ತುಳುನಾಡಿನ ಸಾಹಿತ್ಯ ಸಂಸ್ಕೃತಿ ಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸುವ ಮಹತ್ವದ ಹೊಣೆಗಾರಿಕೆ ಹಿರಿಯ ತಲೆಮಾರಿನ್ನಾದ್ದಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಈ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿ ಯಶ್ವಸಿಯಾಗಿ ಅನುಷ್ಠಾನಗೊಳಿಸುತ್ತಿದೆ. ತುಳು ಭಾಷೆಯನ್ನು ರಾಜ್ಯದ ದ್ವಿತೀಯ ಅಧಿಕೃತ ಭಾಷೆಯನ್ನಾಗಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೇ ಅನುಷ್ಠಾನಗೊಳ್ಳುವ ಸಾಧ್ಯತೆಗಳಿವೆ. ಯುವ ತಲೆಮಾರು ಇಂದು ತುಳು ಸಾಹಿತ್ಯ, ಇತಿಹಾಸ ಮತ್ತು ಜಾನಪದದ ಕುರಿತು ಆಕರ್ಷಿತರಾಗುತ್ತಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ನುಡಿದರು. ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಿಂಗಾರ ಸುರತ್ಕಲ್ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಚೇಳ್ಯಾರು ಸಹಭಾಗಿತ್ವದಲ್ಲಿ ನಡೆಯುವ ನಲ್ಮೆ ಬಲ್ಮೆ ವಿದ್ಯಾರ್ಥಿಗಳಿಗೆ ಮೂರು ದಿನಗಳ ರಂಗ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಹಿರಿಯ ಚಲನಚಿತ್ರ ಹಾಗೂ ರಂಗ ಕಲಾವಿದೆ ಗೀತಾ ಸುರತ್ಕಲ್ ಅವರು ರಂಗಭೂಮಿ ಆತ್ಮ ವಿಶ್ವಾಸ ಮತ್ತು ಮಾನವೀಯ ಮೌಲ್ಯ ತಿಳಿಸಿ ಕೊಡುತ್ತದೆ. ಸಿಂಗಾರ ಸುರತ್ಕಲ್ ಸಂಸ್ಥೆಯು ತುಳು ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದೆ ಎಂದರು. ಚೇಳ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಮಾತನಾಡಿ, ಗ್ರಾಮೀಣ ಪ್ರದೇಶದ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ರಂಗ ತರಬೇತಿಯ ಅವಶ್ಯಕತೆ ಇದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಕೊಳ್ಳಬೇಕು ಎಂದರು.ಹಿರಿಯ ಸಂಶೋಧಕಿ ಡಾ| ಇಂದಿರಾ ಹೆಗ್ಗಡೆ ಮಾತನಾಡಿ, ತುಳುನಾಡಿನ ಇತಿಹಾಸ ಸಾಹಿತ್ಯದ ಓದಿನ ಮೂಲಕ ವಿದ್ಯಾರ್ಥಿಗಳು ಪ್ರಬುದ್ಧರಾಗಬೇಕು ಎಂದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವೆಂಕಟೇಶ್ ಶೆಟ್ಟಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪುಷ್ಪರಾಜ್ ಶೆಟ್ಟಿ ಮಧ್ಯ ಮಾತನಾಡಿ, ನಲ್ಮೆ ಬಲ್ಮೆ ಪರಿಕಲ್ಪನೆಯ ಮೂಲಕ ವಿದ್ಯಾರ್ಥಿಗಳಿಗೆ ಸಾಹಿತ್ಯ ಅಭಿರುಚಿಯೊಂದಿಗೆ ಸಮಗ್ರ ಬೆಳವಣಿಗೆಗೆ ಅವಕಾಶ ಲಭ್ಯವಾಗುತ್ತದೆ ಎಂದರು.

ಸಿಂಗಾರ ಸುರತ್ಕಲ್ ನ ಕಾರ್ಯದರ್ಶಿ ಕೃಷ್ಣ ಮೂರ್ತಿ ಪಿ ಮಾತನಾಡಿ, ಸಮಗ್ರ ವಿಕಸನಕ್ಕೆ ರಂಗಭೂಮಿ ಪ್ರೇರಕ ಶಕ್ತಿಯಾಗಿದ್ದು ನಲ್ಮೆ ಬಲ್ಮೆ ಕಾರ್ಯಕ್ರಮದ ಮೂಲಕ ರಂಗಾಸಕ್ತರು ಮೂಡಿ ಬರುತ್ತಾರೆಂಬ ಆಶಯ ವ್ಯಕಪಡಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ| ಜ್ಯೋತಿ ಚೇಳ್ಯಾರು ಸ್ವಾಗತಿಸಿದರು. ಉಪನ್ಯಾಸಕಿ ಜಯಶ್ರೀ ಜಿ. ವಂದಿಸಿದರು. ಉಪನ್ಯಾಸಕ ಚಂದ್ರನಾಥ್ ಎಂ ನಿರೂಪಿಸಿದರು. ಹಿರಿಯ ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್, ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ ಗುಣವತಿ ರಮೇಶ್, ಉಪನ್ಯಾಸಕಿಯರಾದ ಶೋಭಾ ಶರ್ಮಾ, ಜಯಶ್ರೀ, ತ್ರಿವೇಣಿ, ವಿದ್ಯಾರ್ಥಿ ಸಾಂಸ್ಕೃತಿಕ ಕಾರ್ಯದರ್ಶಿ ರಕ್ಷಿತ್, ವಿದ್ಯಾರ್ಥಿ ನಾಯಕರಾದ ಚಂದನ್ ಮತ್ತು ಅಕ್ಷತಾ ಉಪಸ್ಥಿತರಿದ್ದರು.