
ರಕ್ತದಾನ ಮಾಡುವುದು ಜಾತಿ ಧರ್ಮಗಳನ್ನು ಮೀರಿದ ಮಾನವೀಯ ಸೇವೆಯಾಗಿದೆ. ರಕ್ತದಾನದ ಮೂಲಕ ಜೀವ ಉಳಿಸುವುದರ ಜೊತೆಗೆ ಒಂದು ಕುಟುಂಬದ ಜೀವನವನ್ನು ಅರಳಿಸುವ ಪುಣ್ಯದ ಕೆಲಸವು ರಕ್ತದಾನಿಯಿಂದ ಆಗುತ್ತದೆ. ಇಂತಹ ಕಾರ್ಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇಲ್ಲಿಯ ಪ್ರಾಚಾರ್ಯ ಮಂಜುನಾಥ ಎ.ಕೋಟ್ಯಾನ್ ಹೇಳಿದರು. ಅವರು ಶ್ರೀ ಭುವನೇಂದ್ರ ಕಾಲೇಜು ವಿದ್ಯಾರ್ಥಿ ಪಾಲನಾ ಸಮಿತಿ, ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ವತಿಯಿಂದ ರೋಟರಿ ಕ್ಲಬ್ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ಜೇಸಿಐ ಕಾರ್ಕಳ, ಕಾಲೇಜಿನ ರೆಡ್ ಕ್ರಾಸ್, ಎನ್.ಸಿ.ಸಿ, ಎನ್.ಎಸ್.ಎಸ್, ರೋವರ್ಸ್ ಮತ್ತು ರೆಂಜರ್ಸ್, ರೋಟರ್ಯಾಕ್ಟ್ ಕ್ಲಬ್ ಕಾರ್ಕಳ ಇವರ ಸಯೋಗದೊಂದಿಗೆ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೋಟರಿ ಕ್ಲಬ್ ಕಾರ್ಕಳ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡಿ, ರಕ್ತದಾನವು ಅತ್ಯಂತ ಶ್ರೇಷ್ಠ ದಾನವಾಗಿದ್ದು, ತುರ್ತು ಪರಿಸ್ಥಿತಿಯಲ್ಲಿರುವವರ ಜೀವ ಉಳಿಸುವ ಮೂಲಕ ಅಮೂಲ್ಯ ಕೊಡುಗೆ ನೀಡುತ್ತದೆ. ಇತರರ ಜೀವ ಉಳಿಸಿದ ತೃಪ್ತಿಯೂ ಸಿಗುತ್ತದೆ ಎಂದರು. ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಸುರೇಂದ್ರ ನಾಯಕ್, ಜೇಸಿಐ ಕಾರ್ಕಳ ಇದರ ಅಧ್ಯಕ್ಷ ಅವಿನಾಶ್ ಶೆಟ್ಟಿ, ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಏಶ್ಲೋನ್, ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಸಂದೇಶ್, ವಿದ್ಯಾರ್ಥಿ ಪಾಲನಾ ಸಮಿತಿಯ ಅಧ್ಯಕ್ಷ ಈಶ್ವರ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.



ಜಿಲ್ಲಾ ರಕ್ತನಿಧಿ ಕೇಂದ್ರ ಅಜ್ಜರಕಾಡು ಉಡುಪಿ ಇಲ್ಲಿನ ವೈದ್ಯಾಧಿಕಾರಿ ಡಾ. ವೀಣಾ ಪ್ರಾಸ್ತಾವಿಕವಾಗಿ ಮಾತನಾಡಿ, ರಕ್ತದಾನದ ಮಹತ್ವ ಮತ್ತು ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಸುಮಾರು 75 ಯೂನಿಟ್ ನಷ್ಟು ರಕ್ತ ಸಂಗ್ರಹ ಮಾಡಲಾಯಿತು. ಎಲ್ಲರನ್ನೂ ಸ್ವಾಗತಿಸಿದ ಉಪನ್ಯಾಸಕ ಶಂಕರ್ ಕುಡ್ವ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


























































































































