ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಾರ್ತಾಭಾರತಿ ದಿನಪತ್ರಿಕೆಯ ಮಂಗಳೂರು ಬ್ಯೂರೋ ಚೀಫ್, ಸಜ್ಜನ ಸಹೃದಯಿ ಪುಷ್ಪರಾಜ್ ಶೆಟ್ಟಿ ಬಿ.ಎನ್ ಆಯ್ಕೆಯಾಗಿದ್ದಾರೆ. ದ.ಕ ಜಿಲ್ಲಾ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ 2025-28ನೆ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದರು. ಪುಷ್ಪರಾಜ್ 187 ಮತಗಳನ್ನು ಗಳಿಸಿದರೆ ಅವರ ಪ್ರತಿಸ್ಪರ್ಧಿ ವಿಜಯವಾಣಿ ಪತ್ರಿಕೆಯ ವರದಿಗಾರ ಯುವ ಫೈಯರ್ ಬ್ರಾಂಡ್ ಹೆಸರಾದ ಶ್ರವಣ್ ಕುಮಾರ್ ನಾಳ ಕೊನೆಯ ದಿನ ನಾಮಪತ್ರ ಸಲ್ಲಿಸಿದರೂ ತೀವ್ರ ಸ್ಪರ್ಧೆ ನೀಡಿ 144 ಮತಗಳನ್ನು ಪಡೆದರು. ಉಪಾಧ್ಯಕ್ಷರಾಗಿ ಅತ್ಯಧಿಕ ಮತಗಳನ್ನು ಪಡೆದ ವಿಜಯ ಕರ್ನಾಟಕದ ಮುಹಮ್ಮದ್ ಆರೀಫ್, ವಿಲೈಡ್ ಡಿ ಸೋಜ ಮತ್ತು ರಾಜೇಶ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಅತೀ ಹೆಚ್ಚಿನ ಮತಗಳನ್ನು ಪಡೆದ ಉದಯವಾಣಿಯ ಸತೀಶ್ ಇರಾ, ಹೊಸ ದಿಗಂತದ ಸುರೇಶ್ ಪಳ್ಳಿ, ಪುತ್ತೂರಿನ ಸಿದ್ದೀಕ್ ನೀರಾಜೆ ಗೆಲುವು ಸಾಧಿಸಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅತಿ ಹೆಚ್ಚಿನ ಮತಗಳನ್ನು ಪಡೆದ ಕನ್ನಡಪ್ರಭ ದ ಸಂದೀಪ ವಾಗ್ಲೇ, ದಿವಾಕರ ಪದ್ಮುಂಜ, ಸಂದೇಶ್ ಜಾರ, ಸಂದೀಪ್ ಕುಮಾರ್ ಎಂ, ಲಕ್ಷ್ಮೀನಾರಾಯಣ ರಾವ್, ಹರೀಶ್ ಮೋಟುಕಾನ, ಅಭಿಷೇಕ್ ಎಚ್.ಎಸ್, ಜಯಶ್ರೀ, ಭುವನೇಶ್ವರ ಜಿ, ಅಶೋಕ್ ಶೆಟ್ಟಿ ಬಿ.ಎನ್, ಹರೀಶ್ ಕೆ ಆದೂರ್, ಗಿರೀಶ್ ಅಡ್ಡಂಗಾಯ, ಸಂದೀಪ್ ಸಾಲ್ಯಾನ್, ಆರಿಫ್ ಕಲ್ಕಟ್ಟ, ಕಿರಣ್ ಯು. ಸಿರ್ಸಿಕರ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಗೆ ಒಟ್ಟು 21 ಮಂದಿ ಸ್ಪರ್ಧಿಸಿದ್ದರು. ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಪೂಜಾರಿ ಮತ್ತು ಕೋಶಾಧಿಕಾರಿಯಾಗಿ ವಿಜಯ ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.







































































































