
ಜಯಕಿರಣ ಫಿಲಂಸ್ ಲಾಂಛನದಲ್ಲಿ, ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಅದ್ಭುತವಾಗಿ ಸಿದ್ಧಗೊಂಡಿರುವ ‘ನಾನ್ ವೆಜ್’ ತುಳು ಸಿನಿಮಾ ಫೆಬ್ರವರಿ 6 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಈ ಸಿನಿಮಾವನ್ನು ಎಲ್ಲಾ ಮಲ್ಟಿಪ್ಲೆಕ್ಸ್ನಲ್ಲೂ ಕೇವಲ 99 ರೂ.ಗೆ ನೋಡಬಹುದಾಗಿದೆ. ದುಬಾರಿ ಟಿಕೆಟ್ ಕೊಟ್ಟು ಸಿನಿಮಾ ನೋಡಲು ಸಾಧ್ಯವಾಗದವರು ಇಂಥದ್ದೊಂದು ಸುಂದರ ಹಾಗೂ ಅತ್ಯುತ್ತಮ ಸಿನಿಮಾವನ್ನು ನೋಡದೆ ಇರಬಾರದು ಎಂಬ ಉದ್ದೇಶದಿಂದ ಕೇವಲ 99 ರೂ. ಟಿಕೆಟ್ ನಿಗದಿಪಡಿಸಿದ್ದು, ಇದು ತುಳು ಚಿತ್ರರಂಗದಲ್ಲಿ ಒಂದು ಹೊಸ ಸಂಚಲನ ಉಂಟು ಮಾಡಿದೆ. ಸಿಂಗಲ್ ಥಿಯೇಟರ್ಗಿಂತಲೂ ಕಡಿಮೆ ದರದಲ್ಲಿ ಈ ಸಿನಿಮಾವನ್ನು ತುಳು ಪ್ರೇಮಿಗಳು ಮಲ್ಟಿಫ್ಲೆಕ್ಸ್ ಗಳಲ್ಲಿ ನೋಡುವಂತಹ ಅವಕಾಶ ಇದಾಗಿದೆ ಎಂದು ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧವಾಗಿರುವ ನಾನ್ವೆಜ್ ಒಂದು ಅತ್ಯುತ್ತಮ ಹಾಗೂ ಭಿನ್ನ ಕಥಾವಸ್ತುವನ್ನು ಹೊಂದಿದೆ. ಸು ಫ್ರಂ ಸೋ ಸಿನಿಮಾದ ಹೆಚ್ಚಿನ ಕಲಾವಿದರು ನಾನ್ವೆಜ್ ಸಿನಿಮಾದಲ್ಲೂ ಇದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಕಾಶ್ ತೂಮಿನಾಡು, ಬಾವ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳಾರು, ದೀಪಕ್ ರೈ ಪಾಣಾಜೆ, ವಿಸ್ಮಯ ವಿನಾಯಕ್, ರೂಪಾ ವರ್ಕಾಡಿ ನಟಿಸಿದ್ದಾರೆ. ನಾಯಕಿಯಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ತಮ್ಮ ಅದ್ಭುತ ನಟನಾ ಕೌಶಲವನ್ನು ಪ್ರದರ್ಶಿಸಿದ್ದಾರೆ. ಜತೆಗೆ ಕುಸೇಲ್ದರಸೆ ನವೀನ್ ಡಿ. ಪಡೀಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ ಕೆಲವು ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಭರವಸೆಯ ನಾಯಕ ನಟ ಎಂದೇ ಗುರುತಿಸಿಕೊಂಡಿರುವ ಅಥರ್ವ ಪ್ರಕಾಶ್ ಪ್ರಮುಖ ಪಾತ್ರದಲ್ಲಿದ್ದಾರೆ ಎಂದವರು ಹೇಳಿದರು.

ಚಿತ್ರದ ನಿರ್ದೇಶಕ ಸೂರಜ್ ಶೆಟ್ಟಿ ಮಾತನಾಡಿ, ಚಿತ್ರದಲ್ಲಿ ಹಾಸ್ಯಕ್ಕೆ ಯಾವುದೇ ಕೊರತೆಯಿಲ್ಲ. ಮನೋರಂಜನೆಯೂ ಕಡಿಮೆ ಇಲ್ಲ. ಸಂದೇಶ ಕಥೆಯೂ ಅದ್ಭುತವಾಗಿದೆ. ನಾನ್ವೆಜ್ ವಿಷಯವೇ ಎಲ್ಲರಿಗೂ ಖುಷಿ ಕೊಡಲಿದೆ. ಪ್ರೀತಿಯ ಹಿಂದೆ ಹೋಗುತ್ತಿರುವ ಮುಗ್ಧ ಯುವಕನೊಬ್ಬನ ಸುತ್ತ ಹೆಣೆದಿರುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಆದ ಕಾರಣ ಇದು ಯುವ ಸಮುದಾಯವನ್ನು ಸೆಳೆಯುವ ಸಾಧ್ಯತೆ ನಿಚ್ಚಳವಾಗಿದೆ. ಮಕ್ಕಳೊಂದಿಗೆ ಹೆತ್ತವರು ಜತೆಯಾಗಿ ಕುಳಿತು ನೋಡಬೇಕಾದ ಸಿನಿಮಾವಾಗಿದ್ದು, ಇಡೀ ಸಿನಿಮಾದ ಕಥೆ ಹಾಗೂ ಸಂದೇಶವನ್ನು ಹಾಸ್ಯದಲ್ಲೇ ತೆಗೆದುಕೊಂಡು ಹೋಗಿರುವುದು ಒಂದು ದೊಡ್ಡ ಪ್ಲಸ್ ಪಾಯಿಂಟ್ ಎಂದು ಹೇಳಿದರು. ನಾಯಕ ನಟ ಅಥರ್ವ ಪ್ರಕಾಶ್ ಮಾತಾಡಿ, ನಾನ್ವೆಜ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಟೀಸರ್ನಲ್ಲಿರುವ ಪ್ರತಿಯೊಂದು ಅಂಶವೂ ಕುತೂಹಲ ಕೆರಳಿಸುತ್ತಿದ್ದು, ಒಂದು ಸೂಕ್ಷ್ಮ ವಿಷಯವನನ್ನು ಹಿಡಿದುಕೊಂಡು ಕಥೆಯನ್ನು ಎಷ್ಟು ಹಾಸ್ಯಮಯವಾಗಿ ಕೊಂಡೊಯ್ಯಲಾಗಿದೆ ಎಂಬುದನ್ನು ಟೀಸರ್ ತೋರಿಸುತ್ತಿದೆ. ಮಕ್ಕಳ ಮನಸ್ಸೇ ಹಾಗೆ. ವಿಜ್ಞಾನಿಗಳಂತೆ ಅವರು ಒಂದು ವಿಷಯಕ್ಕಾಗಿ ಶೋಧಿಸುತ್ತಲೇ ಇರುತ್ತಾರೆ. ಸಿನಿಮಾದಲ್ಲಿ ಒಂದು ಪ್ರಮುಖ ಟ್ವಿಸ್ಟ್ ಇದ್ದು, ಅದರ ಮೂಲಕ ಇಡೀ ಕಥೆಯನ್ನು ಸುಂದರವಾಗಿ ಹಾಸ್ಯದಿಂದಲೇ ಕೊಂಡೊಯ್ಯಲಾಗಿದೆ. ಟ್ರೆಂಡ್ನಲ್ಲಿರುವ ಎಲ್ಲಾ ಪ್ರಮುಖ ಕಲಾವಿದರೂ ಈ ಸಿನಿಮಾದಲ್ಲಿದ್ದಾರೆ. ಟೀಸರ್ ಸೂಪರ್ ಆಗಿದೆ. ಸಿನಿಮಾವಂತೂ ಭರ್ಜರಿ ಮನೋರಂಜನೆ ನೀಡಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿಸ್ಮಯ ವಿನಾಯಕ್, ಬಾಳ ಜಗನ್ನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.





















































































































