ಸಾವಿರಾರು ವರ್ಷಗಳಿಂದ ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಸಾಮಾಜಿಕ ವಾಸ್ತವಿಕತೆಯಾಗಿ ಉಳಿದಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಸೇರಿದಂತೆ ವಿವಿಧ ವರ್ಣ, ಜಾತಿ ವಿಭಜನೆಗಳು ಸಮಾಜದ ಅವಕಾಶಗಳ ಮೇಲೂ ಪ್ರಭಾವ ಬೀರಿವೆ. ಇದರ ಪರಿಣಾಮವಾಗಿ ಶಿಕ್ಷಣ, ಉದ್ಯೋಗ, ಸಾಮಾಜಿಕ ಗೌರವ ಮತ್ತು ಆರ್ಥಿಕ ಅವಕಾಶಗಳಲ್ಲಿ ಅಸಮಾನತೆ ಬೆಳೆದಿದೆ. ಆದ್ದರಿಂದ ಮೀಸಲಾತಿ ಕೇವಲ ರಾಜಕೀಯ ಕೊಡುಗೆ ಅಲ್ಲ; ಐತಿಹಾಸಿಕ ಸಾಮಾಜಿಕ ಅಸಮಾನತೆಯನ್ನು ಕಡಿಮೆ ಮಾಡುವ ಒಂದು ಸಾಮಾಜಿಕ ನ್ಯಾಯದ ಸಾಧನ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆದರೆ ಅಂತಿಮ ಗುರಿ ಜಾತಿಯನ್ನು ಶಾಶ್ವತಗೊಳಿಸುವುದಲ್ಲ. ಜಾತಿ ವ್ಯವಸ್ಥೆಯೇ ಇಲ್ಲದ ಸಮಾಜ ನಿರ್ಮಾಣವಾಗಬೇಕು. ಎಲ್ಲರಿಗೂ ಸಮಾನ ಶಿಕ್ಷಣ, ಸಮಾನ ಅವಕಾಶ ಮತ್ತು ಸಮಾನ ಗೌರವ ದೊರೆಯುವ ದಿನ ಜಾತಿ ಆಧಾರಿತ ಮೀಸಲಾತಿಯ ಅಗತ್ಯವೂ ಕ್ರಮೇಣ ಕಡಿಮೆಯಾಗಬಹುದು.




ಹೀಗಾಗಿ ಪ್ರಶ್ನೆ, ಮೀಸಲಾತಿ ಯಾವಾಗ ಮುಗಿಯಬೇಕು ಎಂಬುದಕ್ಕಿಂತ ಮೊದಲು ಜಾತಿ ವ್ಯವಸ್ಥೆ ಯಾವಾಗ ಮುಗಿಯಬೇಕು? ಎಂಬುದಾಗಬೇಕು. ಎಲ್ಲಿ ತನಕ ಜಾತಿ ವ್ಯವಸ್ಥೆ ಜೀವಂತವಾಗಿರುತ್ತದೋ, ಅಲ್ಲಿ ತನಕ ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಆಧಾರಿತ ಮೀಸಲಾತಿಯ ಅಗತ್ಯವೂ ಇರುತ್ತದೆ. ಅಂತಿಮ ಕನಸು, ಜಾತಿ ಇರುವುದಿಲ್ಲ, ಜಾತಿಯ ಆಧಾರದ ಅನ್ಯಾಯ ಇರುವುದಿಲ್ಲ, ಮೀಸಲಾತಿಯ ಅಗತ್ಯವೂ ಇರುವುದಿಲ್ಲ.
















































































































