ಸಾಂಸ್ಕೃತಿಕ ನಗರಿ ಪುಣೆಯ ಕನ್ನಡಿಗರ ಹಿರಿಮೆಯ ಸಂಸ್ಥೆ 73ರ ಹರೆಯದ ಪುಣೆ ಕನ್ನಡ ಸಂಘವು ಶೈಕ್ಷಣಿಕವಾಗಿ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಕನ್ನಡ ಸೇವೆಗೈಯುತ್ತಾ ಕನ್ನಡ ಅಭಿಮಾನಿಗಳಿಗೆಲ್ಲರಿಗೂ ಮಾತೃ ಸಂಸ್ಥೆಯಾಗಿ ಬೆಳೆದು ನಿಂತಿದೆ. 1952 ರಲ್ಲಿ ಸ್ಥಾಪನೆಗೊಂಡ ಕನ್ನಡ ಸಂಘವು ಮೊದಲು ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿತ್ತು. ಬಳಿಕದ ದಿನಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದ್ದು, ಪ್ರಾಥಮಿಕ ಶಿಕ್ಷಣದಿಂದ ಉಚ್ಚ ಶಿಕ್ಷಣದವರೆಗೆ ಪ್ರಸ್ತುತ ಕನ್ನಡ ಸಂಘದ ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. 500ಕ್ಕೂ ಹೆಚ್ಚು ಶಿಕ್ಷಕರು ಮತ್ತು ಶಿಕ್ಷಕೇತರ ಸಿಬಂದಿ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳು :
ನಗರದ ಬಾಣೇರ್, ಕೇತ್ಕರ್ ರೋಡ್, ಗಣೇಶ್ ನಗರ, ಲೋಹ್ ಗಾಂವ್ ನಲ್ಲಿ ಕ್ಯಾಂಪಸ್ ಗಳನ್ನು ಹೊಂದಿರುವ ಕನ್ನಡ ಸಂಘದ ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಗಳು ಪುಣೆಯ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿ ಗುರುತಿಸಿಕೊಂಡಿರುವುದು ಸಂಘದ ಹೆಗ್ಗಳಿಕೆಯಾಗಿದೆ. ಸಾಹಿತ್ಯ ಕ್ಷೇತ್ರಕ್ಕೂ ಬಹಳಷ್ಟು ಕೊಡುಗೆ ನೀಡುತ್ತಿರುವ ಪುಣೆ ಕನ್ನಡ ಸಂಘವು ಕಳೆದ 17 ವರ್ಷಗಳಿಂದ ನಿರಂತರವಾಗಿ ಕವಿಗೋಷ್ಠಿ ಆಯೋಜಿಸಿ ಪುಣೆಯಲ್ಲಿರುವ ಕವಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಕನ್ನಡ ಯಕ್ಷಗಾನ, ನಾಟಕ, ನೃತ್ಯ, ಗಾಯನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.
ವಿವಿಧ ಕಾಲೇಜುಗಳು :
ಪ್ರಸ್ತುತ ಕುಶಲ್ ಹೆಗ್ಡೆ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಆಡಳಿತ ಸಮಿತಿ ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳ ಸಮಗ್ರ ಅಭಿವೃದ್ಧಿಗೆ ಹಗಲಿರಲು ಶ್ರಮಿಸುತ್ತಿದೆ. ಡಾ. ಕಲ್ಮಾಡಿ ಶಾಮರಾವ್ ಹೈಸ್ಕೂಲು, ಕಾವೇರಿ ಇಂಟರ್ನ್ಯಾಷನಲ್ ಸ್ಕೂಲ್, (ಐಸಿಎಸ್ಇ) ಡಾ. ಶಾಮರಾವ್ ಹೈಸ್ಕೂಲ್ ಸೆಕೆಂಡರಿ ಸೆಕ್ಷನ್ ಕನ್ನಡ ಮಾಧ್ಯಮ, ಡಾ. ಕಲ್ಮಾಡಿ ಶಾಮರಾವ್ ಜೂನಿಯರ್ ಕಾಲೇಜು, ಕಾವೇರಿ ಕಾಲೇಜ್ ಆಫ್ ಆರ್ಟ್ಸ್, ಸಾಯನ್ ಅಂಡ್ ಕಾಮರ್ಸ್ ಕಾಲೇಜುಗಳ ಸಂಸ್ಥೆಗೆ ಪ್ರತೀವರ್ಷ ಉತ್ತಮ ಫಲಿತಾಂಶದೊಂದಿಗೆ ಸಂಸ್ಥೆಯ ಕೀರ್ತಿಯನ್ನು ಇಮ್ಮಡಿಗೊಳಿಸಿದೆ.
ಕಲೆ, ಸಂಸ್ಕೃತಿಗೆ ಆದ್ಯತೆ : ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸ್ಟೂಡೆಂಟ್ ವೆಲ್ಫೇರ್ ಫಂಡ್ ಉಚಿತ ಶಾಲಾ ಪರಿಕರವನ್ನು ವಿತರಿಸಿ ಮಕ್ಕಳನ್ನು ಶಿಕ್ಷಣದೊಂದಿಗೆ ಆದರ್ಶ ಪ್ರಜೆಗಳನ್ನಾಗಿಸುವಲ್ಲಿ ಶ್ರಮಿಸುತ್ತಿದೆ. ಕನ್ನಡ ಸಂಘದ ಮುಖ್ಯ ಕಚೇರಿ ಗಣೇಶ ನಗರದಲ್ಲಿದ್ದು, ಜೊತೆಗೆ ಗಣೇಶ್ ನಗರದ ಶಕುಂತಲಾ ಜಗನ್ನಾಥ ಶೆಟ್ಟಿ ಸಭಾಂಗಣ, ಕೇತ್ಕರ್ ರೋಡ್ ನ ದಿವಂಗತ ಗುಂಡೂರಾಜ್ ಶೆಟ್ಟಿ ಸಭಾಭವನ ಪುಣೆಯ ತುಳು- ಕನ್ನಡಿಗರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಉತ್ತಮ ತಾಣವಾಗಿದೆ. ಸಂಘವು ಸುಸಜ್ಜಿತವಾದ ಗ್ರಂಥಾಲಯ ಹೊಂದಿದೆ.
ಲೇಖನ : ಹರೀಶ್ ಮೂಡಬಿದಿರೆ, ಪುಣೆ