ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಟೆಕ್ ಪಾರ್ಕ್ನಲ್ಲಿ ಸ್ವಿಚ್ಗೇರ್ ಅಂಡ್ ಕಂಟ್ರೋಲ್ ಟೆಕ್ನಿಕ್ಸ್ ಪ್ರೈವೇಟ್ ಲಿಮಿಟೆಡ್ ನ ಹೊಸ ಘಟಕವನ್ನು ಉದ್ಘಾಟಿಸಲಾಯಿತು. ಘಟಕ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು, “ಇಂತಹ ಅಂತರರಾಷ್ಟ್ರೀಯ ಕಂಪನಿಗಳು ಕರಾವಳಿ ಭಾಗದಲ್ಲಿ ಸ್ಥಾಪನೆಯಾಗುವುದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳು ದೊರೆತು, ಅವರ ಪ್ರತಿಭೆಗೆ ಪೂರಕ ಪ್ರೋತ್ಸಾಹ ದೊರೆಯಲಿದೆ ಎಂದು ಹೇಳಿದರು. ಪ್ರಸ್ತುತ ಆಳ್ವಾಸ್ ಟೆಕ್ ಪಾರ್ಕ್ನಲ್ಲಿ 8 ಕಾರ್ಪೊರೇಟ್ ಕಂಪನಿಗಳು, 4 ಸ್ಟಾರ್ಟ್ಅಪ್ಗಳು ಮತ್ತು 2 ‘ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುತ್ತಿವೆ. ಈಗಾಗಲೇ 75 ವಿದ್ಯಾರ್ಥಿಗಳು ತಮ್ಮ 12 ಹೊಸ ಸ್ಟಾರ್ಟ್ಅಪ್ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಸಕ್ರಿಯ ತರಬೇತಿ ಪಡೆಯುತ್ತಿದ್ದಾರೆ. ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಟೈ , ಸಿಐಐ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳ ಸಹಕಾರ ಲಭ್ಯವಾಗಿದೆ ಎಂದರು.ಲಿಮಿಟೆಡ್ ನ ನಿರ್ದೇಶಕ ಹರ್ಷಿತ್ ಶೆಟ್ಟಿ ಮಾತನಾಡಿ, “ನಮ್ಮ ಕಂಪನಿ 2004ರಲ್ಲಿ ಸ್ಥಾಪನೆಯಾದ ಭಾರತೀಯ ಸಂಸ್ಥೆಯಾಗಿದ್ದು, ಲೋ ಮತ್ತು ಮಿಡಿಯಂ ವೋಲ್ಟೇಜ್ ಸ್ವಿಚ್ಬೋರ್ಡ್ಗಳು, ಬಸ್ವೇ ವ್ಯವಸ್ಥೆಗಳು ಹಾಗೂ ಶೀಟ್ ಮೆಟಲ್ ಎನ್ಕ್ಲೋಸರ್ ತಯಾರಿಕೆಯಲ್ಲಿ ಪರಿಣತಿ ಹೊಂದಿದೆ. ವಿದ್ಯುತ್ ವಿತರಣೆ, ಶಕ್ತಿ ನಿರ್ವಹಣೆ ಮತ್ತು ಕೈಗಾರಿಕಾ ಸ್ವಯಂಚಾಲಿತ ಪರಿಹಾರಗಳಲ್ಲಿ ಕಂಪನಿಯು ಸಮಗ್ರ ಸೇವೆಗಳನ್ನು ನೀಡುತ್ತಿದೆ” ಎಂದು ತಿಳಿಸಿದರು. ಸದ್ಯ 100 ಕೋಟಿ ವ್ಯವಹಾರ ನಡೆಸುತ್ತಿದ್ದು, ಮುಂದಿನ ವರ್ಷಗಳಲ್ಲಿ 1000 ಕೋಟಿಯ ವ್ಯವಹಾರ ವೃದ್ಧಿಸುವ ಗುರಿಯಿದೆ ಎಂದರು. ಮೂಡುಬಿದಿರೆಯಲ್ಲಿ ಆರಂಭಗೊಂಡ ಈ ಘಟಕವನ್ನು ಮಿನಿಯೇಚರ್ (ಕಂಪನಿಯ ಉತ್ಪನ್ನಗಳ ಸಣ್ಣ ರೂಪ) ತಯಾರಿಕಾ ಕೇಂದ್ರವಾಗಿ ಬಳಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕೆಲಸದ ಅನುಭವ ದೊರೆಯಲಿದ್ದು, ತರಬೇತಿ ಪಡೆಯುವಾಗಲೇ ಸಂಪಾದನೆ ಮಾಡುವ ಅವಕಾಶವೂ ಸಿಗಲಿದೆ. ಇಲ್ಲಿ ತರಬೇತಿ ಪಡೆಯುವವರು ಭವಿಷ್ಯದಲ್ಲಿ ಹೊಸದಾಗಿ ಸೇರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದ ಹರ್ಷಿತ್ ಶೆಟ್ಟಿ, ತನ್ನ ಇಂದಿನ ಸಾಧನೆಗೆ ಡಾ. ಎಂ. ಮೋಹನ ಆಳ್ವರಿಂದ ಕಲಿತ ಸಮಯಪಾಲನೆ, ಶಿಸ್ತು ಮತ್ತು ಪರಿಶ್ರಮವೇ ಮೂಲಾಧಾರ ಎಂದರು.
ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚರ್ಯ ಡಾ ಪೀಟರ್ ಫೆರ್ನಾಂಡೀಸ್ ಲಿಮಿಟೆಡ್ ನ ನಿರ್ದೇಶಕ ವಿನಯ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉದ್ಯಮಶೀಲಾ ಅಭಿವೃದ್ಧಿ ಕೋಶದ ಮುಖ್ಯಸ್ಥ ವೇಣುರಾವ್ ದೇವ್, ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ಡಾ ಕುಮಾರಸ್ವಾಮಿ ಹಾಗೂ ಶ್ರೀನಿವಾಸ ಇದ್ದರು.
