ಶ್ರೀ ಕ್ಷೇತ್ರ ಗಣೇಶಪುರದಲ್ಲಿ ಬ್ರಹ್ಮಕಲಶೋತ್ಸವ, ಬ್ರಹ್ಮರಥ ಸಮರ್ಪಣೆ, ನಾಗಮಂಡಲ, ಜಾರಂದಾಯ ನೇಮೋತ್ಸವ, ಭಜನಾ ಸಂಭ್ರಮೋತ್ಸವ ಕಾರ್ಯಕ್ರಮವು ಏಪ್ರಿಲ್ 18 ರಿಂದ 26ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮರಥ ಸಮರ್ಪಣೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಹೇಳಿದ್ದಾರೆ. ಅವರು ದೇವಳದಲ್ಲಿ ನಡೆದ ಕಾರ್ಯಕ್ರಮದ ಮಾಹಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 1960ರ ದಶಕದಲ್ಲಿ ತುಳುನಾಡಿನ ಪಾರಂಪರಿಕ ಪಟ್ಟಣವಾಗಿದ್ದ ಪಣಂಬೂರು ನವ ಮಂಗಳೂರು ಬಂದರ್ ಆಗಿ ಪರಿವರ್ತನೆಗೊಂಡಾಗ ಅಲ್ಲಿನ ನಿವಾಸಿಗಳು ಕಾಟಿಪಳ್ಳಕ್ಕೆ ಬಂದು ನೆಲೆಸಿದರು. 1988ನೇ ಇಸವಿಯಲ್ಲಿ ಪುನನಿರ್ವಸಿತ ಕಾಟಿಪಳ್ಳ ಕೈಕಂಬ ಪ್ರದೇಶದಲ್ಲಿ ಸರಕಾರದಿಂದ ಮಂಜೂರಾದ ಜಮೀನಿನಲ್ಲಿ ಕಾಟಿಪಳ್ಳ, ಕೃಷ್ಣಾಪುರ, ಬಾಳ, ಕುತ್ತೆತ್ತೂರು, ಕಾನ, ಕಟ್ಲ, ಸೂರಿಂಜೆ, ಮಧ್ಯ ಇತ್ಯಾದಿ ಪರಿಸರದ ಗ್ರಾಮಸ್ಥರು ಸೇರಿಕೊಂಡು ಶ್ರೀ ಮಹಾಗಣಪತಿ ದೇವಸ್ಥಾನವನ್ನು ನಿರ್ಮಿಸಿದರು. ಬಲಮುರಿ ಶ್ರೀ ಮಹಾಗಣಪತಿ ದೇವರು ನೆಲೆಯಾದ ಪುಣ್ಯ ಪ್ರದೇಶಕ್ಕೆ ಯತಿಶ್ರೇಷ್ಠರಾದ ಪೇಜಾವರ ವಿಶ್ವೇಶ್ವತೀರ್ಥ ಶ್ರೀಪಾದರು ಶ್ರೀ ಕ್ಷೇತ್ರ ಗಣೇಶಪುರ ಎಂಬ ನಾಮಕರಣವನ್ನು ಮಾಡಿದರು. ಕೇವಲ ಮೂರು ದಶಕಗಳ ಅವಧಿಯಲ್ಲಿ ಶ್ರೀ ಕ್ಷೇತ್ರ ಗಣೇಶಪುರವು ದೇಶದ ಇತಿಹಾಸದಲ್ಲೇ ಪ್ರಥಮ ಎಂಬಂತೆ ಹಿಂದೂ ಧಾಮಿಕ ದತ್ತಿ ಇಲಾಖೆಯ ಎ ಗ್ರೇಡ್ ದೇವಳವನ್ನಾಗಿ ಪರಿವರ್ತಿಸುವ ಕಾರಣಿಕವನ್ನು ಶ್ರೀ ಮಹಾಗಣಪತಿ ದೇವರು ಪ್ರದರ್ಶಿಸಿದ್ದಾರೆ. ಭಕ್ತರ ಇಷ್ಟಾರ್ಥವನ್ನು ಪೂರೈಸುವ ಕ್ಷಿಪ್ರಪ್ರಸಾದ ಪ್ರಧಾನ ಮಾಡುವ ದೇವರಾಗಿ ಇಲ್ಲಿ ಮೆರೆಯುತ್ತಿದ್ದಾರೆ ಎಂದು ಧರ್ಮೇಂದ್ರ ಗಣೇಶಪುರ ತಿಳಿಸಿದರು.

ಗಣೇಶಪುರ ದೇವಳದಲ್ಲಿ 2004ನೇ ಇಸವಿಯ ಏಪ್ರಿಲ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ಮತ್ತು ಕರ್ನಾಟಕ ರಾಜ್ಯದಲ್ಲೇ ಪ್ರಥಮ ಎಂಬಂತೆ ಮೂಡಪ್ಪ ಸೇವೆಯು ನಡೆದಿತ್ತು. 2020 ಎಪ್ರಿಲ್ ತಿಂಗಳಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದ ಏರ್ಪಾಡು ನಡೆದಿತ್ತು. ಆದರೆ ವಿಶ್ವವನ್ನು ಕಾಡಿದ ಕೊರೊನಾ ಮಾರಿಯಿಂದಾಗಿ ಕಾರ್ಯಕ್ರಮವು ರದ್ದಾಗಿತ್ತು. ಆದರೆ ಶ್ರೀ ಮಹಾಗಣಪತಿ ದೇವಳವು ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರವಾಗಿ ಅಷ್ಟಬಂಧ ನಡೆದು ಪುನರ್ ಪ್ರತಿಷ್ಠೆಯನ್ನು ಸರಳವಾಗಿ ಮಾಡಲಾಗಿತ್ತು. ಬ್ರಹ್ಮಕಲಶೋತ್ಸವವನ್ನು ಕೋವಿಡ್ ನಿಯಮಾವಳಿಯ ಕಾರಣದಿಂದ ಮುಂದೂಡಲಾಗಿತ್ತು. ಅಂದು ವಿರಾಟ್ ಭಜನೋತ್ಸವ, ನಾಗಮಂಡಲ ಮತ್ತು ಪರಿವಾರ ದೈವವಾದ ಜಾರಂದಾಯ ದೈವಕ್ಕೆ ನೇಮೋತ್ಸವ ಮಾಡುವ ಸಂಕಲ್ಪವನ್ನು ಮಾಡಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಸಾಧ್ಯವಾಗಿರಲಿಲ್ಲ. ಈಗ ಈ ದೇವಳದಲ್ಲಿ ಎಪ್ರಿಲ್ 18 ರಿಂದ 26ರ ವರೆಗೆ ಸಹಸ್ರ ಕುಂಭ ಬ್ರಹ್ಮಕಲಶಾಭಿಷೇಕ, ನೂತನ ಬ್ರಹ್ಮರಥ ಸಮರ್ಪಣೆ, ಬ್ರಹ್ಮರಥೋತ್ಸವ, ಭಜನಾ ಸಂಭ್ರಮೋತ್ಸವ, ನಾಗಮಂಡಲೋತ್ಸವ, ಜಾರಂದಾಯ ದೈವದ ನೇಮೋತ್ಸವವು ಮತ್ತು ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.
2018 ನೇ ಇಸವಿಯಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆದ ಆರೂಢ ಪ್ರಶ್ನೆಯಲ್ಲಿ ಕ್ಷೇತ್ರಕ್ಕೆ ಬ್ರಹ್ಮರಥದ ಸಮರ್ಪಣೆಯಾಗಬೇಕು ಎಂಬ ಅಪೇಕ್ಷೆ ಮತ್ತು ಕ್ಷೇತ್ರದ ಜೀರ್ಣೋದ್ದಾರಕ್ಕೆ ದೈವದ ಅನುಗ್ರಹ ಕಂಡು ಬಂದಿತ್ತು. ಅಂದು ಆರ್ಥಿಕ ಹಿನ್ನಡೆಯ ಕಾರಣದಿಂದ ಬ್ರಹ್ಮರಥ ಸಮರ್ಪಣೆಗೆ ತೊಡಕಾಗಿತ್ತು. ಶ್ರೀ ಮಹಾಗಣಪತಿ ದೇವರ ಇಚ್ಚೆಯಂತೆ ಈ ಬಾರಿ ಬ್ರಹ್ಮರಥದೊಂದಿಗೆ ಸಹಸ್ರ ಕುಂಭ ಬ್ರಹ್ಮಕಲಶಾಭಿಷೇಕ ಮಾಡುವ ಪುಣ್ಯ ನಮ್ಮದು. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮರಥವು ಮೂಡುಬಿದ್ರೆ ನಾರಾಯಣ ಆಚಾರ್ಯರ ಪುತ್ರ ಹರೀಶ್ ಆಚಾರ್ಯರ ನೇತೃತ್ವದಲ್ಲಿ ಸಂಪಿಗೆಯಲ್ಲಿ ಬ್ರಹ್ಮರಥದ ನಿರ್ಮಾಣವಾಗುತ್ತಿದ್ದು, ಅದು ಏಪ್ರಿಲ್ 12 ರಂದು ಭವ್ಯ ಮೆರವಣಿಗೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಆಗಮಿಸಲಿದೆ. ದೇವಳದ ವರ್ಷಾವಧಿ ಉತ್ಸವದ ಸಂದರ್ಭದಲ್ಲಿ ಶ್ರೀ ಜಾರಂದಾಯ ದೈವದ ಭೇಟಿ ಕಾರ್ಯಕ್ರಮವು ನಡೆಯುತ್ತದೆ.
ಶ್ರೀ ಮಹಾಗಣಪತಿ ದೇವರ ವಚನದ ಪ್ರಕಾರ ಈ ಬಾರಿ ದೇವಸ್ಥಾನದ ಪರಿಸರದಲ್ಲಿ ಹಾಕಲಾಗುವ ಕೊಡಿ ಅಡಿಯಲ್ಲಿ ಜಾರಂದಾಯ ದೈವದ ನೇಮೋತ್ಸವವು ನಡೆಯಲಿದೆ. ಈ ಸೇವೆಯು ಈ ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು ಮುಂದಿನ ದಿನಗಳಲ್ಲಿ ಆಯಾಯ ಸಂದರ್ಭದ ವ್ಯವಸ್ಥೆಗೆ ಸಂಬಂಧಿಸಿದವರ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದೆ. ಶ್ರೀ ಕ್ಷೇತ್ರದಲ್ಲಿ ಉಮಾಮಹೇಶ್ವರಿ, ದುರ್ಗಾಪರಮೇಶ್ವರಿ, ನವಗ್ರಹ, ನಾಗ ಮತ್ತು ಚಾಮುಂಡಿ ದೈವದ ಸಾನಿಧ್ಯವಿದೆ. ಪ್ರತಿ ತಿಂಗಳ ಸಂಕಷ್ಟಿ ಕಾರ್ಯಕ್ರಮವು ಅನ್ನಸಂತರ್ಪಣೆಯೊಂದಿಗೆ ಜರಗುತ್ತಿದೆ. ಅಂಗಾರಕ ಸಂಕಷ್ಟಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪ್ರತಿ ಹುಣ್ಣಿಮೆಯಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಜರಗುತ್ತಿದೆ. ನವರಾತ್ರಿ ಸಂದರ್ಭದಲ್ಲಿ ಹತ್ತು ದಿನಗಳ ಯಕ್ಷಗಾನ ನಡೆಯುತ್ತಿದೆ. ಶ್ರೀ ಚಕ್ರಪೂಜೆ, ದೀಪೋತ್ಸವ. ಚೌತಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಕೊರಳು ವಿತರಿಸಿ ತೆನೆ ಹಬ್ಬ ಆಚರಿಸಲಾಗುತ್ತಿದೆ. ದೇವಳದ ಪರಿಸರದ ಹತ್ತು ಸಹಸ್ರಕ್ಕೂ ಹೆಚ್ಚು ಮಂದಿ ಶ್ರದ್ದಾಭಕ್ತಿಯಿಂದ ದೇವಳದಿಂದ ತೆನೆ ಪಡೆದು ತಮ್ಮ ತಮ್ಮ ಮನೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಧರ್ಮೇಂದ್ರ ಗಣೇಶಪುರ ಮಾಹಿತಿ ನೀಡಿದರು.
ಕ್ಷೇತ್ರದ ಅರ್ಚಕ ಸುನೀಲ್ ಭಟ್, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಬ್ರಹ್ಮಕಲಶೋತ್ಸವ, ನಾಗಮಂಡಲ ಸಮಿತಿ ಅಧ್ಯಕ್ಷ ಯಾದವ ಕೋಟ್ಯಾನ್, ಕಾರ್ಯಾಧ್ಯಕ್ಷ ಪ್ರಶಾಂತ್ ಮುಡಾಯಿಕೋಡಿ ಉಪಸ್ಥಿತರಿದ್ದರು. ನಿರಂಜನ ಹೊಳ್ಳ ಸ್ವಾಗತಿಸಿದರು. ಪ್ರಶಾಂತ್ ಮುಡಾಯಿಕೋಡಿ ಧನ್ಯವಾದ ಸಮರ್ಪಿಸಿದರು.