಕ್ಕ ನೀವೆಲ್ಲ ಈ ಜಾತಿ ರಾಜಕೀಯ ತೆಲ್ಯಾಗ ಹಾಕ್ಕೊಂಡು ಎಡ ಹೆಚ್ಚು, ಬಲ ಕಮ್ಮಿ! ಅಂತ ಹೊಡೆದಾಡೋದ್ರಿಂದ ಏನೂ ಸಾಧಿಸ್ಲಿಕ್ ಆಗಾಂಗಿಲ್ಲ. ಅದಕ್ಕಾಗಿ ನಾವು ಏನೂ ಇಲ್ದೆ ಹಾಳಾಗಿವಿ. ಕುಲಕ್ ಕೊಡ್ಲಿಕ್ಕಾಂವ ಮೂಲ ಆದರಿಂದಾಗಿ ನಮ್ಮವರನ್ನ ನಾವೇ ಹಾಳ ಮಾಡಕ್ ಹತ್ತೀವಿ. ಅದನ್ನೆಲ್ಲ ನಾವು ಬಿಡಬೇಕು ನಮ್ಮನ್ನು ನಾವು ಅರ್ಥಾಮಾಡಕೋಬೇಕು. ಬಡವರಾಗಿ ಹುಟ್ಟೋದು ಹುಟ್ಟೀವಿ, ಸಾಯುವಾಗ ಬಡವರಾಗಿ ಸಾಯಬಾರದು. ಗುಲಾಮರಾಗಿ ಹುಟ್ಟಿ ಗುಲಾಮರಾಗಿ ಸಾಯುವುದಂತೂ ಅಪರಾಧ. ಅದಕ್ಕ ಎಲ್ಲರ ಮಕ್ಕಳೂ ನನ್ನಂಗ ಓದಿ ಸನ್ಮಾನಕ್ ಪಾತ್ರರಾಗಬೇಕು” ಎಂಬ ಸಂದೇಶವೊಂದು ಕತೆಯ ಪಾತ್ರದ ಮೂಲಕ ರವಾನೆಯಾಗುತ್ತದೆ. ‘ಹೊಲೆಯರಾಗಿ ತಾವು ಹುಟ್ಟಿರುವುದು ಒಂದು ಕರ್ಮ, ಹೊಲೆತನವೇ ತಮ್ಮ ಧರ್ಮ, ಜೀತ ಮಾಡುವುದು, ತುಳಿಸಿಕೊಳ್ಳುವುದು ಅನಿವಾರ್ಯ’ ಎಂಬ ಕೀಳರಿಮೆಯಿಂದಲೇ ಬದುಕು ಕಳೆಯುವವರದ್ದೊಂದು ಬೇರೆಯೇ ಕತೆ. ಕೀಳರಿಮೆಯಿಂದ ಬದುಕು ಸಾಗಿಸುವ ಅವರು ತಲೆತಲಾಂತರದಿಂದ ಬಂದಿರುವ ತಮ್ಮ ಕೆಲ ಅಭ್ಯಾಸಗಳನ್ನು ಬಿಡಲಾರರು. ಸತ್ತ ಆಕಳು ತಿನ್ನುವ, ಮೋಸ ಹೋದರೂ ಎದುರಿಸದ, ಸಿಡಿದೇಳದ, ತಮ್ಮ ಬದುಕು ಇಷ್ಟೇ ಎಂದು ಒಪ್ಪಿಕೊಂಡು ನಂಬಿ ನಡೆಯುವ ಜನರಿಗೆ ತಾವು ಹೀಗೆ ಇರಬೇಕಾಗಿಲ್ಲ ಎಂಬ ಅರಿವೇ ಇಲ್ಲ. ಕೆಳವರ್ಗದ ಬದುಕನ್ನು ‘ಜೀವಂತ ಮನುಷ್ಯರ ಸ್ಮಶಾನ’ ಎಂದು ಕರೆದಿರುವುದು ಮಾರ್ಮಿಕವಾಗಿದೆ.
ನಕಲಿ ಜಾತಿಪತ್ರ ಸಲ್ಲಿಸಿ ಕೆಳಜಾತಿಯವರಿಗೆ ಸಂವಿಧಾನ ನೀಡಿದ ಹಕ್ಕನ್ನು ಕಸಿಯುವ ಬಗೆಗಿನ ಕತೆ ’ಪರಿ’ಯಾದರೆ, ‘ಕಾಗಿಶಕುನ’ದಲ್ಲಿ ಮಾರ್ಮಿಕವಾಗಿ ದಾಸ್ಯ ವ್ಯವಸ್ಥೆಯ ಕಥನವು ಬಿಚ್ಚಿಕೊಂಡಿದೆ. ತಾಯ ಹರಕೆಗಾಗಿ ತಾನು ಕಟ್ಟಿಸಿದ ಗುಡಿಯೊಳಗೆ ತನ್ನ ಸಮುದಾಯದ ಜನರಿಗೆ ನಿರ್ಬಂಧವೇರ್ಪಟ್ಟಾಗ ಸಿಡಿದೇಳುವ ನಾಯಕನದು- ‘ಬೆತ್ತಲಾದ ಚಂದ್ರ’ ಕತೆ. ಎಲ್ಲಾ ಕತೆಗಳಲ್ಲೂ ಮಹಾಪುರುಷನಾಗಿ, ಕೆಳವರ್ಗದ ಜನರ ಬದುಕಲ್ಲಿ ಅವಧೂತನಾಗಿ, ಕತೆಗಾರರಿಗೆ ಪ್ರೇರಣಾದಾಯಿಯಾಗಿ, ಕೆಳವರ್ಗದ ಜನರ ಬದುಕ ಕೆತ್ತಿದ, ಸಾಂವಿಧಾನಿಕವಾಗಿ ಸಮಾನತೆಯ ಹಕ್ಕು ನೀಡಿದ ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಒಂದು ಆರಾಧನಾ ಭಾವ, ಗೌರವ ಸ್ಥಾನ ಇಲ್ಲಿನ ಹೆಚ್ಚಿನ ಕತೆಗಳಲ್ಲಿವೆ. ಅಂಬೇಡ್ಕರ್ ಮಾತುಗಳು, ಅವರ ಚಿಂತನೆಗಳು ಇಲ್ಲಿನ ಕತೆಗಳಲ್ಲಿ ಹಾಸುಹೊಕ್ಕಾಗಿವೆ. ಪಾತ್ರವೊಂದು, “ಅವ್ವಾ.. ಬಾಬಾಸಾಹೇಬರೇನ ನೀ ಅನ್ಕೊಂಡಂಗ ಬೂಟಾಟಿಕೆ ಮಾಡಾ ದೇವರಲ್ಲ. ಅವರೊಬ್ಬ ಮಹಾನ್ ವ್ಯಕ್ತಿ, ಹಣೆಬರಹದ ಮೇಲೆ ನಂಬಿಕೆ ಇಟ್ಟವರಲ್ಲ. ಶ್ರಮಪಡಬೇಕು ಅಂತ ಹೇಳ್ಯಾರ್ರ” ಎಂಬ ಮಾತಿನಲ್ಲಿ ಅಂಬೇಡ್ಕರ್ ಚಿಂತನೆಯನ್ನು ಒಪ್ಪಿ, ಅಪ್ಪಿಕೊಂಡು ಭರವಸೆಯನ್ನು ಪಡೆದ ಯುವ ಸಮುದಾಯದ ಸ್ವಾಭಿಮಾನ ಇದೆ. ಅಂಬೇಡ್ಕರರ ಜೀವನವನ್ನು, ಅವರ ಚಿಂತನೆಗಳನ್ನು ವಿಸ್ತೃತವಾಗಿ ಅರುಹಲು ಕೂಡ ಕತೆಯಲ್ಲೊಂದು ಕನಸಿನ ಆಶ್ರಯ ಪಡೆಯುತ್ತಾರೆ, ಕತೆಗಾರರು. (ಸೂರ್ಯ ಚಂದ್ರರಿಲ್ಲದ ನಾಡಿನಲ್ಲಿ). ಮಾದ ತನ್ನ ಮನೆಗೆ ವಿದ್ಯುತ್ತ್ ಸಂಪರ್ಕ ತರಬೇಕೆನ್ನುವ ಛಲದಿಂದ ಮಾಡುವ ಕುತಂತ್ರವೇ ‘ಮಾದನ ಕರೆಂಟ್ ಕತಂತ್ರ’. “ಓದಿಸಿ ಅವನಿಗೇನ ಮಾಡಬೇಕಂದೇದೆಲೆ ! ನಿಮ್ಮಂಥವ್ರ ನಾಲಿಗೀಗಿ ಸರಸ್ವತಿ ಒಳಿತಾಲೇನ” ಎಂಬ ಹಂಗಿಸುವ ಮಾತಿಗೆ ಪ್ರತಿಕಾರರೂಪವಾಗಿ ಮಾಡುವ ತಂತ್ರವೇ ಈ ಕತೆ.
ಅನೇಕಲವ್ಯ, ದೇವರ ಧರ್ಮ- ಸಂಕಲನದ ಕತೆಗಳಲ್ಲಿ ಅಕ್ಷರದಿಂದ ಅರಿವು, ವಿದ್ಯೆ ಕೊಟ್ಟ ಸಫಲ ಬದುಕಿನ ಬಿಂಬಗಳು ಕಾಣಿಸುತ್ತವೆ. ಕೋರೋನಾ ಕಾಲಘಟ್ಟದ ಕತೆಗಳು, ಕವಿತಾ ಗೌಡ, ಜೋಗತಿ ಮಂಜಮ್ಮ ಅವರ ಹೋರಾಟದ ಕತೆಗಳು, ಸಾಸನೂರು ಹತ್ಯಾಕಾಂಡದ ದುರಂತ ಹಾಗೂ ಇನ್ನಿತರ ದಾರುಣ ಕಥಾನಕಗಳೂ ಇಲ್ಲಿ ಸೇರಿವೆ. ಪ್ರಾಣಿಬಲಿ ವಿರೋಧ, ಮೌಢ್ಯಾಚರಣೆಯ ವಿರುದ್ಧ ಧ್ವನಿಯೆತ್ತುವ ಕತೆಗಳು ಇಲ್ಲಿವೆ. ಎಲ್ಲಿಯ ತನಕ ಶಿಕ್ಷಣ ಬರುವುದಿಲ್ಲವೋ, ದಲಿತರು ಸಂಘಟಿತರಾಗುವುದಿಲ್ಲವೋ, ಅಲ್ಲಿಯ ತನಕ ತಮ್ಮ ಹೋರಾಟ ಗೆಲ್ಲುವುದಿಲ್ಲ ಎಂಬ ಎಚ್ಚರ ಇದೆ. ತಳ ಸಮುದಾಯದ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಿ ವಿದ್ಯೆ ಕಲಿಸುವ ಬಗ್ಗೆ, ಗುಡಿ ಪ್ರವೇಶ ನಿಷೇಧಿಸಿರುವ ಬಗೆಗಿನ ಕತೆಗಳಲ್ಲಿ ಸಾಮಾಜಿಕ ತಾರತಮ್ಯದ ಪರಿಸ್ಥಿತಿಯನ್ನು ಚಿತ್ರಿಸಲಾಗಿದೆ.
‘ದೇವರ ಧರ್ಮ’ ಸಂಕಲನದ ವಿಶಿಷ್ಟ ಕತೆ. ಹಿಂದೂ ಧರ್ಮದೊಳಗಿದ್ದೂ ಹಿಂದೂಗಳೆಂದು ಕರೆಸಿಕೊಳ್ಳಲಾಗದ , ಹಿಂದುಗಳಿಂದಲೇ ಬಹಿಷ್ಕೃತತೆಯನ್ನು ಅನುಭವಿಸುವ ನೋವು ಇದರಲ್ಲಿದೆ. ‘ವೇದಗಳು ಹೇಳಿವೆ ಎಂದು ಬ್ರಾಹ್ಮಣರು ನಮ್ಮನ್ನು ಕೀಳಾಗಿ ಕಾಣುವುದೇಕೆ?‘ ಎಂಬ ಪ್ರಶ್ನೆ ಲೇಖಕರನ್ನು ಕಾಡಿದೆ. ‘ದೊಡ್ಡ ಧರ್ಮ ಸನಾತನ ಎಂದು ಕೊಚ್ಚಿಕೊಳ್ಳುವ ಪಕ್ಷಪಾತಿ ಧರ್ಮಗಳು ನಮ್ಮ ಮೆದುಳಿಗೆ ಅಂಟಿಕೊಳ್ಳದಿರಲಿ’ ಎಂಬ ಕರೆ ಇದೆ. ಮನುಷ್ಯರನ್ನು ಪಶುಗಳಂತೆ ಕಾಣುವ ಧರ್ಮಗಳು ಭೂಮಿಯ ಮೇಲಿಂದ ಮಾಯವಾಗಬೇಕು ಎಂಬ ಆಶಯವಿದೆ. ಮುಕ್ತಾಬಾಯಿ ಬರೆದಿರುವ ಲೇಖನದ ಅಂಶಗಳನ್ನು ಇಲ್ಲಿ ಎತ್ತಿ ಹಿಡಿಯಲಾಗಿದೆ. ನಿಮ್ನ ವರ್ಗದವರು ಅನುಸರಿಸುವ ಮೌಢ್ಯಾಚರಣೆಗಳನ್ನು ಕಟುವಾಗಿ ಟೀಕಿಸುವ ಕತೆ ಇದು. ‘ಮಠದ ಮಹಿಮೆ’ ಕತೆಯಲ್ಲಿ ಸೋಗಿನ ಸ್ವಾಮಿಗಳ ನೀಚತನ ಮತ್ತು ದುರಾಸೆಯ ಚಿತ್ರಣವಿದೆ. “ಊರಾಗ ದೇವರ ಗುಡಿ ಬದಲು ಸಾಲಿ ಹೆಚ್ಚಾಗಲಿ. ಓದೋ ಮಕ್ಕಳಿಗಿ ಸಹಾಯ ಮಾಡ್ರಿ. ಗುಡಿ ಕಟ್ಟಿ ತ್ರಿಶೂಲ ಕೊಡುವ ಬದಲು ಮಕ್ಕಳ ಕೈಯ್ಯಾಗ ಪಾಟಿ, ಬಳಪ ಕೊಡ್ರಿ. ಹೆಣ್ಣುಮಕ್ಕಳಗಿ ಅಕ್ಷರಾ ಕಲಸ್ರಿ. ಅವ್ರು ಪುರುಷರ ಸಮಾನರಾಗಿ ಬದುಕಲಿ”- ಇಂತಹ ಮಾತುಗಳಲ್ಲಿ ಬಾಪೂಜಿ, ಬಾಬಾಸಾಹೇಬರ ಕನಸು ಅನುರಣಿತವಾಗುತ್ತವೆ. “ಯಾವನ ಎದೆಯೊಳಗ ಬಡತನ ಜಾತಿ ಅಪಮಾನಗಳ ಜ್ವಾಲೆ ಇರ್ತದ ಅಂಥವರು ಏನಾದರೂ ಸಾಧಿಸ್ತಾರ” ಎನ್ನುವುದು ಒಟ್ಟು ಎಲ್ಲ ಕತೆಗಳ ಸಂದೇಶ. ಅಕ್ಷರವೆಂಬ ಅರಿವು ಸಾಧನೆಗೆ ಇಂಬು ನೀಡಿ ಸ್ವಾಭಿಮಾನದ, ಗೌರವದ ಬದುಕನ್ನು ಕೊಡುತ್ತದೆ ಎಂಬುದು ಸಂಕಲನದ ಎಲ್ಲ ಕತೆಗಳ ಸಾರಾಂಶವಾಗಿದೆ. ‘ಕಪ್ಪು ನೆಲದ ಪಾಡು’ ಸಂಕಲನದ ಶೀರ್ಷಿಕೆಯೇ ಧ್ವನಿಸುವಂತೆ ಕೆಳವರ್ಗದಲ್ಲಿ ಜನಿಸಿ ಬದುಕಿನುದ್ದಕ್ಕೂ ಪಾಡು ಪಡಬೇಕಾದ ಪರಿಸ್ಥಿತಿಯನ್ನು ಇಲ್ಲಿಯ ಕತೆಗಳು ಪರಿಚಯಿಸುತ್ತವೆ. ಸುಧಾಕರ ದರ್ಬೆ ಅವರು ವಿನ್ಯಾಸಗೊಳಿಸಿರುವ ಬೆಳಕಿನೆಡೆಗೆ ನಡೆಯುವ ಜನಾಂಗದ ಮುಖಪುಟ ಆಕರ್ಷಣೀಯವಾಗಿದೆ. ಸಪ್ನ ಬುಕ್ ಹೌಸ್ ನವರು ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡ ಪುಸ್ತಕೋತ್ಸವವನ್ನಾಗಿ ಆಚರಿಸುವ ಸಂಭ್ರಮಾಚರಣೆಯ ಅಂಗವಾಗಿ ೨೦೨೩ರಲ್ಲಿ ಪ್ರಕಟಿಸಿರುವ ಈ ಗ್ರಂಥವು ದಲಿತ ಸಾಹಿತ್ಯಕ್ಕಷ್ಟೇ ಅಲ್ಲದೆ ಆಧುನಿಕ ಕನ್ನಡ ಸಾಹಿತ್ಯಕ್ಕೆ ಮೌಲಿಕ ಸೇರ್ಪಡೆ ಎಂದು ಹೇಳಬಹುದು.
ಕೃತಿ : ಕಪ್ಪು ನೆಲದ ಪಾಡು
ಲೇಖಕರು : ಪ್ರೊ. ಎಚ್. ಟಿ. ಪೋತೆ
ಪ್ರಕಾಶಕರು : ಸಪ್ನ ಬುಕ್ ಹೌಸ್, ಬೆಂಗಳೂರು
ಪುಟಗಳು : ೬೫೮
ಬೆಲೆ : ೬೫೦
ಬರಹ : ಸವಿತಾ ಅರುಣ್ ಶೆಟ್ಟಿ
ಮುಂಬೈ