ಬ್ರಹ್ಮಶ್ರೀ ನಾರಾಯಣ ಗುರುಗಳು ಜನಿಸಿದ ಶಿವಗಿರಿಯ ಹೆಸರಿನಲ್ಲಿ, ಮತ್ತವರ ತತ್ವದಂತೆ ಬದುಕಿ ಬಾಳಿದ ಜಯ ಸುವರ್ಣರ ನೆನಪಿನಲ್ಲಿ ನೀಡಿದ ಈ ಸನ್ಮಾನ ನನ್ನ ಬದುಕಿನಲ್ಲಿ ಅಮೂಲ್ಯವಾಗಿದೆ. ಕರ್ನಾಟಕ ಸರಕಾರ, ನಾನು ಹುಟ್ಟಿರುವ ಸಮಾಜ ಹಾಗೂ ನೂರಾರು ಸನ್ಮಾನಗಳನ್ನು ಸ್ವೀಕರಿಸಿಕೊಂಡಿದ್ದೇನೆ. ಆದರೆ ಬಿಲ್ಲವ ಸಮಾಜ ನೀಡಿರುವ ಈ ಸನ್ಮಾನಕ್ಕೆ ನಾನು ಋಣಿಯಾಗಿದ್ದೇನೆ. ಬಿಲ್ಲವ ಸಮಾಜ ಇಂದು ಈ ಮಟ್ಟದಲ್ಲಿ ಬಲಿಷ್ಠವಾಗಲು ಕಾರಣ ಜಯ ಸುವರ್ಣರು ಮತ್ತು ಜನಾರ್ಧನ ಪೂಜಾರಿ ಅವರು ಕಾರಣರಾಗಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನುಡಿದರು. ಅವರು ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬೈ ಬಿಲ್ಲವರು ಆಯೋಜನೆಯಲ್ಲಿ ಸೆಪ್ಟೆಂಬರ್ 7 ರಂದು ಆದಿತ್ಯವಾರ ಜಯಲೀಲಾ ಬ್ಯಾಂಕ್ವೆಟ್ ಹಾಲ್ ಜಯ ಸಿ ಸುವರ್ಣ ಮಾರ್ಗ ಗೋರೆಗಾಂವ್ ಪೂರ್ವ ಇಲ್ಲಿ 171 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯಲ್ಲಿ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕ ರವಿ ಶೆಟ್ಟಿಯವರು ಪ್ರದಾನಿಸಿದ ಜಯ ಸಿ ಸುವರ್ಣ ಜನಸೇವಾ ಪುರಸ್ಕಾರ ‘ಶಿವಗಿರಿ ಸಮ್ಮಾನ್’ ಪ್ರಶಸ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ಜಯ ಸಿ ಸುವರ್ಣರಲ್ಲಿ ಜ್ಞಾನವಿದೆ. ಸಂಘಟನಾ ಶಕ್ತಿ ಇದೆ. ಅಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಶಿವಗಿರಿ ಪ್ರಶಸ್ತಿ ನನ್ನ ಜನ ಸೇವೆಗೆ ಶಕ್ತಿ ತುಂಬಿದೆ. ಕಾಲೇಜು ಜೀವನದಲ್ಲಿ ಜಾತೀಯ ಪರಿಧಿಯನ್ನು ಮೀರಿ ಎಲ್ಲರೂ ಒಗ್ಗಟ್ಟಾಗಿ ಬದುಕಿ ಬಾಳಿದವರು. ಎಲ್ಲರನ್ನೂ ಪ್ರೀತಿಸುವ ಗುಣ ನಮ್ಮಲ್ಲಿ ಬೆಳೆಯಬೇಕು. ನಾನು ಈ ಸಮಾಜಕ್ಕೆ ಏನಾದರೂ ಸೇವೆ ಮಾಡಿದ್ದರೆ ಅದು ಕಟೀಲಮ್ಮನ ಆಶೀರ್ವಾದವೆಂದು ನಂಬಿದವನು. ಜೀವನದಲ್ಲಿ ಒಳ್ಳೆಯ ಸೇವೆ ಮಾಡಿದಾಗ ಅದಕ್ಕೆ ಕಲ್ಲು ಎಸೆಯುವರು ಇರುತ್ತಾರೆ. ಕಲ್ಲಿನ ಪೆಟ್ಟು ತಿಂದು ಗಟ್ಟಿಯಾಗಿದ್ದಾಗ ನಾವು ಯಾವುದೇ ಕಲ್ಲಿನ ಪೆಟ್ಟುಗಳನ್ನು ಎದುರಿಸುವ ಶಕ್ತಿವಂತನಾಗುತ್ತೇವೆ. ನಮ್ಮಲ್ಲಿ ಆತ್ಮ ಶೈರ್ಯ ಮತ್ತು ದೇವರಿಗೆ ಸಮಾನವವಾಗಿ ನಡೆಯಬೇಕು. ಯಾರಿಗೂ ಅನ್ಯಾಯ ಮಾಡಬಾರದು. ಎಲ್ಲರನ್ನೂ ಪ್ರೀತಿಸುವ ಹಸಿವಿರಬೇಕು. ಬದುಕಿನಲ್ಲಿ ದ್ವೇಷ ಮಾಡಬಾರದು. ಎಷ್ಟು ಒಳ್ಳೆಯ ಸೇವೆ ಮಾಡಿದರೂ ಟೀಕೆಗಳಿರುತ್ತದೆ. ಅದನ್ನು ಎದುರಿಸುವ ಶಕ್ತಿ ನಮ್ಮಲ್ಲಿರಬೇಕು. ನಾನು ಬೇಡಿ ತಂದದ್ದನ್ನು ಸಮಾಜಕ್ಕೆ ನೀಡಿದ್ದೇನೆ. ಬಂಟ ಸಮಾಜದಲ್ಲಿ ಕೂಡ 75 ರಷ್ಟು ಬಡತನದ ಕುಟುಂಬಗಳಿವೆ. ಬೇಡಿದ್ದನ್ನು ಸಮಾಜಕ್ಕೆ ನೀಡುತ್ತಿದ್ದೇನೆ. ಯಾವುದೇ ಸಮಾಜದವರು ಕೂಡಾ ಜಾಗತಿಕ ಬಂಟರ ಸಂಘಕ್ಕೆ ನೆರವಿಗಾಗಿ ಮನವಿ ನೀಡಿದರೆ ಸಹಕಾರವನ್ನು ನೀಡುತ್ತಾ ಬಂದವನು. ಪ್ರತಿ ಸಂಘ ಸಂಸ್ಥೆಗಳು ಸಮಾಜದ ಬಂಧುಗಳಿಗೆ ಆಶ್ರಯ ನೀಡುವ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಜಯ ಸುವರ್ಣರಂತಹ ಸಮಾಜ ಸೇವಕರ ಜಾಗಕ್ಕೆ ಯಾರಿಂದಲೂ ಬರಲು ಅಸಾಧ್ಯ. ಬಿಲ್ಲವ ಸಮಾಜದ ಭಾರತ್ ಬ್ಯಾಂಕ್ ನಮ್ಮ ಮನೆ ಬ್ಯಾಂಕ್ ಆಗಿದೆ. ಅಲ್ಲಿಯ ಸೇವೆಗಳು ಎಲ್ಲಾ ಗ್ರಾಹಕರನ್ನು ಸಂತೃಪ್ತಿಗೊಳಿಸಿದೆ ಎಂದು ಐಕಳ ಹರೀಶ್ ಶೆಟ್ಟಿ ನುಡಿದರು.ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಏಶಿಯಾಟಿಕ್ ಕ್ರೇನ್ಸ್ ಪ್ರೈ. ಲಿ ನ ಆಡಳಿತ ನಿರ್ದೇಶಕ ಗಣೇಶ್ ಆರ್. ಪೂಜಾರಿ, ದಿವ್ಯಾ ಶಿಪ್ಪಿಂಗ್ ಫಾರ್ವರ್ಡಿಂಗ್ ಕಂ. ಪ್ರೈ. ಲಿ ನ ಆಡಳಿತ ನಿರ್ದೇಶಕ ವೇದಪ್ರಕಾಶ್ ಶ್ರೀಯಾನ್, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್, ಭಾರತ್ ಬ್ಯಾಂಕ್ ಎಂ.ಡಿ ಮತ್ತು ಸಿಇಓ ವಿದ್ಯಾನಂದ್ ಎಸ್. ಕರ್ಕೆರ, ಹೋಟೆಲ್ ಪಂಚಮಿ ಪುಣೆಯ ಪುರಂದರ ಪೂಜಾರಿ, ಮುಂಬಯಿ ಹೆಗ್ಗಡೆ ಸಂಘದ ಅಧ್ಯಕ್ಷ ಮನೋಜ್ ಹೆಗ್ಡೆ, ಕನ್ನಡ ಸಂಘ ಸಯನ್ ನ ಸ್ಥಾಪಕ ಸದಸ್ಯ ಹ್ಯಾರಿ ಸಿಕ್ವೇರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ವರದಿ : ದಿನೇಶ್ ಕುಲಾಲ್