


ಯುಎಇ ಹಾಗೂ ಕರಾವಳಿಯಲ್ಲಿ ಹೆಸರು ವಾಸಿಯಾಗಿರುವ ಹೋಟೆಲ್ ಉದ್ಯಮ ಸಂಸ್ಥೆ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಕಳೆದ 14 ವರ್ಷದಿಂದ ತನ್ನ ಮಾತಾ ಪಿತರ ಮದುವೆಯ ವಾರ್ಷಿಕ ದಿನದಂದು ದುಬೈನಲ್ಲಿ ನಡೆಸಿಕೊಂಡು ಬರುತ್ತಿರುವ ರಕ್ತದಾನ ಶಿಬಿರ ಕಾರ್ಯಕ್ರಮ ಫಾರ್ಚೂನ್ ಪ್ಲಾಝದಲ್ಲಿ ಯಶಸ್ವಿಯಾಗಿ ನಡೆಯಿತು. ದುಬೈ ಹೆಲ್ತ್ ಅಥೋರಿಟಿಯ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ ಯಶಸ್ವಿಯಾಗಿ ಜರುಗಿತು. ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಸಿಬ್ಬಂದಿ ವರ್ಗದವರು, ದುಬೈ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪ್ರವೀಣ್ ಶೆಟ್ಟಿಯವರ ಸ್ನೇಹಿತರು ಶಿಬಿರದಲ್ಲಿ ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸಿದರು.



ಮಾಧ್ಯಮದೊಂದಿಗೆ ಮಾತನಾಡಿದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು, ನನ್ನ ಮಾತಾ ಪಿತರಾದ ಶ್ರೀಮತಿ ಸರೋಜಿನಿ ಶೆಟ್ಟಿ ಮತ್ತು ಶ್ರೀ ನಾರಾಯಣ ಶೆಟ್ಟಿಯವರ ಮದುವೆಯ ವರ್ಷದ ಈ ಶುಭ ದಿನದಂದು ಕಳೆದ 14 ವರ್ಷಗಳಿಂದ ಈ ಕಾರ್ಯಕ್ರಮವನ್ನು ದುಬೈನಲ್ಲಿ ಆಚರಿಸಿಕೊಂಡು ಬರುತ್ತಿದ್ದೇನೆ. ಈ ವರ್ಷ ನನಗೆ ವಿಶೇಷ ವರ್ಷ. ನನ್ನ ಪೋಷಕರು ವೈವಾಹಿಕ ಜೀವನಕ್ಕೆ ಕಾಲಿಟ್ಟು 61ನೇ ವರ್ಷ ಆಚರಿಸುತ್ತಿದ್ದಾರೆ. ಇಂದು ನಾವು ದಾನ ಮಾಡಿದ ಪ್ರತಿ ಹನಿ ರಕ್ತವು ನಾಳೆಯ ಜೀವವನ್ನು ಉಳಿಸುವ ಶಕ್ತಿಯನ್ನು ಹೊಂದಿದೆ. ನನ್ನ ಈ ರಕ್ತದಾನ ಶಿಬಿರಕ್ಕೆ ಕೈ ಜೋಡಿಸಿ ನಿಂತ ನನ್ನ ಎಲ್ಲಾ ಸಿಬ್ಬಂದಿಗಳಿಗೆ, ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಮತ್ತು ನನ್ನ ಸ್ನೇಹಿತರಿಗೆ ಹಾಗೂ ರಕ್ತದಾನ ಮಾಡಿದ ಎಲ್ಲಾ ರಕ್ತದಾನಿಗಳಿಗೆ ಧನ್ಯವಾದ ಸಮರ್ಪಿಸಿದರು.
ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ರಕ್ತದಾನ ಶಿಬಿರದ ಯಶಸ್ವಿ ಸಂಘಟಕ ಬಾಲಕೃಷ್ಣ ಸಾಲಿಯಾನ್ ರವರ ನೇತೃತ್ವದಲ್ಲಿ ಶಿಬಿರವು ಯಶಸ್ವಿಯಾಗಿ ನಡೆಯಿತು. ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ದುಬೈಯ ಕನ್ನಡ ತುಳು ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ರಕ್ತದಾನ ಮಾಡಿ ಶಿಬಿರಕ್ಕೆ ಶುಭ ಹಾರೈಸಿದರು. ಪ್ರವೀಣ್ ಕುಮಾರ್ ಶೆಟ್ಟಿಯವರ ಪುತ್ರ ಪರಮ್ ಶೆಟ್ಟಿಯವರು ಎಲ್ಲಾ ದಾನಿಗಳಿಗೆ ಧನ್ಯವಾದವಿತ್ತರು.
ಚಿತ್ರ, ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)




























































































































