ಬಂಟರ ಯಾನೆ ನಾಡವರ ಸಂಘ (ರಿ.) ಬೈಂದೂರಿನ ಅಧಿಕೃತ ವೆಬ್ಸೈಟ್ bansbyndoor.com ಹಾಗೂ ನೂತನ ಗ್ರಂಥಾಲಯದ ಲೋಕಾರ್ಪಣೆ ಸಮಾರಂಭವು ಜೂನ್ 29 ರಂದು ಬೈಂದೂರಿನ ಬಂಟರ ಭವನದಲ್ಲಿ ವಿಜೃಂಭಣೆಯಿಂದ ಜರಗಿತು. ಈ ಸಮಾರಂಭವನ್ನು ಮಾನ್ಯ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು. ಅವರು ಲ್ಯಾಪ್ಟಾಪ್ನಲ್ಲಿ ಬಟನ್ ಒತ್ತುವ ಮೂಲಕ ವೆಬ್ಸೈಟ್ನ್ನು ಲೋಕಾರ್ಪಣೆಗೊಳಿಸಿ, ನಂತರ ಜ್ಯೋತಿ ಬೆಳಗಿಸುವ ಮೂಲಕ ಗ್ರಂಥಾಲಯದ ಪ್ರಾರಂಭಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಅದಷ್ಟೇ ಅಲ್ಲದೆ, ಗ್ರಂಥಾಲಯದ ಆರಂಭಿಕ ಪುಸ್ತಕ ಸಂಗ್ರಹವನ್ನೂ ಅವರು ಬಿಡುಗಡೆ ಮಾಡಿದರು.

bansbyndoor.com ವೆಬ್ಸೈಟ್ ಮುಖಾಂತರ ವಿದ್ಯಾರ್ಥಿವೇತನ, ಸಾಧಕರ ಸನ್ಮಾನ ಹಾಗೂ ಸಂಘದ ವಿವಿಧ ಸಮಾಜಮುಖಿ ಯೋಜನೆಗಳ ಮಾಹಿತಿ ತಂತ್ರಜ್ಞಾನ ಪ್ರಯುಕ್ತ ಸಮಾಜದ ಸದಸ್ಯರಿಗೆ ಸುಲಭವಾಗಿ ಲಭ್ಯವಾಗಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಈ ವೇದಿಕೆಯಿಂದ ಸಂಘದ ಕಾರ್ಯವೈಭವ ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಸಾಲ್ಗದ್ದೆ ಶಶಿಧರ್ ಶೆಟ್ಟಿ ವಹಿಸಿದ್ದರು. ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ ಕುದ್ರುಕೊಡು, ಗೋಕುಲ್ ಶೆಟ್ಟಿ ಉಪ್ಪುಂದ, ಕರುಣಾಕರ್ ಶೆಟ್ಟಿ ತೆಗ್ಗರ್ಸೆ, ಮಾಜಿ ಅಧ್ಯಕ್ಷರಾದ ನಾಕಟ್ಟೆ ಜಗನ್ನಾಥ ಶೆಟ್ಟಿ ಹಾಗೂ ಪದಾಧಿಕಾರಿಗಳಾದ ಚುಚ್ಚಿ ನಾರಾಯಣ ಶೆಟ್ಟಿ, ನಿತಿನ್ ಶೆಟ್ಟಿ ಬೈಂದೂರು, ಜೈರಾಮ್ ಶೆಟ್ಟಿ ಗಂಟಿಹೊಳೆ, ಸಂತೋಷ್ ಶೆಟ್ಟಿ ಬೈಂದೂರು, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ದಿವಾಕರ್ ಶೆಟ್ಟಿ ನೆಲ್ಯಾಡಿ, ದಿವಾಕರ್ ಶೆಟ್ಟಿ ಉಪ್ಪುಂದ ಹಾಗೂ ಮಹಿಳಾ ಪದಾಧಿಕಾರಿಗಳಾದ ಶ್ರೀಮತಿ ಮಮತಾ ಶೆಟ್ಟಿ ಮತ್ತು ಶ್ರೀಮತಿ ಉಷಾ ಶೆಟ್ಟಿ ಉಪಸ್ಥಿತರಿದ್ದರು.
ವೆಬ್ಸೈಟ್ ಅಭಿವೃದ್ಧಿ ಕಾರ್ಯವನ್ನು ನಿಭಾಯಿಸಿದ ಕುಂದಾಪುರದ ಫೋರ್ಥ್ ಫೋಕಸ್ ಸಂಸ್ಥೆಯ ನಿರ್ದೇಶಕರಾದ ವಿ. ಗೌತಮ್ ನಾವಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ತಾವು ರೂಪಿಸಿದ್ದ ತಂತ್ರಜ್ಞಾನ ಸಹಕಾರದ ಬಗ್ಗೆ ಮೆಚ್ಚುಗೆ ಪಡೆದರು. ಕಾರ್ಯದರ್ಶಿಗಳಾದ ನಿತಿನ್ ಶೆಟ್ಟಿ ಬೈಂದೂರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಕ್ಷರಾದ ಸಾಲ್ಗದ್ದೆ ಶಶಿಧರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಜಯರಾಮ್ ಶೆಟ್ಟಿ ಬಿ ವಂದಿಸಿದರು.