ಶಿವರಾಮ ಕಾರಂತರ ಪುಸ್ತಕ ಓದುವಿಕೆ, ಪ್ರವಾಸ, ಅವರ ಸೂಕ್ಷ್ಮಗ್ರಹಣ ಶಕ್ತಿಗಳು ಅವರನ್ನು ಉತ್ತುಂಗಕ್ಕೆ ಏರಿಸಿತ್ತು. ಅವರ ಬದುಕು ಅನುಭವಗಳು ನಮಗೆಲ್ಲರಿಗೂ ದಾರಿ ದೀಪವಾಗಿವೆ ಎಂದು ವಿಶ್ರಾಂತ ಕುಲಪತಿಗಳು ಜಾನಪದ ವಿದ್ವಾಂಸರಾದ ಪ್ರೊ. ಬಿ ಎ ವಿವೇಕ ರೈ ಅವರು ಹೇಳಿದರು. ಅವರು ಮಂಗಳೂರು ವಿವಿ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನೂತನ ಸಭಾಂಗಣದ ಉದ್ಘಾಟನೆ ಮತ್ತು ಡಾ| ಕೆ ಶಿವರಾಮ ಕಾರಂತ ಜನ್ಮ ದಿನಾಚರಣೆ, ಕಾರಂತರ ನೆನಪು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಾಲ್ಯದಲ್ಲಿ ಕಾರಂತರ ಮೇಲೆ ಗಾಂಧಿ ತತ್ವವು ಮಹತ್ವದ ಪ್ರಭಾವವನ್ನು ಬೀರಿತ್ತು. ಗಾಂಧಿ ತತ್ವದ ಪ್ರಚಾರಕ್ಕಾಗಿ ಅವರು ದಲಿತ ಕೇರಿಗಳಿಗೆ ಹೋಗಿ ನಾಟಕ ಆಡಿ ಸ್ವಾತಂತ್ರ್ಯ ಕಲ್ಪನೆಯನ್ನು ಬಿತ್ತುತ್ತಿದ್ದರು. ಆಗ ದಲಿತ ಬದುಕನ್ನು ಹತ್ತಿರದಿಂದ ಕಂಡಿರುವುದು ಚೋಮನ ದುಡಿ ಕಾದಂಬರಿಗೆ ಪ್ರೇರಣೆಯಾಯಿತು ಎಂದು ಹೇಳಿದರು. ಶಿಕ್ಷಣ ಸಂಸ್ಥೆಗಳು ಎಂದಿಗೂ ಗೋಡೆಗಳಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು ಎಂದರು.

ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್ ಧರ್ಮ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕನ್ನಡ ವಿಭಾಗದ ಆರಂಭದಿಂದ ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ ಅನೇಕ ರೀತಿಯ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಪ್ರೊ. ವಿವೇಕ ರೈ ಅವರ ಹೆಸರು ಶಾಶ್ವತವಾಗಿರಬೇಕು ಎಂಬ ನಿಟ್ಟಿನಲ್ಲಿ ಈ ನೂತನ ಸಭಾಂಗಣಕ್ಕೆ ವಿವೇಕ ರೈ ವಿಚಾರ ವೇದಿಕೆ ಎಂದು ಹೆಸರಿಡಲಾಗುವುದು ಎಂದು ಘೋಷಿಸಿದರು. ಹಾಗೆಯೇ ಈ ವೇದಿಕೆಯು ಎಲ್ಲಾ ರೀತಿಯ ಕಾರ್ಯಕ್ರಮ ವಿಚಾರಗಳಿಗೆ ವೇದಿಕೆಯಾಗಲಿದೆ ಎಂದರು. ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗಪ್ಪ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿವರಾಮ ಕಾರಂತರು ಬದುಕಿದ ರೀತಿ ನಡೆದ ದಾರಿ ವಿಭಿನ್ನವಾದದು ಮತ್ತು ಸಾಹಿತ್ಯಾಸಕ್ತರಿಗೆ ಪ್ರೇರಣದಾಯಕರಾಗಿದ್ದಾರೆ. ಅವರ ಜನ್ಮದಿನದಂದೇ ನೂತನ ಸಭಾಂಗಣ ಉದ್ಘಾಟನೆಗೊಂಡಿರುವುದು ಸಂತಸದ ಕ್ಷಣವಾಗಿದೆ ಎಂದರು. ಜಾನಪದ ವಿದ್ವಾಂಸರಾದ ಪ್ರೊ. ಕೆ ಚಿನ್ನಪ್ಪ ಗೌಡ, ವಿಶ್ರಾಂತ ಪ್ರಾಧ್ಯಾಪಕ ಶಿವರಾಮ ಶೆಟ್ಟಿ, ಹಿರಿಯರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ರವೀಂದ್ರ ರೈ ಕಲ್ಲಿಮಾರ್, ವಾಸುದೇವ ಉಚ್ಚಿಲ, ಪ್ರಾಧ್ಯಾಪಕರಾದ ಪ್ರೊ. ಸೋಮಣ್ಣ ಹೊಂಗಳ್ಳಿ ಡಾ| ಪ್ರಕಾಶ್ಚಂದ್ರ ಶಿಶಿಲ, ಇಸ್ಮಾಯಿಲ್, ಮಂಗಳೂರು ವಿವಿ ಇಂಜಿನಿಯರ್ ಸಂತೋಷ್ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕ ಧನಂಜಯ ಕುಂಬ್ಳೆ ವಂದಿಸಿದರು. ಡಾ| ಯಶುಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.