
ಜಗತ್ತಿನಲ್ಲಿ ಭಾರತೀಯ ಕುಟುಂಬ ವ್ಯವಸ್ಥೆ ಹಾಗೂ ಸಂಸ್ಕ್ರತಿಗೆ ವಿಶೇಷ ಸ್ಥಾನಮಾನಗಳಿವೆ. ಭಾರತದ ತಳಹದಿಯೇ ಕುಟುಂಬ ವ್ಯವಸ್ಥೆ. ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಭಾವನಾತ್ಮಕ ಸಂಬಂಧ, ಸಂಸ್ಕಾರದ ಹಾದಿ, ವಿಶೇಷವಾಗಿ ಮಾನವೀಯ ಗುಣಗಳು ಅಡಕವಾಗಿವೆ. ಬಹುಮುಖ್ಯವಾಗಿ ಸ್ತ್ರೀಯರನ್ನು, ಮಾತೆಯರನ್ನು ಪೂಜನೀಯ ಭಾವದಲ್ಲಿ ಕಂಡ ದೇಶ ಭಾರತ. ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿಗೆ ಮಾರುಹೋಗದ ದೇಶಗಳೇ ಕಾಣಸಿಗುವುದು ಅಪರೂಪ. ಇಂತಹದ್ದೊಂದು ನಡೆಗೆ ಹಾದಿ ತೋರಿಸಿಕೊಟ್ಟವರು ನಮ್ಮ ಹಿರಿಯರು, ಪೂರ್ವಜರು, ಗತಿಸಿ ಹೋದ ಹಲವಾರು ತಲೆಮಾರುಗಳೆಂದರೂ ತಪ್ಪಾಗಲಾರದು. ಆ ಕಾರಣಕ್ಕಾಗಿ ಭಾರತೀಯ ಕೌಟುಂಬಿಕ ಪದ್ದತಿ, ಸಂಬಂಧಗಳು, ಆಚಾರ ವಿಚಾರ, ಸಂಪ್ರದಾಯಗಳು ಇಂದಿಗೂ ಜೀವಂತವಾಗಿ ಉಳಿದಿದೆಯೆಂದರೆ ಅತಿಶಯೋಕ್ತಿಯಾಗಲಾರದು. ವರ್ಷಗಳು ಉರುಳಿದಂತೆ ನಮ್ಮ ಹಿರಿಯರು ಹಾಕಿ ಕೊಟ್ಟ ಸಂಪ್ರದಾಯ, ಮಾನವೀಯ ಸಂಬಂಧ ಹಾಗೂ ಸಂಬಂಧಗಳ ಭದ್ರ ಬುನಾದಿ ಎಂಬುವುದೊಂದಿದೆಯಲ್ಲ ಅದು ತದ್ವಿರುದ್ಧ ಹಾದಿಯಲ್ಲಿ ಸಾಗುತ್ತಿರುವುದು ಭವಿಷ್ಯದ ಸಂಬಂಧ, ಕೌಟುಂಬಿಕ ಜೀವನ, ಬದುಕುವ ಪದ್ಧತಿ ಎಲ್ಲವೂ ಪಾಶ್ಚಾತ್ಯ ಶೈಲಿ. ವ್ಯಾಪಾರ, ವ್ಯವಹಾರಿಕ ದಿಕ್ಕಿನಲ್ಲಿ ಸಾಗಿ ಮನುಷ್ಯ ಸಂಬಂಧಗಳೆಂಬುವುದು ನಗಣ್ಯ ಹಾಗೂ ಅರ್ಥ ಕಳೆದುಕೊಳ್ಳುವತ್ತ ಸಾಗುತ್ತಿದೆ. ಒಂದು ಮಗು ಜನ್ಮ ತಾಳಿ ಭೂಮಿಗೆ ಕಾಲಿಟ್ಟ ದಿನದಿಂದ ಆಚರಿಸಲ್ಪಡುವ ಮಗುವಿನ ನಾಮಕರಣ, ತೊಟ್ಟಿಲು ಹಾಕುವ ಪದ್ದತಿ ಆಚರಣೆಯಿಂದ ಹಿಡಿದು ಮದುವೆ, ವಯೋಸಹಜ ಸಾವಿನ ಕಾರ್ಯಕ್ರಮದವರೆಗಿನ ಕಟ್ಟುಪಾಡುಗಳು, ಸಂಪ್ರದಾಯಗಳು ಈ ಹಿಂದೆ ಹೇಗಿತ್ತು? ಕಾಲಕಳೆದಂತೆ ಹೇಗೆಲ್ಲಾ ಮಾರ್ಪಾಡುಗಳಾಗಿವೆ? ಮನೆ ಮಂದಿಯ ಸಂಬಂಧಗಳು, ವೈವಾಹಿಕ ಸಂಬಂಧಗಳು, ಅವಿಭಕ್ತ ಕುಟುಂಬ, ಆಚಾರ ಪದ್ದತಿ, ಅನುಶಾಸನಗಳು ಯಾವ ಪ್ರಮಾಣದಲ್ಲಿ ಅಧ:ಪಥನಕ್ಕಿಳಿದಿದೆ ಎಂಬುವುದನ್ನು ಕಲ್ಪಿಸಲು ಅಸಾಧ್ಯ.


ಹಿಂದೆಲ್ಲಾ ಒಂದು ಮನೆಯಲ್ಲಿ ಅವಿಭಕ್ತ ಕುಟುಂಬ ಅಂದರೆ 20 ರಿಂದ 25 ಮಂದಿ ವಾಸಿಸುವ ಕೂಡಿ ಬಾಳುವ ಮನಸ್ಸುಗಳನ್ನು ಕಾಣುತ್ತಿದ್ದೆವು. ಒಟ್ಟಾಗಿ ಮನೆಯಲ್ಲಿ ಭಜನೆ ಹಾಡುವ, ಒಟ್ಟಾಗಿ ಅಂಗಳದಲ್ಲಿ ಆಟವಾಡುವ, ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ಉಣ್ಣುವಲ್ಲಿಯವರೆಗೆ ಸಂಸಾರದ ಹೊಂದಾಣಿಕೆಗಳಿದ್ದವು. ಪ್ರಸ್ತುತ ದಿನಗಳಲ್ಲಿ ವಧು ವರ ಅನ್ವೇಷಣೆಯನ್ನೇ ಗಣನೆಗೆ ತೆಗೆದುಕೊಳ್ಳುವುದಾದರೆ 30, 35, 40 ವರ್ಷಗಳು ದಾಟಿದ ಅದೆಷ್ಟೋ ಯುವಕರಿಗೆ ಹೆಣ್ಣು ಸಿಗದಂತಹ ವಾತವರಣ ಎಲ್ಲಾ ಸಮುದಾಯದಲ್ಲಿ ಕಾಣಬಹುದಾಗಿದೆ. ಸರಕಾರಿ ಉದ್ಯೋಗ, ವಿದೇಶದಲ್ಲಿ ಉದ್ಯೋಗ, ಲಕ್ಷ ಲಕ್ಷ ಸಂಪಾದನೆ, ಕೃಷಿ ಚಟುವಟಿಕೆ, ರೈತ ಕುಟುಂಬಗಳ ನಿರಾಕರಣೆ, ಮನೆಯಲ್ಲಿ ಹಿರಿಯ ಜೀವಗಳು ಅಂದರೆ ಹೆತ್ತ ತಂದೆ ತಾಯಂದಿರು ಇರಬಾರದು. ಇದ್ದರೆ ಆ ಹಿರಿ ಜೀವಗಳಿಗೆ ನಿರುಪಯುಕ್ತ ವಸ್ತುಗಳೆಂಬ ಹಣೆಪಟ್ಟಿ, ವಯಸ್ಸಿನ ಅಂತರ 2 ಅಥವಾ 3 ವರ್ಷಗಳ ಬೇಡಿಕೆ, ಹಿಂದೆಲ್ಲಾ ಅಪ್ಪ ಅಮ್ಮ ಅಥವಾ ಹಿರಿಯರು ಒಂದು ಹುಡುಗಿಗೆ ಹುಡುಗನನ್ನು ಗೊತ್ತು ಮಾಡಿದರೆ ಅಥವಾ ಹುಡುಗನಿಗೆ ಹುಡುಗಿ ನೋಡಿ ಬಿಟ್ಟರೆ ಅಲ್ಲಿಗೆ ಎಲ್ಲವೂ ಫೈನಲ್ ಆಗಿ ಅಂತಿಮ ಮುದ್ರೆ ಬೀಳುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಮಕ್ಕಳ ನಿರ್ಧಾರಗಳೇ ಪ್ರಧಾನವಾಗಿ ಕೊನೆಗೆ ಪೋಷಕರು ಮಂಗಳ ಕಾರ್ಯಕ್ಕೆ ಇಳಿಯುವ ಮೂಲಕ ತದ್ವಿರುದ್ಧ ಸ್ಥಿತಿಯಲ್ಲಿದೆ. ನಾವು ದಿನಪತ್ರಿಕೆಗಳ ಪುಟಗಳನ್ನು ತಿರುವಿದಾಗ ಕಾಣಸಿಗುವ ಆಘಾತಕಾರಿ ಅಂಶಗಳ ಪೈಕಿ ಹೆಣ್ಣು ಸಿಗದೆ ಯುವಕ ಆತ್ಮಹತ್ಯೆ, ಮದುವೆಯಾಗದ ಕೊರಗು ಯುವಕ ವಿಷ ಸೇವಿಸಿ ಆತ್ಮಹತ್ಯೆಯಂತಹ ಪ್ರಕರಣಗಳನ್ನು ಕಾಣುತ್ತೇವೆ. ಎಲ್ಲಿಯವರೆಗೆ ಪರಿಸ್ಥಿತಿ ತಲುಪಿದೆಯೆಂದರೆ ಇತ್ತೀಚೆಗೆ ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬ ಮದುವೆಯಾಗಿಲ್ಲ ಹೆಣ್ಣು ಸಿಗ್ತಾ ಇಲ್ಲ ಹುಡುಗಿ ಹುಡುಕಿ ಕೊಡ್ರಿ ಸಾರ್ ಎಂದು ಯುವಕನೊಬ್ಬ ಖುದ್ದು ಮುಖ್ಯಮಂತ್ರಿಗಳಿಗೇ ಅಹವಾಲು ಸಲ್ಲಿಸಿದ್ದ. ಹಿಂದೆಲ್ಲಾ ವರದಕ್ಷಿಣೆಯಂತಹ ಸಾಮಾಜಿಕ ಪಿಡುಗಿನ ಹಾವಳಿಗೆ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು, ವರದಕ್ಷಿಣೆಗಾಗಿ ಹೆಣ್ಣು ಮಕ್ಕಳನ್ನು ಪೀಡಿಸುವ ಗಂಡ, ಮಾವ, ಅತ್ತೆಯಂದಿರು, ಪೆಟ್ರೋಲ್, ಸೀಮೆ ಎಣ್ಣೆ ಸುರಿಯುವ ಹಂತದವರೆಗೂ ತಲುಪುತ್ತಿತ್ತು ಪರಿಸ್ಥಿತಿ.
ವೈವಾಹಿಕ ಸಂಬಂಧಗಳ ಅನ್ವೇಷಣೆಯಲ್ಲೂ ಮಾನವೀಯ ಗುಣಗಳು ನಶಿಸಿ ಹೋಗುತ್ತಿರುವ ಘಟನೆಗಳು ಸಾಕಷ್ಟಿವೆ. ವಿವಾಹ ಸಂಬಂಧಗಳು ಎರಡು ಕಡೆಗೆ ಒಪ್ಪಿಗೆಯಾಗಿ, ನಿಶ್ಚಿತಾರ್ಥ ಎಲ್ಲವೂ ನಡೆದು ಮದುವೆ ಮುಂಚಿನ ದಿನ ಪ್ರಿಯಕರನೊಂದಿಗೆ ಪರಾರಿಯಾಗುವ ಯುವಕ, ಯುವತಿಯರು, ಇನ್ಯಾವುದೋ ವಿಚಾರಗಳಿಗೆ ಹಸೆಮನೆಯಿಂದ ವಧು ಎದ್ದು ಹೋಗುವ ವಿದ್ಯಮಾನಗಳು ಒಂದೆಡೆಯಾದರೆ, ದುಬಾರಿ ಮೊಬೈಲ್ ಕೊಡಿಸಿಲ್ಲ, ಒಡವೆ ಕೊಡಿಸಿಲ್ಲ, ಇನ್ನಿತರ ಕ್ಷುಲ್ಲಕ ಕಾರಣಗಳಿಗಾಗಿ ವಿವಾಹ ಸಂಬಂಧಗಳನ್ನೇ ಕಡಿದುಕೊಳ್ಳುವ ಹಲವಾರು ವಿದ್ಯಮಾನಗಳು ಮದುವೆ ಎಂಬ ಸಂಬಂಧದ ಗಂಭೀರತೆಯನ್ನು ಅಣಕಿಸುವಂತಿದೆ. ಇಂತಹ ದುಸ್ಸಾಹಸಕ್ಕೆ ಇಳಿಯುವ, ಐಷಾರಾಮಿ, ಅಮಾನವೀಯ ಬೇಡಿಕೆಗಳಿಗೆ ಸಂಬಂಧವನ್ನು ಅಡವಿಡುವ ಯುವ ಸಮುದಾಯಗಳು ಒಂದು ಬಾರಿ ತಮ್ಮ ಹೆತ್ತ ತಂದೆ ತಾಯಂದಿರು, ಅಜ್ಜ ಅಜ್ಜಿಯಂದಿರು ಎಷ್ಟು ಸಂಕಷ್ಟದ ಸಮಯದಲ್ಲಿ ಬದುಕು ದುಸ್ತರದ ಸಮಯದಲ್ಲಿ ಎಲ್ಲಾ ನೋವುಗಳನ್ನು ನುಂಗಿ ಸಂಸಾರ ದಾಂಪತ್ಯ ಎಂಬ ಮೌಲ್ಯಯುತ ಬದುಕಿಗೆ ತ್ಯಾಗಮಯಿಗಳಾಗಿ ನ್ಯಾಯ ಒದಗಿಸಿಕೊಟ್ಟಿರುವುದನ್ನು ಯೋಚಿಸಬೇಕಿದೆ. ಇನ್ನು ಸಮಾಜದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಮತ್ತೊಂದು ಪಿಡುಗು ವಿಚ್ಚೇದನ ಪ್ರಕರಣಗಳು. ಇಂದು ನ್ಯಾಯಾಲಯದ ಮೆಟ್ಟಿಲಲ್ಲಿ ಅಪರಾಧ ಪ್ರಕರಣಗಳಿಂತ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿರುವುದು ದಂಪತಿಗಳ ಕಲಹ, ದಾಂಪತ್ಯ ವಿರಸ, ವಿಚ್ಚೇದನ ಕೋರಿ ಬರುವ ಮನವಿಗಳು. ಇತ್ತೀಚೆಗೆ ಸಿಕ್ಕ ನ್ಯಾಯವಾದಿ ಮಿತ್ರರೊಬ್ಬರ ಮಾತಿನಂತೆ ಈ ವಿಚ್ಚೇದನ ಪ್ರಕರಣಗಳು ಯಾವುದೇ ಬಹುದೊಡ್ಡ ಸವಾಲು, ಬಿಡಿಸಲಾಗದ, ಕಗ್ಗಂಟಾದ ಸಮಸ್ಯೆಗಳಿಂದ ನಡೆಯುತ್ತಿರುವುದಲ್ಲ. ಬದಲಾಗಿ ಕ್ಷುಲ್ಲಕ ಕಾರಣಗಳಿಗಾಗಿಯೇ ದಾಂಪತ್ಯ ಹೊಂದಾಣಿಕೆಯಾಗದೆ
ಹೆಚ್ಚಿನ ಪ್ರಮಾಣದಲ್ಲಿ ಹೊರಬರುತ್ತಿರುವ ಘಟನೆಗಳಾಗುತ್ತಿವೆ. ಇಂತಹ ಪ್ರಕರಣಗಳಲ್ಲಿ ವಿಚಾರಣೆಯ ಮೇಲೆ ಖುದ್ದು ನ್ಯಾಯಾಧೀಶರೇ ಗರಂ ಆಗಿ ಗದರಿಸಿದ ನಿದರ್ಶನಗಳಿವೆ. ಯಾಕೆ ಸಣ್ಣ ಪುಟ್ಟ ಸಂಗತಿಗಳು, ಸವಾಲುಗಳನ್ನು ಎದುರಿಸುವಲ್ಲಿ ಯುವ ಸಮುದಾಯ ಎಡವಿ ಬೀಳುತ್ತಿವೆ? ಇಂದಿನ ಶಿಕ್ಷಣದ ಮಟ್ಟವೇ? ಸಾಮಾಜಿಕ ಮಾಧ್ಯಮ, ಜಾಲತಾಣಗಳ ಪ್ರಭಾವವೇ? ಕಾನೂನಿನಲ್ಲಿ ಮಿತಿಮೀರಿದ ನಿಯಮಗಳ ಸಡಿಲಿಕೆಯೇ? ಪಾಶ್ಚಾತ್ಯ ಪ್ರಭಾವ, ಪೋಷಕರು ಬೆಳೆಸಿದ ರೀತಿಯೇ? ಎಂಬುದು ಕೂಡ ಚರ್ಚೆಗೆ ಹಚ್ಚುವ ವಿಚಾರಗಳೇ.
ಇನ್ನು ಕೌಟುಂಬಿಕ ಮಟ್ಟದಲ್ಲಿ ಮಗುವಿನ ನಾಮಕರಣ, ಮದುವೆ, ಮದರಂಗಿ ಶಾಸ್ತ್ರ, ಸಂಗೀತ್, ಸೀಮಂತ, ಒಬ್ಬ ವ್ಯಕ್ತಿ ಸತ್ತಾಗ ನಡೆಸುವ ವಿಧಿ ವಿಧಾನಗಳು ನಂತರದ ಆಚರಣೆಗಳು ಇರಬಹುದು, ಕುಟುಂಬದ ದೇವಾರಾಧನೆ, ದೈವಾರಾಧನೆ, ನಾಗಾರಾಧನೆ, ಗೃಹಪ್ರವೇಶ ಅಥವಾ ಇನ್ಯಾವುದೇ ಕಾರ್ಯಕ್ರಮ ವಿಚಾರಕ್ಕೆ ಬಂದಾಗ ಕಟ್ಟುಪಾಡುಗಳು, ಸಂಪ್ರದಾಯ, ಆಚರಣೆಗಳನ್ನು ಮೀರಿ ಪ್ರತಿಷ್ಠೆಯ ಕಣವಾಗಿ, ದುಂದುವೆಚ್ಚಕ್ಕೆ ಹೊಸ ಹೊಸ ಸಂಪ್ರದಾಯಗಳಿಗೆ ನಾಂದಿ ಹಾಡುವ ಪದ್ದತಿಗಳು ಜೋರಾಗಿ ನಡೆಯುತ್ತಿವೆ. ತಾನು ಕೂಡಿಟ್ಟ ಸಂಪತ್ತು, ಐಶ್ವರ್ಯವನ್ನು ನಾಲ್ಕು ಮಂದಿಗೆ ಪ್ರದರ್ಶಿಸಬೇಕು, ಪ್ರಚಾರ ಬೇಕು ಎಂಬಲ್ಲಿಗೆ ನಡೆಸಿದ ಕಾರ್ಯಕ್ರಮ ಅರ್ಥ ಕಳೆದುಕೊಂಡು ಸಮಾಜದ ದಿಕ್ಕು ತಪ್ಪಲು ಅಮಾನವೀಯ ನಡೆಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ. ಈಗಿನ ಆಧುನಿಕ ಜೀವನದ ಶೈಲಿಗೆ ಬಡ ಮಂದಿ ತಮ್ಮ ಮಕ್ಕಳಿಗೆ ಶುಭ ಕಾರ್ಯವನ್ನು ನಡೆಸಬೇಕಾದರೆ, ಒಡವೆ, ಬಟ್ಟೆಬರೆಗಳನ್ನು ಕೂಡಿಡುವಷ್ಟರ ಮಟ್ಟಿಗೆ ಹೈರಾಣಾಗಿ ಬಿಡುತ್ತಾರೆ. ಈಗಿನ ಕೆಲ ಮದುವೆ, ಗೃಹಪ್ರವೇಶ, ಸೀಮಂತ, ನಿಶ್ಚಿತಾರ್ಥದಂತಹ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ತುಲನೆ ಮಾಡಿದಾಗ ಈ ಹಿಂದಿನ ಕಾಲದಲ್ಲಿ 5-6 ಮಂದಿಗೆ ಮದುವೆ ನಡೆಸುವಷ್ಟರ ಮಟ್ಟಿಗೆ ವ್ಯಯಿಸಲಾಗುತ್ತಿದೆ. ಉಳ್ಳವರು ಎಲ್ಲವನ್ನೂ ಮಾಡುವರು ಆದರೆ ನಮ್ಮ ಸಮಾಜದಲ್ಲಿ ಒಂದು ಮದ್ಯಮ ವರ್ಗ, ಬಡ ವರ್ಗ ಎಂಬುದು ಇದೆಯಲ್ಲಾ ಈ ವರ್ಗ ಇದರ ಪೆಟ್ಟು ವ್ಯಾಪಕ ಪ್ರಮಾಣದಲ್ಲಿ ತಿನ್ನುತ್ತಿವೆ.
ಇನ್ನು ಕೌಟುಂಬಿಕ, ದಾಂಪತ್ಯ ಜೀವನಗಳಿರಬಹುದು ಇದು ಯಾವುದೇ ಶೋಕಿ, ಪ್ರಯೋಗ, ತೋರ್ಪಡಿಕೆಯ ವಿಚಾರಗಳಾಗದೆ ಮೌಲ್ಯವನ್ನು ಉಳಿಸಿಕೊಂಡು ಸಾಗಬೇಕು. ಗುರು ಹಿರಿಯರು ಬಂಧು ಬಳಗವನ್ನು ಒಟ್ಟಾಗಿ ಕರೆದೊಯ್ಯುವ ವ್ಯವಸ್ಥೆಗಳಾಗಬೇಕು. ಸವಾಲು, ಕ್ಷುಲ್ಲಕ ಕಾರಣಗಳ ಸೇಡು, ಹಠ, ಜಿದ್ದು, ಸ್ವಾರ್ಥ ಎಂಬುವುದು ಸಂಸಾರದಲ್ಲಿ ಸೋಕಿದಾಗ ಅಲ್ಲಿ ಬಿರುಕು, ವ್ಯತ್ಯಯಗಳಾಗುವುದನ್ನು ಕಾಣುತ್ತೇವೆ. ಎಷ್ಟೇ ಸಂಪತ್ತು, ಐಶ್ವರ್ಯಗಳಿದ್ದರೂ ಒಬ್ಬ ಮನುಷ್ಯನ ಜೀವಿತಾವಧಿಯಲ್ಲಿ ಮಾತ್ರ ಅದು ಪ್ರಯೋಜನಕ್ಕೆ ಬರುವುದೇ ವಿನಹ ಸತ್ತ ಮೇಲೆ ಎಲ್ಲವೂ ನಗಣ್ಯ. ಆ ಕಾರಣಕ್ಕೆ ಮನುಷ್ಯನಿಗೆ ಬಹುಮುಖ್ಯವಾಗಿ ಬೇಕಿರುವುದು ಆರೋಗ್ಯ. ಮತ್ತೊಂದು ಕೌಟುಂಬಿಕ ವ್ಯವಸ್ಥೆಯಲ್ಲಿ ನೆಮ್ಮದಿ. ಇದರಲ್ಲಿ ಸಮತೋಲನ ತಪ್ಪಿದಾಗ ಎಷ್ಟೇ ಕೂಡಿಟ್ಟರೂ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಪರಿತಪಿಸುವ ಮಂದಿಯನ್ನು ಕಾಣುತ್ತೇವೆ. ವರ್ಷಗಳು ಉರುಳಿದಂತೆ ಒಂದಷ್ಟು ಪ್ರಭಾವಗಳಿಗೆ ಒಳಗಾಗಿ, ಒತ್ತಡದ ಬದುಕಿಗೆ ಮನುಷ್ಯನ ಜೀವನ ಸಾಗುತ್ತಿರುವುದು ಒಂದೆಡೆ ಭಾವನೆ, ಮಾನವೀಯ ಸಂಬಂಧಗಳನ್ನು ಮೀರಿದ ವರ್ತನೆಗಳು ಮತ್ತೊಂದೆಡೆ. ಕೌಟುಂಬಿಕ ವ್ಯವಸ್ಥೆಗಳ ಅಡಿಪಾಯ ಭದ್ರಗೊಂಡಾಗ ದೇಶದ ಭವಿಷ್ಯವು ಉಜ್ವಲವಾಗಲಿದೆ. ಭಾರತದ ಕುಟುಂಬ ವ್ಯವಸ್ಥೆಗಳು ಕೂಡಾ ವಾಣಿಜ್ಯಾತ್ಮಕ ದಿಕ್ಕಿನಲ್ಲಿ ಸಾಗದೇ ಹಿರಿಯರು ಹಾಕಿ ಕೊಟ್ಟ ಮೌಲ್ಯವನ್ನು ಉಳಿಸಿಕೊಂಡು ಬೆಳೆಸಿಕೊಂಡು ಮುಂದೆ ಸಾಗಬೇಕಾದ ಹೊಣೆಗಾರಿಕೆ ಯುವ ಪೀಳಿಗೆಯ ಮೇಲಿದೆ.
ಬರಹ : ಆದರ್ಶ್ ಶೆಟ್ಟಿ ಉಪ್ಪಿನಂಗಡಿ

























































































































