
ವೈದ್ಯಕೀಯ ಉಪಕರಣಗಳು ದುಬಾರಿಯಾಗಿರುವ ಇಂದಿನ ಕಾಲಘಟ್ಟದಲ್ಲಿ ಹಣಕಾಸು ಮಾಹಿತಿಯ ಅಗತ್ಯವೂ ವೈದ್ಯರಿಗೆ ಬೇಕಿರುತ್ತದೆ. ಗ್ರಾಮೀಣ ಭಾಗಗಳಲ್ಲಿ ರುವ ಶೇ. 70ರಷ್ಟು ಮಂದಿಗೆ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಸೇವೆ ಸಿಗುವಂತಾಗಬೇಕು ಎಂದು ಮಾಹೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು. ಉಡುಪಿ ಸರ್ವಿಸ್ ಬಸ್ ನಿಲ್ದಾಣ ಸಮೀಪದ ಗ್ರಾಸ್ಲ್ಯಾಂಡ್ ಕಮರ್ಶಿಯಲ್ ಕಾಂಪ್ಲೆಕ್ಸ್ ನಲ್ಲಿ ರವಿವಾರ ಡಾಕ್ಟರ್ ಆ್ಯಂಡ್ ಅಲೈಡ್ ಪ್ರೊಫೆಶನಲ್ಸ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ದೇಶದ ಆರ್ಥಿಕತೆಗೆ ಬ್ಯಾಂಕ್ಗಳಂತೆ ಸಹಕಾರ ಕ್ಷೇತ್ರವೂ ಬಹುದೊಡ್ಡ ಕೊಡುಗೆ ನೀಡಿದೆ. ವೈದ್ಯರಂತೆ ಇತರ ಕ್ಷೇತ್ರಗಳಲ್ಲಿರುವವರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ವೈದ್ಯರಲ್ಲಿ ಬಹಳಷ್ಟು ಹಣವಿದೆ ಎಂಬ ಭಾವನೆ ತಪ್ಪು. ದೇಶದಲ್ಲಿ ಶೇ. 70ರಷ್ಟು ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಮಾಡುತ್ತಿದ್ದು, ಹಲವರ ಸ್ಥಿತಿ ಹೀನಾಯವಾಗಿದೆ. ಆದರೂ ಸೇವೆಯ ಮೂಲಕ ಘನತೆ ಮೆರೆಯುತ್ತಿದ್ದಾರೆ ಎಂದು ಆದರ್ಶ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ| ಜಿ.ಎಸ್. ಚಂದ್ರಶೇಖರ್ ಹೇಳಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ವೈದ್ಯರು ಆರ್ಥಿಕ ಸಂಸ್ಥೆ ತೆರೆಯುತ್ತಿರುವುದು ಇದೇ ಮೊದಲು. ವೈದ್ಯರು ಜನರ ಆರೋಗ್ಯ ಕಾಪಾಡುವಂತೆ ಆರ್ಥಿಕ ಕ್ಷೇತ್ರದಲ್ಲಿಯೂ ಎಚ್ಚರಿಕೆ ಹೆಜ್ಜೆ ಇರಿಸುವಂತಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಪ್ರವರ್ತಕ ಡಾ| ಬುಡ್ನಾರು ವಿನಯಚಂದ್ರ ಶೆಟ್ಟಿ ಮಾತನಾಡಿ, ವೈದ್ಯರು ಸರಕಾರದ ವಿವಿಧ ಯೋಜನೆಗಳನ್ನು ತಿಳಿದುಕೊಳ್ಳಬೇಕು. ಈ ಸೊಸೈಟಿಯು ಠೇವಣಿ ಹಾಗೂ ಸಾಲಕ್ಕೆ ಸೀಮಿತವಲ್ಲ. ಇದನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದರು. ಎಚ್ ಪಿ ಆರ್ ಇನ್ಸ್ಟಿಟ್ಯೂಟ್ ಓಫ್ ನರ್ಸಿಂಗ್ ಆಂಡ್ ಪ್ಯಾರ ಮೆಡಿಕಲ್ ಸೈನ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಹರಿಪ್ರಸಾದ್ ರೈ ಉಪಸ್ಥಿತರಿದ್ದರು. ಡಾ| ಪ್ರಸನ್ನ ಕಾಕುಂಜೆ ಪ್ರಸ್ತಾವನೆಗೈದರು. ಡಾ| ಗುರುರಾಜ್ ಆಚಾರ್ಯ ಸ್ವಾಗತಿಸಿ, ಪ್ರೊ| ಯತಿಕುಮಾರ್ ಸ್ವಾಮಿಗೌಡ ವಂದಿಸಿದರು. ಮಂಜುಳಾ ಜಿ. ತೆಕ್ಕಟ್ಟೆ ನಿರೂಪಿಸಿದರು.






















































































































