ಜೀವನವೆಂಬದು ವಿಚಿತ್ರ ಪಯಣ. ಕೆಲವರಿಗೆ ಯೋಗ್ಯತೆ ಇದ್ದರೂ ಯೋಗ ಇರೋಲ್ಲ. ಇನ್ನು ಕೆಲವರಿಗೆ ಯೋಗ್ಯತೆ ಇರುತ್ತದೆ. ಆದರೂ ಯೋಗ ಇರೋಲ್ಲ. ಅದಕ್ಕೆ ಹೇಳುವುದು. “ಎಲ್ಲದಕ್ಕೂ ಯೋಗ ಬೇಕು ಕಣೋ…..” ಅಂತ. ಯಾರೋ ಒಬ್ಬನಿಗೆ ಕೋಟಿ ರೂಪಾಯಿ ಲಾಟ್ರಿ ಹೊಡೆಯುತ್ತೆ. ಅಬ್ಬಾ…. ಅವನಿಗೆ ಏನು ಅದೃಷ್ಟವೋ ? ಯಾವುದೇ ಶ್ರಮ ಪಡದೇ ಕೋಟಿ ರೂಪಾಯಿ ಬಂತು. ನಾವು ಎಷ್ಟು ಶ್ರಮ ಪಟ್ಟರೂ ಲಕ್ಷ ರೂಪಾಯಿ ದುಡಿಯಲು ಆಗೋಲ್ಲ ಅಂತಹ ಬೇಸರ ಪಡುತ್ತೀವಿ. ಅದೇ ಕೋಟಿ ರೂಪಾಯಿ ಲಾಟ್ರಿ ಹೊಡೆದವನು ಶ್ರಮ ಪಡದೇ ಬಂದ ಆ ಕೋಟಿ ರೂಪಾಯಿಯನ್ನು ಉಳಿಸಿಕೊಳ್ಳಲಾಗದೇ ಎರಡೇ ವರ್ಷಗಳಲ್ಲಿ ಎಲ್ಲಾ ಕಳೆದು ಕೊಂಡು ದಿಪ್ಪಡ್ ದಿವಾಳಿಯಾಗಿ ರಸ್ತೆಗೆ ಬಿದ್ದಾಗ ಅದೇ ಜನ ಏನು ಹೇಳ್ತಾರೆ ಗೊತ್ತಾ? “ಆ ಬಡ್ಡಿ ಮಗ ಬಂದ ಯೋಗವನ್ನು ಕ್ಷೇಮವಾಗಿ ಇಟ್ಟು ಕೊಳ್ಳಲು ಯೋಗ್ಯತೆ ಇಲ್ಲದವನು. ಕೋಟಿ ಬಂತು ಅಂತ ಮಾಡುತ್ತಿದ್ದ ಕೆಲಸ ಬಿಟ್ಟು ಬಿಟ್ಟ. ತನ್ನ ಅದೃಷ್ಟ ಚೆನ್ನಾಗಿದೆ ಅಂತ ಅಂದುಕೊಂಡ. ಇವನ ಕಾಸಿನ ಹಿಂದೆ ಬಿದ್ದ ಗೆಳೆಯರನ್ನು ಕಟ್ಟಿಕೊಂಡ. ಮಜಾ, ಜೂಜು, ಮದಿರೆ, ಮಾನಿನಿಯರ ಸಹವಾಸದ ದುರಭ್ಯಾಸ ಬೆಳೆಸಿಕೊಂಡ. ಈಗ ಫುಟ್ ಪಾತ್ ಗೆ ಬಂದಿದ್ದಾನೆ ನೋಡು” ಅಂತ ಹೇಳ್ತಾರೆ. ಅಲ್ಲವಾ? ಅದೃಷ್ಟದ ಕುದುರೆ ಸಿಕ್ಕರೂ ಅದನ್ನೇರಿ ಓಡಿಸುವ ಯೋಗ್ಯತೆ ಬೇಕಲ್ಲವಾ? ಇಲ್ಲದಿದ್ದರೆ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ ಆಗುತ್ತದೆ ಅಲ್ಲವಾ ?

ನಮ್ಮ ಜೀವನದಲ್ಲಿ ಕೆಲವು ಸತ್ಯಗಳು ತಲೆಬುಡವಿಲ್ಲದಂತೆ ಕಂಡರೂ, ಅವುಗಳ ಹಿಂದೆ ಅಡಗಿರುವ ತರ್ಕವನ್ನು ಕಂಡುಕೊಳ್ಳಲು ಹೊರಟರೆ, ಹಾಸ್ಯವೇ ಹೆಚ್ಚು! ನಿಮಗೆ ಗೊತ್ತಾ? ಈ ಶ್ರಮ, ಅದೃಷ್ಟ, ಯೋಗ, ಕ್ಷೇಮ ಮತ್ತು ಯೋಗ್ಯತೆ ಈ ಐವರು ನಮ್ಮ ಜೀವನದ ವಿಚಿತ್ರ ಆಟದ ಪ್ರಮುಖ ಆಟಗಾರರು. ಕೊನೆಯಲ್ಲಿ ಬರುವ ಯೋಗ್ಯತೆಯೇ ಇವರ ಟೀಮ್ ಲೀಡರ್. ಇವರು ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ಅಥವಾ ಕೆಲವೊಮ್ಮೆ ಜಗಳವಾಡುವ ನೆರೆಹೊರೆಯವರಂತೆ ವರ್ತಿಸುತ್ತಾರೆ. ಇವರನ್ನೆಲ್ಲ ನಿಭಾಯಿಸಿ ತೀರ್ಪು ಕೊಡುವವನು ಒಬ್ಬ ಇರುತ್ತಾನೆ. ಆತನೇ ವಿಧಿ ಎಂಬ ಅಂಪೈರ್ ಅಥವಾ ರೆಫ್ರೀ. ನೋಡಿ, ಕೆಲವರಿಗೆ ವಿದ್ಯೆ ಇರುತ್ತದೆ, ಬುದ್ಧಿ ಇರುತ್ತದೆ, ಶ್ರಮ ಪಡುವ ಕಲೆಯೂ ಇರುತ್ತದೆ. ಆದರೆ ಅವರಿಗೆ ಅವಕಾಶ ಸಿಗುವುದಿಲ್ಲ. ಅವರ ಸ್ಥಿತಿ ಹೇಗಿದೆಯೆಂದರೆ, “ನಾನು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಾಗಿದ್ದೆ. ಆದರೆ ಸ್ಪರ್ಧೆಯ ದಿನವೇ ನನಗೆ ನೆಗಡಿ ಬಂದು ಸ್ಪರ್ಧೆಗೆ ಗೈರು ಹಾಜರಾದೆ” ಎಂದಂತಿದೆ. ಇನ್ನು ಕೆಲವರಿಗೆ ಯೋಗ ಕೂಡಿ ಬರುತ್ತದೆ. ಅಂದರೆ, ಸಡನ್ ಆಗಿ ಅವಕಾಶ ಬಾಗಿಲು ತಟ್ಟುತ್ತದೆ. ಆದರೆ ಅದನ್ನು ಉಳಿಸಿಕೊಳ್ಳುವ ಯೋಗ್ಯತೆ ಇರುವುದಿಲ್ಲ. ಇವರು “ಲಾಟರಿ ಹೊಡೆದಿದೆ, ಆದರೆ ಟಿಕೆಟ್ ಎಲ್ಲಿಟ್ಟಿದ್ದೀನಿ ಅಂತ ನೆನಪಿಲ್ಲ” ಎಂಬ ಸ್ಥಿತಿಗೆ ತಲುಪುತ್ತಾರೆ. ಕೆಲವರಿಗೆ ಅದೃಷ್ಟವೋ ಅದೃಷ್ಟ! ಯಾವುದೇ ಶ್ರಮ ಇಲ್ಲದೆ, ಅವರ ಮನೆಗೆ ಲಕ್ಷ್ಮಿ ತಾನಾಗಿಯೇ ಬಂದು ಬಾಗಿಲು ತಟ್ಟುತ್ತಾಳೆ. ಇವರು ಬೆಳಿಗ್ಗೆ ಎದ್ದು ಪೇಪರ್ ಓದುತ್ತಿರುವಾಗ, ಆಕಸ್ಮಿಕವಾಗಿ ಹಳೆಯ ಚಿನ್ನದ ನಾಣ್ಯಗಳ ಚೀಲ ಸಿಕ್ಕಂತೆ. ಆದರೆ ಈ ಅದೃಷ್ಟವನ್ನು “ಕ್ಷೇಮ”ವಾಗಿ ಇಟ್ಟುಕೊಳ್ಳುವ ಯೋಗ್ಯತೆ ಇರುವುದಿಲ್ಲ. ಅಂದರೆ, ದುಡ್ಡು ಬಂದಷ್ಟೇ ವೇಗವಾಗಿ ನೀರಿನಂತೆ ಖರ್ಚು ಮಾಡುತ್ತಾರೆ. ಇವರು, “ನನ್ನ ಹತ್ರ ದುಡ್ಡಿದೆ ಅಂತ ಗೊತ್ತಿದ್ರೆ, ನನ್ನ ಫ್ರೆಂಡ್ಸ್ ಗಳೆಲ್ಲಾ ಸುಮ್ನೆ ಬಿಡ್ತಾರಾ?” ಎಂದು ಹೇಳುವ ಬಗೆಯವರು.ಹಾಗಿದ್ದರೆ, ಶ್ರಮ ಪಟ್ಟರೆ ಸಾಲದೇ? ಎಷ್ಟೋ ಜನ ಕಷ್ಟಪಟ್ಟು ದುಡಿದು, ಬೆವರು ಸುರಿಸಿ, ರಾತ್ರಿ ಹಗಲು ಎನ್ನದೇ ದುಡಿಯುತ್ತಾರೆ. ಆದರೆ ಅವರ ಅದೃಷ್ಟ ಮಾತ್ರ ಮಲಗಿರುತ್ತದೆ. ಇವರನ್ನು ನೋಡಿದಾಗ, “ನಾನು ಹಗಲು ರಾತ್ರಿ ನಿದ್ದೆ ಬಿಟ್ಟು ಬಾವಿ ತೋಡಿದೆ, ಆದರೆ ನೀರು ಸಿಕ್ಕಿದ್ದು ಪಕ್ಕದ ಮನೆಯವರಿಗೆ” ಎಂಬ ಕಥೆ ನೆನಪಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಕೆಲವರಿಗೆ “ಶ್ರಮ ಪಟ್ಟರೆ ಮಾತ್ರ ಅದೃಷ್ಟ” ಎಂಬ ರೂಲ್ಸ್ ಇರುತ್ತದೆ. ಇವರು “ನಾನು ಬೆಳಿಗ್ಗೆ ಎದ್ದು ದೇವರ ಪೂಜೆ ಮಾಡಿ, ಆಮೇಲೆ ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಅದೃಷ್ಟ ಬರುತ್ತದೆ” ಎಂಬ ನಂಬಿಕೆಯವರು. ಬಹುಶಃ ದೇವರೇ ಇವರಿಗೆ “ನೋಡು ಮಗ, ನಿನ್ನ ವಿಷಯದಲ್ಲಿ ರೂಲ್ಸ್ ಸ್ವಲ್ಪ ಸ್ಟ್ರಿಕ್ಟ್ ಇದೆ, ನೀನು ಸುಮ್ಮನೆ ಕೂತರೆ ಏನೂ ಸಿಗಲ್ಲ” ಅಂತ ಹೇಳಿದಂತೆ ಕಾಣುತ್ತದೆ. ಅದಕ್ಕೇ ಹೇಳುವುದು, ಶ್ರಮ ಮತ್ತು ಅದೃಷ್ಟ ಇಬ್ಬರೂ ಅವಳಿ ಜವಳಿಗಳು. ಇವರ ಸಂಬಂಧ, ತಂದೆ ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧದಂತೆ. ತಂದೆ ಶ್ರಮ ಪಟ್ಟರೆ, ತಾಯಿ ಅದೃಷ್ಟವನ್ನು ಹರಸುತ್ತಾಳೆ. ಇವರಿಬ್ಬರೂ ಜೊತೆಯಾದರೆ ಮಾತ್ರ ಜೀವನ ಸುಗಮ. ಅದೇ ರೀತಿ, ಯೋಗ ಮತ್ತು ಕ್ಷೇಮ ಇನ್ನೊಂದು ಅವಳಿ ಜವಳಿಗಳು. ಒಂದು ಅವಕಾಶ ಸಿಕ್ಕರೆ (ಯೋಗ), ಅದನ್ನು ಸುರಕ್ಷಿತವಾಗಿ, ಸದುಪಯೋಗ ಪಡಿಸಿಕೊಳ್ಳುವುದು (ಕ್ಷೇಮ) ಮುಖ್ಯ. ಇವರ ಸಂಬಂಧ ಕೂಡಾ ಗಾಳಿಪಟ ಮತ್ತು ಅದರ ದಾರದಂತೆ. ಗಾಳಿಪಟ ಎತ್ತರಕ್ಕೆ ಹಾರಿದರೂ, ದಾರ ಹಿಡಿದಿರುವ ಕೈ ಕ್ಷೇಮವಾಗಿದ್ದರೆ ಮಾತ್ರ ಅದು ಕೆಳಗೆ ಬೀಳುವುದಿಲ್ಲ. ಆದ್ದರಿಂದ, ಮನುಷ್ಯ ಶ್ರಮ ಪಡಬೇಕು. “ಶ್ರಮವೇ ನಮ್ಮ ದೇವರ ಅಕೌಂಟ್ನಲ್ಲಿ ನಮ್ಮ ಕರ್ಮಗಳ ಬ್ಯಾಲೆನ್ಸ್ ಹೆಚ್ಚಿಸುವ ರಿಕರಿಂಗ್ ಡೆಪಾಸಿಟ್” ಎಂದು ತಮಾಷೆಗೆ ಹೇಳಬಹುದು. ಆದರೆ ಶ್ರಮ ಪಟ್ಟರೂ, ಅದರ ಲಾಭ ಪಡೆಯಲು ಅದೃಷ್ಟ ಮತ್ತು ಯೋಗ ಬೇಕು. ಇವರು ನಮ್ಮ “ಟೈಮಿಂಗ್” ಸೆನ್ಸ್ ಅನ್ನು ನಿರ್ಧರಿಸುತ್ತಾರೆ. ಸರಿಯಾದ ಸಮಯದಲ್ಲಿ, ಸರಿಯಾದ ಜಾಗದಲ್ಲಿ ಇರುವುದು ಯೋಗ. ಆದರೆ ಅದೃಷ್ಟ ಕೂಡಿ ಬಂದರೂ, ಅದನ್ನು ಕ್ಷೇಮವಾಗಿ ಇಟ್ಟುಕೊಳ್ಳಲು ಯೋಗ್ಯತೆ ಬೇಕು. “ಒಂದು ದೊಡ್ಡ ಚೆಕ್ ಸಿಕ್ಕಿದೆ, ಅದನ್ನ ಹೇಗೆ ಬ್ಯಾಂಕಿನಲ್ಲಿ ಹಾಕಬೇಕು ಅಂತ ಗೊತ್ತಿಲ್ಲ” ಎಂಬ ಸ್ಥಿತಿ ಬರಬಾರದು ಅಲ್ಲವೇ? ಯೋಗ್ಯತೆ ಅಂದರೆ, ಕೇವಲ ಜ್ಞಾನವಲ್ಲ, ವಿವೇಚನೆ, ದೂರದೃಷ್ಟಿ ಮತ್ತು ಅದನ್ನು ಸರಿಯಾಗಿ ನಿರ್ವಹಿಸುವ ಸಾಮರ್ಥ್ಯ.
ಕೊನೆಯದಾಗಿ, ನಮ್ಮ ಜೀವನದಲ್ಲಿ ಈ ಐದು ಅಂಶಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಕೆಲವೊಮ್ಮೆ ನಮ್ಮ ಶ್ರಮಕ್ಕೆ ಅದೃಷ್ಟ ಕೈ ಜೋಡಿಸುತ್ತದೆ, ಕೆಲವೊಮ್ಮೆ ಯೋಗ ಅನಿರೀಕ್ಷಿತವಾಗಿ ಬಾಗಿಲು ತೆರೆಯುತ್ತದೆ, ಮತ್ತೆ ಕೆಲವೊಮ್ಮೆ ನಮ್ಮ ಯೋಗ್ಯತೆ ಎಲ್ಲವನ್ನೂ ಸರಿಪಡಿಸುತ್ತದೆ. “ಜೀವನ ಒಂದು ಷೇರು ಮಾರುಕಟ್ಟೆಯಂತೆ, ಕೆಲವೊಮ್ಮೆ ಮೇಲೆ ಹೋಗುತ್ತದೆ, ಕೆಲವೊಮ್ಮೆ ಕೆಳಗೆ ಬರುತ್ತದೆ. ಆದರೆ ಸರಿಯಾದ ಸಮಯದಲ್ಲಿ ಸರಿಯಾದ ಷೇರುಗಳನ್ನು ಖರೀದಿಸಲು ಶ್ರಮ, ಅದೃಷ್ಟ, ಯೋಗ, ಕ್ಷೇಮ ಮತ್ತು ಯೋಗ್ಯತೆ ಎಲ್ಲವೂ ಬೇಕು” ಎಂಬ ಸತ್ಯ ತಿಳಿದಿರಲಿ. ಆದರೂ ತಾವು ಅತೀ ಬುದ್ದಿವಂತರು ಎಂದುಕೊಂಡು ಬೇಗ ಹಣ ಮಾಡಬೇಕೆಂದು ಡೇ ಟ್ರೇಡ್ ಅಥವಾ ಫ್ಯೂಚರ್ ಅಂಡ್ ಆಪ್ಶನ್ (FNO) ಎಂಬ ಜೂಜಾಟ ಆಡಿ ಎಲ್ಲಾ ಕಳೆದುಕೊಳ್ಳುತ್ತಾರೆ. ಆಮೇಲೆ ಹೇಳ್ತಾರೆ ನನಗೆ ಅದೃಷ್ಟ ಇಲ್ಲ.. ಆದ್ದರಿಂದ ನಮ್ಮ ಜೀವನದ ಈ ಪಯಣದಲ್ಲಿ, ನಾವೆಲ್ಲರೂ ಈ ಐದು ಆಟಗಾರರನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ಕೊನೆಗೆ ಆ ವಿಧಿ ಎಂಬ ಥರ್ಡ ಅಂಪೈರ್ ಏನು ತೀರ್ಪು ಕೊಡುತ್ತಾನೆ ಅಂತ ಕಾದು ನೋಡಬೇಕಿದೆ.
ಅಲ್ವಾ? ನಿಮ್ಮ ಅಭಿಪ್ರಾಯ ಅನಿಸಿಕೆ ಏನು ?
ಲೇಖನ : ಸಿಎ ವಿ.ಕೆ.ಎಸ್ ಶೆಟ್ಟಿ