ಕಳೆದ ವರ್ಷ ಬಿಡುಗಡೆಯಾಗಿ ಸಂಚಲನ ಮೂಡಿಸಿದ್ದ ‘ಧರ್ಮ ದೈವ’ ಚಿತ್ರದ ಸಂಪುಲ್ಲ ಜಾಗೆಡ್ ಹಾಡು ಹೊಸ ದಾಖಲೆಯನ್ನೇ ಬರೆದಿತ್ತು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹಾಡಿದ ಈ ಹಾಡಿಗೆ ಕೆ.ಕೆ ಪೇಜಾವರ ಸಾಹಿತ್ಯ ಬರೆದಿದ್ದು, ನಿಶಾನ್ ರೈ ಸಂಗೀತ ನೀಡಿದ್ದರು. ಈ ಹಾಡು ಅದೆಷ್ಟು ಜನಪ್ರಿಯತೆ ಪಡೆದಿತ್ತು ಎಂದರೆ ಕೋಸ್ಟಲ್ ಫಿಲಂ ಅವಾರ್ಡ್ ನಲ್ಲಿ ಉತ್ತಮ ಗಾಯಕ, ಸಂಗೀತ ಮತ್ತು ಸಾಹಿತ್ಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದ ಧರ್ಮ ದೈವ ಚಿತ್ರದ ಸಂಪುಲ್ಲ ಜಾಗೆಡ್ ಹಾಡು ಇತಿಹಾಸವಾದರೆ ಇದೀಗ ಅವರದೇ ನಿರ್ದೇಶನದ ಎರಡನೇ ತುಳು ಚಿತ್ರ ‘ಧರ್ಮ ಚಾವಡಿ’ಗೆ ಪಟ್ಲ ಸತೀಶ್ ಶೆಟ್ಟಿ ಹಾಡಿರುವ ಹಾಡಿನ ಬಿಡುಗಡೆಗೆ ತುಳುನಾಡೇ ಕಾತುರತೆಯಿಂದ ಕಾಯುತ್ತಿದೆ. ಈ ಹಾಡಿಗೆ ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿದ್ದು, ಸಾಹಿತ್ಯ ಕೆ.ಕೆ ಪೇಜಾವರ ಬರೆದಿದ್ದಾರೆ. ಈ ಹಾಡು ಜುಲೈ 1ರಂದು ಸಂಜೆ 6ಗಂಟೆಗೆ ಎಂ.ಆರ್.ಟಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

‘ಧರ್ಮ ಚಾವಡಿ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಆ ಹಾಡಿನ ಸಾಹಿತ್ಯ ಸಂಗೀತಾ ಗಾಯನ ಇದೀಗ ಎಲ್ಲರ ಗಮನ ಸೆಳೆದು ಟ್ರೆಂಡ್ ಆಗುತ್ತಿದೆ. ಕೇರಳ ಮತ್ತು ತುಳುನಾಡಿನ ಪ್ರಕೃತಿ ಸೌಂದರ್ಯ ಈ ಹಾಡಿನಲ್ಲಿದ್ದು, ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಈ ಹಾಡು ಟ್ರೆಂಡ್ ಆಗುತ್ತಿದೆ. ಧರ್ಮ ಚಾವಡಿ ತುಳು ಚಿತ್ರ ಇದೆ ಜುಲೈ 11 ರಂದು ಬಿಡುಗಡೆಗೊಳ್ಳಲಿದೆ. ನಡುಬೈಲು ಜಗದೀಶ್ ಅಮೀನ್ ಚಿತ್ರವನ್ನು ನಿರ್ಮಿಸಿದ್ದು, ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ರವಿ ಸ್ನೇಹಿತ್, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ಸುರೇಶ್ ರೈ, ಸುಂದರ್ ರೈ ಮಂದಾರ, ಬಾಬಾ ಪ್ರಸಾದ್ ಅರಸ, ದಯಾನಂದ ರೈ ಬೆಟ್ಟಂಪಾಡಿ, ರಕ್ಷಣ್ ಶೆಟ್ಟಿ ಮಾಡೂರು, ಪ್ರಕಾಶ್ ಶೆಟ್ಟಿ ಧರ್ಮನಗರ, ಧನ್ಯ ಪೂಜಾರಿ, ಸವಿತಾ ಅಂಚನ್, ರೂಪ ಡಿ ಶೆಟ್ಟಿ, ನೇಹಾ ಕೋಟ್ಯಾನ್, ಮನೀಶ್ ಶೆಟ್ಟಿ, ಧನರಾಜ್ ಭಂಡಾರಿ ಸೇರಿದಂತೆ ಅನೇಕ ಹಿರಿಯ ಕಿರಿಯ ಕಲಾವಿದರು ನಟಿಸಿದ್ದಾರೆ.