ಕಳೆದ ಐದು ದಶಕಗಳಿಂದ ಮುಂಬೈಯಲ್ಲಿ ಊರು ಪರವೂರಿನ ಬೇರೆ ಬೇರೆ ಮೇಳಗಳ, ತಂಡಗಳ ಸಾವಿರಾರು ತೆಂಕು ಬಡಗು ಯಕ್ಷಗಾನ ಬಯಲಾಟ, ತಾಳಮದ್ದಳೆ, ನಾಟಕಗಳನ್ನು ವೀಕ್ಷಣೆ ಮಾಡಿರುವ ಅಪೂರ್ವ ಕಲಾಭಿಮಾನಿ, ಕಲಾ ವಿಮರ್ಶಕ ಭಾಸ್ಕರ ಶೆಟ್ಟಿ ಕಾಜುಪಾಡ ಅವರನ್ನು ಕುರ್ಲಾ ಜೆರಿಮೆರಿ ಕನ್ನಡ ಸಂಘದಲ್ಲಿ ನಡೆದ “ಶನೀಶ್ವರ ಮಹಾತ್ಮೆ” ಯಕ್ಷಗಾನ ಕಾರ್ಯಕ್ರಮದಲ್ಲಿ “ಕಲಾವಲ್ಲಭ” ಬಿರುದು ನೀಡಿ ಅಭಿನಂದಿಸಲಾಯಿತು. ಉದ್ಯಮಿ ರವೀಂದ್ರನಾಥ ಭಂಡಾರಿ ಅವರು ಅಧ್ಯಕ್ಷತೆ ವಹಿಸಿದ್ದರು. ಮುಂಬೈಯ ಕಳೆದ ಐದು ದಶಕಗಳ ಸಾಂಸ್ಕೃತಿಕ, ಸಾಮಾಜಿಕ ಸ್ಥಿತಿ ಗತಿಗಳ ಅಪೂರ್ವ ಅನುಭವ ಸಂಪನ್ನ ಭಾಸ್ಕರ ಶೆಟ್ಟಿ ಅವರು ಪಕ್ಷಿಕೆರೆ ಶನೀಶ್ವರ ಮಂಡಳಿಯ ಮುಂಬೈಯ ಆರು ಯಕ್ಷಯಾನ ವೀಕ್ಷಣೆ ಮಾಡಿ ಪ್ರೋತ್ಸಾಹ ನೀಡಿದವರು. ಖಳ ಪಾತ್ರಗಳನ್ನು ನಿರ್ವಹಿಸುತ್ತಿರುವ ಕಲಾವಿದರ ಮಹಾ ಅಭಿಮಾನಿ ಆಗಿರುವುದು ಇವರ ವಿಶೇಷತೆ ಎಂದು ಕದ್ರಿ ನವನೀತ ಶೆಟ್ಟಿ ಅಭಿನಂದಿಸಿದರು.

ಶ್ಯಾಮ್ ಸಾಲಿಯಾನ್, ಹಿರಿಯ ರಂಗ ನಟ ಉಮೇಶ್ ಶೆಟ್ಟಿ, ನಾಗೇಶ್ ಪೂಜಾರಿ, ನಿತ್ಯಾನಂದ ಗುರು ಸ್ವಾಮಿ, ಹೇಮಂತ ಶೆಟ್ಟಿ ಕಾವೂರು ಗುತ್ತು, ಜಯರಾಮ ಶೆಟ್ಟಿ ಅತಿಥಿಗಳಾಗಿದ್ದರು. ಶನೀಶ್ವರ ಭಕ್ತ ವೃoದದ ಪ್ರಧಾನ ಸಂಚಾಲಕ ಪದ್ಮನಾಭ ಶೆಟ್ಟಿಗಾರ, ಮುಂಬೈ ಸಾರಥಿ ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು, ಸಹ ಸಂಚಾಲಕ ಪ್ರಸನ್ನ ಶೆಟ್ಟಿ ಅತ್ತೂರು ಗುತ್ತು ಹಾಗೂ ಸದಸ್ಯರು ಉಪಸ್ಥಿತರಿದ್ದರು.