ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.) ಪ್ರತಿ ವರ್ಷ ಆಯೋಜಿಸುತ್ತಿರುವ ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ ಪ್ರಯುಕ್ತ ಈ ಸಲ ಹಮ್ಮಿಕೊಂಡಿರುವ “ಕುಂದಾಪ್ರ ಕನ್ನಡ ಹಬ್ಬ-2025” ಜುಲೈ 26, 27ರಂದು ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್ನ ನಂದಿ ಲಿಂಕ್ ಗ್ರೌಂಡ್ನಲ್ಲಿ ನಡೆಯಲಿದೆ. ಈ ಸಲದ ಕಾರ್ಯಕ್ರಮದ ವಿವರ ನೀಡುವ ಸಲುವಾಗಿ ಮಾಗಡಿ ರಸ್ತೆ ಕೊಟ್ಟಿಗೆಪಾಳ್ಯದ ‘ಸುದೀಕ್ಷಾ ಕನ್ವೆನ್ಷನ್ ಸೆಂಟರ್’ನಲ್ಲಿ ಆಯೋಜಿಸಿದ್ದ ‘ವಾಲ್ಗ’ ಸಮಾರಂಭದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ| ದೀಪಕ್ ಶೆಟ್ಟಿ ಮಾಹಿತಿ ನೀಡಿದರು.

ಎಂದಿನಂತೆ ಈ ಸಲ ಕುಂದಾಪ್ರ ಕನ್ನಡ ಹಬ್ಬವನ್ನು ಹಲವು ವಿಶೇಷತೆಗಳೊಂದಿಗೆ ಆಚರಿಸಲಿದ್ದು, ಪ್ರತಿ ಸಲದಂತೆ ಭಾರಿ ಸಂಖ್ಯೆಯಲ್ಲಿ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಅದರಲ್ಲೂ ಈ ಬಾರಿ 5 ಸಾವಿರ ಜನಕ್ಕೆ ಆಸನ ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳ ಈ ಸಂಭ್ರಮದಲ್ಲಿ ದಿನವಿಡೀ ಕಾರ್ಯಕ್ರಮಗಳಿದ್ದು, ಮತ್ತೊಂದು ಅದ್ಧೂರಿಗೆ ಈ ಸಮಾರಂಭ ಸಾಕ್ಷಿಯಾಗಲಿದೆ. ಎರಡೂ ದಿನ ಕುಂದಾಪುರ ಮೂಲದ ಒಬ್ಬೊಬ್ಬರು ಅತಿಗಣ್ಯ ಸಾಧಕರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಆ ಕುರಿತ ವಿವರ, ಮುಖ್ಯ ಅತಿಥಿಗಳ ಮಾಹಿತಿ ಸದ್ಯದಲ್ಲೇ ನೀಡಲಾಗುವುದು ಎಂದು ಅವರು ತಿಳಿಸಿದರು. ವೇದಿಕೆಯಲ್ಲಿನ ವಿವಿಧ ಕಾರ್ಯಕ್ರಮಗಳಲ್ಲದೆ ಹೊರಾಂಗಣದಲ್ಲಿ ಹುಲಿವೇಷ, ಕೊರಗರ ಡೋಲು ವಾದನ, ಬಿಳಿ ಪಟಾಕಿ, ನವರಾತ್ರಿ ವೇಷ, ಹಗ್ಗಜಗ್ಗಾಟ ಮತ್ತು ವಿವಿಧ ಕ್ರೀಡೆಗಳಲ್ಲದೆ, ಕುಂದಾಪುರದ ಬಹುತೇಕ ಎಲ್ಲ ವಸ್ತುಗಳು ಸಿಗುವ ಕುಂದಾಪ್ರ ಸಂತೆ ಕೂಡ ಇರಲಿದೆ ಎಂದು ಅವರು ತಿಳಿಸಿದರು.
ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ ಗಿಳಿಯಾರು, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಉದ್ಯಮಿ ಶಿವರಾಮ ಹೆಗ್ಡೆ, ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಜಿ.ಕೆ ಶೆಟ್ಟಿ, ಕುಂದಾಪ್ರ ಕನ್ನಡ ಹಬ್ಬದ ರೂವಾರಿಗಳಾದ ಉದಯಕುಮಾರ್ ಶೆಟ್ಟಿ ಪಡುಕರೆ, ವಸಂತ ಗಿಳಿಯಾರ್, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ, ಶಿವಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.