1929 ಜುಲಾಯಿ ತಿಂಗಳ 26 ನೇ ತಾರೀಕಿನಂದು ಕೆ ಸಂಕಪ್ಪ ಶೆಟ್ಟಿ ಹಾಗೂ ಮಹಾಲಕ್ಷ್ಮಿ ದಂಪತಿಗಳ ಮುದ್ದಿನ ಮಗನಾಗಿ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಕುಲ್ಲಂಜ ಎಂಬಲ್ಲಿ ಜನಿಸಿ, ತನ್ನ ಒಡಹುಟ್ಟಿದ ಸಹೋದರಿಯೊಂದಿಗಿನ ವಾತ್ಸಲ್ಯ, ತತ್ ತತ್ಸಂಬಂಧ ತಮ್ಮ ಭಾವನವರಾದ ಪಂಡಿತ್ ವೆಂಕಪ್ಪ ರೈಗಳ ಅಕ್ಕರೆ ಉಪ್ಪಿನಂಗಡಿಗೆ ಬರುವಂತಾಗಿತ್ತು. ಪ್ರೌಢ ಶಿಕ್ಷಣವನ್ನು ಪಡೆದ ಬಳಿಕ ಭಾವ ವೆಂಕಪ್ಪ ರೈಯವರ ಮಾರ್ಗದರ್ಶನದಲ್ಲಿ ಔಷಧಿ ತಯಾರಿಕೆಯಲ್ಲಿ ನೈಪುಣ್ಯತೆಯನ್ನು ಪಡೆದು, ಬ್ರಿಟಿಷ್ ಸರಕಾರದ ಅವಧಿಯಲ್ಲಿ ನಡೆಸುತ್ತಿದ್ದ ಪಾರಂಪರಿಕ ವೈದ್ಯ ಶಾಸ್ತ್ರದ ವೈದ್ಯ ವಿಶಾರದಾ ಪದವಿ ಪರೀಕ್ಷೆಯನ್ನು ಉತ್ತೀರ್ಣರಾಗಿ ವೈದ್ಯ ಕೆ ಎಸ್ ಶೆಟ್ಟಿ ಎಂಬ ಹೆಸರಿನೊಂದಿಗೆ ಜನಾನುರಾಗಿಯಾಗಿದ್ದರು. ಈ ಮಣ್ಣಿನಲ್ಲಿ ದೈವದತ್ತವಾಗಿ ಲಭಿಸಿರುವ ಔಷಧೀಯ ಗುಣಗಳನ್ನು ಹೊಂದಿರುವ ಗಿಡಮೂಲಿಕೆಗಳ ಬಗ್ಗೆ ಅಮೂಲಾಗ್ರ ಮಾಹಿತಿಯನ್ನು ಹೊಂದಿ, ದ.ಕ ಜಿಲ್ಲೆಯ ಶಿರಾಡಿ ದಟ್ಟಾರಣ್ಯದವರೆಗೂ ಸಂಚರಿಸಿ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಬಗೆ ಬಗೆಯ ಔಷಧಿಗಳನ್ನು ತಯಾರಿಸಿದ ಹೆಗ್ಗಳಿಕೆಯನ್ನು ಹೊಂದಿದ್ದ ಇವರು ವೈದ್ಯ ಪರಂಪರೆಯ ಶ್ರೇಷ್ಠತೆಯನ್ನು ಬೆಳಗಿಸಿದ್ದರು. ಅಂದು ತನ್ನ 13ನೇ ವಯಸ್ಸಿನಲ್ಲಿ ಅರ್ಥಾತ್ 1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ದಾಸ್ಯದ ಸಂಕೇತವಾದ ಆಂಗ್ಲರ ವಸ್ತುಗಳನ್ನು ತ್ಯಜಿಸಬೇಕೆಂಬ ಗಾಂಧೀಜಿ ಕರೆಗೆ ಸ್ಪಂದಿಸಿ ಕಗ್ಗತಲಿನ ರಾತ್ರಿಯಲ್ಲಿ ಬ್ರಿಟೀಷರ ವಿರುದ್ದ ಗೋಡೆ ಬರಹವನ್ನು ಬರೆಯುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ಅಳಿಲ ಸೇವೆ ನೀಡಿದ ಕೀರ್ತಿ ಅವರದ್ದಾಗಿತ್ತು.

ಯಕ್ಷಗಾನ ತಾಳಮದ್ದಲೆಯಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದ ಅವರು, ಭೀಮ, ದುಶ್ಯಾಸನ ಹಾಗೂ ಕಠಿಣ ಸ್ವರದ ರಾಕ್ಷಸರ ಪಾತ್ರಕ್ಕೆ ಜೀವ ತುಂಬಿಸುವ ಅರ್ಥಗಾರಿಕೆಯನ್ನು ಕರಗತ ಮಾಡಿಕೊಂಡಿದ್ದರು. ಯಕ್ಷಗಾನ ಕ್ಷೇತ್ರದ ನಂಟಿನಲ್ಲಿ ಭಾಗವತಿಕೆಯಲ್ಲೂ ಸ್ವ ಅಧ್ಯಾಯವನ್ನು ನಡೆಸಿ ಒಂದೆರಡು ಭಾಗವತಿಕೆಯನ್ನು ನಿರ್ವಹಿಸಿದ ಹಿರಿಮೆ ಅವರದ್ದಾಗಿತ್ತು. ಉಪ್ಪಿನಂಗಡಿ ಪರಿಸರದಲ್ಲಿ ಯಕ್ಷಗಾನ ಕಲೆ ಬೆಳೆಯಬೇಕೆಂಬ ಆಶಯದೊಂದಿಗೆ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿದ್ದರು. ಅವರ 35 ನೇ ವಯಸ್ಸಿನವರೆಗೆ ಯಕ್ಷಗಾನದ ಜೊತೆಗೆ ನಾಟಕ ರಂಗದಲ್ಲೂ ಮಹಾನ್ ಸಾಧಕರಾಗಿದ್ದು, ಹಾಸ್ಯ ನಟನಾಗಿಯೂ ಜನ ಮೆಚ್ಚುಗೆ ಗಳಿಸಿದ್ದ ಅವರು ಉಪ್ಪಿನಂಗಡಿಯ ಸರಕಾರಿ ಪ್ರೌಢ ಶಾಲೆಯನ್ನು ನಿರ್ಮಿಸುವರೇ ಆರ್ಥಿಕ ಕೊರತೆ ಎದುರಾಗಿದ್ದ ಅಂದಿನ ದಿನಗಳಲ್ಲಿ ಜಿಲ್ಲೆಯ ಹಲವೆಡೆ ನಾಟಕ ಪ್ರದರ್ಶನಗಳನ್ನು ನೀಡಿ ಸಾವಿರಾರು ರೂಪಾಯಿ ಸಂಗ್ರಹಿಸುವಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದರು.
ಉಪ್ಪಿನಂಗಡಿ ಸರಕಾರಿ ಮಾದರಿ ಶಾಲಾ ಹಳೇ ವಿದ್ಯಾರ್ಥಿ ಸಂಘದ ಸಂಸ್ಥಾಪನೆ ಮತ್ತದರ ಸಶಕ್ತ ಮುನ್ನಡೆಸುವಿಕೆಯಲ್ಲಿಯೂ ಮಹತ್ವದ ಪಾತ್ರವಹಿಸಿದ್ದರು. ಜನತೆಯಲ್ಲಿ ಧಾರ್ಮಿಕ ಭಾವನೆಯನ್ನು ಜಾಗೃತಗೊಳಿಸಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕಾಗಿ ಉಪ್ಪಿನಂಗಡಿಯಲ್ಲಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯನ್ನು ಸ್ಥಾಪಿಸಿದಲ್ಲದೆ, ಅದರ ಸ್ಥಾಪಕಾಧ್ಯಕ್ಷರಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದ ಶ್ರೀಯುತರು ಜುಲೈ ತಿಂಗಳಲ್ಲಿ ನಿಧನರಾದರು.