ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್ 13ರಂದು ಕ್ರಿಯೇಟಿವ್ ಪುಸ್ತಕ ಧಾರೆ – 2025 ಮುಂಗಾರಿನ ಹನಿಗಳ ಜೊತೆಗೆ ಪುಟಗಳ ಪಯಣ… ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಪುಸ್ತಕಮನೆ ಪ್ರಕಾಶನದ ವತಿಯಿಂದ 22 ಕೃತಿಗಳ ಅನಾವರಣ ಕಾರ್ಯಕ್ರಮ ನಡೆಯಿತು. ಉದ್ಘಾಟಕರಾಗಿ ಆಗಮಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಪುಸ್ತಕವೆಂದರೆ ಕೇವಲ ಅಕ್ಷರಗಳ ಸಂಗ್ರಹವಲ್ಲ. ಅದು ಕಾಲ, ಸಮಾಜ ಮತ್ತು ಮಾನವನ ಭಾವನೆಗಳ ಪ್ರತಿಬಿಂಬ. ಇಂತಹ ಕಾರ್ಯಕ್ರಮಗಳು ಓದುವ ಅಭ್ಯಾಸವನ್ನು ಪುನರುಜ್ಜೀವನಗೊಳಿಸುತ್ತವೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ಸಾಹಿತಿಗಳು ಹಾಗೂ ಚಿತ್ರ ನಿರ್ದೇಶಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ರವರು ಪುಸ್ತಕವೆಂದರೆ ಕೇವಲ ಹಾಳೆಗಳ ಗುಚ್ಛವಲ್ಲ. ಅದು ಕಾಲದ ಸ್ಮರಣೆ, ಸಮಾಜದ ಕನ್ನಡಿ ಮತ್ತು ಮನಸ್ಸಿನ ಆಳದಿಂದ ಹೊರ ಹೊಮ್ಮುವ ಭಾವಧಾರೆ ಮತ್ತು ಮಾನವನ ಮನಸ್ಸಿನ ನಕ್ಷೆಯೇ ಆಗಿದೆ ಎಂದರು. ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು ಸ್ವಾಗತಗೈಯುತ್ತಾ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಲೇಖಕರು ತಮ್ಮ ವಿಚಾರಧಾರೆಯ ನದಿಗಳನ್ನು ಕೃತಿಗಳಲ್ಲಿ ಹರಿಸಿದ್ದಾರೆ. ಓದುಗರು ಅದರ ತೀರದಲ್ಲಿ ನಿಂತು ಚಿಂತನೆಗಳ ನೀರನ್ನು ಕುಡಿಯುವಂತಿದೆ.

ಇಂತಹ ಸಾಹಿತ್ಯವು ಕಾಲವನ್ನು ಮೀರಿ ನೆನಪಿನ ಮಡಿಲಿನಲ್ಲಿ ಉಳಿಯುತ್ತವೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಸಾಹಿತಿಗಳು ಮತ್ತು ಅಧ್ಯಕ್ಷರು, ಕ.ಸಾ.ಪ ಕಾರ್ಕಳ ತಾಲೂಕು ಇವರು ಮಾತನಾಡಿ ಇಂದಿನ ಯಾಂತ್ರಿಕ ಜೀವನದಲ್ಲಿ ಓದಿನ ಮಹತ್ವವನ್ನು ಮರೆಯುತ್ತಿರುವಾಗ, ಇಂತಹ ಪುಸ್ತಕ ಬಿಡುಗಡೆಗಳು ಸಾಹಿತ್ಯ ಪ್ರೇಮಿಗಳಿಗೆ ಹೊಸ ಚೈತನ್ಯ ತುಂಬುತ್ತವೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಡಾ. ಪ್ರದೀಪ ಕುಮಾರ ಹೆಬ್ರಿ, ಮಹಾಕಾವ್ಯಗಳ ಲೇಖಕರು, ಮಂಡ್ಯ ಇವರು ಮಾತನಾಡುತ್ತಾ ಪುಸ್ತಕದ ಜೀವನ ಅದರ ಓದುಗರ ಕೈಯಲ್ಲಿ ಪ್ರಾರಂಭವಾಗುತ್ತದೆ. ಉಳಿಸಿ ಬೆಳೆಸಬೇಕಾದದ್ದು ಸಹೃದಯರ ಕರ್ತವ್ಯ ಎಂದು ಹೇಳಿದರು. ಕಥೆಗಳ ಮೂಲಕ ಸಭಾಸದರ ಗಮನ ಸೆಳೆದರು. ಸಭಾಧ್ಯಕ್ಷತೆಯನ್ನು ವಹಿಸಿದ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿಸಾಹಿತ್ಯವು ಜನರ ಬದುಕಿಗೆ ಕನ್ನಡಿಯಂತೆ. ಓದುಗರು ಪುಸ್ತಕದಿಂದ ಕಥೆಗಳನ್ನು ಮಾತ್ರವಲ್ಲ, ಬದುಕಿನ ಮೌಲ್ಯಗಳನ್ನು, ಸಂಬಂಧಗಳ ಅರ್ಥವನ್ನು, ಮನುಷ್ಯತ್ವದ ಸಾರವನ್ನು ಪಡೆದುಕೊಳ್ಳುತ್ತಾರೆ ಎಂದರು. ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಡಾ. ನಾಗತಿಹಳ್ಳಿ, ಡಾ.ಕೆ.ಚಿನ್ನಪ್ಪ ಗೌಡ ಹಾಗೂ 22 ಕೃತಿಗಳ ಕರ್ತೃಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಅನಾವರಣಗೊಂಡಿರುವ ಕೃತಿಗಳು
ಯಾತ್ರೆ – ಚಂದ್ರಕಾಂತ ಪೋಕಳೆ
ವಿಜ್ಞಾನ ಕೌತುಕಗಳ ಮಹಾಯಾನ – ಎಲ್. ಪಿ ಕುಲಕರ್ಣಿ
ಹರ್ಷ ರಾಗ – ಪೌಝಿಯಾ ಸಲೀಂ
ಹಿತಶತ್ರು – ಪದ್ಮಲತಾ ಮೋಹನ್
ಪುಟ್ಟ ದೇವರ ಕಣ್ಣೀರು – ಸದಾಶಿವ ಸೊರಟೂರು
ಬದುಕು ಮಾಯೆಯ ಮಾಟ – ಕುಮಾರಸ್ವಾಮಿ ತೆಕ್ಕುಂಜ
ಕಾವ್ಯ ಧ್ಯಾನ – ನಾಗೇಶ್ ಜೆ. ನಾಯಕ
ನಿನಗೆ ನೀನೇ ಬೆಳಕು – ಪ್ರಜ್ವಲಾ ಶೆಣೈ
ನಿನ್ನ ಇಚ್ಛೆಯಂತೆ ನಡೆವೆ – ಮನು ಗುರುಸ್ವಾಮಿ
ಕಣ್ಣ ಬಾಗಿಲಿಗೆ ಬಂದ ನೀರು – ಸಂತೆಬೆನ್ನೂರು ಫೈಜ್ನಟರಾಜ್
ಸ್ವಾತಿ ಬೊಂಬಾಟ್ – ಎಂ.ಮನೋಹರ ಪೈ
ಗ್ಯಾಂಗ್ ಸ್ಟರ್ ಮತ್ತು ಅವಳು – ಮಂಜುನಾಥ್ ಕುಂಬಾರ್
ಇದೊಳ್ಳೆ ವರಸೆ – ಸಂದೇಶ್ ಎಚ್. ನಾಯ್ಕ್
ಮಾಂಡವ್ಯ ದೀಪ – ಡಾ. ಪ್ರದೀಪ ಕುಮಾರ ಹೆಬ್ರಿ
ಬೆಳ್ದೀಪ – ಡಾ. ಪ್ರದೀಪ ಕುಮಾರ ಹೆಬ್ರಿ
ನಿಲುಕದ ನಕ್ಷತ್ರ – ಡಾ. ಸುಮತಿ ಪಿ.
ಸಿಹಿಜೀವಿ ಕಂಡ ಅಂಡಮಾನ್ – ಸಿಹಿಜೀವಿ ಸಿ.ಜಿ ವೆಂಕಟೇಶ್ವರ
ಅನುಭವ ದೀಪ್ತಿ – ಶುಭಲಕ್ಷ್ಮಿ ಆರ್. ನಾಯಕ್
ಈ ಪಯಣದಲ್ಲಿ – ಶ್ಯಾಮಲಾ ಗೋಪಿನಾಥ್
ಸಂಗೀತ ಶರಧಿ – ರಾಜೇಂದ್ರ ಭಟ್. ಕೆ.
ಅಸಂಗತ – ಅಕ್ಷತಾ ರಾಜ್ ಪೆರ್ಲ
ವಿಜ್ಞಾನ ವಿಶಾರದರು – ಎಲ್.ಪಿ ಕುಲಕರ್ಣಿ
ಸಂವಾದ ಕಾರ್ಯಕ್ರಮ
ಅಪರಾಹ್ನ 2. 30 ರಿಂದ ನಾಗತಿಹಳ್ಳಿ ಚಂದ್ರಶೇಖರ ಅವರ ಚಲನಚಿತ್ರಗಳಲ್ಲಿ ಬಳಸಿರುವ ಭಾವಗೀತೆಗಳ ಗಾಯನದ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಿತು. ಖ್ಯಾತ ನಿರೂಪಕರಾದ ಅವಿನಾಶ್ ಕಾಮತ್ ರವರು ಸಂವಾದ ಕಾರ್ಯಕ್ರಮ ನಿರ್ವಹಿಸಿಕೊಟ್ಟರು. ಜೀ ಸರಿಗಮಪ ಮತ್ತು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಖ್ಯಾತಿಯ ಶ್ರೀ ಯಶವಂತ್ ಎಂ.ಜಿ ಇವರಿಂದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಸಹ ಸಂಸ್ಥಾಪಕರಾದ ಅಮೃತ್ ರೈ, ಗಣನಾಥ ಶೆಟ್ಟಿ ಬಿ, ಗಣಪತಿ ಭಟ್ ಕೆ.ಎಸ್, ವಿಮಲ್ ರಾಜ್.ಜಿ, ಆದರ್ಶ ಎಂ.ಕೆ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ – ಉಪನ್ಯಾಸಕೇತರ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಲೋಹಿತ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.