ಸನಾತನ ಭಾರತೀಯ ಸಂಸ್ಕ್ರತಿ, ಹಿಂದುತ್ವದ ತತ್ವದ ಮೇಲೆ ಧಾರ್ಮಿಕ ಆಚರಣೆ ಆಚರಿಸುವುದು ಪ್ರತಿಯೋರ್ವನ ಕರ್ತವ್ಯವಾಗಿದೆ. ಶಿಕ್ಷಣದ ಜೊತೆಯಲ್ಲಿ ನಮ್ಮ ಸಂಸ್ಕ್ರತಿ ಕಲೆ, ನಡೆ ನುಡಿ, ಅಚಾರ ವಿಚಾರಗಳು ಕೂಡಾ ಕೂಡಿಕೊಂಡು ಜೀವನ ಸಾಗಿದರೆ ಉತ್ತಮ ಪ್ರಜೆಯಾಗಲು ಸಾದ್ಯ. ಈ ಸಂಸ್ಕಾರ ಎಂಬುದು ಮೊದಲಾಗಿ ಮನೆಯಲ್ಲಿ ತಾಯಿಯಿಂದ ಕಲಿತು ಬರುತ್ತೇವೆ. ಮಾತೃ ದೇವೋ ಭವ, ಪಿತೃ ದೇವೋ ಭವ, ಗುರು ದೇವೋ ಭವ, ಅತಿಥಿ ದೇವೋ ಭವ ಎಂಬಂತೆ ನಮಗೆ ತಾಯಿಯೇ ಮೊದಲ ಗುರು. ಬಹು ದೊಡ್ಡ ಸಂಘಟನೆ ಮಾಡುವಲ್ಲಿ ನಮ್ಮ ಬಂಟರ ಸಾಂಘಿಕ ಶಕ್ತಿಯಿಂದ ಸಾಧ್ಯವಾಗಿದೆ ಎಂಬುದನ್ನು ಅರಿತಿದ್ದೇವೆ. ಯಾವ ಸಂಸ್ಥೆಯಲ್ಲಿ ಮಹಿಳೆಯರಿಗೆ ಕೂಡಾ ಪ್ರಾಮುಖ್ಯತೆಯನ್ನು ನೀಡುತ್ತೆವೆಯೋ ಅ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತದೆ. ಪ್ರೀತಿ ವಾತ್ಸಲ್ಯದಿಂದ ಬದುಕುವ ಮೂಲಕ ಪರೋಪಕಾರ ಮನೋಭಾವ ನಮ್ಮದಾಗಲಿ. ಬರುವಾಗ ಶೂನ್ಯ ಹೋಗುವಾಗ ಶೂನ್ಯ. ಇದರ ಮದ್ಯೆ ಸ್ವಸಾಮರ್ಥ್ಯ ಸಾಧನೆಯಿಂದ ಸಮಾಜದಲ್ಲಿ ಗುರುತಿಸಿಕೊಂಡು ಮಾಡುವ ಸೇವಾ ಕಾರ್ಯದಿಂದ ಗೌರವವನ್ನು ಪಡೆಯಬಹುದು. ಬಂಟರ ಸಂಸ್ಕ್ರತಿಯನ್ನು ಮೇಲೈಸುವ ನಮ್ಮ ತುಳುನಾಡ ಸಂಸ್ಕ್ರತಿಯ ಅನಾವರಣ ಇಲ್ಲಿ ಆಗಿದೆ. ಯುವ ಪೀಳಿಗೆಗೆ ಈ ಸಂಸ್ಕ್ರತಿಯನ್ನು ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಕಾರ್ಯಕ್ರಮ ನಮಗೆಲ್ಲರಿಗೂ ಮಾದರಿ. ನಾವೆಲ್ಲರೂ ಆದರ್ಶ ಜೀವನಕ್ಕೆ ನಮ್ಮ ಸಂಸ್ಕ್ರತಿಯೇ ಮೂಲ ಎಂಬುದನ್ನು ಅರಿತು ಬಾಳಬೇಕು ಎಂದು ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿಯವರು ನುಡಿದರು.
ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಹಾಗೂ ದಾಂಡಿಯಾ ರಾಸ್ ಕಾರ್ಯಕ್ರಮವು ಆಗಸ್ಟ್ 5 ರಂದು ರಾವೆತ್ ನಲ್ಲಿರುವ ಹೋಟೆಲ್ ಸ್ಕೈ ಬ್ಲೂ ನ ಸಭಾಂಗಣದಲ್ಲಿದಲ್ಲಿ ಜರಗಿತು. ಈ ಧಾರ್ಮಿಕ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಸಿಎ ಸುರೇಂದ್ರ ಕೆ ಶೆಟ್ಟಿಯವರು ಧರ್ಮದ ಪಾಲನೆಯ ಮುಖಾಂತರ ಧಾರ್ಮಿಕ ಆಚರಣೆಗಳನ್ನು ಮಾಡಲು ಯಾವುದೇ ರೀತಿಯ ಹಿಂಜರಿಕೆ ಇರಬಾರದು. ನಮ್ಮ ಹಿರಿಯರಿಂದ ಆಚರಿಸಿಕೊಂಡು ಬಂದಿರುವ ಪದ್ಧತಿಗನುಗುಣವಾಗಿ ಪ್ರಕೃತಿಯ ಮಡಿಲಲ್ಲಿ ಹಬ್ಬ ಹರಿದಿನಗಳನ್ನು ಆಚರಿಸುವವರು ನಾವು. ದುರ್ಗಾ ಪೂಜೆ ತೆನೆ ಹಬ್ಬದಂತಹ ಈ ಧಾರ್ಮಿಕ ಪರ್ವದಲ್ಲಿ ಪಾಲಕರ ಜೊತೆಯಲ್ಲಿ ಮಕ್ಕಳು ಕೂಡಾ ಪಾಲ್ಗೊಂಡು ಆಚರಣೆಯ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದರು.
ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ಜಗದೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ದಸರಾ ಪೂಜೆಯ ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿ ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿ, ಗೌರವ ಅತಿಥಿಗಳಾದ ಮಾತೃ ಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ, ಉಪಾಧ್ಯಕ್ಷರುಗಳಾದ ಪ್ರಸಾದ್ ಶೆಟ್ಟಿ, ಹರೀಶ್ ಶೆಟ್ಟಿ ಕುರ್ಕಾಲ್, ಕಾರ್ಯಾಧ್ಯಕ್ಷ ಲೀಲಾಧರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿ ಶೆಟ್ಟಿ, ಕೋಶಾಧಿಕಾರಿ ದಿನೇಶ್ ಶೆಟ್ಟಿ ಉಜಿರೆ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ್ ಶೆಟ್ಟಿ ಪೆಲತ್ತೂರು, ಕ್ರೀಡಾ ಕಾರ್ಯಾಧ್ಯಕ್ಷ ಜಯ ಶೆಟ್ಟಿ, ಸಾಂಸ್ಕ್ರತಿಕ ವಿಭಾಗದ ಉಪ ಕಾರ್ಯಾಧ್ಯಕ್ಷ ಪ್ರದೀಪ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಭಾ ಎಸ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶುಭಂ ಶೆಟ್ಟಿ, ಅನ್ವಿತಾ ಶೆಟ್ಟಿಯವರು ಉಪಸ್ಥಿತರಿದ್ದರು.
ಅಧ್ಯಕ್ಷರು ಮತ್ತು ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ದಸರಾ ಪೂಜೆ ತೆನೆ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಳಿನಿ ಶೆಟ್ಟಿ ಮತ್ತು ಉಮಾ ಶೆಟ್ಟಿ ಪ್ರಾರ್ಥನೆಗೈದರು. ನಿಕಟ ಪೂರ್ವ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆಯವರು ಸ್ವಾಗತಿಸಿದರು. ಅತಿಥಿ ಗಣ್ಯರನ್ನು ಅಧ್ಯಕ್ಷರಾದ ಜಗದೀಶ್ ಶೆಟ್ಟಿಯವರು ಶಾಲು ಪುಷ್ಪ ಗುಚ್ಛ, ಸ್ಮರಣಿಕೆ ನೀಡಿ ಗೌರವೀಸಿದರು. ಅತಿಥಿ ಗಣ್ಯರ ಪರಿಚಯವನ್ನು ಕ್ರಮವಾಗಿ ಅನುಸೂಯ ಎಸ್ ಶೆಟ್ಟಿ ಮತ್ತು ಸುಧಾಕರ್ ಶೆಟ್ಟಿ ಪೆಲತ್ತೂರುರವರು ಓದಿದರು. ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಗಣ್ಯರನ್ನು ಪುಷ್ಪ ಗುಚ್ಛ ನೀಡಿ ಗೌರವಿಸಲಾಯಿತು. ಧಾರ್ಮಿಕ ಕಾರ್ಯಕ್ರಮಗಳು ಮಧುಕರ್ ಭಟ್ ರವರ ಪೌರೋಹಿತ್ಯದಲ್ಲಿ ದೇವಿ ಮಂಟಪ ಅಲಂಕಾರ, ದುರ್ಗಾ ಪೂಜೆ ನೆರವೇರಿತು. ಸಂಘದ ಅಧ್ಯಕ್ಷರು, ಅತಿಥಿ ಗಣ್ಯರು, ಮಹಿಳಾ ವಿಭಾಗದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು ಮತ್ತು ಸರ್ವ ಸದಸ್ಯರು ಅಲಂಕೃತ ಶ್ರೀ ದೇವಿಯ ಮಂಟಪಕ್ಕೆ ಮಂಗಳಾರತಿ ಬೆಳಗುವ ಮೂಲಕ ಪೂಜೆ ಸಲ್ಲಿಸಿದರು. ಅಧ್ಯಕ್ಷರಾದ ಜಗದೀಶ್ ಹೆಗ್ಡೆಯವರು ಭತ್ತದ ತೆನೆಗೆ ಪೂಜೆ ಸಲ್ಲಿಸಿ ಹಾಲೆರೆದು ಆರತಿ ಬೆಳಗಿ ತೆನೆ ವಿತರಿಸಿದರು. ನಂತರ ತೀರ್ಥ ಪ್ರಸಾದ ವಿತರಿಸಲಾಯಿತು. ಮಹಿಳಾ ವಿಭಾಗದ ಸದಸ್ಯರು ದೇವಿಯನ್ನು ಅರಾದಿಸುವ ಸ್ತುತಿಯೊಂದಿಗೆ ನೃತ್ಯಗೈದರು. ನಂತರ ಬಂಟರ ಸಂಘದ ವಿವಿಧ ವಿಭಾಗದ ತಂಡಗಳಿಂದ ದಾಂಡಿಯಾ ನೃತ್ಯ ಕಾರ್ಯಕ್ರಮ ನಡೆಯಿತು. ಮಕ್ಕಳು ಮಹಿಳೆಯರು ಪುರುಷರು ಸೇರಿದಂತೆ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು. ವಿಶೇಷ ಆಕರ್ಷಣೆಯಾಗಿ ಕುರ್ಕಾಲ್ ಟೈಗರ್ಸ್ ನವರಿಂದ ನಮ್ಮೂರಿನ ಮಾರ್ನೆಮಿಯ ಸೊಬಗನ್ನು ಮೇಲೈಸುವ ಹುಲಿ ನೃತ್ಯ ಸೇರಿದ ಎಲ್ಲರ ಮನ ಸೂರೆಗೊಂಡಿತು.
ಈ ಕಾರ್ಯಕ್ರಮದ ಯಶಸ್ವಿಗೆ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ್ ಡಿ ಶೆಟ್ಟಿ, ವಿಟ್ಟಲ್ ಎಲ್ ಶೆಟ್ಟಿ, ರಘುರಾಮ್ ಶೆಟ್ಟಿ, ವಿಶ್ವನಾಥ್ ಎಲ್ ಶೆಟ್ಟಿ, ನಾರಾಯಣ ಕೆ ಶೆಟ್ಟಿ, ಕೆ ಪದ್ಮನಾಭ ಶೆಟ್ಟಿ, ಸೀತಾರಾಮ ಎಲ್ ಶೆಟ್ಟಿ, ಮಹೇಶ್ ಎಸ್ ಹೆಗ್ಡೆ, ವಿಜಯ ಎಸ್ ಶೆಟ್ಟಿ, ರಾಕೇಶ್ ಶೆಟ್ಟಿ ಬೆಳ್ಳಾರೆ, ಸಲಹೆಗಾರರಾದ ರಮೇಶ್ ಶೆಟ್ಟಿ, ವಿಶ್ವನಾಥ್ ಕೆ ಶೆಟ್ಟಿ, ಮಾಜಿ ನಗರ ಸೇವಕ ಉಲ್ಲಾಸ್ ಶೆಟ್ಟಿ, ಸಂಘದ ಕಾರ್ಯಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರುಗಳಾದ ಭಾರತಿ ಎಸ್ ಶೆಟ್ಟಿ, ಪ್ರೇಮಾ ವಿ ಶೆಟ್ಟಿ, ಕ್ಷಮಾ ಎಲ್ ಶೆಟ್ಟಿ, ಜಯಲಕ್ಷ್ಮಿ ಪಿ ಶೆಟ್ಟಿ, ತನುಜಾ ಎ ಶೆಟ್ಟಿ, ಸುಪ್ರಿಯಾ ಜೆ ಶೆಟ್ಟಿ, ಜ್ಯೋತಿ ವಿ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ್ ವಿ ಶೆಟ್ಟಿ, ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ರೋಹಿತ್ ಡಿ ಶೆಟ್ಟಿ, ತುಳುಕೂಟ ಪುಣೆ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ತುಳುಕೂಟ ಪುಣೆ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಮಾಜಿ ಕಾರ್ಪೋರೇಟರ್ ಉಲ್ಲಾಸ್ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ತುಳು ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್, ಪುಣೆ ಬಂಟರ ಸಂಘ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ, ನೆಹರು ನಗರ ಅಯ್ಯಪ್ಪ ಸೇವಾ ಮಂಡಲದ ಅಧ್ಯಕ್ಷ ಶ್ರೀಧರ್ ಶೆಟ್ಟಿ, ದಿನೇಶ್ ಶೆಟ್ಟಿ ನಡ್ಯೋಡಿಗುತ್ತು, ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸುಲತಾ ಎಸ್ ಶೆಟ್ಟಿ, ಪುಣೆ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿ, ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ಕಾರ್ಯಾಧ್ಯಕ್ಷೆ ರೇಷ್ಮಾ ಅರ್ ಶೆಟ್ಟಿ, ಲೋನವಾಲ ನಗರ ಸೇವಕಿ ಸೌಮ್ಯ ಅರ್ ಶೆಟ್ಟಿ ಮತ್ತು ಊರಿನಿಂದ ಬಂದಂತಹ ಹುಲಿ ನೃತ್ಯ ತಂಡದವರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದುರ್ಗಾ ಪೂಜೆಯ ಪ್ರಸಾದ ಸ್ವೀಕರಿಸಿ ದಾಂಡಿಯಾ ಕಾರ್ಯಕ್ರಮದಲ್ಲಿ ಪಾಲು ಪಡೆದು ಸಂಭ್ರಮ ಪಟ್ಟರು. ಅವಿನಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದಾಂಡಿಯಾ ಕಾರ್ಯಕ್ರಮವನ್ನು ಸುಧಾಕರ್ ಶೆಟ್ಟಿ ಪೆಲತ್ತೂರು ನಡೆಸಿಕೊಟ್ಟರು. ಸ್ಮಿತಾ ಎಂ ಹೆಗ್ಡೆ ಧನ್ಯವಾದಗೈದರು.
ವರದಿ : ಹರೀಶ್ ಮೂಡಬಿದ್ರಿ ಪುಣೆ