ನಾವು ಹಾಕಿದ ಶೂಸ್ ಒಳಗೆ ಪುಟ್ಟ ಪುಟ್ಟ ಕಲ್ಲುಗಳು ಸೇರಿಕೊಂಡಿದ್ದರೆ ಹೇಮಾಮಾಲಿನಿಯ ಕೆನ್ನೆಯಷ್ಟು ನುಣುಪಾದ ರಸ್ತೆಯಲ್ಲಿ ನಡೆದರೂ ಕಲ್ಲು ಕಾಲಿಗೆ ಚುಚ್ಚುತ್ತದೆ. ಶೂಸ್ ಒಳಗೇ ಕಲ್ಲಿದೆ ಎನ್ನುವುದನ್ನೇ ತಿಳಿಯದೆ ನಾವು ರಸ್ತೆಯನ್ನೇ ದೂರುತ್ತಾ ಅಥವಾ ರಸ್ತೆಯನ್ನೇ ಬದಲಿಸಿ ನಡೆದರೂ ಕಲ್ಲು ಚುಚ್ಚದೆ ಇರುವುದಿಲ್ಲ. ಸಮಸ್ಯೆಯ ಮೂಲ ಯಾವುದು ಅಂತ ತಿಳಿದರೆ ಮತ್ತೆ ಪರಿಹಾರ ಇದ್ದೇ ಇರುತ್ತದೆ.

ಅದೆಷ್ಟೋ ಜನರ ಸಮಸ್ಯೆಗಳು ಹೀಗೇ ಪುಟ್ಟ ಪುಟ್ಟವುಗಳು. ಆದರೆ ಸಮಸ್ಯೆಯ ಮೂಲವನ್ನು ಹುಡುಕೋದಿಲ್ಲ. ಕೆಲವೊಮ್ಮೆ ಅದು ಗೊತ್ತಿದ್ದರೂ ಅದನ್ನು ಪರಿಹರಿಸಿಕೊಳ್ಳೋ ಬಗ್ಗೆ ಯೋಚನೆಯೂ ಮಾಡೋದಿಲ್ಲ. ಸಮಸ್ಯೆಗಳ ಜೊತೆಗೇ ಬದುಕುವ ಮತ್ತು ಅದೇ ತಮ್ಮೆಲ್ಲ ಹಿನ್ನಡೆಗೆ ಕಾರಣ ಎಂದು ತಮ್ಮನ್ನು ಹಳಿದುಕೊಳ್ಳುವ ಆದರೆ ಅದನ್ನು ಬದಲಿಸಿಕೊಳ್ಳದೆ ಬದುಕುವ ಹತ್ತಾರು ಮಂದಿ ನಮ್ಮ ಸುತ್ತಲೇ ಇರುತ್ತಾರೆ. ಅವರು ಬದಲಾಗುವುದಿಲ್ಲ. ಯಾರೋ ಬಂದು ನಮ್ಮನ್ನ ಉದ್ದಾರ ಮಾಡಲಿ ಎಂದು ಯಾರು ಬಯಸುತ್ತಾರೋ ಅವರೆಂದಿಗೂ ಉದ್ದಾರವಾಗುವುದಿಲ್ಲ. ಯಾಕೆಂದರೆ ಯಾರನ್ನೋ ಉದ್ಧಾರ ಮಾಡೋಕೆ ಯಾರೂ ಬರುವುದಿಲ್ಲ.
ಲೇಖನ : ವಸಂತ್ ಗಿಳಿಯಾರ್