
ನಾಳೆ ಮಗಳ ಹತ್ತನೇ ವರ್ಷದ ಹುಟ್ಟುಹಬ್ಬದ ಸಂಭ್ರಮಕ್ಕೆ ಸಿದ್ಧತೆ ನಡೆಯಬೇಕಿದ್ದ ಮನೆಯಲ್ಲಿ, ಇಂದು ತಂದೆಯ ಶವದ ಮುಂದೆ ಆಕ್ರಂದನ ಮುಗಿಲು ಮುಟ್ಟಿದೆ. ಬಂಟ್ವಾಳದ ಪ್ರತಿಭಾವಂತ ಛಾಯಾಗ್ರಾಹಕ ರಕ್ಷಿತ್ ಶೆಟ್ಟಿ (43) ಇನ್ನಿಲ್ಲ. ರಾತ್ರಿ ಸಂಭವಿಸಿದ ಆ ಒಂದು ಭೀಕರ ಅಪಘಾತ, ಒಂದು ಸುಂದರ ಸಂಸಾರವನ್ನು ಅನಾಥವಾಗಿಸಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಕ್ಷಿತ್ ಇಂದು (ಮಾರ್ಚ್ 14) ಕೊನೆಯುಸಿರೆಳೆದಿದ್ದಾರೆ. ಸಂಭ್ರಮದ ಹೊಸ್ತಿಲಲ್ಲಿ ಸೂತಕ ನಾಳೆ ಮಾರ್ಚ್ 15. ಮಗಳ ಸಂಭ್ರಮದ ದಿನಕ್ಕಾಗಿ ತಂದೆ ಎಷ್ಟೋ ಕನಸು ಕಂಡಿದ್ದರು. ಆದರೆ ಆ ಸಂಭ್ರಮದ ಕ್ಷಣಗಳು ಹತ್ತಿರ ಬರುವ ಮೊದಲೇ ಸಾವು ಇವರನ್ನು ಹಿಂಬಾಲಿಸಿ ಬಂದಿದೆ. ಮಗಳ ಬದುಕಿನಲ್ಲಿ ಬೆಳಕು ತುಂಬಬೇಕಿದ್ದ ತಂದೆ ಇಂದು ಕತ್ತಲಲ್ಲಿ ತಳ್ಳಿ ಮರೆಯಾಗಿದ್ದಾರೆ.
ರಕ್ಷಿತ್ ಅವರ ಕುಟುಂಬಕ್ಕೆ ಹಣೆಬರಹದ ಹೊಡೆತ ಇದೇ ಮೊದಲಲ್ಲ. ಈಗಾಗಲೇ ಇವರ ಸಹೋದರ ರಂಜಿತ್ ಅವರು ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ಈಗ ಇಡೀ ಮನೆಯ ಆಧಾರಸ್ತಂಭವಾಗಿದ್ದ ರಕ್ಷಿತ್ ಅವರೇ ಇಹಲೋಕ ತ್ಯಜಿಸಿರುವುದು ಆ ಬಡ ಕುಟುಂಬಕ್ಕೆ ದಿಕ್ಕುತೋಚದಂತೆ ಮಾಡಿದೆ. ಕ್ಯಾಮೆರಾ ಕಣ್ಣಿನಲ್ಲಿ ಇತರರ ಸುಂದರ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದ ರಕ್ಷಿತ್, ಇಂದು ತಮ್ಮ ಬದುಕಿನ ‘ಫ್ರೇಮ್’ ಅನ್ನೇ ಅರ್ಧಕ್ಕೇ ಮುಗಿಸಿ ನಿರ್ಗಮಿಸಿದ್ದಾರೆ.



























































































































