
ಆಯುರ್ವೇದದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಕೇವಲ ಪುಸ್ತಕಗಳಿಗೆ ಸೀಮಿತವಾಗದೆ, ಸಮಾಜಕ್ಕೆ ಉಪಯೋಗವಾಗುವ ಹಾಗೂ ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡಬಲ್ಲ ಸಂಶೋಧನೆಯಾಗಬೇಕು ಎಂದು ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀ ನಾರಾಯಣ ಶೆಣೈ ಹೇಳಿದರು. ಅವರು ಆಳ್ವಾಸ್ ಆಯುರ್ವೇದ ಕಾಲೇಜಿನ ಆತ್ಮ ಸಂಶೋಧನಾ ಕೇಂದ್ರ, ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಅಲೋಕ 2026 ನ್ನು ಉದ್ಘಾಟಿಸಿ ಮಾತನಾಡಿದರು. ಆಯುರ್ವೇದದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಹೆಚ್ಚು ಉಪಯುಕ್ತವಾಗುವಂತೆ ಮಾಡಬೇಕು. ಕೇವಲ ಸಿದ್ಧಾಂತದ ಹಂತದಲ್ಲಿ ಉಳಿಯದೆ, ಅವು ಜನರ ಆರೋಗ್ಯಕ್ಕೆ ನೇರವಾಗಿ ಪ್ರಯೋಜನವಾಗಬೇಕು. ಸಂಶೋಧನೆಯಿಂದ ಹೊಸ ಔಷಧಿಗಳು, ಆರೋಗ್ಯ ಉತ್ಪನ್ನಗಳು ಮತ್ತು ಚಿಕಿತ್ಸಾ ವಿಧಾನಗಳು ಅಭಿವೃದ್ಧಿಯಾಗಬೇಕು. ಇವುಗಳು ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಪಡೆಯುವಂತಾದರೆ ಆಯುರ್ವೇದ ಕ್ಷೇತ್ರಕ್ಕೆ ಆರ್ಥಿಕ ಲಾಭವೂ ಹೆಚ್ಚುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಎಂ. ಮೋಹನ ಆಳ್ವ, ಹಿಂದೆ ಆಯುರ್ವೇದದಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಮಹತ್ವವಿರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಪುರಾವೆ ಮತ್ತು ದಾಖಲೆಗಳು ಅತ್ಯಂತ ಅಗತ್ಯ. ಪುರಾವೆ ಇಲ್ಲದೆ ಹೇಳುವ ವಿಷಯಗಳು ವಿಶ್ವಾಸಾರ್ಹವಾಗುವುದಿಲ್ಲ. ಆಯುರ್ವೇದ ಕ್ಷೇತ್ರದ ಸಂಶೋಧನೆಗಳನ್ನು ದಾಖಲೆಗಳ ಮೂಲಕ ವಿಶ್ವಕ್ಕೆ ಪರಿಚಯಿಸಿ, ಅವುಗಳನ್ನು ವ್ಯಾಪಾರ ಕ್ಷೇತ್ರಕ್ಕೂ ತಲುಪಿಸಬೇಕಾಗಿದೆ. ಆಯುರ್ವೇದಕ್ಕೆ ಸಂಬಂಧಿಸಿದ ಅನೇಕ ವ್ಯಾಪಾರಗಳನ್ನು ಇತರರು ನಡೆಸುತ್ತಿರುವುದು ಕಾಣುತ್ತಿದ್ದೇವೆ. ಆದ್ದರಿಂದ ಆಯುರ್ವೇದ ವಿದ್ಯಾರ್ಥಿಗಳು ಕೂಡಾ ಈ ಕ್ಷೇತ್ರದ ಅವಕಾಶಗಳನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು. ಕೇಂದ್ರ ಸರ್ಕಾರ ಈ ವರ್ಷದ ಬಜೆಟ್ನಲ್ಲಿ ಆಯುರ್ವೇದಕ್ಕೆ ೪೦೦೦ ಕೋಟಿಗೂ ಅಧಿಕ ಅನುದಾನವನ್ನು ಘೋಷಿಸಿರುವುದು ಆಯುರ್ವೇದ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ವತಿಯಿಂದ ಡಾ. ಎಂ. ಮೋಹನ ಆಳ್ವ ಅವರನ್ನು ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ನಂತರದ ಅಧಿವೇಶನಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸುಶೀಲ್ ಶೆಟ್ಟಿ, ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ನ ಮುಖ್ಯಸ್ಥ ಪ್ರೊ. ಶ್ರೀನಾಥ್ ರಾಮ್ಪೂರೆ, ಆತ್ಮ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಸುಬ್ರಮಣ್ಯ ಪದ್ಯಾಣ, ಸ್ನಾತಕೋತ್ತರ ವಿಭಾಗದ ಡೀನ್ ಮಂಜುನಾಥ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಗೀತಾ ಮಾರ್ಕಂಡೇಯ ನಿರೂಪಿಸಿ, ಡಾ. ಸುಮಂತ ಶೆಣೈ ವಂದಿಸಿದರು.


























































































































