ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಾಲ್ವರು ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಬಿಹಾರದ ಪಾಟ್ನಾದಲ್ಲಿ ಡಿಸೆಂಬರ್ 27 ರಿಂದ 29ರವರೆಗೆ ನಡೆದ ದಕ್ಷಿಣ ಏಷ್ಯಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಯಲಕ್ಷ್ಮಿ ಭಾರತ ಮಹಿಳಾ ತಂಡದ ನಾಯಕಿಯಾಗಿ ಸ್ಪರ್ಧೆಯಲ್ಲಿ ಪಾಲ್ಗೊಂಡು, ತಂಡವನ್ನು ಜಯಭೇರಿ ಮೊಳಗಿಸುವಲ್ಲಿ ಯಶಸ್ವಿಯಾದರು. ಅತಿಥೇಯ ಭಾರತವಲ್ಲದೇ ನೇಪಾಳ, ಶ್ರೀಲಂಕಾ ಹಾಗೂ ಭೂತಾನ್ ತಂಡಗಳು ಈ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು.

ಇದರ ಜೊತೆಗೆ ಜನವರಿ 1ರಿಂದ 5, 2026ರವರೆಗೆ ನೇಪಾಳದ ಖಠ್ಮಂಡುವಿನ ಬಿರ್ಗುಂಜ್ನಲ್ಲಿ ನಡೆಯುವ ಇಂಡೋ ನೇಪಾಳ ಬಾಲ್ ಬ್ಯಾಡ್ಮಿಂಟನ್ ಟೆಸ್ಟ್ ಸರಣಿಗೆ ಆಳ್ವಾಸ್ ಪ್ರತಿಷ್ಠಾನದ ವಿದ್ಯಾರ್ಥಿಗಳಾದ ಪ್ರಶಾಂತ್ ಹೆಚ್.ಜಿ, ಸಾವಿತ್ರಿ ರಮೇಶ್ ಕರಿಗಾರ್ ಮತ್ತು ಲಾಂಛನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

















































































































