ಬಹರೈನಿನಲ್ಲಿ ನಡೆದ ಬಂಟ್ಸ್ ಬಹರೈನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಡಾ. ಭರತ್ ಶೆಟ್ಟಿ (ಶಾಸಕರು, ಮಂಗಳೂರು ನಗರ ಉತ್ತರ), ಕಿಶೋರ್ ಆಳ್ವ (ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು, ಅದಾನಿ ಗ್ರೂಪ್) ಮತ್ತು ಚಲನಚಿತ್ರ ನಟ ವಜ್ರಾಂಗ್ ಶೆಟ್ಟಿ ಅವರು ಕನ್ನಡ ಸಂಘ ಬಹರೈನ್ನ ಆಹ್ವಾನವನ್ನು ಸ್ವೀಕರಿಸಿ ಕನ್ನಡ ಭವನಕ್ಕೆ ಸಂದರ್ಶನ ನೀಡಿದರು. ಅತಿಥಿಗಳನ್ನು ಸಂಘದ ಅಧ್ಯಕ್ಷ ಅಜಿತ್ ಬಂಗೇರ ಹಾಗೂ ಪದಾಧಿಕಾರಿಗಳು ಹೂಗುಚ್ಛ, ಶಾಲು ಮತ್ತು “ಕಾವೇರಿ” ಸ್ಮರಣ ಸಂಚಿಕೆ ನೀಡಿ ಗೌರವಿಸಿದರು. ಕನ್ನಡ ಸಂಘ ಬಹರೈನ್ನ ಸಾಧನೆ ಹಾಗೂ ವಿದೇಶಿ ನೆಲದಲ್ಲೂ ಕನ್ನಡ ಸಂಸ್ಕೃತಿಯ ಪೋಷಣೆಗಾಗಿ ಅತಿಥಿಗಳು ಸಂತೋಷ ವ್ಯಕ್ತಪಡಿಸಿದರು. ಡಾ. ಭರತ್ ಶೆಟ್ಟಿ, ಕಿಶೋರ್ ಆಳ್ವ ಮತ್ತು ವಜ್ರಾಂಗ್ ಶೆಟ್ಟಿ ಅವರು ಸ್ಥಳೀಯ ಕನ್ನಡಿಗರ ಭಾಷಾಭಿಮಾನಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಅಮರನಾಥ್ ರೈ, ಮಾಜಿ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಬಂಟ್ಸ್ ಬಹರೈನ್ ಉಪಾಧ್ಯಕ್ಷ ಅಜೇಯ್ ಶೆಟ್ಟಿ ಹಾಗೂ ಅನೇಕ ಸದಸ್ಯರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್ ಅಮ್ಮೆನಡ್ಕ ಅವರು ಸ್ವಾಗತ ಹಾಗೂ ವಂದನಾರ್ಪಣೆ ಸಲ್ಲಿಸಿದರು.