ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಸತತ ೧೨ನೇ ಬಾರಿಗೆ ರಾಜ್ಯಮಟ್ಟದ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ ‘ಜಿ ಎಮ್ ಕ್ವಿಜ್ ಫೆಸ್ಟ್’ ನ್ನು ಆಯೋಜಿಸಲಾಗಿತ್ತು. ತ್ರಾಸಿ ಡಾನ್ ಬಾಸ್ಕೋ ಸ್ಕೂಲಿನ ಪ್ರಾಂಶುಪಾಲರಾದ ಫಾ. ಮ್ಯಾಕ್ಸಿಮ್ ಡಿಸೋಜಾ ‘ಜಿ ಎಮ್ ಕ್ವಿಜ್ ಫೆಸ್ಟ್’ ಉದ್ಘಾಟಿಸಿ ಮಾತನಾಡಿ ಗೆಲ್ಲುವುದಕ್ಕಿಂತ ಜ್ಞಾನ ಸಂಪಾದನೆ ಮುಖ್ಯವಾದದ್ದು, ಸಾಕಷ್ಟು ಸ್ಪರ್ಧಾ ಸಿದ್ಧತೆಗಳಿದ್ದರೂ ಕೆಲವೊಮ್ಮೆ ಸ್ಪರ್ಧಿಗಳು ಅತೀ ಸರಳವಾದ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ವಿಫಲರಾಗುತ್ತಾರೆ. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಕ್ರಿಯಾತ್ಮಕ ಕಲಿಕೆಗೆ ಉತ್ತೇಜನ ನೀಡುತ್ತದೆ. ಜಿ ಎಮ್ ಕಲಿಕೆಗೆ ಉತ್ತಮ ಸ್ಥಳವಾಗಿದ್ದು ಪ್ರತೀ ವರ್ಷವೂ ವಿದ್ಯಾರ್ಥಿಗಳಿಗಾಗಿ ಹೊಸ ಹೊಸ ಕಲಿಕಾ ಯೋಜನೆಗಳನ್ನು ಕೈಗೊಳ್ಳುತ್ತಿದೆ ಎಂದರು. ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಡಿಡಿಪಿಐ ಲೋಕೇಶ್ ಸಿ ಅವರು ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಿ, ರಸಪ್ರಶ್ನೆಯು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನವನ್ನು ಅಭಿವೃದ್ಧಿಪಡಿಸುತ್ತದೆ. ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳ ಜೊತೆ ಸ್ಪರ್ಧೆ ನಡೆಸುವುದರಿಂದ ಆಯಾ ಜಿಲ್ಲೆಗಳ ವಿದ್ಯಾರ್ಥಿಗಳ ಜ್ಞಾನ ಮಟ್ಟವನ್ನು ಅಳೆಯಲು ಸಹಕಾರಿಯಾಗುತ್ತದೆ.

ಸ್ಪರ್ಧೆಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಅತೀ ಮಖ್ಯವೆಂದರು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೂ ಪ್ರಮಾಣಪತ್ರವನ್ನು ವಿತರಿಸಿದರು. ಶಾಲಾ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ರಾಜ್ಯದ ವಿವಿಧ ಶಾಲೆಗಳಿಂದ ಆಗಮಿಸಿದ ಎಲ್ಲಾ ಸ್ಪರ್ಧಿಗಳಿಗೆ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಗ್ರೇ ಕ್ಯಾಪ್ಸ್ ಕು. ರಶ್ಮಿ ಫುರ್ಟಾಡೋ ರಸ ಪ್ರಶ್ನೆ ಸ್ಪರ್ಧೆಯನ್ನು ಅತ್ಯಂತ ಆಕರ್ಷಕವಾಗಿ ನಿರ್ವಹಿಸಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಉಡುಪಿ, ಮಂಗಳೂರು, ಶಿವಮೊಗ್ಗ ಜಿಲ್ಲೆಯ ಸುಮಾರು ೨೫ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕರ ವಿಭಾಗದಲ್ಲಿ ಸೈಲಾಸ್ ಇಂಟರ್ ನ್ಯಾಷನಲ್ ಸ್ಕೂಲ್ ಉಡುಪಿ ಪ್ರಥಮ, ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ ದ್ವಿತೀಯ ಹಾಗೂ ವಿದ್ಯಾರ್ಥಿಗಳ ವಿಭಾಗದಲ್ಲಿ ಮಾಧವ ಕೃಪಾ ಸ್ಕೂಲ್, ಮಣಿಪಾಲ್ ಪ್ರಥಮ, ಲೂರ್ಡ್ ಸೆಂಟ್ರಲ್ ಸ್ಕೂಲ್, ಬಿಜೈ ಮಂಗಳೂರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್, ಜಿ ಎಮ್ ಗ್ಲೋಬಲ್ ಸ್ಕೂಲ್ ನ ಆಡಳಿತ ನಿರ್ದೇಶಕ ಪ್ರಣವ್ ಶೆಟ್ಟಿ, ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಅನೂಷಾ ಸುಬ್ರಹ್ಮಣ್ಯಂ, ಶ್ರೀಮಾ ಪ್ರಣವ್ ಶೆಟ್ಟಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.