ವರುಷ ಸುಮಾರು ಮೂವತ್ತು ದಾಟಿದರೂ ಮದುವೆ ಆಗಿಲ್ಲ, ಕಂಕಣ ಭಾಗ್ಯ ಕೂಡಿ ಬಂದಿಲ್ಲ, ರಾಶಿ ನಕ್ಷತ್ರ ಸಮನಾಗಿಲ್ಲ, ತಲೆಯ ಕೂದಲೆಲ್ಲಾ ಬೆಳ್ಳಗಾತ್ತಿದೆ ಎಂಬ ಮಾತುಗಳು ಕೇಳಿ ಬಂದರೂ ಇದಕ್ಕಿಂತ ಹೆಚ್ಚಾಗಿ ಈಗಿನ ಕಾಲದಲ್ಲಿ ಹುಡುಗಿ ಸಿಕ್ತಿಲ್ಲ, ಸಿಕ್ಕಿದ್ರೂ ಮದುವೆಗೆ ಒಪ್ಪಲಿಲ್ಲ ಅನ್ನೋ ಮಾತು ಅಚ್ಚರಿಯಂತೆ ಪ್ರಸ್ತುತ ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಕಾಲ ಬದಲಾದಂತೆ ಹುಡುಗಿಯರ ಡಿಮ್ಯಾಂಡ್ಗಳು ಏರುತ್ತಿದೆ. ಹುಡುಗ ಊರಿನಲ್ಲಿ ಕೃಷಿ ಮಾಡಿಕೊಂಡಿದ್ದರೆ, ತನ್ನದೇ ಅಂಗಡಿ ಇಟ್ಟರೆ, ದೇಶ ಸೇವೆ ಮಾಡಲೇಂದು ಸೇನೆಗೆ ಸೇರಿದರೆ ಈಗಿನ ಕಾಲದಲ್ಲಿ ಯಾವ ಹುಡುಗಿ ತಾನೆ ಒಪ್ಪಿಕೊಂಡಾಳು? ಮದುವೆ ಮಾತುಕತೆ ಮುಂಚೆಗೆ ಹುಡುಗಿ ತನ್ನ ಡಿಮ್ಯಾಂಡ್ ಗಳನ್ನ ಇಟ್ಟು ಬಿಡುತ್ತಾಳೆ. ಒಬ್ಬನೇ ಮಗನಿರಬೆಕು, ಸ್ವಂತ ಕಾರು ಇರಬೇಕು, ಮನೆ ಎರಡು ಅಂತಸ್ತಿನದ್ದು ಆಗಿರಬೇಕು, ಅಪ್ಪ ಅಮ್ಮ, ಒಡ ಹುಟ್ಟಿದವರು ಇಲ್ಲದೆ ಇದ್ದರೆ ಇನ್ನೂ ಉತ್ತಮ ಎಂಬ ಹತ್ತಾರು ನಿಯಮಗಳಿವೆ. ವರದಕ್ಷಿಣೆ ಇಲ್ಲದೆ ಎಲ್ಲಾ ಖರ್ಚನ್ನು ಹುಡುಗನ ಕಡೆಯವರೆ ಹಾಕಿಕೊಂಡು ಮದುವೆ ಮಾಡಿಕೊಳ್ಳುತ್ತೇನೆ ಎಂದು ಹುಡುಗನೆ ಹೇಳಿದರೂ ಅದಕ್ಕೆಲ್ಲಾ ಒಪ್ಪುವವರು ಯಾರಿದ್ದಾರೆ? ಅದಕ್ಕೆ ಬಹುಮುಖ್ಯ ಕಾರಣವೆಂದರೆ ಹುಡುಗಿ ಸಿಕ್ತಿಲ್ಲ ಅನ್ನೊದು. ಹಾಗಾದರೆ ನಿಜವಾಗಿಯೂ ಸಮಾಜದಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ ಆಗಿದೆಯೇ? ಖಂಡಿತ ಇಲ್ಲ. ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಒಂದು ಹುಡುಗಿ ವಯಸ್ಸಿಗೆ ಬಂದಾಗಲೆ ತನ್ನ ಭಾವಿ ಪತಿಯ ಬಗ್ಗೆ ಹತ್ತಾರು ಕನಸು ಕಂಡಿರುತ್ತಾಳೆ. ಈಗೆಲ್ಲ ಪ್ರೀತಿಸಿ, ವಿದೇಶಿ ಶೈಲಿಯಲ್ಲಿ ಮದುವೆ ಆಗುವ ಹೆಣ್ಣು ಮಕ್ಕಳು ಜಾಸ್ತಿ. ಹಾಗಾಗಿ ಗ್ರಾಮೀಣ ಭಾಗದ ಹುಡುಗರಿಗೆ ಮದುವೆ ಆಗಲು ಹುಡುಗಿ ಸಿಗದಿರುವುದು.

ಇಂತಹ ಘಟನೆಗಳನ್ನ ಕೇಳಿದಂತೆ ಒಂದು ಕಥೆ ನೆನಪಿಗೆ ಬರುತ್ತೆ. ದಂಪತಿಗಳಿಬ್ಬರೂ ಮದುವೆಯಾಗಿ ಸುಮಾರು ಎರಡು ವರ್ಷ ಕಳೆದಿತ್ತು. ಅವರೇನು ಪರಸ್ಪರ ಇಷ್ಟಪಟ್ಟು ಒಪ್ಪಿ ಮದುವೆ ಆದವರಲ್ಲ. ಮದುವೆ ವಯಸ್ಸು ಮೀರಿ ಹೋಗುತ್ತದೆ ಎಂಬ ಮನೆಯವರ ಒತ್ತಾಯದ ಮಾತಿಗೆ ಎದುರು ಮಾತನಾಡಲಾಗದೆ ಮನೆಯವರ ಇಚ್ಛೆಯಂತೆ ತಮ್ಮ ಇಷ್ಟ ಕಷ್ಟಗಳನ್ನ ಬದಿಗೊತ್ತಿ ಮದುವೆಯಾದದ್ದು. ಪರಸ್ಪರ ಒಬ್ಬರನ್ನೊಬ್ಬರು ಸರಿಯಾಗಿ ಮುಖ ನೋಡಿ ಮಾತೆ ಆಡದವರು. ಹೆಂಡತಿ ಅವಳಷ್ಟಕ್ಕೆ ಬೆಳಿಗ್ಗೆ ಉಪಹಾರ ರಾತ್ರಿ ಊಟ ಎಲ್ಲವನ್ನು ಮಾಡಿ ಇಡುತ್ತಾಳೆ. ಗಂಡ ಅದನ್ನ ತಾನೇ ಬಡಿಸಿಕೊಂಡು ತಿನ್ನುತ್ತಾನೆ. ಪ್ರತಿ ದಿನ ದೂಡುತ್ತಾ ಹೀಗೆ ಎರಡು ವರ್ಷ ಕಳೆಯುತ್ತದೆ. ದಾಂಪತ್ಯದ ಪಯಣದಲ್ಲಿ ಮದುವೆಯಾಗಿ ಇಬ್ಬರು ಏಕಾಂಗಿಯಾಗಿ ಪ್ರಯಾಣಿಸುತ್ತಿರುತ್ತಾರೆ. ಇಬ್ಬರೂ ಒಬ್ಬರನ್ನೊಬ್ಬರು ಅರಿತು ಬಾಳುವ ಪ್ರಯತ್ನ ಎಂದೂ ಮಾಡಿಲ್ಲ. ಮನೆಯವರು ಒತ್ತಾಯದಿಂದ ಅದ್ದೂರಿಯಾಗಿ ಮದುವೆ ಮಾಡಿಸಿದ್ದಾರೆ. ಹೀಗಿರುವಾಗ ಎಂದಿನಂತೆ ಬೆಳಿಗ್ಗೆ ಗಂಡ ತನ್ನ ಯಾವುದೋ ಹಳೆಯ ಪುಸ್ತಕ ಓದುವಾಗ ಅದರಲ್ಲಿ ಕೆಲವು ವರ್ಷಗಳ ಹಿಂದೆ ತಾನೆ ಇಟ್ಟ ಒಂದು ಫೋಟೋವನ್ನು ನೋಡುತ್ತಿರುತ್ತಾನೆ. ಅಷ್ಟರಲ್ಲಿ ಕಾಫಿ ಟೇಬಲ್ ಮೇಲೆ ಇಟ್ಟು ಹೋಗುತ್ತಿದ್ದ ಹೆಂಡತಿ ಆ ಪೋಟೋವನ್ನು ನೋಡುತ್ತಾಳೆ. ಅವಳು ಕೂಡಲೆ ಆ ಪೋಟೋ ಎಲ್ಲಿಂದ ಬಂತು ಎಂದು ಕೇಳುತ್ತಾಳೆ. ಆಗ ಗಂಡ ಇದು ನಾನು ಬಾಲ್ಯದಿಂದಲೂ ಪ್ರೀತಿಸುತ್ತಿದ್ದ ಹುಡುಗಿ ಎಂದಾಗ ಹೆಂಡತಿ ಮುಗುಳುನಕ್ಕು ಇದು ನನ್ನ ಬಾಲ್ಯದ ಪೋಟೋ. ಕಳೆದು ಹೋಗಿ ತುಂಬಾ ವರ್ಷವಾಯಿತು ಎಂದಳು. ಅಂದಿನಿಂದ ಆವರಿಬ್ಬರೂ ಪ್ರೀತಿಯಿಂದ, ಅನ್ಯೋನ್ಯವಾಗಿ ಬದುಕಿ ಅದರ್ಶ ದಂಪತಿ ಎನಿಸಿದರು. ಆದರೆ ನಮ್ಮ ಈಗಿನ ಮನಸ್ಥಿತಿಯಲ್ಲಿ ಇಂತಹ ಘಟನೆಗಳು ಕಾಲ್ಪನಿಕ ಎಂಬಂತೆ ಭಾಸವಾಗುತ್ತೆ. ಯಾಕೆ ಹೀಗೆ ಅನ್ನೋ ಪ್ರಶ್ನೆಗೆ ಉತ್ತರ ಏನು? ಮನೆಯವರೆಲ್ಲ ಸೇರಿ ಹುಡುಗನನ್ನು ಹುಡುಕಿ, ಹುಡುಗಿ ಹತ್ತಿರ ಏನನ್ನು ಕೇಳದೆ ಮದುವೆ ಮಾಡುವ ಕಾಲ ಒಂದಿತ್ತು. ಅಂದು ಹುಡುಗಿ ವರನ ಮುಖ ನೋಡುವುದು ಮದುವೆಯ ದಿನ. ನಿನಗೆ ಒಪ್ಪಿಗೆ ಇದೆಯೋ ಇಲ್ಲವೋ ಎಂದು ಕೇಳುವರು ಯಾರೂ ಇಲ್ಲ. ಆದರೆ ಈಗಿನ ಕಾಲದಲ್ಲಿ ಅಂತಹ ವಿವಾಹ ಪದ್ಧತಿ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಈಗೆಲ್ಲಾ ಎಷ್ಟೇ ಗಟ್ಟಿಯಾಗಿ ಮದುವೆಗೆ ಮುಂದಾದರೂ ಮದುವೆ ಮಂಟಪದಲ್ಲಿ ಕರಿಮಣಿ ಮಾಲೀಕ ಇವನಲ್ಲ ಅನ್ನುವರು, ಮದುವೆಗೆ ಬಂದ ಫೋಟೋಗ್ರಾಫರ್ ಗೆ ಹಾರ ಹಾಕುವವರು, ಅಡುಗೆ ಚೆನ್ನಾಗಿದೆ ಅಂತ ಅಡುಗೆ ಭಟ್ಟರೊಂದಿಗೆ ಓಡಿ ಹೋಗುವರು, ಮದುವೆ ಆದ ಮೇಲೆ ಮೂರು ತಿಂಗಳಿಗೆ ವಿಚ್ಚೇದನ ತೆಗೆದುಕೊಳ್ಳುವರನ್ನು ನಾವು ಸಮಾಜದಲ್ಲಿ ನೋಡುತ್ತಿರುತ್ತೇವೆ. ನಮ್ಮ ಸಾಮಾಜಿಕ ಮಾಧ್ಯಮಗಳು ಅಭಿವೃದ್ಧಿ ಹೊಂದುತ್ತಿದೆ. ಈಗ ಮೊದಲಿನ ಹಾಗೆ ಹುಡುಗಿ ಬೇಕಂತ ಬ್ರೋಕರ್ ಅಥವಾ ಇನ್ನಾವುದೇ ಮದ್ಯ ವ್ಯಕ್ತಿಗಳ ಅಗತ್ಯತೆ ಇಲ್ಲಾ. ಅದಕ್ಕೆ ಶಾದಿ ಮ್ಯಾಟ್ರೋಮೋನಿ ಅಂತ ಆ್ಯಪ್ ಗಳು ಬಂದಿದೆ. ಯಾವಾಗ ಮನುಷ್ಯ ಸಂಬಂಧಗಳು ಕ್ಷೀಣಿಸಿ ಆ್ಯಪ್ ಗಳಲ್ಲಿ ಮದುವೆ ಮಾತು ನಡೆಯುತ್ತಿದೆಯೋ ಅಂತಹ ಸಂಬಂಧಗಳು ಬಾಳುದಕ್ಕಿಂತ ಮುರಿದು ಬಿಳುವುದೇ ಜಾಸ್ತಿ.
ನಾವಿಬ್ಬರು ಸರ್ವಸ್ವತಂತ್ರರೂ, ಪರಸ್ಪರ ಪ್ರೀತಿ ನಂಬಿಕೆ ವಿಶ್ವಾಸ ಉಳ್ಳವರು, ಅಸತ್ಯ, ಮೂಡನಂಬಿಕೆಗಳಿಂದ ದೂರಾಗಿದ್ದೇವೆ. ಮನುಷ್ಯರು ಸೃಷ್ಟಿಸಿದ ಜಾತಿಗಳಿಂದ ಮುಕ್ತರಾಗಿದ್ದೇವೆ. ನಾವಿಂದು ಪ್ರಕೃತಿ ಸಾಕ್ಷಿಯಾಗಿ ದಂಪತಿಗಳೆಂದು ಘೋಷಿಸುತ್ತಿದ್ದೇವೆ ಎಂಬ ಕುವೆಂಪು ಮಂತ್ರ ಮಾಂಗಲ್ಯದ ಸಾಲು ಎಷ್ಟೊಂದು ಅರ್ಥಪೂರ್ಣ. ಮದುವೆ ಹೇಗಾಯಿತು ಎನ್ನುದಕ್ಕಿಂತ ಮದುವೆ ಆದವರು ಹೇಗೆ ಬಾಳುತ್ತಿದ್ದಾರೆ ಎಂಬುದು ಮುಖ್ಯ ತಾನೆ? ಈ ಸಾಲಿನ ನೈಜ ಅರ್ಥ ಅರಿವಾದರೆ ಬದುಕು ಪರಿಪೂರ್ಣ. ಎಲ್ಲಾ ವೃತ್ತಿಯೂ ಪೂಜ್ಯವೆ, ಯಾವುದೇ ವೃತ್ತಿಯೂ ಕಡಿಮೆ ಅಲ್ಲ. ಮದುವೆ ಆಗುವ ಹುಡುಗಿ ಹುಡುಗ ಇಂತದ್ದೆ
ವೃತ್ತಿಯಲ್ಲಿರಬೇಕು ಅಂದರೆ ಹೇಗೆ? ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಲು ಸಾಧ್ಯವೇ? ಹೀಗೆ ನೋಡಿದ್ರೆ ಪ್ರಪಂಚದಲ್ಲಿ ಬಹುತೇಕರು ಮದುವೆ ಆಗದೆ ಇರಬೇಕಾಗುತ್ತದೆ. ಕೇವಲ ಹಣ ಆಸ್ತಿ ಉದ್ಯೋಗ ಇವುಗಳನ್ನು ನೋಡಿ ಆಗುವ ಮದುವೆ ಅವು ಇರುವಷ್ಟು ದಿನ ಮಾತ್ರ ಚೆನ್ನಾಗಿರುತ್ತದೆ. ನಂತರ ವಿಚ್ಚೇದನದಲ್ಲಿ ಅಂತ್ಯ ಆಗುತ್ತದೆ. ಸಣ್ಣ ಸಣ್ಣ ಕೆಲಸ ಮಾಡಿಕೊಂಡಿರುವವರು ಅವರ ಹೆಂಡತಿ ಮಕ್ಕಳನ್ನ ಚೆನ್ನಾಗಿ ಸಾಕುತ್ತಿಲ್ಲವೇ? ಅಂತಹ ಅನೇಕ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಪರಸ್ಪರ ಒಬ್ಬರನ್ನೊಬ್ಬರು ಅರಿತು, ಹೊಂದಾಣಿಕೆಯ ಮನೋಭಾವದೊಂದಿಗೆ ಮದುವೆ ಆದರೆ ಎಂತಹ ದಂಪತಿಗಳಾದರೂ ಆದರ್ಶ ದಂಪತಿಗಳಾಗುವರು. ಮದುವೆಗೆ ಹುಡುಗಿ ಸಿಗದಿರಲು ಹಲವಾರು ಕಾರಣಗಳಿರಬಹುದು. ಈ ಕಾರಣಗಳು ವ್ಯಕ್ತಿಗತ, ಸಾಮಾಜಿಕ, ಆರ್ಥಿಕ ಅಥವಾ ಮನಸ್ಥಿತಿಗೆ ಸಂಬಂಧಿತವಾದ ಕೆಲವು ಸಾಮಾನ್ಯ ಕಾರಣಗಳು.
ಬರಹ : ಸುಜಯ ಶೆಟ್ಟಿ, ಹಳ್ನಾಡು ಕುಂದಾಪುರ
9481268606