ಮಕ್ಕಳಿಗೆ ಶಿಕ್ಷಣ, ಆರೋಗ್ಯದ ಜತೆ ಉತ್ತಮ ಸಂಸ್ಕಾರ ನೀಡುವುದು ನಮ್ಮೆಲ್ಲರ ಕರ್ತವ್ಯ. ಎಲ್ಲಾ ಸಂಕಷ್ಟಗಳನ್ನು ದಿಟ್ಟವಾಗಿ ಎದುರಿಸಿ ಸಂಸಾರದ ಜವಾಬ್ದಾರಿ ನಿರ್ವಹಿಸುವ ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ರೆಡ್ಕ್ರಾಸ್ ಸೊಸೈಟಿಯ ದ.ಕ ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.

ರೆಡ್ಕ್ರಾಸ್ ಸೊಸೈಟಿಯ ದ.ಕ ಜಿಲ್ಲಾ ಘಟಕದ ವತಿಯಿಂದ ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಕ್ಯುಎಸಿ, ಸಮಾಜಶಾಸ್ತ್ರ ವಿಭಾಗ, ಯೂತ್ ರೆಡ್ಕ್ರಾಸ್ ಮತ್ತು ಎನ್ಎಸ್ಎಸ್ ಘಟಕ ಹಾಗೂ ಸುಶೇಗ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಡಾ. ಲವೀನಾ ನೊರೊನ್ಹಾ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ್ ಬಾಳ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ ಯೂತ್ ರೆಡ್ಕ್ರಾಸ್ನ ನೋಡಲ್ ಅಧಿಕಾರಿ ಡಾ. ಗಾಯತ್ರಿ.ಎನ್., ಕಾಲೇಜಿನ ಐಕ್ಯುಎಸಿ ಸಂಯೋಜಕಿ ಡಾ. ಮಂಜುಳಾ ಮಲ್ಯ, ಯೂತ್ ರೆಡ್ಕ್ರಾಸ್ ಅಧಿಕಾರಿ ಡಾ. ರಾಜೇಶ್ ಶೆಟ್ಟಿ, ಮಹಿಳಾ ಸೆಲ್ನ ಸಂಯೋಜಕಿ ಸುಜಾತ ಪಿ ಎಸ್, ಎನ್ಎಸ್ಎಸ್ ಯೋಜನಾಧಿಕಾರಿ ಡಾ. ಮೀನಾಕ್ಷಿ ಆಚಾರ್ಯ, ರೆಡ್ಕ್ರಾಸ್ ಸೊಸೈಟಿಯ ಆಡಳಿತ ಮಂಡಳಿ ನಿರ್ದೇಶಕ ಗುರುದತ್ ಕಾಮತ್, ಕಾರ್ಯದರ್ಶಿ ಕಿಶೋರ್ಚಂದ್ರ ಶೆಟ್ಟಿ, ಕಾರ್ಯಕ್ರಮದ ಸಂಯೋಜಕಿ ಡಾ. ಸುಮನಾ.ಬಿ ಉಪಸ್ಥಿತರಿದ್ದರು.
ಕೌನ್ಸೆಲಿಂಗ್ ಮತ್ತು ಹದಿಹರೆಯದ ಮಾನಸಿಕ ಆರೋಗ್ಯ ವಿಷಯದ ಸರ್ಟಿಫಿಕೆಟ್ ಕೋರ್ಸ್ ಪೂರೈಸಿದ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಇದೇ ಸಂದರ್ಭ ಪ್ರಮಾಣಪತ್ರ ವಿತರಿಸಲಾಯಿತು. ಬಳಿಕ ನಡೆದ ಆತ್ಮಹತ್ಯೆ ತಡೆಗಟ್ಟುವಿಕೆ ವಿಷಯದ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಡಾ. ಝೀನಾ ಫ್ಲೇವಿಯಾ ಡಿಸೋಜ, ವೀಣಾ ಬಾರ್ನೆಸ್ ಮತ್ತು ಶಾಲಿನಿ ಡಿಸೋಜಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.