ತುಳುನಾಡಿನವರ ಶಿಸ್ತು ಹಾಗೂ ಸಜ್ಜನಿಕೆಯ ವ್ಯಕ್ತಿತ್ವದ ಬಗ್ಗೆ ಹೊರಗಿನ ಮಂದಿಗೆ ಅತ್ತ್ಯುತ್ತಮ ಅಭಿಪ್ರಾಯವಿದ್ದು, ಈ ಅಭಿಪ್ರಾಯವನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎಂದು ಖ್ಯಾತ ಚಿತ್ರ ನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಶಿವಧ್ವಜ್ ಶೆಟ್ಟಿ ಹೇಳಿದರು. ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ ನಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶ್ರೀ ಗಣೇಶ ದೇವರು ಹಾಗೂ ಸಿನಿಮಾ ಕ್ಷೇತ್ರ ಸೇರಿದಂತೆ ಸಾಂಸ್ಕೃತಿಕ ರಂಗಕ್ಕೆ ಅವಿನಾಭಾವ ನಂಟು ಇದ್ದು, ಗಣೇಶ ನಮ್ಮೆಲ್ಲರ ಅಚ್ಚುಮೆಚ್ಚಿನ ದೇವರು ಎಂದು ಶಿವಧ್ವಜ್ ಶೆಟ್ಟಿ ತಿಳಿಸಿದರು. ಇನ್ನೋರ್ವ ಅತಿಥಿ ರವಿ ರೈ ಕಳಸ ಮಾತನಾಡಿ, ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯೋಣ, ಸಹಬಾಳ್ವೆ ಸಹೋದರತೆಯೊಂದಿಗೆ ಬಾಳೋಣ ಎಂದರು.




ಮುಖ್ಯ ಅತಿಥಿಗಳಾಗಿ ಬಲ್ಮಠ ಶಾಂತಿ ಕ್ಯಾಥೆಡ್ರೆಲ್ ನ ಸೀನಿಯರ್ ಫಾಸ್ಟಾರ್ ರೆ ಗೋಲ್ಡಿನ್, ಉರ್ವಾಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಸುರೇಂದ್ರ ರಾವ್, ಕುಂದಾಪುರ ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಆಡಳಿತ ನಿರ್ದೇಶಕಿ ಅನುಪಮಾ ಎಸ್ ಶೆಟ್ಟಿ, ನಿವೃತ್ತ ಸೇನಾಧಿಕಾರಿ ನಿಟ್ಟೆ ಶರತ್ ಭಂಡಾರಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಬಿಜೈ ಬಂಟರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ರೈ, ವಿವಿಧ ಬಂಟರ ಸಂಘಗಳ ಪ್ರಮುಖರಾದ ಸಂತೋಷ್ ಶೆಟ್ಟಿ ಶೆಡ್ಡೆ, ಮುಕ್ತಾನಂದ ಮೇಲಾಂಟ, ಕಮಲಾಕ್ಷ ಶೆಟ್ಟಿ, ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕರ್ನಲ್ ಶರತ್ ಭಂಡಾರಿ, ರವಿ ರೈ ಕಳಸ, ಶಿವಧ್ವಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯoತಾಯ ಅಡ್ಯಾರ್ ಗುತ್ತು ಸ್ವಾಗತಿಸಿದರು. ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ವಂದಿಸಿದರು. ಡಾ| ಮಂಜುಳಾ ಶೆಟ್ಟಿ ಹಾಗೂ ಪ್ರಕಾಶ್ ಮೇಲಂಟ ನಿರೂಪಿಸಿದರು.












































































































