ನಾನು ಪ್ರೈವೇಟ್ ಜೆಟ್ ಖರೀದಿಸಿರಬಹುದು. ಆದರೆ ಅದು ನನ್ನ ಜೀವನದ ಸೌಕರ್ಯ ಮಾತ್ರ. ನನ್ನ ನಿಜವಾದ ಆಸ್ತಿಯೆಂದರೆ ನನ್ನ ಮೇಲೆ ನಂಬಿಕೆ, ಪ್ರೀತಿ, ವಿಶ್ವಾಸವನ್ನು ಇಟ್ಟಿರುವ ಬಂಟ ಸಮಾಜ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಡಾ| ಕೆ. ಪ್ರಕಾಶ್ ಶೆಟ್ಟಿಯವರು ಗುರುಪುರ ಬಂಟರ ಮಾತೃ ಸಂಘದ 13ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಗುರುಪುರ ಬಂಟರ ಮಾತೃ ಸಂಘದ ಕನಸಿನ ಕೂಸು ಬಂಟರ ಭವನ ನಿರ್ಮಾಣದಲ್ಲಿ ನಾನೂ ಒಬ್ಬ ಸದಸ್ಯನಾಗಿ ಪ್ರಾಮಾಣಿಕವಾದ ಸೇವೆಯನ್ನು ಮಾಡುವುದರ ಮೂಲಕ ಭವನ ನಿರ್ಮಾಣ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತೇನೆ. ನನ್ನ 60ನೇ ಹುಟ್ಟುಹಬ್ಬ 2019ರಲ್ಲಿ ನಡೆದಾಗ ಆ ಕಾರ್ಯಕ್ರಮದಲ್ಲಿ ದುಡಿದಂತಹ ಗುರುಪುರ ಬಂಟರ ಮಾತೃ ಸಂಘದ ಕಾರ್ಯವು ಗಮನಾರ್ಹವಾದುದು. ನಂತರ ಪ್ರತೀ ವರ್ಷ ಡಿಸೆಂಬರ್ 25ರಂದು ನಡೆಯುವ ‘ನೆರವು’ ಯೋಜನೆಯಲ್ಲಿ ಗುರುಪುರ ಬಂಟರ ಮಾತೃ ಸಂಘವು ಎಲ್ಲರಿಗಿಂತ ಮೊದಲು ಬಂದು ತನಗಿತ್ತಿರುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು. ಒಂದು ಕೋಟಿಯಿಂದ ಆರಂಭವಾದ ನನ್ನ ಈ ‘ನೆರವು’ ಯೋಜನೆಯು ಇಂದು 10 ಕೋಟಿಯವರೆಗೂ ದಾಟಿರುವುದು ನಿಮ್ಮೆಲ್ಲರ ಆಶೀರ್ವಾದ, ಭಗವಂತನ ಕೃಪೆ, ನನ್ನ ತಂದೆ ತಾಯಿಯವರ ದಯೆಯಿಂದ ಎಂದು ಹೇಳಿದರು.



ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನವನ್ನು ನೀಡುತ್ತಾ, 13 ವರ್ಷಗಳಲ್ಲಿ ಗುರುಪುರ ಬಂಟರ ಮಾತೃ ಸಂಘದ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು ಶ್ಲಾಘನೀಯ. ಅವರ ಕನಸಿನ ಬಂಟರ ಭವನವು ಪ್ರಕಾಶಣ್ಣನಂತಹ ಮಹಾದಾನಿಗಳಿಂದ ಉತ್ತಮ ರೀತಿಯಲ್ಲಿ ಮೂಡಿಬರಲಿ ಎಂದು ಹಾರೈಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ರವರು ಮಾತನಾಡುತ್ತಾ, ನಾನು ಇಂದು ಉತ್ತಮವಾದ ಸನ್ಮಾನ ಸಮಾರಂಭವನ್ನು ಕಂಡೆ. ನಾಡು ಕಂಡ ಶ್ರೇಷ್ಠ ಮಹಾದಾನಿಗಳಲ್ಲಿ ಒಬ್ಬರಾದ ಪ್ರಕಾಶಣ್ಣನಿಗೆ ಮಾಡಿದ ಸನ್ಮಾನ ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಮುದಾಯಗಳಿಗೆ ಮಾಡಿದ ಗೌರವ ಎಂದು ಭಾವಿಸುತ್ತೇನೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ಬಂಟ ಸಮಾಜದ ಪಾತ್ರ ಪ್ರಶಂಸನೀಯ ಎಂದು ಹೇಳಿದರು.


ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ ಮೋಹನ ಆಳ್ವರವರು ಮಾತನಾಡುತ್ತಾ, ಶಿಕ್ಷಣಕ್ಕೆ ಗುರುಪುರ ಬಂಟರ ಮಾತೃ ಸಂಘವು ನೀಡುತ್ತಿರುವ ಸೇವೆ ಶ್ಲಾಘನೀಯ. ನನ್ನ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಕಡು ಬಡತನ ಹಾಗೂ ತಾಯಿಯ ನಿಧನದ ಶೋಕದ ನಡುವೆಯೂ 600/600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಕು| ದಿಶಾ ಪೂಜಾರಿಯವರನ್ನು ಗೌರವಿಸುವುದರ ಮುಖಾಂತರ ತನ್ನ ಸಂಸ್ಥೆಯ ಕೀರ್ತಿಯು ಇನ್ನಷ್ಟು ಎತ್ತರಕ್ಕೇರಿತು ಹಾಗೂ ಗುರುಪುರ ಬಂಟರ ಮಾತೃ ಸಂಘದ ಈ ಕಾರ್ಯವು ಪ್ರಶಂಸನೀಯ ಎಂದು ಹೇಳಿದರು. ವೇದಿಕೆಯಲ್ಲಿ ದ.ಕ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೂಡುಬಿದ್ರಿ ಶಾಸಕರಾದ ಉಮಾನಾಥ್ ಕೋಟ್ಯಾನ್, ಉತ್ತರ ವಿಧಾನಸಭಾ ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್, ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಗ್ಗಿ ಸುಧಾಕರ್ ಶೆಟ್ಟಿ, ಯುವ ಉದ್ಯಮಿ ಈಶ್ವರ್ ಶೆಟ್ಟಿ, ಉದ್ಯಮಿ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಉದ್ಯಮಿ ರವೀಂದ್ರನಾಥ ಮಾರ್ಲ, ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಮುಂತಾದವರು ಉಪಸ್ಥಿತರಿದ್ದರು.


ಸುದರ್ಶನ್ ಶೆಟ್ಟಿ ಪೆರ್ಮಂಕಿ ಹೊಸಮನೆ ಇವರು ಸ್ವಾಗತಿಸಿ, ಬಂಟ ಸಮಾಜದ ಅಭಿವೃದ್ಧಿಗೆ ಕಾರಣರಾದ ಪ್ರಕಾಶ್ ಶೆಟ್ಟಿ ಅವರ ಸೇವಾ ಕಾರ್ಯಗಳು ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಬಂಟ ಸಮಾಜ ಮತ್ತು ವಿವಿಧ ಸಮಾಜದ ಬಂಧುಗಳಿಗೆ ಸಹಾಯ ನೀಡುತ್ತಿರುವ ಐಕಳ ಹರೀಶ್ ಶೆಟ್ಟಿ ಅವರ ಸೇವಾ ಕಾರ್ಯದೊಂದಿಗೆ ಸದಾ ನಾವಿದ್ದೇವೆ ಎಂದು ತಿಳಿಸುತ್ತಾ ವೇದಿಕೆಯಲ್ಲಿ ಎಲ್ಲಾ ಸಾಧಕರು ಗೌರವಾನ್ವಿತ ಗಣ್ಯರು ನಮ್ಮ ಪ್ರೀತಿ ಮತ್ತು ಗೌರವಕ್ಕೆ ಸೇರಿಕೊಂಡಿರುವುದು ಅಭಿಮಾನ ತಂದಿದೆ ಎಂದರು. ಚಂದ್ರಹಾಸ ಶೆಟ್ಟಿ ನಾರಳ ಧನ್ಯವಾದ ಸಮರ್ಪಿಸಿದರು. ವೇಣುಗೋಪಾಲ ಶೆಟ್ಟಿ ಮೂಡಬಿದ್ರಿ ಹಾಗೂ ಕಿರಣ್ ಪಕ್ಕಳ ಪೆರ್ಮಂಕಿಗುತ್ತು ಕಾರ್ಯಕ್ರಮ ನಿರೂಪಿಸಿದರು.






















































































































