ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ‘ವಿಕಸಿತ ಭಾರತದ ನಿರ್ಮಾಣಕ್ಕಾಗಿ ಭಾರತೀಯ ಯುವ ಜನತೆಯನ್ನು ವಿಜ್ಞಾನ ಹಾಗೂ ನಾವೀನ್ಯತೆಯ ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವ ನಿರ್ಮಾಣ’ ಎಂಬ ಘೋಷ ವಾಕ್ಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉಜಿರೆಯ ಎಸ್ ಡಿಎಂ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ದಿನೇಶ್ ಚೌಟ, ಯುವಜನರು ವಿಮರ್ಶಾತ್ಮಕ, ಸೃಜನಶೀಲ ಚಿಂತನೆ, ಸಂವಹನ, ಸಹಯೋಗ ಮತ್ತು ಸಮಯ ನಿರ್ವಹಣೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವಿಜ್ಞಾನ ವಿಷಯದಲ್ಲಿ ಶೈಕ್ಷಣಿಕ ಬೆಳವಣಿಗೆ ಸಾಧ್ಯ. ವಿಜ್ಞಾನದಲ್ಲಿ ನಾವೀನ್ಯತೆ ಕಂಡುಕೊಂಡು ಜಾಗತಿಕ ಬೆಳವಣಿಗೆಯಾಗಬೇಕಾದರೆ ಪರಿಣಾಮಕಾರಿ ಆಲಿಸುವಿಕೆ ಹಾಗೂ ನಿರಂತರ ಕಲಿಯುವಿಕೆ ಅಗತ್ಯ ಎಂದರು. ಭಾರತವು ಸೇರಿದಂತೆ ಜಗತ್ತಿನಾದ್ಯಂತ ವಿಜ್ಞಾನ ವಿಷಯದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರ ಕೊಡುಗೆಯನ್ನು ವಿವರಿಸಿದರು. ಬದುಕಿನಲ್ಲಿ ಯಶಸ್ವಿಯಾಗಲು ಮೂರು ‘ಎಲ್’ ಗಳಾದ ಲುಕಿಂಗ್, ಲರ್ನಿಂಗ್ ಹಾಗೂ ಲಿಸ್ನಿಂಗ್ನ ಅಗತ್ಯತೆಯನ್ನು ವಿವರಿಸಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಿವಿರಾಮನ್ ತಂಡ ಪ್ರಥಮ ಸ್ಥಾನ ಪಡೆದರು. ಕರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ , ವಿಜ್ಞಾನ ವಿಭಾಗದ ಡೀನ್ ರಮ್ಯಾ ರೈ, ಕರ್ಯಕ್ರಮ ಸಂಯೋಜಕರಾದ ಮಧುಶ್ರೀ, ವಸುಧಾ ಭಟ್, ಸುಹಾಸ್ ಹಾಗೂ ನಭ ಇದ್ದರು. ಸುನೈನಾ ಕರ್ಯಕ್ರಮ ನಿರೂಪಿಸಿ, ಸುಹಾಸ್ ವಂದಿಸಿದರು.